Advertisement

ಟೆರೇಸಲ್ಲಿ ಗೂಡು ಕಟ್ಟಿದ ಜೇನು ಕೃಷಿ

12:46 PM Nov 19, 2018 | |

ಬೆಂಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಟೆರೇಸ್‌ ಗಾರ್ಡನ್‌ (ಮೇಲ್ಛಾವಣಿ ಕೃಷಿ) ಜನಪ್ರಿಯಗೊಳ್ಳುತ್ತಿರುವ ಬೆನ್ನಲ್ಲೇ ಅದಕ್ಕೆ ಪೂರಕವಾಗಿ “ಜೇನು ಕೃಷಿ’ ಕೂಡ ನಿಧಾನವಾಗಿ ಜನರನ್ನು ಆಕರ್ಷಿಸುತ್ತಿದ್ದು, ಕೃಷಿ ಮೇಳದಲ್ಲೇ ಸುಮಾರು ನೂರಕ್ಕೂ ಅಧಿಕ ನಗರ ವಾಸಿಗಳು ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ. 

Advertisement

ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಜನ “ಜೇನು ಸಾಕಾಣಿಕೆ ತರಬೇತಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ ನಗರದಲ್ಲಿ ಟೆರೇಸ್‌ ಗಾರ್ಡನ್‌ ಹಾಗೂ ಲ್ಯಾಂಡ್‌ಸ್ಕೇಪ್‌ ಗಾರ್ಡನ್‌ ಮಾಡುತ್ತಿರುವ ಅಂದಾಜು ನೂರಕ್ಕೂ ಹೆಚ್ಚು ಜನ ನಮ್ಮನ್ನು ಸಂಪರ್ಕಿಸಿ, ಜೇನು ಸಾಕಾಣಿಕೆ ಕುರಿತು ಮಾಹಿತಿ ಪಡೆದಿದ್ದಾರೆ.

ಅಲ್ಲದೆ, ಪೂರಕ ಪರಿಕರಗಳನ್ನೂ ಕೇಳಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಖೀಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆಯ ಮುಖ್ಯ ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ್‌ “ಉದಯವಾಣಿ’ಗೆ ಮಾಹಿತಿ ನೀಡಿದರು. 

ಹೀಗೆ ಜೇನು ಸಾಕಾಣಿಕೆಗೆ ಆಸಕ್ತಿ ತೋರಿಸಿದವರೆಲ್ಲಾ ನಗರದ ಹೃದಯಭಾಗದಲ್ಲಿ ಇರುವವರಲ್ಲ. ಬಹುತೇಕರು ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ನೆಲೆಸಿರುವವರಾಗಿದ್ದಾರೆ. ಉತ್ತರದಲ್ಲಿ ಯಲಹಂಕ ಅದರಲ್ಲೂ ಜಿಕೆವಿಕೆ ಇರುವುದರಿಂದ ಜೇನು ಸಾಕಲು ಪ್ರಾಶಸ್ತ್ಯವಾಗಿದೆ ಎಂಬುದು ಪ್ರಮುಖ ಕಾರಣ.

ಅದೇ ರೀತಿ, ಕನಕಪುರ ಸುತ್ತಲಿನ, ಕೆಂಗೇರಿ, ಮೈಸೂರು ರಸ್ತೆ, ದೊಡ್ಡಬಳ್ಳಾಪುರ ಸೇರಿದಂತೆ ನಗರಕ್ಕೆ ಹೊಂದಿಕೊಂಡ ಪ್ರದೇಶಗಳ ಜನರಿಗೆ ನಾವು ಶಿಫಾರಸು ಮಾಡುತ್ತಿದ್ದೇವೆ. ಅಂತಹವರಿಗೆ ಜೇನು ಸಾಕಾಣಿಕೆಗೆ ಬೇಕಾದ ಪರಿಕರಗಳ ಜತೆಗೆ ವಿಶ್ವವಿದ್ಯಾಲಯದಿಂದ ತರಬೇತಿ ನೀಡಲಾಗುವುದು.

Advertisement

ಈ ಮೊದಲೇ ನಿಗದಿಪಡಿಸಿದಂತೆ ಡಿಸೆಂಬರ್‌ 6 ಮತ್ತು 7ರಂದು ಹಾಗೂ 12 ಮು¤ 13ರಂದು ಎರಡು ಬ್ಯಾಚ್‌ಗಳಲ್ಲಿ ಜೇನು ಸಾಕಾಣಿಕೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಎಲ್ಲ ವರ್ಗದವರಿಗೂ ತಾಂತ್ರಿಕ ತರಬೇತಿ, ಮಾರುಕಟ್ಟೆ ಬಗ್ಗೆ ನೀಡಲಾಗುವುದು ಎಂದು ಅವರು ಹೇಳಿದರು. 

ಟೆಕ್ಕಿಗಳೇ ಹೆಚ್ಚು!: ಜೇನು ಕೃಷಿಗೆ ಆಸಕ್ತಿ ತೋರಿಸಿದವರ ಪೈಕಿ ಹೆಚ್ಚಾಗಿ ಯುವಕರು, ಸಾಫ್ಟ್ವೇರ್‌ ಎಂಜಿನಿಯರ್‌ಗಳಾಗಿದ್ದಾರೆ. ಮೇಲ್ಛಾವಣಿಯಲ್ಲಿ ಪ್ರಸ್ತುತ ತರಕಾರಿ, ಅಲಂಕಾರಿಕ ಹೂವುಗಳನ್ನು ಬೆಳೆಯುವ ಟ್ರೆಂಡ್‌ ಹೆಚ್ಚುತ್ತಿದೆ. ಆದರೆ, ಈ ಬೆಳೆಗಳು ಉತ್ತಮ ಫ‌ಲ ನೀಡಬೇಕಾದರೆ, ಪರಾಗಸ್ಪರ್ಶ ಆಗಲೇಬೇಕು. ಇಲ್ಲದಿದ್ದರೆ ಹೂವು ಕಾಯಿ ಕಟ್ಟುವುದಿಲ್ಲ.

ಕಾಯಿ ಹಣ್ಣೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನ ಜೇನು ಸಾಕಾಣಿಕೆಗೆ ಆಸಕ್ತಿ ತೋರಿಸುತ್ತಿರುವುದು ಕಂಡುಬರುತ್ತಿದೆ. ಅಷ್ಟಕ್ಕೂ ಬೆಂಗಳೂರು ಮೂಲತಃ “ಹನಿ ಸಿಟಿ’. ಅಂದರೆ ಜೇನು ಸಾಕಾಣಿಕೆಗೆ ಹೇಳಿಮಾಡಿಸಿದ್ದಾಗಿದೆ. ಈಚೆಗೆ ಕಾಂಕ್ರೀಟ್‌ ಕಾಡಿನಿಂದ ಜೇನುನೊಣಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.  

ಭೇಟಿ ನೀಡಿದವರೆಲ್ಲಾ ತಮ್ಮ ಕಟ್ಟಡಗಳ ಮೇಲ್ಛಾವಣಿಯಲ್ಲಿ ಜೇನು ಸಾಕಾಣಿಕೆ ಮಾಡಬಹುದೇ? ಇದಕ್ಕೆ ಮಾರುಕಟ್ಟೆ ಹೇಗೆ? ಯಾವ ಪ್ರಕಾರಗಳ ಜೇನು ಸಾಕಬಹುದು? ಎಷ್ಟು ಲಾಭ ಬರುತ್ತದೆ? ಎಷ್ಟು ದಿನಗಳ ತರಬೇತಿ ಎಂಬ ಹಲವು ಮಾಹಿತಿಗಳನ್ನು ಪಡೆದಿದ್ದಾರೆ. ಟೆರೇಸ್‌ನಲ್ಲಿ ಗಾರ್ಡನ್‌ಗಳ ಜತೆಗೆ ತುಡುವೆ ಜೇನು ಸಾಕಬಹುದು.

ಒಂದು ಅಥವಾ ಎರಡು ಯೂನಿಟ್‌ಗಳನ್ನು ಇಡಬಹುದು. ಒಂದರಲ್ಲಿ ಕನಿಷ್ಠ 7ರಿಂದ 8 ಸಾವಿರ ಜೇನುನೊಣಗಳಿರುತ್ತವೆ. ಪೆಟ್ಟಿಗೆ ಅಳವಡಿಕೆಗೆ 4,000-4,500 ರೂ. ಖರ್ಚಾಗುತ್ತದೆ. ಪ್ರತಿ ವರ್ಷ 5ರಿಂದ 6 ಸಾವಿರ ರೂ. ಆದಾಯ ಬರುತ್ತದೆ. ಮೊದಲ ವರ್ಷ ಮಾತ್ರ ಬಂಡವಾಳ, ನಂತರದಿಂದ ಅಗತ್ಯವಿಲ್ಲ ಎಂದೂ ಅವರು ಹೇಳಿದರು.  

ಅಂದಹಾಗೆ ಒಟ್ಟಾರೆ ಸಸ್ಯಸಂಪತ್ತಿನಲ್ಲಿ ಶೇ. 87ರಷ್ಟು ಜೇನುನೊಣಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ನಮ್ಮಲ್ಲಿ ತುಡುವೆ, ಕಡ್ಡಿ, ಮೆಲಿಫ‌ರ್‌, ನಸಿರು, ಹೆಜ್ಜೆàನು ಸೇರಿದಂತೆ ಒಟ್ಟಾರೆ ಐದು ಪ್ರಕಾರದ ಜೇನುನೊಣಗಳಿದ್ದು, ಹೆಜ್ಜೆàನು ಸಾಕುವುದಿಲ್ಲ. ಜೇನು ಕಚ್ಚುತ್ತದೆ ಎಂಬ ಭಯದಿಂದ ಈ ಕೃಷಿಗೆ ಹಿನ್ನಡೆಯಾಗಿದೆ. ಆದರೆ, ಇತ್ತೀಚೆಗೆ ಇದರಿಂದ ಜನ ಹೊರಬರುತ್ತಿರುವುದು ಕಂಡುಬರುತ್ತಿದೆ.  

ಬಂದಿದೆ ಹನಿ ನೀರಾವರಿ ಕಿಟ್‌: ಈ ಮಧ್ಯೆ ಮೇಲ್ಛಾವಣಿ ಕೃಷಿ ಜನಪ್ರಿಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೈನ್‌ ಇರಿಗೇಷನ್‌ ಕಂಪನಿಯು “ಹನಿ ನೀರಾವರಿ ಕಿಟ್‌’ ಪರಿಚಯಿಸಿದೆ. 1,300 ರೂ. ಬೆಲೆಯ ಈ ಕಿಟ್‌ನಲ್ಲಿ ವಾಲ್‌, ಅಡಾಪ್ಟರ್‌, ಫಿಲ್ಟರ್‌, ಟಿ-ಎಲ್ಬೊ, ಡ್ರಿಪ್ಪರ್‌ ಮತ್ತಿತರ ಉಪಕರಣಗಳು ಇರುತ್ತವೆ. ಇದರಿಂದ 60 ಸಸಿಗಳಿಗೆ ನೀರುಣಿಸಬಹುದಾಗಿದ್ದು, ನಗರದಲ್ಲಿ ತಿಂಗಳಿಗೆ ಕನಿಷ್ಠ 30 ಕಿಟ್‌ಗಳು ಮಾರಾಟ ಆಗುತ್ತಿವೆ ಎಂದು ಜೈನ್‌ ಇರಿಗೇಷನ್‌ ಏರಿಯಾ ಮ್ಯಾನೇಜರ್‌ ಎಚ್‌.ಎನ್‌. ರವಿ ಮಾಹಿತಿ ನೀಡಿದರು.

ಟೆರೇಸ್‌ನಲ್ಲಿ ಗಾರ್ಡನಿಂಗ್‌ ಮಾಡಲಿಚ್ಛಿಸುವವರು ಈಗ ಪ್ಲಂಬರ್‌ನನ್ನು ಕರೆತರಬೇಕು. ನಂತರ ಆತ ಕೊಟ್ಟ ಉಪಕರಣಗಳ ಪಟ್ಟಿಯನ್ನು ತರಬೇಕು. ಅಷ್ಟಕ್ಕೂ ಅವರಲ್ಲಿ ಬಹುತೇಕರು ತಜ್ಞರೂ ಇರುವುದಿಲ್ಲ. ಇದೆಲ್ಲಾ ಕಿರಿಕಿರಿ ತಪ್ಪಿಸಲು ಈ ಕಿಟ್‌ ಪರಿಚಯಿಸಲಾಗಿದೆ. ಇದನ್ನು ಸ್ವತಃ ಮನೆ ಮಾಲಿಕರೇ ಜೋಡಣೆ ಮಾಡಬಹುದು ಅಥವಾ ಕಂಪೆನಿಯಿಂದಲೂ ಸರ್ವಿಸ್‌ ಇರುತ್ತದೆ ಎಂದು ಹೇಳಿದರು.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next