Advertisement

ಪ್ರತಿಮೆಯಲ್ಲಿ ನವ ಭಾರತದ ಪ್ರತಿಫ‌ಲನ

12:30 AM Nov 03, 2018 | |

ನರೇಂದ್ರ ಮೋದಿ ಸರ್ಕಾರ ಏನೇ ಮಾಡಿದರೂ ಅದರಲ್ಲೆಲ್ಲ ತಪ್ಪು ಹುಡುಕುವ ಕೆಲಸವನ್ನು ಪ್ರತಿಪಕ್ಷಗಳು ಎಂದಿನಂತೆ ಮುಂದುವರಿಸಿವೆ. ಆದರೆ ಇದರಿಂದಾಗಿ ಪಟೇಲರ ಪ್ರತಿಮೆಯ ನಿರ್ಮಾಣದ ಮೂಲಕ ಸಾಬೀತಾದ “ದೈತ್ಯ ಇಂಜಿನಿಯರಿಂಗ್‌ ಸಾಧನೆ’ಯೇನೂ ಕಡಿಮೆಯಾಗುವುದಿಲ್ಲ. ನ್ಯೂಯಾರ್ಕ್‌ನ ಲಿಬರ್ಟಿ ಪ್ರತಿಮೆಗಿಂತ ಅಜಮಾಸು ಎರಡು ಪಟ್ಟು ಎತ್ತರವಿರುವ ಸರ್ದಾರ್‌ ಪಟೇಲರ ಪ್ರತಿಮೆ ದೇಶವೇ ಹೆಮ್ಮೆ ಪಡುವಂಥದ್ದು. ಇಲ್ಲಿ ಮುಖ್ಯವಾಗುವುದು ಕೇವಲ ಪಟೇಲರ ಪ್ರತಿಮೆ ಅಷ್ಟೇ ಅಲ್ಲ, ಜೊತೆಗೆ, ಹೇಗೆ ಈ ಪ್ರತಿಮೆ ದೇಶದ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆಯನ್ನು ಪ್ರತಿನಿಧಿಸುತ್ತಿದೆ ಎನ್ನುವುದೂ ಅಷ್ಟೇ ಮುಖ್ಯವಾಗುತ್ತದೆ.

Advertisement

ಸುಮಾರು 25 ಸಾವಿರ ಟನ್‌ಗಳಷ್ಟು ಸ್ಟೀಲ್‌, 1700 ಟನ್‌ಗಳಷ್ಟು  ಕಂಚಿನ ಹೊದಿಕೆ ಮತ್ತು 2 ಲಕ್ಷ ಕ್ಯೂಬಿಕ್‌ ಮೀಟರ್‌ಗಳಷ್ಟು ಸಿಮೆಂಟ್‌ ಕಾಂಕ್ರೀಟ್‌ ಮೂಲಕ ನಿರ್ಮಾಣವಾಗಿರುವ ಪ್ರತಿಮೆಯ ಡಿಸೈನ್‌ ಮತ್ತು ನಿರ್ಮಾಣ ಕೇವಲ 46 ತಿಂಗಳಲ್ಲಿ ಆಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ಇಂಥ ಸಾಧನೆ ಭಾರತದ ಕೆಲವೇ ಕೆಲವು ಯೋಜನೆಗಳಿಗೆ ಮಾತ್ರ ಸಾಧ್ಯವಾಗಿದೆ. ಇದೇ ರೀತಿಯ ಹುರುಪು ಮತ್ತು ಉತ್ಸಾಹವನ್ನು ನಾವು ಇತರೆ ಅತಿಮುಖ್ಯ ಯೋಜನೆಗಳ ವಿಷಯದಲ್ಲಿ ತೋರಿಸಿದ್ದರೆ, ಜಾಗತಿಕ ವೇದಿಕೆಯಲ್ಲಿ ನಾವು ಎದ್ದು ನಿಲ್ಲುತ್ತಿದ್ದೆವು.

ಒಂದು ವೇಳೆ ನಾವು ಇಲ್ಲಿಯವರೆಗೂ ದೇಶದಲ್ಲಿ ವಿರೋಧ ಪಕ್ಷಗಳಿಂದಾಗಲಿ, ಇತಿಹಾಸಕಾರರಿಂದಾಗಲಿ ಅಥವಾ ಮೋದಿ ವಿರೋಧಿ ಮಾಧ್ಯಗಳಿಂದಾಗಲಿ ಕೇವಲ ಋಣಾತ್ಮಕತೆಯನ್ನೇ ನೋಡುತ್ತಾ ಬಂದಿದ್ದೇವೆ ಎನ್ನುವುದಾದರೆ, ನಮ್ಮದು ಕೊಂಕುನುಡಿಯುವವರ ರಾಷ್ಟ್ರವೆಂದೇ ಅರ್ಥ. ಕೊಂಕು ಮಾತನಾಡುವವರೆಂದಿಗೂ ಮಹಾನತೆಯನ್ನು ಸಾಧಿಸುವುದಿಲ್ಲ. 

ಈ ಪ್ರತಿಮೆ ನಿರ್ಮಾಣಕ್ಕೆ ಚೀನಾದ ಕೆಲಸಗಾರರನ್ನು ಮತ್ತು ಚೀನಿ ಸಾಮಗ್ರಿಗಳನ್ನು ಬಳಸಲಾಗಿದೆ ಎಂದು ಟೀಕಿಸಲಾಗುತ್ತಿದೆ. ಇನ್ನು ಮೋದಿ ಸರ್ಕಾರ ಸರ್ದಾರ್‌ ಪಟೇಲರು ಮತ್ತು ನೇತಾಜಿ ಬೋಸ್‌ರಂಥ “ಕಾಂಗ್ರೆಸ್‌’ ನಾಯಕರನ್ನು ಹೈಜಾಕ್‌ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ.  ಮೋದಿ ವಿರೋಧಿ ಮಾಧ್ಯಮವಂತೂ, ಹೇಗೆ ಪಟೇಲರು ಆರ್‌ಎಸ್‌ಎಸ್‌ ವಿರೋಧಿಯಾಗಿದ್ದರು ಎನ್ನುವುದನ್ನು ವಿವರಿಸುವಲ್ಲಿ ವ್ಯಸ್ತವಾಗಿವೆ. ಇತಿಹಾಸಕಾರ ರಾಮಚಂದ್ರ ಗುಹಾ “ನೆಹರೂ ಮತ್ತು ಪಟೇಲರು ಸಹೋದ್ಯೋಗಿಗಳಾಗಿದ್ದರು, ಶತ್ರುಗಳಲ್ಲ’ ಎನ್ನುವುದನ್ನು ರುಜುವಾತು ಮಾಡಲು ಬಹಳ ಪ್ರಯತ್ನಪಡುತ್ತಿದ್ದಾರೆ. ಆದರೆ, ಮೋದಿ “ತಮಗೆ ಪಟೇಲರೇ ಸ್ಫೂರ್ತಿ’ ಎಂದು ಹೇಳುವವರೆಗೂ ಅದೇಕೆ ಕಾಂಗ್ರೆಸ್‌ ಆ ಮಹಾನಾಯಕರನ್ನು ಕಡೆಗಣಿಸಿತ್ತು ಎನ್ನುವ ಪ್ರಶ್ನೆಗೆ ಇದರಿಂದ ಉತ್ತರವೇನೂ ಸಿಗುವುದಿಲ್ಲ.  ವಿಷಯವಿಷ್ಟೇ- ನೀವು ನಿಮ್ಮ ಪಕ್ಷದಲ್ಲಿನ ದೊಡ್ಡ ನಾಯಕರಿಗೆ ಕೊಡಬೇಕಾದ ಗೌರವ ಕೊಡಲಿಲ್ಲ ಎಂದಾಗ, ಇನ್ನೊಬ್ಬರು ತಮ್ಮ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಹೇಗೆ? 

ಇದು ಸಾಲಲಿಲ್ಲ ಎಂಬಂತೆ “ಏಕತಾ ಪ್ರತಿಮೆಗೆ ಖರ್ಚು ಮಾಡಲಾದ 3000 ಕೋಟಿ ರೂಪಾಯಿಯನ್ನು ಬೇರೆ ಕಡೆ ಬಳಸಬಹುದಿತ್ತಲ್ಲವೇ? ಎಂದೂ ಪ್ರಶ್ನಿಸಲಾಗುತ್ತಿದೆ. ಆದರೆ ಈ ಪ್ರಮಾಣದ ಯಾವುದೇ ಖರ್ಚಿಗೂ ಇದೇ ಪ್ರಶ್ನೆಯನ್ನೇ ಅನ್ವಯಿಸಬಹುದಲ್ಲವೇ? ಒಂದು ರಫೇಲ್‌ ಯುದ್ಧವಿಮಾನಕ್ಕೆ ಮಾಡುವ ಖರ್ಚಲ್ಲಿ ಎಷ್ಟು ಜನರ ಹೊಟ್ಟೆ ತುಂಬಿಸಹುದು ಎಂದೋ ಅಥವಾ ದೇಶದಲ್ಲಿ ಎಷ್ಟೋ ಶಾಲೆಗಳಲ್ಲಿ ಮೈದಾನಗಳೇ ಇಲ್ಲದಿರುವಾಗ ಕ್ರಿಕೆಟ್‌ನ ಮೇಲೆ ಈ ಪ್ರಮಾಣದಲ್ಲಿ ಖರ್ಚು ಮಾಡಬೇಕೇ ಎಂದೋ ಕೇಳಿದರೆ ಹೇಗೆ? ಇಂದು ಭಾರತ ಜಾಗತಿಕ ಕ್ರಿಕೆಟ್‌ನ ಶಕ್ತಿಕೇಂದ್ರವಾಗಿ ಬದಲಾಗಿದೆ. ಈ ಕ್ಷೇತ್ರವು ಈ ರೀತಿಯ ಋಣಾತ್ಮಕತೆಯನ್ನು ದಾಟಿದ್ದರಿಂದಲೇ ಇದು ಸಾಧ್ಯವಾಯಿತು. ಇನ್ನು ಪ್ರತಿಮೆ ನಿರ್ಮಾಣಕ್ಕಾಗಿ ಕೆಲವರು ತಮ್ಮ ನೆಲೆ ತೊರೆಯಬೇಕಾಯಿತು, ಪ್ರತಿಮೆಯಿಂದಾಗಿ ಪರಿಸರದ ಮೇಲಿನ ಪರಿಣಾಮವುಂಟಾಗುತ್ತದೆ ಎನ್ನುವುದು ನಿಜ. ಈ ಬಗ್ಗೆ ನೈಜ ಟೀಕೆಗಳೂ ಇವೆ. ಆದರೆ ಈ ಟೀಕೆಗಳ ಪ್ರಮಾಣ ತುಂಬಾ ಚಿಕ್ಕದು.

Advertisement

ಆದರೆ ಇಲ್ಲಿ ಯಾರೂ ಕೇಳದ ಪ್ರಶ್ನೆಯೆಂದರೆ ಸರ್ದಾರ್‌ ಸರೋವರ್‌ ಡ್ಯಾಂ ಬಳಿ ನಿರ್ಮಾಣವಾಗಿರುವ ಈ ಬೃಹತ್‌ ಪ್ರತಿಮೆ ಗುಜರಾತ್‌ನ ಆ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡುತ್ತದಾ, ಇಲ್ಲವಾ?ಎನ್ನುವುದು. ಅತಿ ಕಡಿಮೆ ನೈಸರ್ಗಿಕ ಆಕರ್ಷಣೆಗಳಿರುವ ಆ ರಾಜ್ಯದಲ್ಲಿ, ಸರ್ದಾರ್‌ ಪಟೇಲರ ಪ್ರತಿಮೆ ಜನರನ್ನು ಬರಸೆಳೆಯಲು ಸಹಾಯಕವಾಗಲಿದೆ.  

ಮುಂಬೈನ‌ಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶಿವಾಜಿ ಪ್ರತಿಮೆಯ ಬಗ್ಗೆಯೂ ಇದೇ ರೀತಿಯ ಟೀಕೆಗಳನ್ನು ಹರಿಬಿಡಲಾಗುತ್ತಿದೆ-ಹರಿಬಿಡಲಾಗುತ್ತದೆ. ಆದರೆ ಅದೂ  ಕೂಡ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದೆ‌. ಮಹಾರಾಷ್ಟ್ರ ಸರ್ಕಾರ ಟೀಕಾಕಾರರನ್ನು ಕಡೆಗಣಿಸಲೇಬೇಕು. ಏಕೆಂದರೆ, ಈ ವಿಷಯದಲ್ಲಿ ಟೀಕಾಕಾರರ ನಿಲುವು ತಪ್ಪು. 

ಸರ್ದಾರ್‌ ಪ್ರತಿಮೆ ಮೂಲಕ ಮೋದಿ ಸರ್ಕಾರ ಮೂಲಭೂತವಾದ ಸಂಗತಿಯೊಂದನ್ನು ತೋರಿಸಿದೆ. ಭಾರತವೂ ಕೂಡ ದೊಡ್ಡ ಕನಸನ್ನು ಕಾಣಬಲ್ಲದು, ದೊಡ್ಡದಾಗಿ ಯೋಚಿಸಬಲ್ಲದು, ರಾಜಕೀಯ ಇಚ್ಛಾಶಕ್ತಿಯಿದ್ದರೆ ಬೃಹತ್‌ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಲ್ಲದು ಎನ್ನುವ ಸಂಗತಿಯಿದು. ಸತ್ಯವೇನೆಂದರೆ “ದೊಡ್ಡದಾಗಿ ಯೋಚಿಸುವ’ ಗುಣ ಮೋದಿ ಸರ್ಕಾರದ ಹಾಲ್‌ಮಾರ್ಕ್‌ ಆಗಿದೆ. ಪ್ರತಿಮನೆಗೂ ಬ್ಯಾಂಕ್‌ ಖಾತೆ ಇರಬೇಕೆಂಬ ಉದ್ದೇಶದ ಜನಧನದ ವಿಸ್ತರಣೆಯಿರಲಿ, ವಿಶಿಷ್ಟ ಗುರುತಿನ ಚೀಟಿಯ ವಿಸ್ತರಣೆಯಿರಲಿ, ಪ್ರತಿ ಮನೆಗೂ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯಿರಲಿ, 2022ರ ವೇಳೆಗೆ ಎಲ್ಲರಿಗೂ ಮನೆಯ ಮೇಲೆ ಸೂರು ಒದಗಿಸುವ ಭರವಸೆಯಿರಲಿ, ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ಕ್ರಮವಿರಲಿ ಅಥವಾ ದೇಶದ 50 ಕೋಟಿ ಜನರಿಗೆ ಉಚಿತ ಮೆಡಿಕಲ್‌ ಇನ್ಶೂರೆನ್ಸ್‌ ಒದಗಿಸುವ ಕಾರ್ಯಕ್ರಮವಿರಲಿ…

ಇವುಗಳಲ್ಲೆಲ್ಲ ಮೋದಿ ಸರ್ಕಾರದ “ದೊಡ್ಡದಾಗಿ ಯೋಚಿಸುವ’ ಗುಣ ಕಾಣಿಸುತ್ತದೆ. ಆದಾಗ್ಯೂ, ಇವುಗಳಲ್ಲಿ ಕೆಲವು ಯೋಜನೆಗಳು ನಮ್ಮ ನಿರೀಕ್ಷೆಯನ್ನು ತಲುಪದಿರಬಹುದು. ಆದರೂ, ಜನರ ಕಲ್ಪನಾಶಕ್ತಿ ಮತ್ತು ಬೆಳವಣಿಗೆಯ ಮೇಲೆ ಕೃತಕ ನಿರ್ಬಂಧಗಳನ್ನು ಹೇರಿ ಅವರ ಸಾಮರ್ಥ್ಯವನ್ನು ಸೀಮಿತಗೊಳಿಸುವ ಗುಣವನ್ನು ನಿಲ್ಲಿಸಲು, “ಚಿಕ್ಕದಾಗಿ ಯೋಚಿಸುವ’ ಗುಣದಿಂದ ಹೊರಬರಲು ಭಾರತಕ್ಕೆ ಸಾಧ್ಯವಿದೆ ಎನ್ನುವುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ನಮ್ಮ ದೇಶದ ಅತ್ಯುತ್ತಮ ಉದ್ಯಮಿಗಳು ಸಂಕೋಲೆ ತೊಟ್ಟು ಕುಂಟುತ್ತಾ ಓಡುವಂತೆ ಮಾಡಿದ್ದು, ಚಿಕ್ಕ ಮೆಡಿಕಲ್‌ ಸೇವೆ ಪಡೆಯುವುದಕ್ಕೋ ಅಥವಾ ರೇಷನ್‌ ಪಡೆಯುವುದಕ್ಕೋ ಜನರು ಹರಸಾಹಸ ಪಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದ್ದು ನೆಹರೂ ಮತ್ತು ಇಂದಿರಾ ಗಾಂಧಿಯವರ ಸರ್ಕಾರ. ಜನರು ಮೂಲಭೂತ ಅವಶ್ಯಕತೆಗಳ ಹಿಂದೆ ಓಡುವಂತೆ ನಾವು ಮಾಡಿಬಿಟ್ಟೆವೇ ಹೊರತು, ನಿಜಕ್ಕೂ ವಿಶಿಷ್ಟವಾದದ್ದನ್ನು ಸಾಧಿಸಲು ಮುನ್ನುಗ್ಗುವಂತೆ ನಾವು ಅವರನ್ನು ಪ್ರೇರೇಪಿಸಲೇ ಇಲ್ಲ. 

ಸರ್ದಾರ್‌ ಪಟೇಲರ ಪ್ರತಿಮೆ  “ಸ್ಕೈ ಈಸ್‌ ದಿ ಲಿಮಿಟ್‌’ ಎನ್ನುವ ಹೊಸ ಚೈತನ್ಯದಾಯಕ ಭಾರತವನ್ನು ಪ್ರತಿನಿಧಿಸುವ ಭೌತಿಕ ರೂಪಕ. ಈ ಹೊಸ ಮನಸ್ಥಿತಿ ಇದೆಯಲ್ಲ, ಇದು ಪ್ರತಿಮೆಗೆ ಖರ್ಚೆಷ್ಟಾಯಿತು, ಅದರಿಂದ ಲಾಭವೇನಿದೆ ಎನ್ನುವುದನ್ನೂ ಮೀರಿ ಯೋಚಿಸುವಂಥದ್ದು. ಮೋದಿ ಬರುವ ಮುನ್ನ, ನಮ್ಮದು ಗೊಣಗುಟ್ಟುವವರ ರಾಷ್ಟ್ರವಾಗಿತ್ತು. ಮೋದಿಯ ನಂತರವೂ ನಾವು ಹಾಗೆಯೇ ಇರುತ್ತೇವೆ ಎನ್ನುವುದನ್ನು ಪ್ರತಿಮೆಯ ಟೀಕಾಕಾರರು ತೋರಿಸಿಕೊಡುತ್ತಿದ್ದಾರೆ. ಆದರೆ ಈ ಗೊಣಗಾಟಗಳನ್ನು ಕಡೆಗಣಿಸಿ ಮುನ್ನಡೆಯಲು, ಎತ್ತರಕ್ಕೇರಲು ಅನೇಕ ಭಾರತೀಯರು ನಿರ್ಧರಿಸಿದ್ದಾರೆ. 

ಮ್ಯಾನೇಮೆಂಟ್ ಲೇಖಕರಾದ ಜಿಮ್‌ ಕಾಲಿನ್ಸ್‌ ಮತ್ತು ಜೆರ್ರಿ ಪೊರ್ರಾಸ್‌, ತಮ್ಮ ಪುಸ್ತಕ “ಬಿಲ್ಟ್ ಟು ಲಾಸ್ಟ್‌: ಸಕ್ಸಸ್‌ಫ‌ುಲ್‌ ಹ್ಯಾಬಿಟ್ಸ್‌ ಆಫ್ ವಿಷನರಿ ಕಂಪನೀಸ್‌’ನಲ್ಲಿ: “” ತಮ್ಮ ಸಹೋದ್ಯೋಗಿಗಳು ಅತ್ಯುತ್ತಮ ಪ್ರದರ್ಶನ ನೀಡಲಿ ಎನ್ನುವ ಕಾರಣಕ್ಕಾಗಿ ಯಶಸ್ವಿ ನಾಯಕರು ಬೃಹತ್‌ ಮತ್ತು ಎಂಟೆದೆಯ ಗುರಿಗಳನ್ನು ಹಾಕಿಕೊಳ್ಳುತ್ತಾರೆ.” ಎನ್ನುತ್ತಾರೆ. ನರೇಂದ್ರ ಮೋದಿ ಮಾಡಿರುವುದು ಅಕ್ಷರಶಃ ಇದನ್ನೇ. ಸರ್ದಾರ್‌ ಪಟೇಲರ ಪ್ರತಿಮೆಯು ಈ “ಎಂಟೆದೆ’ಯನ್ನು ಪ್ರದರ್ಶಿಸುತ್ತಿದೆ. ಪ್ರತಿಮೆ ನಿರ್ಮಾಣದ ಹಿಂದಿನ ರಾಜಕೀಯ ಉದ್ದೇಶಗಳ ಹೊರತಾಗಿಯೂ- ಇದು ನಿಜಕ್ಕೂ ವಿಸ್ತಾರವಾದ, ದೊಡ್ಡದಾಗಿ ಯೋಚಿಸುವ ಮನಸ್ಸಿನ ಕೆಲಸ ಎನ್ನುವುದನ್ನು ಒಪ್ಪಲೇಬೇಕು.  

(ಮೂಲ: ಸ್ವರಾಜ್ಯ )

ಆರ್‌.ಜಗನ್ನಾಥನ್‌

Advertisement

Udayavani is now on Telegram. Click here to join our channel and stay updated with the latest news.

Next