Advertisement

ಅಕ್ಷರ ಲೋಕದ ಅಂಗಳದಲ್ಲಿ…

10:21 AM May 04, 2019 | Hari Prasad |

ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ…

Advertisement

ಮಹಾಭಾರತದ ಕಥೆ
ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕಥೆ,ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಫೂರ್ತಿಯಿಂದ. ಕಾಲ ಕಾಲಕ್ಕೆ ಹೊಸದಾಗುವ, ಪ್ರಸ್ತುತವಾಗುವ, ಸಮಕಾಲೀನವಾಗುವ ಗುಣ ಹೊಂದಿರುವ ಮಹಾಭಾರತ ಮತ್ತು ರಾಮಾಯಣಗಳ ಒಳಹೊಕ್ಕು, ಅಲ್ಲಿಂದ ಎಲ್ಲರಿಗೂ ಗೊತ್ತಿರುವ, ಆದರೆ ಯಾರಿಗೂ ಗೊತ್ತಿರದ ಕತೆಯೊಂದನ್ನು ಹೆಕ್ಕಿ ತರುವುದು ಸಾಹಸದ ಕೆಲಸ. ಅದಕ್ಕೆ ಅಪೂರ್ವ ಪ್ರತಿಭೆ, ಅಪಾರ ತಾಳ್ಮೆ ಮತ್ತು ಹೊಸ ದೃಷ್ಟಿಕೋನ ಬೇಕು.

ಜಗದೀಶ ಶರ್ಮರು, ಮಹಾಭಾರತದ ಪ್ರಸಂಗವನ್ನು ಅಪರಾಧ ಮತ್ತು ಶಿಕ್ಷೆಯ ತಳಹದಿಯಲ್ಲಿ ನೋಡುತ್ತಾರೆ. ಅರೆಕ್ಷಣದ ತಪ್ಪು, ಒಂದು ಅನವಶ್ಯಕ ಛಲ, ಆಕ್ಷಣದ ನಿರರ್ಥಕ ನಿರ್ಧಾರ, ಸೇಡಿನ ಕಿಚ್ಚು…ಹೀಗೆ ಕಾಲದ ಸುರುಳಿಯಲ್ಲಿ ಚಕ್ರತೀರ್ಥದಂತೆ ಸುತ್ತುತ್ತಾ ಸುತ್ತುತ್ತಾ ಅದಕ್ಕೆ ಕಾರಣನಾದ ವ್ಯಕ್ತಿಯನ್ನೇ ಬಲಿತೆಗೆದುಕೊಳ್ಳುತ್ತದೆ ಎಂಬುದನ್ನು, ಆಖ್ಯಾನಗಳ ಮೂಲಕ ನಮ್ಮ ಮುಂದಿಡುತ್ತಾರೆ. ಆದಷ್ಟು ಸರಳವಾಗಿ, ವಿಸ್ತಾರವಾಗಿ ಮತ್ತು ಮಿಕ್ಕದಂತೆ ಬರೆದಿದ್ದಾರೆ ಶರ್ಮ.

ತಮಗೆ ಬೇಕು ಬೇಕಾದ ಮಹಾಭಾರತದ ಸಂದರ್ಭಗಳನ್ನು ಮಾತ್ರ ಎತ್ತಿಕೊಂಡು, ಅದನ್ನು ತಮ್ಮ ಪ್ರತಿಭೆಯ ದಾರದಲ್ಲಿ ಪೋಣಿಸಿ ಸುಂದರವಾದ ಕಥಾಹಾರವನ್ನಾಗಿಸಿದ್ದಾರೆ. ಹತ್ತಿಪ್ಪತ್ತು ನಿಮಿಷದಲ್ಲಿ ಓದಿಮುಗಿಸುವಂಥ, ಪುಟ್ಟ ಪುಟ್ಟ ಕಥೆಗಳು ಬೇಕು ಅನ್ನುವವರಿಗೆ ಈ ಪುಸ್ತಕ ಇಷ್ಟವಾಗುತ್ತದೆ.

ಮಹಾಭಾರತ: ಹೇಳಿಯೂ ಹೇಳದ್ದು.
ಲೇ: ಜಗದೀಶ ಶರ್ಮ ಸಂಪ,
ಪ್ರ; ಸಾವಣ್ಣ ಎಂಟರ್‌ ಪ್ರೈಸಸ್‌, ಬಸವನಗುಡಿ, ಬೆಂಗಳೂರು-04.

Advertisement

ಬಾಣಂತನದ ಸುತ್ತಮುತ್ತ…
ಕೇಳು ಕಿಶೋರಿ, ತಾಯಿ-ಮಗು-ಎಂಬ ಅಪರೂಪದ, ಅನನ್ಯ ಪುಸ್ತಕಗಳನ್ನು ಬರೆದವರು ಡಾ. ಅನುಪಮಾ ನಿರಂಜನ. ಋತುಸ್ರಾವದಿಂದ ಹಿಡಿದು ಬಾಣಂತನದವರೆಗೆ ಎಲ್ಲವೂ ಗುಟ್ಟಿನ ಸಂಗತಿಯಾಗಿಯೇ, ಇನ್ನೊಬ್ಬರಿಗೆ ಹೇಳಬಾರದ ಪಿಸುಮಾತುಗಳಾಗಿಯೇ ಉಳಿದಿದ್ದಾಗ, ಅದನ್ನೇ ವೈಜ್ಞಾನಿಕ ಹಿನ್ನೆಲೆಯ ಮಾಹಿತಿಗಳೊಂದಿಗೆ ಬರೆದು, ಒಂದು ತಲೆಮಾರಿಗೆ ಧೈರ್ಯ ಕೊಟ್ಟವರು ಅನುಪಮಾ ನಿರಂಜನ. ಅವರ ಕೃತಿಗಳಲ್ಲಿ ಇರುವಂಥದೇ ಆಪ್ತ ಮಾಹಿತಿಗಳನ್ನು ಹೊಂದಿರುವ ಹೊಸ ಪುಸ್ತಕ-ಬಾಳಂತಿ ಪುರಾಣ.

ಬಾಣಂತಿಯರು ಎದುರಿಸಬೇಕಾಗುವ ಸಮಸ್ಯೆ-ಸವಾಲುಗಳು, ಮನೆಯೊಳಗೇ ಇರಬೇಕಾದ “ಆ ದಿನಗಳಲ್ಲಿ’ ಅನುಸರಿಸಬೇಕಾದ ನಿಯಮಗಳು, ಬಾಣಂತನದ ಸಂದರ್ಭದಲ್ಲಿ ಸ್ವೀಕರಿಸಬೇಕಾದ ಆಹಾರ, ಮಗು ಜನಿಸಿದ ಮೊದಲ ದಿನ, ವಾರದ ನಂತರ, ತಿಂಗಳು ಕಳೆದ ಮೇಲೆ ಅನುಸರಿಸಲೇಬೇಕಾದ ಪಥ್ಯ… ಹೀಗೆ, ಹೆಚ್ಚಿನವರಿಗೆ ಗೊತ್ತೇ ಇಲ್ಲದ ಹಲವು ಸಂಗತಿಗಳನ್ನು ಲೇಖಕಿ ಶ್ರೀಕಲಾ ಒಂದೊಂದಾಗಿ ದಾಖಲಿಸುತ್ತಾ ಹೋಗಿದ್ದಾರೆ.

“ಮಗು ಹೇಗೆ ಹುಟ್ಟುತ್ತೆ’? ಎಂಬ ಪ್ರಶ್ನೆಗೆ ನೇರಾನೇರ ಉತ್ತರಿಸದೆ, “ಹೇಗೆ ಉತ್ತರಿಸಬೇಕೆಂದು’ ತಿಳಿಯದೆ ಎಲ್ಲರೂ ಮೌನವಾಗಿರುವಾಗ, ಒಂದು ಜೀವವು ಕಣ್ಣು, ಮೂಗು ಲೇಪಿಸಿಕೊಂಡು ಹೊರಜಿಗಿಯುವ, ಬೆಳೆಯುವ ಕೌತುಕವನ್ನು ಗುಟ್ಟಾಗಿ ಉಳಿಸಿಬಿಟ್ಟಿರುವಾಗ, ಜೀವ ವಿಜ್ಞಾನದ ಒಂದು ಮಹತ್ತರ ಬೆಳವಣಿಗೆಯನ್ನೇ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿರುವಾಗ ಈ ಕೃತಿ ಹೊರಬಂದಿದೆ. ಇದು, ಮನೆ ಮನೆಯಲ್ಲಿ ಇರಲೇಬೇಕಾದಂಥ ಪುಸ್ತಕ.

ಬಾಳಂತಿ ಪುರಾಣ,
ಲೇ: ಶ್ರೀ ಕಲಾ ಡಿ.ಎಸ್‌.
ಪ್ರ: ಬಹುರೂಪಿ ಪ್ರಕಾಶನ, ಸಂಜಯನಗರ, ಬೆಂಗಳೂರು-94

ಉದಯವಾಯಿತೆ?
ನವೆಂಬರ್‌1, 1956 ರಂದು ಕನ್ನಡಿಗರ ಮೈಸೂರು ರಾಜ್ಯ ಉದಯವಾದ ಸಂದರ್ಭದಲ್ಲಿ ಕವಿ ಹುಯಿಲಗೊಳ ನಾರಾಯಣರಾಯರು- “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಆಶಯ ಗೀತೆ ಬರೆದರು. ಕನ್ನಡಿಗರ ಮೈಸೂರು ರಾಜ್ಯ ಉದಯವಾಯಿತೆಂಬ ಸಡಗರದಲ್ಲಿ ನಡೆಸಿದ ಮುಖ್ಯ ಕಾರ್ಯಕ್ರಮದಲ್ಲಿ ಪಿ. ಕಾಳಿಂಗ ರಾಯರು-“ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂದು, ಹಾಡಿನ ಸಾಲನ್ನೇ ತುಸು ಬದಲಿಸಿಕೊಂಡು ಹಾಡಿ ಜನಮನ ಗೆದ್ದರು.

ಈಗ, ಅದೇ ಹಾಡಿನ ಸಾಲನ್ನೇ ಲೇಖಕ ಶ್ರೀನಿವಾಸ ಸಿರನೂರಕರ್‌ – ಉದಯವಾಯಿತೆ ಚೆಲುವ ಕನ್ನಡನಾಡು ಎಂದು ಬದಲಿಸಿಕೊಂಡು ಕೃತಿ ರಚನೆ ಮಾಡಿದ್ದಾರೆ. ತಮ್ಮ ನೋವು, ಅಸಹನೆ, ಸಂಕಟ ಮತ್ತು ವಾದವನ್ನು ಅವರು ಅಕ್ಷರಗಳ ಮೂಲಕ ಹರವಿಟ್ಟಿದ್ದಾರೆ. ಕನ್ನಡನಾಡು ಗತಕಾಲದ ವೈಭವದ ಗುಂಗಿನಲ್ಲೇ ಮುನ್ನಡೆಯಬೇಕಾ? ಶತಮಾನಗಳ ಹಿಂದಿನ ಕರ್ನಾಟಕದ ಪರಿಚಯ ನಮ್ಮ ಯುವಕರಿಗೆ ಇದೆಯಾ? ಅವರ ಭವಿಷ್ಯದ ದಿಕ್ಕು ಯಾವುದು? ಇಂಥವೇ ಹಲವು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ, ಕರ್ನಾಟಕದ ಏಕೀಕರಣವಾದ ನಂತರ ನಡೆದಿರುವ ಎಲ್ಲ ಪ್ರಮುಖ ಘಟನೆಗಳನ್ನು ದಾಖಲಿಸುತ್ತಾ ಹೋಗುತ್ತಾರೆ ಸಿರನೂರ್‌ಕರ್‌. ಎಲ್ಲರಿಗೂ ಆಪ್ತವಾಗುವಂತಹ ಕರ್ನಾಟಕ ನಿರ್ಮಾಣ ಆಗಬೇಕಾದರೆ ಯಾವ ಯಾವ ಕೆಲಸಗಳಾಗಬೇಕು, ಏನೇನೆಲ್ಲಾ ಬದಲಾವಣೆಗಳಾಗಬೇಕು ಎಂದು ಈ ಕೃತಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಉದಯವಾಯಿತೆ ಚೆಲುವ ಕನ್ನಡ ನಾಡು.
ಲೇ: ಶ್ರೀನಿವಾಸ ಸಿರನೂರಕರ್‌,
ಪ್ರ: ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ- 1

ಕನಸಲ್ಲಿ ಯಾರ್‌ ಬಂದಿದ್ರು?
ಕೆಲಸ ಮಾಡುತ್ತಿರುತ್ತೇವೆ. ಆಯಾಸವಾಗುತ್ತದೆ. ಅಥವಾ, ಊಟ ಮಾಡಿ ಮುಗಿಸುತ್ತೇವೆ. ನಂತರದ ಕೆಲವೇ ಕ್ಷಣಗಳಲ್ಲಿ ಜೋಂಪು ಆವರಿಸಿಕೊಳ್ಳುತ್ತದೆ. ಆಗ ಒಂದರ್ಧ ಗಂಟೆ ರೆಸ್ಟ್‌ ಬೇಕು ಅಂದುಕೊಂಡು ಚಾಪೆ ಹಾಸಿಕೊಂಡೋ, ಈಸಿ ಚೇರ್‌ನಲ್ಲೋ ಮೈ ಚಾಚಿದರೆ, ಕಣ್ತುಂಬ ನಿದ್ರೆ ಬರುತ್ತದೆ. ಅದರ ಜೊತೆಗೇ ಚಂದದ ಕನಸು. ಯಾವುದೋ ಮಹಾನಗರಕ್ಕೆ ಹೋಗಿಬಿಟ್ಟಂತೆ. ಅಲ್ಲಿ, ಪರಿಚಯವೇ ಇಲ್ಲದ ಜನ ಸಹಾಯಕ್ಕೆ ಬಂದಂತೆ, ಲಾಟರಿ ಹೊಡೆದಂತೆ, ಆ್ಯಕ್ಸಿಡೆಂಟ್‌ ಆದಂತೆ…

ಈ ಬಗೆಯ ಕನಸುಗಳು ಬೀಳುವುದಾದರೂ ಏಕೆ? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ಹಾಗೆಯೇ- ರಾಹುಕಾಲ ಎಂದರೇನು? ಕಪ್ಪೆ ಚಿಪ್ಪಿನೊಳಗೆ ಮುತ್ತು ಹೇಗಾಗುತ್ತೆ? ಮಳೆ ನಿಂತ ತಕ್ಷಣ ಕಾಣಿಸುತ್ತದಲ್ಲ; ಆ ಕಾಮನಬಿಲ್ಲು ಮೂಡುವುದು ಹೇಗೆ? ಕಣ್ಣು ಕೊರೈಸುವ ಮಿಂಚಿನ ಬೆಳಕು ಸೃಷ್ಟಿಯಾಗುವುದು ಹೇಗೆ? ನೀರು ಕುದಿಯುತ್ತದೆ.

ಆದರೆ, ನೀರಿನಂತೆ ದ್ರವ ಪದಾರ್ಥವೇ ಆಗಿದ್ದರೂ ಹಾಲು ಏಕೆ ಉಕ್ಕುತ್ತದೆ? ಇವೆಲ್ಲಾ ಹಲವರ ಪ್ರಶ್ನೆಗಳು. ಅದರಲ್ಲೂ ಇವು ಮಕ್ಕಳಿಗೆ ಒಗಟಿನಂತೆಯೇ ಕಾಡುವ ಪ್ರಶ್ನೆಗಳು. ಇವೆಲ್ಲ ಪ್ರಶ್ನೆಗಳಿಗೂ ವೈಜ್ಞಾನಿಕ ವಿವರಣೆಯೊಂದಿಗೆ ಉತ್ತರ ಹೇಳಿದ್ದಾರೆ ಹಿರಿಯ ಲೇಖಕ ಎ.ಓ. ಆವಲಮೂರ್ತಿ. ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸಬೇಕು ಎಂಬ ಸದಾಶಯದಿಂದಲೇ ಈ ಪುಸ್ತಕ ರಚಿಸಿರುವುದು ಅವರ ಹೆಚ್ಚುಗಾರಿಕೆ.

ನಮಗೆ ಕನಸುಗಳು ಬೀಳುವುದೇಕೆ?
ಲೇ: ಡಾ. ಎ.ಓ. ಆವಲಮೂರ್ತಿ,
ಪ್ರ: ನವಕರ್ನಾಟಕ ಪಬ್ಲಿಕೇಶನ್ಸ್‌ (ಪ್ರೈ) ಲಿಮಿಟೆಡ್‌, ಬೆಂಗಳೂರು-1

Advertisement

Udayavani is now on Telegram. Click here to join our channel and stay updated with the latest news.

Next