Advertisement

ಜಿಲ್ಲೆಯವ್ರಿಗೇ ಸಿಗಲಿ ಉಸ್ತುವಾರಿ

04:53 PM Jun 03, 2018 | Team Udayavani |

ಹುಬ್ಬಳ್ಳಿ: ಧಾರವಾಡ ಜಿಲ್ಲೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಶನಿವಾರ ಆಯೋಜಿಸಿದ್ದ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯವರು ಯಾರಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ. ಬೇರೆ ಜಿಲ್ಲೆಯವರಾಗುವುದು ಬೇಡ. ಜಿಲ್ಲೆಯವರೇ ಆದರೆ ಇಲ್ಲಿನ ಸ್ಥಿತಿ-ಗತಿ ಗೊತ್ತಿರುತ್ತದೆ. ಬಸವರಾಜ ಹೊರಟ್ಟಿ, ಸಿ.ಎಸ್‌. ಶಿವಳ್ಳಿ ಅಥವಾ ಪ್ರಸಾದ ಅಬ್ಬಯ್ಯ ಇವರಲ್ಲಿ ಯಾರಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಎಂದರು.

Advertisement

ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಅವಳಿನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಸರಕಾರ ಕೂಡಲೇ ಪಾಲಿಕೆಗೆ ಸಮರ್ಥ ಆಯುಕ್ತರ ನೇಮಕ ಮಾಡಬೇಕು. ಆಸಕ್ತಿ ಇಲ್ಲದವರನ್ನು ಬೇರೆಡೆ ವರ್ಗಾವಣೆ ಮಾಡುವುದೊಳಿತು ಎಂದು ಹೇಳಿದರು. 28ರಿಂದ ಇಂಡಿಗೊ ಸೇವೆ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಜೂ. 28 ರಿಂದ ಹುಬ್ಬಳ್ಳಿ- ಬೆಂಗಳೂರು ಇಂಡಿಗೊ ವಿಮಾನಯಾನ ಆರಂಭಗೊಳ್ಳಲಿದೆ. 130 ಆಸನಗಳ ಏರ್‌ಬಸ್‌-320 ವಿಮಾನ ಸೇವೆ ಒದಗಿಸಲಿದೆ ಎಂದರು.

ಉಡಾನ್‌ ಯೋಜನೆಯಿಂದ ವಿಮಾನಯಾನದಲ್ಲಿ ಪ್ರಗತಿ ಸಾಧ್ಯವಾಗಿದೆ. ಪ್ರಥಮ ದರ್ಜೆ ರೈಲು ಪ್ರಯಾಣ ದರಕ್ಕಿಂತ ವಿಮಾನ ದರ ಕಡಿಮೆಯಿದೆ. ವಿಮಾನಯಾನಕ್ಕೆ ಆದ್ಯತೆ ನೀಡುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪ್ರೋತ್ಸಾಹ ನೀಡಿದರೆ ಇನ್ನಷ್ಟು ನಗರಗಳಿಗೆ ವಿಮಾನಯಾನ ಕಲ್ಪಿಸಲು
ಸಾಧ್ಯವಾಗುತ್ತದೆ ಎಂದು ಹೇಳಿದರು. ಕೇಂದ್ರ ಸರಕಾರ ಕೃಷಿಯೊಂದಿಗೆ ವಾಣಿಜ್ಯೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ. ಶೀಘ್ರದಲ್ಲಿ ಬಿಐಎಸ್‌ ಪ್ರಮಾಣೀಕರಿಸುವ ಕೇಂದ್ರ ಆರಂಭಿಸಲಾಗುವುದು ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನ್ಯಾಯಾಂಗ ಹಾಗೂ ಕಾರ್‍ಯಾಂಗದ ಅಸಮರ್ಪಕತೆಯಿಂದಾಗಿ ಶಾಸಕಾಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಜನಪ್ರತಿನಿಧಿಗಳನ್ನೇ ಜವಾಬ್ದಾರರ ನ್ನಾಗಿಸಲಾಗುತ್ತದೆ. ಪೌರ ಕಾರ್ಮಿಕರು ಚರಂಡಿ ಸ್ವಚ್ಛ ಮಾಡದಿದ್ದರೂ ಜನರು ಶಾಸಕರಿಗೆ ಬಯ್ಯುತ್ತಾರೆ. ಹಳೇ ವ್ಯವಸ್ಥೆ ಬದಲಾಗಬೇಕು. ಸರಕಾರದ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಲು ಸಾಧ್ಯವಾದರೆ ತ್ವರಿತಗತಿಯಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮಂಗಳೂರು, ಮೈಸೂರು ನಗರಗಳಿಗೆ ಹೋಲಿಕೆ ಮಾಡಿದರೆ ಹು-ಧಾ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗದಿರುವುದು ಬೇಸರ ಮೂಡಿಸುತ್ತದೆ. ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಈ ಭಾಗದಲ್ಲಿ ದೊಡ್ಡ ಕೈಗಾರಿಕೆಗಳು ಆರಂಭಗೊಂಡು ಯುವಜನರಿಗೆ ಉದ್ಯೋಗ ಸಿಗುವಂತಾಗಬೇಕು ಎಂದರು.

Advertisement

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು. ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಮೋಹನ ಲಿಂಬಿಕಾಯಿ, ಜಿ.ಕೆ. ಆದಪ್ಪಗೌಡರ, ವಿನಯ ಜವಳಿ, ಎಂ.ಸಿ. ಹಿರೇಮಠ, ವಿನಯ ಜವಳಿ ಇದ್ದರು. ಇದೇ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಶೀಘ್ರವೇ ಧಾರವಾಡದ ಈಜುಕೊಳ ನವೀಕರಣ
ಧಾರವಾಡದ ಈಜುಕೊಳವನ್ನು ಶೀಘ್ರದಲ್ಲಿ ನವೀಕರಣಗೊಳಿಸಲಾಗುವುದು. ಶನಿವಾರ ಒಎನ್‌ಜಿಸಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, 13 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನವೀಕರಣ ಹಾಗೂ ಅಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ಅನುಷ್ಠಾನ ವಿಳಂಬಗೊಂಡಿತ್ತು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣಕ್ಕೆ ಮನವಿ
ಹುಬ್ಬಳ್ಳಿ: ಅವಳಿ ನಗರದಲ್ಲಿ ವಿಶೇಷ ಆರ್ಥಿಕ ವಲಯ ಹಾಗೂ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಿಸಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಜಗದೀಶ ಶೆಟ್ಟರ, ಅರವಿಂದ ಬೆಲ್ಲದ, ಸಿ.ಎಂ.ನಿಂಬಣ್ಣವರ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿ-ಧಾರವಾಡದಲ್ಲಿ ಕೃಷಿ ಉತ್ಪನ್ನ ಸಂಸ್ಕರಣ ಘಟಕ, ಅಟೋಮೊಬೈಲ್‌, ಟೆಕ್ಸ್‌ಟೈಲ್‌ ಉತ್ಪನ್ನಗಳು, ಔದ್ಯಮಿಕ ಉತ್ಪನ್ನಗಳ ಘಟಕ ಆರಂಭಿಸಲು ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಿಸಬೇಕು. ಬಿಐಎಸ್‌ ಪ್ರಮಾಣಿಕರಿಸುವ ಕೇಂದ್ರ ಸ್ಥಾಪನೆಗೆ ಈಗಾಗಲೇ ಕೇಂದ್ರ ಸರಕಾರ ಈಗಾಗಲೇ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಸೂಕ್ತ ಜಾಗದಲ್ಲಿ ಆದಷ್ಟು ಬೇಗನೇ ಕೇಂದ್ರ ಆರಂಭಿಸಬೇಕು. ಧಾರವಾಡ-ಬೆಳಗಾವಿ ಮಾರ್ಗದಲ್ಲಿ 12,000 ಎಕರೆ ಜಾಗದಲ್ಲಿ ರಾಷ್ಟ್ರೀಯ ಉತ್ಪಾದನಾ ವಲಯವನ್ನು ಶೀಘ್ರ ಗತಿಯಲ್ಲಿ ಮಾಡಬೇಕು ಎಂದು ಮನವಿ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next