Advertisement

ನೆರಬೆಂಚಿ: ಅಂತ್ಯಸಂಸ್ಕಾರ ವಿವಾದ ಸುಖಾಂತ್ಯ

10:12 AM Sep 27, 2018 | |

ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರಕ್ಕೆ ಜಾಗ ಕೊಡಲು ಸವರ್ಣಿಯರಾದ ಖಾಸಗಿ ಜಮೀನು ಮಾಲೀಕರು ಮೊದಲು ನಿರಾಕರಿಸಿ ನಂತರ ತಾಲೂಕಾಡಳಿತ, ದಲಿತ ಮುಖಂಡರ ಮನವೊಲಿಕೆಯಿಂದ ತಮ್ಮ ಜಮೀನಿನಲ್ಲೇ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟ ಘಟನೆ ಬುಧವಾರ ನಡೆದಿದೆ.

Advertisement

ಗ್ರಾಮದ ದಲಿತ ಕೇರಿಯ ಹಿರಿಯ ವ್ಯಕ್ತಿ ಶಿವಪ್ಪ ಮಾದರ (70) ಮಂಗಳವಾರ ರಾತ್ರಿ ನಿಧನರಾಗಿದ್ದರು. ದಶಕಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಕೇರಿ ಪಕ್ಕದಲ್ಲಿಯೇ ಇದ್ದ ಶಾಂತಮ್ಮ ಬಿರಾದಾರ ಎನ್ನುವವರ ಸ್ವಂತ ಮಾಲೀಕತ್ವದ ಜಮೀನಿನಲ್ಲಿ ಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಲು ಮುಂದಾಗಿದ್ದರು. ಇದಕ್ಕೆ ಜಮೀನು ಮಾಲೀಕರು ನಿರಾಕರಿಸಿದ್ದು ಸಮಸ್ಯೆ ಉಂಟಾಗಲು ಕಾರಣವಾಗಿತ್ತು.

ಇಷ್ಟು ದಿನ ನಮ್ಮ ಜಮೀನಿನ ಬದುವಿನಲ್ಲೇ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ ದಲಿತರ ಕೇರಿಯ ಕೆಲವರು ಇತ್ತೀಚಿಗೆ ತಮ್ಮೊಂದಿಗೆ ವಿನಾಕಾರಣ ಜಗಳ ಕಾಯುವುದು, ಅವಾಚ್ಯ ಭಾಷೆ ಬಳಸಿ ಬೈಯುವುದು ಮಾಡಿ ನಮ್ಮನ್ನು ಅವಮಾನಗೊಳಿಸುತ್ತಿದ್ದಾರೆ. ಹೀಗಾಗಿ ನಮ್ಮ ಜಮೀನಿನಲ್ಲಿ ಸಂಸ್ಕಾರ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಸಮಸ್ಯೆ ಗಂಭೀರಗೊಳ್ಳಲು ಕಾರಣವಾಗಿತ್ತು. 

ಸಮಸ್ಯೆ ಅರಿತು ತಹಶೀಲ್ದಾರ್‌ ಎಂ.ಎಸ್‌. ಬಾಗವಾನ, ಸಿಪಿಐ ರವಿಕುಮಾರ ಕಪ್ಪತ್ತನ್ನವರ, ಪಿಎಸೈ ಮಲ್ಲಪ್ಪ ಮಡ್ಡಿ ಗ್ರಾಮಕ್ಕೆ ಧಾವಿಸಿ ಸಮಸ್ಯೆ ಉದ್ಬವಗೊಂಡಿರುವ ಜಮೀನಿಗೆ ತೆರಳಿ ಜಮೀನು ಮಾಲೀಕರ ಮನವೊಲಿಸಲು ಮುಂದಾದರು. ಈ ವೇಳೆ ಜಮೀನಿನ ಒಡತಿ ಶಾಂತಮ್ಮ ಬಿರಾದಾರ ಅವರು ನಮಗೆ ಬಲವಂತ ಮಾಡಿದರೆ, ನಮ್ಮ ಮಾತು ಮಿರಿ ನಮ್ಮ ಹೊಲದಲ್ಲಿ ಸಂಸ್ಕಾರ ಮಾಡಿದರೆ ನಾನು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿ ಎಲ್ಲರನ್ನೂ ಚಿಂತೆಗೀಡು ಮಾಡಿದರು. 

ಈ ವೇಳೆ ಸ್ಥಳದಲ್ಲಿದ್ದ ಗ್ರಾಮ ಸಹಾಯಕ ರಾಮಣ್ಣ, ಹಿರೇಮುರಾಳ ಗ್ರಾಪಂ ಸಿಬ್ಬಂದಿ ಅಯ್ಯಪ್ಪ ಮಲಗಲದಿನ್ನಿ, ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಡಿ.ಬಿ. ಮುದೂರ, ವಿವಿಧೆಡೆಯಿಂದ ಆಗಮಿಸಿದ್ದ ದಲಿತ ಸಂಘಟನೆಗಳ ಪ್ರಮುಖರು ಬಿರಾದಾರ ಕುಟುಂಬದ ಮನವೊಲಿಸಲು ಹರಸಾಹಸಪಟ್ಟರು. ಇದೊಂದು ಬಾರಿಯಾದರೂ ಮಾನವೀಯತೆ ನೆಲೆಯಲ್ಲಿ ಇಲ್ಲೇ ಸಂಸ್ಕಾರ ನಡೆಸಲು ಅವಕಾಶ ಕೊಡಬೇಕು.

Advertisement

ಕೆಲವೇ ದಿನಗಳಲ್ಲಿ ಸರ್ಕಾರಿ ಸ್ಮಶಾನ ಭೂಮಿ ಗುರ್ತಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪರಿಪರಿಯಾಗಿ ಬಿರಾದಾರ ಕುಟುಂಬದವರಿಗೆ ತಿಳಿವಳಿಕೆ ಹೇಳಲು ಮುಂದಾದರು. ಕೇರಿಯ ಕೆಲವರು ನಮಗೆ ಏನೇನು ಕಾಟ, ಹಿಂಸೆ ಕೊಟ್ಟಿದ್ದಾರೆ ಅನ್ನೋದು ನಿಮಗೇನು ಗೊತ್ತಿದೆ. ಅನುಭವಿಸಿದವರು ನಾವು. ನೀವು ಸುಮ್ಮನೆ ಹೋಗಿ. ಸಂಸ್ಕಾರಕ್ಕೆ ಬೇರೆ ಜಮೀನು ನೋಡಿಕೊಳ್ಳಿ ಇಲ್ಲವೇ ಸರ್ಕಾರಿ ಜಮೀನಿನಲ್ಲಿ ಸಂಸ್ಕಾರ ಮಾಡಿಸಿ ಎಂದು ಜಮೀನು ಮಾಲೀಕರು ಪಟ್ಟು ಹಿಡಿದರು. ಒಂದು ಹಂತದಲ್ಲಿ ಸಿಪಿಐ, ತಹಶೀಲ್ದಾರ್‌ಗೆ ಎದುರು ವಾದಿಸಿ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. 

ಆದರೆ ಸಂಸ್ಕಾರಕ್ಕೆ ಮಾತ್ರ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡೊಲ್ಲ ಎಂದು ಪಟ್ಟು ಹಿಡಿದು ಪರಿಸ್ಥಿತಿ ಕೈ ಮೀರುವ ಸನ್ನಿವೇಶ ಸೃಷ್ಟಿಗೆ ಮುಂದಾದರು. ಅಂತೂ ಇಂತೂ ಹರಸಾಹಸ ಪಟ್ಟು ಎಲ್ಲರೂ ಬಿರಾದಾರ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೂ ಸಂಗಣ್ಣ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿರುವ ತಮ್ಮ ಹಿರಿಯ ಸಹೋದರನ ಜೊತೆ ಮಾತನಾಡಿ, ಆ ಕಡೆಯಿಂದ ಇದೊಂದು ಬಾರಿ ಅವಕಾಶ ನೀಡಲು ಒಪ್ಪಿಗೆ ಪಡೆದು ಸಂಸ್ಕಾರಕ್ಕೆ ಸಮ್ಮತಿ ಸೂಚಿಸಿ ಅಲ್ಲಿದ್ದ ಬಿಗುವಿನ ವಾತಾವರಣ ತಿಳಿಗೊಳ್ಳಲು ಅವಕಾಶ ಮಾಡಿಕೊಟ್ಟರು.

ತಹಶೀಲ್ದಾರ್‌, ಸಿಪಿಐ ಸಮ್ಮುಖವೇ ಜೆಸಿಬಿ ಯಂತ್ರದಿಂದ ಸಮಾಧಿ  ಅಗೆಯಲು ಅವಕಾಶ ನೀಡಿ ಕೊನೆಗೆ ಪಿಎಸೈ ಮಲ್ಲಪ್ಪ ಮಡ್ಡಿ ಮತ್ತು ಕೆಲ ಪೊಲೀಸರನ್ನು ಸ್ಥಳದಲ್ಲೇ ಬಿಟ್ಟು ಅಧಿಕಾರಿಗಳು ನಿರ್ಗಮಿಸಿದರು. ನಂತರ ಗ್ರಾಮದ ಹೊರಗೆ ಅರಸನಾಳ ರಸ್ತೆ ಪಕ್ಕದಲ್ಲಿರುವ ಗೋಮಾಳ ಜಮೀನಿಗೆ ತಹಶೀಲ್ದಾರ್‌ ಅವರು ಸಿಪಿಐ ಸಮೇತ ಭೇಟಿ ಕೊಟ್ಟು ಜಮೀನಿನ ವಿಸ್ತಾರದ ಮಾಹಿತಿ ಪಡೆದರು. ಒಟ್ಟಾರೆ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಸ್ಮಶಾನಕ್ಕೆ ಮೀಸಲಿಡುವ ಕುರಿತು ಜಿಲ್ಲಾ ಧಿಕಾರಿ ಮೂಲಕ ಸರ್ಕಾರಕ್ಕೆ ಶಿಫಾರಸು ಕಳಿಸುವ ತೀರ್ಮಾನ ಕೈಕೊಂಡರು.
 
ಸರ್ಕಾರಿ ಜಮೀನು ಇಲ್ಲವೆ ಖಾಸಗಿ ಜಮೀನನ್ನು ಖರೀದಿಸಿಯಾದರೂ ದಲಿತರಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. 
 ಡಿ.ಬಿ.ಮುದೂರ, ಡಿಎಸ್ಸೆಸ್‌ ರಾಜ್ಯ ಸಂಘಟನಾ ಸಂಚಾಲಕ

ತಾಲೂಕಿನಲ್ಲಿ ಇನ್ನೂ ಅನೇಕ ಗ್ರಾಮಗಳಲ್ಲಿ ಸಂಸ್ಕಾರಕ್ಕೆ
ಸೂಕ್ತ ಜಮೀನು ಇಲ್ಲದೆ ದಲಿತರು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸಿಕೊಡಲಾಗುತ್ತದೆ.
 ಚಂದ್ರಕಲಾ ಲೊಟಗೇರಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next