Advertisement

Ayodhya: ನವ ಅಯೋಧ್ಯೆ ಇಂದು ಅನಾವರಣ

11:41 PM Dec 29, 2023 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಜ. 22ರಂದು ಪ್ರಾಣಪ್ರತಿಷ್ಠಾಪನೆ ಮಾಡು ವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದೇ ವೇಳೆ ಡಿ. 30ರ ಶನಿವಾರ ಪ್ರಧಾನಿ ಮೋದಿಯವರು ಅಯೋಧ್ಯೆಯ ಚಿತ್ರಣವನ್ನೇ ಬದಲಾಯಿಸುವಂತಹ 15,700 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ 11,100 ಕೋ.ರೂ.ಗಳು ಅಯೋಧ್ಯೆಗೆ ಮೀಸಲಾಗಿದ್ದರೆ ಉಳಿದ 4,600 ಕೋ.ರೂ. ಮೊತ್ತದ ಯೋಜನೆಗಳು ಉತ್ತರಪ್ರದೇಶದ ವಿವಿಧ ಭಾಗಗಳಿಗೆ ಸಂಬಂಧಿಸಿದ್ದಾಗಿವೆ. ಮೋದಿಯವರ ಜನಸಭಾ ರ್ಯಾಲಿಯಲ್ಲಿ 1.5 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇಡೀ ಅಯೋಧ್ಯೆ ಅದ್ಭುತವಾಗಿ ಶೃಂಗಾರಗೊಂಡಿದೆ. ಮೋದಿ ಭೇಟಿಯ ಹಿನ್ನೆ ಲೆ ಯಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.

Advertisement

ಮೋದಿಯವರು ಮುಖ್ಯವಾಗಿ 2 ಅಮೃತ್‌ ಭಾರತ್‌ ರೈಲುಗಳು, ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಸೇರಿ 6 ವಂದೇ ಭಾರತ್‌ ರೈಲುಗಳ ಸಂಚಾರವನ್ನು ಉದ್ಘಾಟಿಸಲಿದ್ದಾರೆ. ಅನಂತರ ಮಹರ್ಷಿ ವಾಲ್ಮೀಕಿಯ ಹೆಸರನ್ನು ಹೊಂದಲಿರುವ ಬೃಹತ್‌ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೆಯೇ ಇತ್ತೀಚೆಗಷ್ಟೇ ಅಯೋಧ್ಯಾ ಧಾಮ ಜಂಕ್ಷನ್‌ ಎಂದು ಮರುನಾಮಕರಣಗೊಂಡ ರೈಲು ನಿಲ್ದಾಣವೂ ಉದ್ಘಾಟನೆಯಾಗಲಿದೆ.

1,450 ಕೋ.ರೂ. ಮೊತ್ತದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಲೋಕಾರ್ಪಣೆ
ಮಂದಿರ ನಿರ್ಮಾಣದಿಂದ ಅಯೋಧ್ಯೆ ಯಲ್ಲಿ ಪ್ರವಾಸಿಗಳ ಸಂಖ್ಯೆ ನಿಶ್ಚಿತವಾಗಿ ಭಾರೀ ಪ್ರಮಾಣದಲ್ಲಿ ಏರಲಿದೆ. ಇದೇ ಕಾರಣದಿಂದ ಮೊದಲ ಹಂತದಲ್ಲಿ 1,450 ಕೋ.ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಮಹರ್ಷಿ ವಾಲ್ಮೀಕಿ ನಿಲ್ದಾಣವೆಂದು ಇದಕ್ಕೆ ಹೆಸರಿಡಲಾಗಿದೆ.
ನಿಲ್ದಾಣ 6,500 ಚ.ಮೀ. ವಿಸ್ತೀರ್ಣವಿದೆ. 2ನೇ ಹಂತದಲ್ಲಿ 50 ಸಾವಿರ ಚ.ಮೀ.ಗೆ ವಿಸ್ತರಿಸಲಾಗುತ್ತದೆ. ರನ್‌ವೇಯನ್ನು 3,750 ಚ.ಮೀ.ಗಳಷ್ಟು ವಿಸ್ತರಿಸಲಾಗುತ್ತದೆ. ಈ ನಿಲ್ದಾಣ ಉದ್ಘಾಟನೆ ಐತಿಹಾಸಿಕ ಹೆಜ್ಜೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ವರ್ಣಿಸಿದ್ದಾರೆ.

ಯಾವ್ಯಾವ ಯೋಜನೆ ಉದ್ಘಾಟನೆ?

6 ವಂದೇ ಭಾರತ್‌ ರೈಲುಗಳು
ಕರ್ನಾಟಕದ ಮಂಗಳೂರು-ಮಡಗಾಂವ್‌ (ಗೋವಾ)
ಬೆಂಗಳೂರಿನ ಕಂಟೋನ್ಮೆಂಟ್‌-ತಮಿಳುನಾಡಿನ ಕೊಯಮತ್ತೂರು
ಅಯೋಧ್ಯಾ-ದಿಲ್ಲಿ (ಆನಂದ್‌ ವಿಹಾರ್‌ ನಿಲ್ದಾಣ)
ಜಮ್ಮು-ಕಾಶ್ಮೀರದ ಶ್ರೀಮಾತಾ ವೈಷ್ಣೋ ದೇವಿ ಕಟರಾ-ಹೊಸದಿಲ್ಲಿ
ಪಂಜಾಬ್‌ನ ಅಮೃತಸರ-ದಿಲ್ಲಿ
ಮಹಾರಾಷ್ಟ್ರದ ಜಲಾ°-ಮುಂಬಯಿ

Advertisement

2 ಅಮೃತ್‌ ಭಾರತ್‌ ರೈಲುಗಳು
1 ಬಿಹಾರದ ದರ್ಭಾಂಗ-ಅಯೋಧ್ಯಾ-ದಿಲ್ಲಿ (ಆನಂದ್‌ ವಿಹಾರ್‌ ನಿಲ್ದಾಣ)
2 ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ನಿಲ್ದಾಣ-ಪ. ಬಂಗಾಲದ ಮಾಲ್ಡಾ

ಅಮೃತ್‌ ಭಾರತ್‌ ವಿಶೇಷವೇನು?
ಅಮೃತ್‌ ಭಾರತ್‌ ರೈಗಳನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಎಲ್‌ಎಚ್‌ಬಿ ಪುಶ್‌-ಪುಲ್‌ ತಂತ್ರಜ್ಞಾನವಿದೆ. ಅಂದರೆ ಟ್ರೈನಿನ ಎರಡೂ ತುದಿಗಳಿಂದ ಕಾರ್ಯಾಚರಣೆ ಆರಂಭಿಸಬಹುದು. ಕೋಚ್‌ಗಳಿಗೆ ಎಸಿ ಸೌಲಭ್ಯವಿಲ್ಲ, ಆದರೆ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸೌಲಭ್ಯಗಳನ್ನು ನೀಡಲಾಗಿದೆ. ಆಸನಗಳು ಆರಾಮದಾಯಕವಾಗಿರಲಿವೆ, ಪ್ರಯಾಣಿಕರಿಗೆ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆಯೂ ಇದೆ.

ಬಾಲರಾಮನ ವಿಗ್ರಹ ಆಯ್ಕೆಗೆ ಸಭೆ
ಶ್ರೀರಾಮಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪಿಸಲಿರುವ ಬಾಲರಾಮನ ಮೂರ್ತಿಯನ್ನು ಆಯ್ಕೆ ಮಾಡಲು ಶುಕ್ರವಾರ ಅಯೋಧ್ಯೆಯಲ್ಲಿ ಮಹತ್ವದ ಸಭೆ ನಡೆದಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 5 ವರ್ಷದ ಬಾಲ ರಾಮನ ಮೂರು ಮೂರ್ತಿಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.

ಕರ್ನಾಟಕದ ಹೊನ್ನಾವರದ ಶಿಲ್ಪಿ ಗಣೇಶ್‌ ಭಟ್‌ ಹಾಗೂ ಮೈಸೂರಿನ ಅರುಣ್‌ ಯೋಗಿರಾಜ್‌ ಕೃಷ್ಣಶಿಲೆಯಲ್ಲಿ ವಿಗ್ರಹವನ್ನು ನಿರ್ಮಿಸಿ ದ್ದಾರೆ. ರಾಜಸ್ಥಾನದ ಶಿಲ್ಪಿ ನಾರಾಯಣ ಪಾಂಡೆ ಮಕ್ರಾನ ಅಮೃತ ಶಿಲೆಯನ್ನು ಬಳಸಿದ್ದಾರೆ. ಮುಂಬಯಿಯ ಚಿತ್ರಕಲಾವಿದ ವಾಸುದೇವ್‌ ಕಾಮತ್‌ ಬರೆದ ಚಿತ್ರವನ್ನು ಆಧರಿಸಿ ಈ ವಿಗ್ರಹಗಳನ್ನು ಸಿದ್ಧಪಡಿಸ ಲಾಗಿದೆ. ಈ ಮೂರು ವಿಗ್ರಹಗಳ ಪೈಕಿ ಒಂದನ್ನು ಆಯ್ಕೆ ಮಾಡಲು ಸಭೆ ನಡೆದಿದೆ. ಯಾವ ವಿಗ್ರಹದಲ್ಲಿ ಬಾಲರಾಮನ ದಿವ್ಯತೆ ಗರಿಷ್ಠ ಪ್ರಮಾಣದಲ್ಲಿ ವ್ಯಕ್ತವಾಗುತ್ತದೋ ಅದನ್ನು ಆಯ್ಕೆ ಮಾಡುವುದಾಗಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next