Advertisement

ನಿರ್ಲಕ್ಷ್ಯಕ್ಕೊಳಗಾದ ಕ್ರಾಂತಿ ಭೂಮಿ ಗೋರ್ಟಾ

12:30 PM Sep 17, 2018 | |

ಬಸವಕಲ್ಯಾಣ: ಹೈ.ಕ. ವಿಮೋಚನೆಗಾಗಿ ಹೋರಾಟ ಮಾಡಿದ ನೂರಾರು ಹೋರಾಟಗಾರರ ಸಾಮೂಹಿಕ ಹತ್ಯಾಕಾಂಡ ನಡೆದ ಗೋರ್ಟಾ (ಬಿ) ಗ್ರಾಮ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

Advertisement

ನಿಜಾಮನ ಆಡಳಿತ ಧೋರಣೆ, ಕ್ರೌರ್ಯ ಖಂಡಿಸಿ ಅನೇಕರು ಇಲ್ಲಿ ಹೋರಾಟ ನಡೆಸಿದ್ದಾರೆ. ಭಾರತ ಸ್ವತಂತ್ರವಾದ
ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ವಂದೇ ಮಾರತಂ ಹಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದ ಗ್ರಾಮ ಕೂಡ ಹೌದು.  ಬಸವಕಲ್ಯಾಣ ತಾಲೂಕಿನ ಗೋರ್ಟಾ (ಬಿ) ಮತ್ತು ಮುಚಳಂಬ ಗ್ರಾಮಸ್ಥರು ಏಕತೆಯಿಂದ ನಿಜಾಮನ ಆಡಳಿತ ತಡೆಯುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರೆ. ಇಸಾಮುದ್ದೀನ್‌ ಕೊಲೆ ಗ್ರಾಮದಲ್ಲಿ ನಡೆದ ಹಿನ್ನೆಲೆಯಲ್ಲಿ ರಜಾಕಾರರ ಗುಂಪು ಗ್ರಾಮದಮೇಲೆ ದಾಳಿ ನಡೆಸಿ ಅನೇಕ ರೀತಿಯ ದೌರ್ಜನ್ಯ ನಡೆಸಿತು. ಗ್ರಾಮದಲ್ಲಿ 200ಕ್ಕೂ ಅಧಿಕ ಜನರ ಸಾಮೂಹಿಕ ಹತ್ಯೆ ನಡೆದಿದ್ದು, ಗ್ರಾಮಸ್ಥರು ಇಂದಿಗೂ ಆ ದಿನಗಳು ನೆನಪಿಸಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಘಟನೆಯ ಮಾಹಿತಿ ಪಡೆದ ಅಂದಿನ ಭಾರತ ಸರಕಾರದ ಪ್ರತಿನಿಧಿಯಾಗಿದ್ದ ಕೆ.ಎಂ.ಮುನ್ಸಿ ಅವರು ಗೋರ್ಟಾ(ಬಿ) ಗ್ರಾಮಕ್ಕೆ ಭೇಟಿ ನೀಡಿದ ಕುರಿತು “ದ ಎಂಡ್‌ ಆಫ್‌ ಆ್ಯನ್‌ ಎರಾ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಘಟನೆಯಲ್ಲಿ
ಗ್ರಾಮದಲ್ಲಿ ಶವಗಳ ರಾಶಿ ಇತ್ತು. ಮನೆ, ಮಠಗಳು ಸಂಪೂರ್ಣ ಹಾಳಾಗಿದ್ದವು ಎಂದು ಉಲ್ಲೇಖೀಸಲಾಗಿದೆ. ಮುನ್ಸಿ ಅವರು ಸರಕಾರಕ್ಕೆ ವರದಿ ಸಲ್ಲಿಸಿದ ನಂತರ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಹೈದರಾಬಾದ್‌ ಮೇಲೆ ಕಾರ್ಯಾಚಾರಣೆ ನಡೆಸಲು ನಿರ್ಧರಿಸಿದ್ದರು ಎಂಬುದನ್ನು ಕೂಡ ವಿವರಿಸಲಾಗಿದೆ.

ಈ ಘಟನೆಗಳು ನಡೆದು ಇಂದಿಗೆ ಏಳು ದಶಕಗಳು ಕಳೆದಿವೆ. ಆದರೂ ಗೋರ್ಟಾ (ಬಿ) ಅಥವಾ ಮುಚಳಂಬ ಗ್ರಾಮದಲ್ಲಿ
ಸರಕಾರದಿಂದ ಹುತಾತ್ಮರ ಮೂರ್ತಿ ಸ್ಥಾಪನೆ ಅಥವಾ ಸ್ಮಾರಕ ನಿರ್ಮಾಣ ಮಾಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಸ್ಮಾರಕ ನಿರ್ಮಾಣ ನನೆಗುದಿಗೆ: ಗ್ರಾಮದ ಐತಿಹಾಸಿಕ ಹಿನ್ನೆಲೆ ಗುರುತಿಸಿ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ ಹುತಾತ್ಮರ ನೆನಪಿಗಾಗಿ ಸರ್ದಾರ ವಲ್ಲಬಭಾಯಿ ಪಟೇಲ್‌ ಅವರ ಪ್ರತಿಮೆ, ಧ್ವಜಸ್ತಂಭ ಮತ್ತು ಜ್ಯೋತಿ ಸ್ತಂಭ ಒಳಗೊಂಡ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭಸಿತ್ತು. ಬಿಜೆಪಿ ರಾಷ್ಟ್ರೀಯ
ಅಧ್ಯಕ್ಷ ಅಮಿತ್‌ ಷಾ ಅವರು 2014ರಲ್ಲಿ ಈ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.

Advertisement

ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರದಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳಿಸುವ
ಭರವಸೆ ಕೂಡ ನೀಡಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
 
ಅಭಿವೃದ್ಧಿ ಕಾಣದ ಆದರ್ಶ ಗ್ರಾಮ: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಆದರ್ಶ ಗ್ರಾಮ ಯೋಜನೆಗೆ ಚಾಲನೆ
ನೀಡಿದ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ ಗೋರ್ಟಾ(ಬಿ) ಗ್ರಾಮವನ್ನು ದತ್ತು ಪಡೆದರು. ಹೈ.ಕ. ಭಾಗದ ಹೋರಾಟಕ್ಕೆ ಪ್ರಾಣ ಕಳೆದುಕೊಂಡ ಹೋರಾಟಗಾರರ ಗ್ರಾಮ ಎಂದು ಪರಿಗಣಿಸಲಾಗಿತ್ತು. ಆರಂಭದಲ್ಲಿ
ಅಭಿವೃದ್ಧಿ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆವಾರು ಸಭೆ ನಡೆಸಿದ್ದರು. ಆದರೆ ಗ್ರಾಮದಲ್ಲಿ ಈವರೆಗೂ ಹೇಳಿಕೊಳ್ಳುವಂತಹ ಯಾವುದೇ ಮೂಲ ಸೌಕರ್ಯಗಳ ಕಾಮಗಾರಿಗಳು ನಡೆದಿಲ್ಲ. ಇದರಿಂದ ಗ್ರಾಮಸ್ಥರು ಬೇಸರವ್ಯಕ್ತಪಡಿಸುತ್ತಿದ್ದಾರೆ. 

ಹೈದರಾಬಾದ್‌ ಕರ್ನಾಟಕ ವಿಮೋಚನೆ ಅಂಗವಾಗಿ ಗೋರ್ಟಾ ಗ್ರಾಮದಲ್ಲಿ ದೊಡ್ಡ ಕ್ರಾಂತಿಯಾಗಿ ಸಾಕಷ್ಟು ಜನ
ಪ್ರಾಣ ಕಳೆದುಕೊಂಡರು. ಇಂತಹ ಗ್ರಾಮವನ್ನು ಸರಕಾರ ಮರೆತಿರುವುದು ನೋವಿನ ಸಂಗತಿ. ಆದ್ದರಿಂದ ಹುತಾತ್ಮರ
ನೆನಪಿಗಾಗಿ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮಾಡಿ ಆದರ್ಶ ಗ್ರಾಮವಾಗಿ ಗುರುತಿಸಿಕೊಳ್ಳುವಂತೆ ಮಾಡಬೇಕು. ಸರ್ಕಾರಗಳು ಇತ್ತ ಗಮನ ಹರಿಸಬೇಕು.
 ವಿರೂಪಾಕ್ಷಯ್ನಾ ಮಠಪತಿ, ಕ್ರಾಂತಿಯನ್ನು ಪ್ರತ್ಯಕ್ಷ ನೋಡಿದವರು

ರಜಾಕಾರರಿಂದ ನಡೆದ ಹತ್ಯಾಕಾಂಡದಲ್ಲಿ ಗೋರ್ಟಾದ ಅನೇಕರು ಹುತಾತ್ಮರಾಗಿದ್ದಾರೆ. ಆದರೆ ಈ
ಗ್ರಾಮವನ್ನು ಸರಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಮರೆತಿರುವುದು ನೋವಿನ ಸಂಗತಿ. ಅಲ್ಲದೇ ಗ್ರಾಮದಲ್ಲಿ ಅರ್ಧಕ್ಕೆ ನಿಂತ ಹುತಾತ್ಮರ ಸ್ಮಾರಕ ಕಾಮಗಾರಿಯನ್ನು ಸಂಬಂಧ ಪಟ್ಟವರು ಶೀಘ್ರ ಪೂರ್ಣಗೊಳಿಸಬೇಕು ಎಂಬುದು
ಗ್ರಾಮಸ್ಥರ ಮನವಿಯಾಗಿದೆ.
ಪ್ರೊ| ರುದ್ರೇಶ್ವರ ವಿರೂಪಾಕ್ಷಯ್ನಾಸ್ವಾಮಿ, ಇತಿಹಾಸ ಸಂಶೋಧಕ

  ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next