Advertisement

ಕರಾವಳಿಯಲ್ಲಿ ಹೊಸ ಪ್ರಯೋಗ: BJPಯಿಂದ 6 ಮಂದಿಗೆ ಟಿಕೆಟ್‌ ನಿರಾಕರಣೆ

11:41 PM Apr 13, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ 6 ಮಂದಿ ಹಾಲಿ ಶಾಸಕರಿಗೆ (ಓರ್ವ ಸಚಿವ ಸೇರಿದಂತೆ) ಟಿಕೆಟ್‌ ನಿರಾಕರಿಸುವ ಮೂಲಕ ಬಿಜೆಪಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ದಕ್ಷಿಣ ಕನ್ನಡದಲ್ಲಿ ಪಕ್ಷದ ಶಾಸಕರ ವಿರುದ್ಧ ಇದ್ದಂತಹ ಅಲೆಯನ್ನು ಈ ಬದಲಾವಣೆಯ ಮೂಲಕ ತಣ್ಣಗಾಗಿಸುವ ಪ್ರಯತ್ನ ನಡೆಸಿದೆ. ಉಡುಪಿ ಜಿಲ್ಲೆಯಲ್ಲಿ ಹೊಸಬರಿಗೆ ಅವಕಾಶ ಮತ್ತು ಇತರ ಲೆಕ್ಕಾಚಾರ ಗಮನದಲ್ಲಿರಿಸಿ ಬದಲಾವಣೆ ಮಾಡಲಾಗಿದೆ.

Advertisement

ಕಳೆದ ಎರಡು ತಿಂಗಳಿನಿಂದಲೂ ಗುಜರಾತ್‌ ಮಾದರಿ ಎನ್ನುತ್ತಾ ಶಾಸಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಬಿಜೆಪಿ ವರಿಷ್ಠರು ಈ ಹೊಸ ಪ್ರಯೋಗ ಹಲವರಿಗೆ ಸಂತಸ, ಹಲವರಿಗೆ ಬೇಸರ ತಂದಿದೆ. ತಿಂಗಳಿಗೂ ಹೆಚ್ಚುಕಾಲ ಆಂತರಿಕ ಸಮೀಕ್ಷೆ, ಅಭ್ಯರ್ಥಿಗಳ ಜಾತಿಯ ಪ್ರಭಾವ ಇತ್ಯಾದಿ ಲೆಕ್ಕಾಚಾರವನ್ನು ಅಳೆದು ತೂಗಿ ಮೊದಲ ಹಂತದಲ್ಲಿ ಕರಾವಳಿಯ 13ರಲ್ಲಿ 12 ಸ್ಥಾನಗಳಿಗೆ ಏ.11ರಂದು ಹಾಗೂ ಬೈಂದೂರಿಗೆ 12ರಂದು ಅಭ್ಯರ್ಥಿ ಅಂತಿಮಗೊಳಿಸಲಾಗಿದೆ. ಪುತ್ತೂರು ಹಾಗೂ ಸುಳ್ಯದಲ್ಲಿ ಅಭ್ಯರ್ಥಿ ಬದಲಾವಣೆಗೆ ಬಹಳಷ್ಟು ಒತ್ತಡ ಕಾರ್ಯಕರ್ತರಿಂದಲೇ ಇತ್ತು. ಪುತ್ತೂರಿನಲ್ಲಿ ಶಾಸಕರ ಫೋಟೊ ವೈರಲ್‌ ಆಗಿದ್ದು ಅವರ ಟಿಕೆಟ್‌ ನಿರಾಕರಣೆಯ ಹಲವು ಕಾರಣಗಳಲ್ಲಿ ಒಂದು. ವರ್ಷದ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ಹತ್ಯೆ ಬಳಿಕ ಸುಳ್ಯ, ಪುತ್ತೂರು ಎರಡೂ ಕ್ಷೇತ್ರಗಳ ಶಾಸಕರ ಮೇಲೆ ಕಾರ್ಯಕರ್ತರು ಮುನಿಸಿಕೊಂಡಿದ್ದು ಇದುವರೆಗೂ ಶಮನ ಗೊಂಡಿಲ್ಲ.

ಅದರ ನಡುವೆ ಪುತ್ತೂರಿನಲ್ಲಿ ಬಿಜೆಪಿಯಿಂದ ಹಿಂದೂ ಸಂಘಟನೆ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಅಮಿತ್‌ ಶಾ ಅವರನ್ನು ಸ್ವಾಗತಿಸಿ ಪುತ್ತಿಲ ಬಣದವರು ಹಾಕಿದ್ದ ಬ್ಯಾನರ್‌ ಬಗ್ಗೆ ಶಾಸಕರು ನೀಡಿದ ಮಳೆಗಾಲದಲ್ಲಿ ಅಣಬೆಗಳು ಹುಟ್ಟುಕೊಳ್ಳುವುದು ಸಹಜ, ಅದು ತಾತ್ಕಾಲಿಕ ಎಂಬ ಹೇಳಿಕೆಯೂ ಹಿಂದೂ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿತ್ತು.

ಇನ್ನು ಸುಳ್ಯದಲ್ಲಿ ಹಿಂದಿನ ಅವಧಿಯಲ್ಲೇ ಕ್ಷೇತ್ರದ ಅಲ್ಲಲ್ಲಿ ಅಸಮಾಧಾನ ಉಂಟಾಗಿತ್ತು. ಈ ಬಾರಿಯಂತೂ ಕಳೆದ ಒಂದು ವರ್ಷದಿಂದಲೇ ಅಭ್ಯರ್ಥಿ ಬದಲಾಯಿಸಬೇಕು ಎಂಬ ಒತ್ತಾಯ ಪ್ರಬಲವಾಗಿ ಕೇಳಿಬರತೊಡಗಿತ್ತು. 7 ಬಾರಿ ಸ್ಪರ್ಧಿಸಿ 6 ಬಾರಿ ಶಾಸಕರಾಗಿ, ಎರಡು ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್‌.ಅಂಗಾರ ಅವರ ಬದಲಿಗೆ ಆದಿದ್ರಾವಿಡ ಸಮುದಾಯಕ್ಕೆ ಸೇರಿದ ಭಾಗಿರಥಿ ಮುರುಳ್ಯ ಅವರಿಗೆ ಅವಕಾಶ ನೀಡಿದ್ದು ಅಂಗಾರರ ಬೆಂಬಲಿಗರಲ್ಲಿ ಅಸಮಾಧಾನ ಉಂಟು ಮಾಡಿದ್ದರೂ ಪಕ್ಷದ ವಲಯದಿಂದ ಸ್ವಾಗತ ಕೇಳಿಬಂದಿದೆ.

ಐವರಲ್ಲಿ ನಾಲ್ವರು ಹೊಸಬರು: ಉಡುಪಿ ಜಿಲ್ಲೆಯ ಐವರು ಹಾಲಿ ಶಾಸಕರಲ್ಲಿ ನಾಲ್ವರಿಗೆ ಟಿಕೆಟ್‌ ನೀಡಲಾಗಿಲ್ಲ. ಇವರಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಟಿಕೆಟ್‌ ಘೋಷಣೆಗೆ ಮೊದಲೇ ಚುನಾವಣ ರಾಜಕೀಯಕ್ಕೆ ನಿವೃತ್ತಿ ಹೇಳಿದ್ದರು. ಉಳಿದಂತೆ ಇತರ ಮೂವರು ಮತ್ತೂಮ್ಮೆ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿ ದಕ್ಷಿಣ ಕನ್ನಡದ ಶಾಸಕರು ಎದುರಿಸಿದಂತಹ ಪರಿಸ್ಥಿತಿ ಇರಲಿಲ್ಲ. ಹೊಸಬರಿಗೆ ಅವಕಾಶ, ಗೆಲ್ಲುವ ಕುದುರೆ, ಜಾತಿ ಲೆಕ್ಕಾಚಾರ ಸಹಿತ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮೂವರು ಹಾಲಿ ಶಾಸಕರು ಟಿಕೆಟ್‌ ಕಳೆದುಕೊಳ್ಳಬೇಕಾಯಿತು.

Advertisement

ಸೋಲನುಭವಿಸುತ್ತಿದ್ದುದೇ ಜಾಸ್ತಿ: ಇದುವರೆಗೆ ಕರಾವಳಿ ಬಿಜೆಪಿಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಶಾಸಕರು-ಸಚಿವರನ್ನು ಬದಲಿಸಿದ ನಿದರ್ಶನ ಸಿಗುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಮತದಾರರ /ಕಾರ್ಯಕರ್ತರ ಬೇಸರದ ಮಧ್ಯೆ ಟಿಕೆಟ್‌ ಪಡೆದು ಕಣಕ್ಕಿಳಿದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲನುಭವಿಸುತ್ತಿದ್ದರು.

2013ರಲ್ಲಿ ಆಗಿನ ಬಿಜೆಪಿ ಸರಕಾರದ ವಿರುದ್ಧ ಇದ್ದ ಜನಾಭಿಪ್ರಾಯದಿಂದ ಸುಳ್ಯ ಬಿಟ್ಟು ಉಳಿದ ಕ್ಷೇತ್ರ ಕಳೆದುಕೊಂಡಿದ್ದರೆ 2018ರಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ ಕರಾವಳಿಯಲ್ಲಿ ಬಿಜೆಪಿಯು ಮಂಗಳೂರು ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವನ್ನೂ ಗೆದ್ದುಕೊಂಡಿತ್ತು.

ಪರಿಣಾಮವೇನಾಗಬಹುದು?
ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಹೊಸ ಪ್ರಯೋಗವಾದ ಕಾರಣ ಇದರ ಪರಿಣಾಮವೇನಾ ಗಬಹುದು ಎನ್ನುವುದು ಸದ್ಯದ ಕುತೂಹಲ. ಕೆಲವೊಂದು ಕಡೆ ಶಾಸಕರ ಬೆಂಬಲಿಗರ ಬೇಸರ ವ್ಯಕ್ತವಾದರೂ ಇದು ಚುನಾವಣೆಯಲ್ಲಿ ಪರಿಣಾಮ ಬೀರದು. ಬಿಜೆಪಿ ಸೈದ್ಧಾಂತಿಕವಾಗಿ ಬಲವಾಗಿರುವ ಪಕ್ಷ. ಅಲ್ಲದೆ ಮತದಾರರು ಹೊಸ ಮುಖಗಳನ್ನು ಸ್ವಾಗತಿಸುತ್ತಾರೆ. ಹಾಗಾಗಿ ಕರಾವಳಿಯಲ್ಲಿ ಮತ್ತೆ ಕೇಸರಿ ಬಾವುಟ ಹಾರುವುದು ಪಕ್ಕಾ ಎನ್ನುವುದು ಪಕ್ಷದ ನಾಯಕರ ಲೆಕ್ಕಾಚಾರ.

~ ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next