Advertisement

ಶಿಕ್ಷಣ ಸಂವಾದ: ದೇಸೀ ಜ್ಞಾನದತ್ತ ಹೊರಳಿದ ಭಾರತದ ಹೊಸ ಶಿಕ್ಷಣ ನೀತಿ…

12:21 AM Aug 14, 2020 | mahesh |

ಕಳೆದ ಎರಡು ವರ್ಷಗಳಿಂದ ಚರ್ಚೆಯಲ್ಲಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದ್ದು ದೇಶಾದ್ಯಂತ ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಮಾಧ್ಯಮಗಳಲ್ಲಿ ಹಾಗೂ ಕೊರೊನಾ ಕಾಲದಲ್ಲಿ ಜನಪ್ರಿಯಗೊಂಡ ವ್ಯವಸ್ಥೆ ಯಾದ ವೆಬಿನಾರುಗಳಲ್ಲಿ ಈ ನೀತಿಯನ್ನು ಚರ್ಚಿಸಲಾಗುತ್ತಿದೆ. ಆದರೆ ಪ್ರಕಟಿತ ಶಿಕ್ಷಣ ನೀತಿಯಲ್ಲಿ ಸಾಮಾನ್ಯವಾಗಿ ಜನರ ಗಮನಕ್ಕೆ ಬಾರದ ಅನೇಕ ಅಂಶಗಳಿವೆ. ಈ ಲೇಖನದಲ್ಲಿ ಅಂಥ ಅಂಶಗಳನ್ನು ಮುಂದೆ ಅದರ ಫ‌ಲಾನುಭವಿ ಗಳಾಗಲಿರುವ ಜನರ ಗಮನಕ್ಕೆ ತರಲಾಗಿದೆ.

Advertisement

ಹೊಸ ಶಿಕ್ಷಣ ನೀತಿ ಶಾಲಾ ಶಿಕ್ಷಣವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ವಿದ್ಯಾರ್ಥಿಗಳ ವಯಸ್ಸಿಗನುಗುಣವಾಗಿ ಈ ವಿಂಗಡಣೆಗೆ ವೈಜ್ಞಾನಿಕ ಹಿನ್ನೆಲೆ ಇರುವಂತಿದೆ. ಉದಾಹರಣೆಗೆ ಬುನಾದಿ ಶಿಕ್ಷಣ ಮಗುವಿನ ಮೂರನೇ ವಯಸ್ಸಿಗೆ ಆರಂಭ ಗೊಂಡು ಏಳನೇ ವಯಸ್ಸಿನವರೆಗೆ ಸಾಗುತ್ತದೆ. ಇದರಲ್ಲಿ ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಗಮನದಲ್ಲಿಟ್ಟು ಆಟಗಳ ಮೂಲಕವೇ ಪಾಠ ಕಲಿಸಲಾಗುತ್ತದೆ. ಅಲ್ಲಿ ಅಕ್ಷರ ಅಭ್ಯಾಸವಿರುವುದಿಲ್ಲ. 3,4,5ನೇ ತರಗತಿಗಳು ಎರಡನೇ ಹಂತ. 6,7,8ನೇ ತರಗತಿಗಳು ಮೂರನೇ ಹಂತ ಹಾಗೂ 9ರಿಂದ 12ನೇ ತರಗತಿಯ ನಾಲ್ಕು ವರ್ಷ ನಾಲ್ಕನೇ ಹಂತ. ಈಗಿನ ಪಿಯುಸಿ ತರಗತಿಯನ್ನೂ ಶಾಲಾ ಶಿಕ್ಷಣ ಒಳಗೊಂಡಿದೆ. ಇನ್ನು ಮುಂದಕ್ಕೆ ಪಿಯುಸಿ ಮೇಷ್ಟ್ರು ಗಳು ಯುಜಿಸಿ ಸಂಬಳ ಬೇಕೆಂದು ಹಕ್ಕೊತ್ತಾಯ ಮಾಡಲು ಆಧಾರವೇ ಇಲ್ಲದಂತಾಗುತ್ತದೆ.

ಈ ಶಿಕ್ಷಣ ನೀತಿ ವಿದ್ಯಾರ್ಥಿಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಜೊತೆ ಶಿಕ್ಷಕರ ಬದುಕಿಗೂ ಭದ್ರತೆ ಒದಗಿಸಲು ಒತ್ತು ನೀಡಿದೆ. ಹೊಸ ಶಿಕ್ಷಣ ನೀತಿಯ ಅಮೂಲ್ಯ ಕೊಡುಗೆ ಶಿಕ್ಷಕ ತರಬೇತಿ ಹಾಗೂ ಶಿಕ್ಷಕ ವೃತ್ತಿಗೆ ಸಂಬಂಧಿಸಿದ್ದು. ಇಡೀ ಶಿಕ್ಷಕ ಸಮೂಹವನ್ನು ಶಿಕ್ಷಣ ವ್ಯವಸ್ಥೆಯ ಸೂತ್ರದಾರರು ಎಂಬುದಾಗಿ ಗುರುತಿಸಲಾಗಿದೆ. ಇನ್ನು ಮುಂದೆ ಶಿಕ್ಷಕರಾಗಲು 4 ವರ್ಷಗಳ ಇಂಟಿಗ್ರೇಟೆಡ್‌ ಕೋರ್ಸು ಜಾರಿಗೆ ಬರಲಿದೆ. ಶಿಕ್ಷಕರಾಗುವ ಮನಸ್ಸು, ಛಲ ಇರುವವರು ಮಾತ್ರ ಈ ಕೋರ್ಸಿಗೆ ಸೇರಬೇಕು ಹಾಗೂ ಅಂಥವರು ಮಾತ್ರ ಶಿಕ್ಷಕ‌ರಾಗಬೇಕು ಎಂಬ ಆಶಯ. ಈಗ ಏನಾಗಿದೆಯೆಂದರೆ ಬೇರೆ ಏನೂ ಕೆಲಸ ಸಿಗದವರೆಲ್ಲ ಶಿಕ್ಷಕರಾಗುತ್ತಾರೆ. ಇವರು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕಿಂತ ದಾರಿ ತಪ್ಪಿಸು ವುದೇ ಹೆಚ್ಚು. ಇನ್ನು ಮುಂದಕ್ಕೆ ಈ ಅನಾಹುತಕ್ಕೆ ಅವಕಾಶವಿರಬಾರದು. ಇದಕ್ಕೆ ಅನುಗುಣ ವಾಗಿ ಶಿಕ್ಷಕರಿಗೆ ಸೇವಾಭದ್ರತೆ, ನಿರಂತರ ಹಾಗೂ ಕಾಲಕ್ಕೆ ಅಗತ್ಯವಾದ ತರಬೇತಿ, ಎಲ್ಲ ಹಂತದ ಶಿಕ್ಷಕರಿಗೆ ಪದೋನ್ನತಿಯ ಅವಕಾಶವನ್ನು ಹೊಸ ಶಿಕ್ಷಣ ನೀತಿ ಕಡ್ಡಾಯ ಮಾಡಿದೆ. ಇದರಿಂದ ಪ್ರಾಥಮಿಕ ಶಾಲೆಗೆ ನೇಮಕವಾಗುವ ಶಿಕ್ಷಕ ಯಾವ ಪದೋನ್ನತಿಯೂ ಇಲ್ಲದೆ ನಿವೃತ್ತನಾಗುವ ಪರಿಸ್ಥಿತಿ ತಪ್ಪಬಹುದು.

ಇನ್ನೊಂದು ಬಹಳ ಮುಖ್ಯ ನೀತಿಯೆಂದರೆ ಶಿಕ್ಷಣದತ್ತ ಸಮಗ್ರ ನೋಟ. ಇನ್ನು ಮುಂದೆ ತಾಂತ್ರಿಕ, ಆರೋಗ್ಯ, ಸಂಗೀತ, ಕಾನೂನು ಹೀಗೆ ವಿಷಯ ಕ್ಕೊಂದು ವಿಶ್ವವಿದ್ಯಾಲಯಗಳು ಇರುವುದಿಲ್ಲ. ಬದ ಲಾಗಿ ಇವೆಲ್ಲ ಸಮಗ್ರ ಉನ್ನತ ಶಿಕ್ಷಣ ವ್ಯವಸ್ಥೆಯ ಭಾಗ ವಾಗುತ್ತವೆ. ಈ ನೀತಿಯನ್ನು ಅರಗಿಸಿಕೊಳ್ಳುವ ಶಕ್ತಿ ಹಾಗೂ ಬದ್ಧತೆ ಸರಕಾರಕ್ಕೆ ಇದೆಯೇ? ಯಾಕೆಂದರೆ ಹೀಗೆ ಏಕ ವಿಷಯದ ವಿವಿಗಳು ಖಾಸಗಿ ಒಡೆತನ ದಲ್ಲೇ ಹೆಚ್ಚಾಗಿ ಇರುವುದು. ಅವುಗಳು ಸರಕಾರದ ಮಟ್ಟದಲ್ಲೂ ಪ್ರಭಾವಿಗಳಾಗಿರುತ್ತವೆ. ಅವುಗಳ ಒತ್ತಡವನ್ನು ಆಡಳಿತಗಾರರು ತಡೆದುಕೊಂಡು ದೃಢವಾಗಿ ನಿಲ್ಲುವರೇ? ಈಗ ಪ್ರಕಟಗೊಂಡಿರುವ ಹೊಸ ಶಿಕ್ಷಣ ನೀತಿಯ ಇನ್ನಷ್ಟು ಶಿಫಾರಸುಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ

=ವಿಶೇಷ ಆರ್ಥಿಕ ವಲಯಗಳಿರುವ ಹಾಗೆ ನ್ಯಾಯಯುತ ಹಾಗೂ ಒಳಗೊಳ್ಳುವ ಶಿಕ್ಷಣಕ್ಕಾಗಿ ವಿಶೇಷ ಶಿಕ್ಷಣ ವಲಯಗಳ ಸ್ಥಾಪನೆ.

Advertisement

=ಶಾಲೆಗಳಲ್ಲಿ ಮೂರು ಭಾಷಾ ನೀತಿಯನ್ನು ಮುಂದುವರಿಸಲಾಗುವುದು. ಎಲ್ಲಿ ಅಗತ್ಯವೋ ಅಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳಬಹುದು.

=ಒಂದನೇ ತರಗತಿಯಿಂದ ಐದರವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಎಂಟನೇ ತರಗತಿಯವರೆಗೂ ಮಾತೃಭಾಷೆಯಲ್ಲೇ ಮುಂದು ವರಿಸುವುದು ಅಪೇಕ್ಷಣೀಯ.

=ಶಿಕ್ಷಣ ಹಕ್ಕು ಕಾಯಿದೆಯನ್ನು 3-6ನೇ ವಯಸ್ಸಿನ ಮಕ್ಕಳ ಶಿಕ್ಷಣಕ್ಕೂ ಅನ್ವಯಿಸುವುದು. ಸಪೌಷ್ಟಿಕ ಉಪಾಹಾರ ಮತ್ತು ಮಧ್ಯಾಹ್ನದ ಊಟ ವನ್ನು ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳ ಎಲ್ಲ ಮಕ್ಕಳಿಗೂ ನೀಡುವುದು.

=ಉನ್ನತ ಶಿಕ್ಷಣದ ಎಲ್ಲಾ ಸಂಸ್ಥೆಗಳು ಒಂದೋ ವಿವಿಗಳು ಅಥವಾ ಸ್ವತಂತ್ರ ಪದವಿ ನೀಡುವ ಕಾಲೇಜುಗಳಾಗಿ ಪರಿವರ್ತನೆ. ಯಾವುದೋ ವಿವಿಗೆ ಕಾಲೇಜುಗಳು ಅಧೀನಕ್ಕೊಳಪಡುವ ಅಫಿಲಿಯೇಶನ್‌ ವ್ಯವಸ್ಥೆ ಇನ್ನು ಕೊನೆಗೊಳ್ಳಲಿದೆ.

=ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸ್ಥಾಪನೆಯಾಗಲಿದ್ದು ಇದೊಂದೇ ಉನ್ನತ ಶಿಕ್ಷಣವನ್ನು ನಿಯಂತ್ರಿಸುವ ಸಂಸ್ಥೆಯಾಗಲಿದೆ. ಈಗಿನ ನಿಯಂತ್ರಕ ಸಂಸ್ಥೆಗಳು ವೃತ್ತಿಪರ ನೀತಿ ನಿರೂಪಕ ಸಂಸ್ಥೆಗಳಾಗಲಿವೆ. ಯುಜಿಸಿ ಇನ್ಮುಂದೆ ಉನ್ನತ ಶಿಕ್ಷಣ ಹಣಕಾಸು ಆಯೋಗವಾಗಲಿದೆ.

=ದೇಶದಲ್ಲಿ ಐಐಟಿ ಮಾದರಿಯಲ್ಲಿ ಹತ್ತು ಭಾರತೀಯ ಉದಾರ ಕಲಾ (ಲಿಬರಲ್‌ ಆರ್ಟ್ಸ್) ಸಂಸ್ಥೆಗಳನ್ನು/ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋ ಧನಾ ವಿವಿಗಳನ್ನು ಸ್ಥಾಪಿಸುವುದಾಗಿ ಹೊಸ ಶಿಕ್ಷಣ ನೀತಿ ಹೇಳಿದೆ.

=ಕಾಲೇಜು ಹಾಗೂ ವಿವಿಗಳಲ್ಲಿ ಅಡ್‌ಹಾಕ್‌ ಮತ್ತು ಅರೆಕಾಲಿಕ ನೇಮಕಾತಿಗಳನ್ನು ತತ್‌ಕ್ಷಣದಿಂದ ನಿಲ್ಲಿಸಲು ನೀತಿ ಸೂಚಿಸಿದೆ. ಆದರೆ ಅದಕ್ಕೆ ಪರ್ಯಾ ಯವೇನೆಂದು ಹೇಳಿಲ್ಲ. ಈ ಸಮಸ್ಯೆಗೆ ಬಹಳ ಮುಖಗಳಿವೆ. ಹೆಚ್ಚಿನ ವಿವಿಗಳಲ್ಲಿ ಬಹು ಸಂಖ್ಯೆಯ ಶಿಕ್ಷಕರ ಹುದ್ದೆಗಳು ಖಾಲಿಯಿರುವಾಗ ವಿವಿಗಳು ಖಾಯಂ ನೇಮಕ ಮಾಡಿಕೊಳ್ಳಲು ನೂರೆಂಟು ವಿಘ್ನಗಳಿರುವಾಗ ಅರೆಕಾಲಿಕ ಅಥವಾ ಗುತ್ತಿಗೆ ಶಿಕ್ಷಕರ ಉಪನ್ಯಾಸಕರ ನೇಮಕ ಪದ್ಧತಿಯನ್ನು ಕೈಬಿಟ್ಟರೆ ಪಾಠ ಮಾಡುವವರು ಯಾರು?

=ಗಮನಿಸಬೇಕಾದ ಅಂಶ ವೈದ್ಯಕೀಯ ಶಿಕ್ಷಣದ್ದು. ಎಂಬಿಬಿಎಸ್‌ ಕೋರ್ಸನ್ನು ಸಂಪೂರ್ಣ ಮರು ವಿನ್ಯಾಸಗೊಳಿಸಲು ಹೊಸ ಶಿಕ್ಷಣ ನೀತಿ ಹೊರಟಿದೆ. ಜತೆಗೆ ಎಲ್ಲ ವೈದ್ಯಕೀಯ ಪದ್ಧತಿಗಳ ಸಮಗ್ರ ಹೊಂದಾಣಿಕೆಗೆ ಹೊಸ ಪ್ರಯತ್ನ. ಹೊಸ ಶಿಕ್ಷಣ ನೀತಿ ದೇಸೀಯ ಜ್ಞಾನದತ್ತ ಹೊರಳುವ ಉದಾಹರಣೆಯೆಂದರೆ ಭಾರತೀಯ ವೈದ್ಯ ಪದ್ಧತಿಗಳನ್ನು ಇಂಗ್ಲಿಷ್‌ ಪದ್ಧತಿಗೆ ಸರಿಸಮವಾಗಿ ಕಾಣುವುದು. ಇನ್ನು ಮುಂದೆ ಎಂಬಿಬಿಎಸ್‌ ಓದುವವರು ಯುನಾನಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೋರ್ಸಿನ ಮೂಲ ತಣ್ತೀಗಳನ್ನು ಓದಬೇಕು, ಹಾಗೇ ಭಾರತೀಯ ವೈದ್ಯ ಕೋರ್ಸು ಗಳಲ್ಲೂ ಇಂಗ್ಲಿಷ್‌ ಮೆಡಿಸಿನ್ನಿನ ಮೂಲ ತಣ್ತೀ ಬೋಧಿಸಲಾಗುವುದು.

=ಹೊಸ ನೀತಿಯ ಅಂಶಗಳನ್ನು ಜಾರಿಗೆ ತರಲು ಸರಕಾರಕ್ಕೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಅದನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದು ಅಸ್ಪಷ್ಟ. ಸರಕಾರವೇನೋ ಸಾರ್ವಜನಿಕರ ಹೂಡುವಿಕೆಯಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಯನ್ನು ಬಲಪಡಿಸಲಾಗುವುದು ಎಂಬ ಧೈರ್ಯ ದಲ್ಲಿದೆ. ಶಿಕ್ಷಣದ ವ್ಯಾಪಾರೀಕರಣವನ್ನು ನಿಲ್ಲಿಸ ಲಾಗುವುದು, ದಾನಿಗಳನ್ನು ಪ್ರೋತ್ಸಾಹಿಸಲಾಗು ವುದು ಎಂದಿದೆ. ಆದರೆ ಯಾರು ದಾನಧರ್ಮ ಮಾಡ ಬೇಕಿತ್ತೋ ಆ ಧಾರ್ಮಿಕ ಪೀಠಗಳು ನಡೆಸುವ ಕಾಲೇಜುಗಳೇ ಶಿಕ್ಷಣ ವ್ಯಾಪಾರದ ಅಡ್ಡೆಗಳಾಗಿವೆ.

ಇಂದಿನ ವ್ಯವಸ್ಥೆಯಲ್ಲಿ ನೈಜ ಬದಲಾವಣೆ ತರಬಲ್ಲ ಅನೇಕ ಪ್ರಸ್ತಾವಗಳು ಈ ಶಿಕ್ಷಣ ನೀತಿಯಲ್ಲಿ ಇವೆ. ಜನರು ಮುಖ್ಯವಾಗಿ ನಮ್ಮ ವಿದ್ಯಾವಂತರು, ತಮ್ಮ ಜಾತಿ, ಧರ್ಮ, ರಾಜಕೀಯ ಒಲವುಗಳನ್ನು ಬದಿಗಿ ಟ್ಟು ತೆರೆದ ಮನಸ್ಸಿನಿಂದ ಈ ನೀತಿಯ ಸಾಧ್ಯತೆಗಳನ್ನು ಚರ್ಚಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ಮೇಲೆ ನಮ್ಮ ಶಿಕ್ಷಣ ನೀತಿಯನ್ನು ಆದ್ಯಂತ ಪುನರ್‌ರೂಪಿಸುವ ಅವಕಾಶವೊಂದು ದೊರೆತಿದ್ದು ಅದನ್ನು ನಾವು ಕಳೆದುಕೊಳ್ಳಬಾರದು.

ಡಾ| ನಿರಂಜನ ವಾನಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next