Advertisement

ಲೌಡ್‌ಸ್ಪೀಕರ್‌ಗಳ ಅಗತ್ಯ ಇದೆಯೇ? 

10:39 PM Apr 22, 2017 | Harsha Rao |

ಗದ್ದಲ ಹೆಚ್ಚಾಗಿದ್ದರೆ ಮಾತ್ರ ಭಾರತೀಯರೆಲ್ಲ ಸಂತೋಷದಿಂದಿರುತ್ತಾರೆ 

Advertisement

ಒಂದು ವೇಳೆ ನಿಮಗೆ ಅನ್ಯ ಧರ್ಮದ ಸಂಗೀತವು ಗದ್ದಲವೆಂದು ಭಾಸವಾದರೆ ಅಥವಾ ನಿಮ್ಮ ಧರ್ಮದ ಗದ್ದಲವೆಲ್ಲ ಸಂಗೀತ ಎಂದೆನಿಸಿದರೆ, ಖಂಡಿತ ಅದು ಶಬ್ದದ ಸಮಸ್ಯೆಯಲ್ಲ. ಬದಲಿಗೆ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ಇರುವ ಕೆಟ್ಟ ಭಾವನೆಯೇ ಅದಕ್ಕೆ ಕಾರಣ! ಇನ್ನು, ಸೋನು ವಿಷಯಕ್ಕೆ ಬರುವುದಾದರೆ, ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಎಲ್ಲಾ ಹಕ್ಕೂ ಇದೆ. ಆದರೆ, ಅವರು ಅದನ್ನು ವ್ಯಕ್ತಪಡಿಸಿದ ರೀತಿ ಅಷ್ಟು ಸರಿಯಾಗಿರಲಿಲ್ಲ. 

ನನ್ನ ಬಾಲ್ಯದ ದಿನಗಳವು. ಆಗ ಹೈದ್ರಾಬಾದ್‌ನಲ್ಲಿ ನಮ್ಮ ಮನೆಯೆದುರೇ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನವಿತ್ತು. ಪ್ರತಿ ದಿನ ಬೆಳಗ್ಗೆ ಸರಿಯಾಗಿ 5 ಗಂಟೆಗೆ ಎಂ.ಎಸ್‌. ಸುಬ್ಬಲಕ್ಷಿಯವರ ಸುಮಧುರ ಧ್ವನಿಯಲ್ಲಿ ಹೊರಬೀಳುತ್ತಿದ್ದ “ಶ್ರೀ ವೆಂಕಟೇಶ ಸುಪ್ರಭಾತ’ ಸಂಗೀತಕ್ಕೆ ಶ್ರೀ ವೆಂಕಟೇಶ್ವರ ದೇವರ ಜೊತೆಗೆ ನಾವೂ ಎದ್ದೇಳುತ್ತಿದ್ದೆವು. ನಮ್ಮ ಸುತ್ತಮುತ್ತಲೂ ಇದ್ದ ಬಹಳಷ್ಟು ಮಂದಿಗೆ ಅತ್ಯಂತ ಜೋರಾಗಿ ಸದ್ದು ಮಾಡುತ್ತಿದ್ದ ಆ ಲೌಡ್‌ಸ್ಪೀಕರ್‌ನಿಂದ ಡಿಸ್ಟರ್ಬ್ ಆಗುತ್ತಿತ್ತು. ಆದರೆ ನಮ್ಮಂಥ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಆ ಲೌಡ್‌ಸ್ಪೀಕರ್‌ ಅಲಾರಾಂ ಕ್ಲಾಕಿನಂತೆ ಕೆಲಸ ಮಾಡಿ ಸಹಕರಿಸುತ್ತಿತ್ತು. ಈಗಲೂ ನಿತ್ಯ ವಾಯುವಿಹಾರ ಮಾಡುವಾಗ ನಾನು ವೆಂಕಟೇಶ್ವರ ಸುಪ್ರಭಾತವನ್ನು ಕೇಳುತ್ತೇನೆ(ಆದರೆ ಹೆಡ್‌ಫೋನ್‌ ಸಿಕ್ಕಿಸಿಕೊಂಡು). 

ವೈಯಕ್ತಿಕವಾಗಿ ಹೇಳುವುದಾದರೆ, ನಾನಂತೂ ಈ “ಅತಿ’ ಸದ್ದಿಗೆ ಹೊಂದಿಕೊಂಡಿದ್ದೇನೆ. ಬಹುಶಃ ಗದ್ದಲ ಹೆಚ್ಚಾಗಿದ್ದರೆ ಮಾತ್ರ ಭಾರತೀಯರೆಲ್ಲ ಸಂತೋಷದಿಂದಿರುತ್ತಾರೆ ಎಂದು ನನಗನಿಸುತ್ತದೆ. ಬೇಕಿದ್ದರೆ ನಮ್ಮ ಹಬ್ಬಗಳನ್ನು, ಮದುವೆಗಳನ್ನು, ಗೆಲುವಿನ ಸಂಭ್ರಮಾಚರಣೆಗಳನ್ನು ಗಮನಿಸಿ ನೋಡಿ. ಗದ್ದಲವಿಲ್ಲದಿದ್ದರೆ, ಇತರರಿಗೆ ತುಸು ಅಸೌಖ್ಯ ಉಂಟುಮಾಡದೇ ಹೋದರೆ ಅವುಗಳು ಅಪೂರ್ಣವಾಗಿಯೇ ಉಳಿಯುತ್ತವೇನೋ! 

ವರನ ಮೆರವಣಿಗೆಯ ಚಿತ್ರಣ ಹೇಗಿರುತ್ತದೋ ನೋಡಿ. ಬಾರಾತ್‌ಗಾಗಿ ರಸ್ತೆಗಳನ್ನು ಬ್ಲಾಕ್‌ ಮಾಡುವುದು, ವರನನ್ನು ಹೊತ್ತ ಹೆದರಿ ಹೈರಾಣಾಗಿರುವ ಕುದುರೆಯ ಮುಂದೆ ಪಟಾಕಿ ಸಿಡಿಸುವುದು, ಈ ಬಾರಾತ್‌ನ ಕಿವಿ ಕೊರಡಾಗಿದೆ ಎಂಬ ಅರಿವಿದ್ದರೂ ಹಿಂದೆ ನಿಂತ ಕಾರುಗಳು ನಿರಂತರವಾಗಿ ಹಾರ್ನ್ ಮಾಡುವುದು, ಉಸಿರಾಡಲು ಹೆಣಗುತ್ತಲೇ ವಾಲಗದವರು ಅಪಸ್ವರದಲ್ಲಿ ಹಾಡುಗಳನ್ನು ನುಡಿಸುವುದು, ಆ ಹಾಡಿಗೆ ಅಂಕಲ್‌ ಮತ್ತು ಆಂಟಿಗಳು ಕುಣಿಯುತ್ತಾ ಕೂಗುವುದು…ಒಟ್ಟಲ್ಲಿ ಕಿವಿಗಳಿಗಾಗಲಿ ಅಥವಾ ದೇಹದ ಯಾವುದೇ ಅಂಗಕ್ಕಾಗಲಿ ಈ ಗದ್ದಲ ಹಿತಕರವಂತೂ ಅಲ್ಲ. ಆದರೆ ಮೆರವಣಿಗೆಯಲ್ಲಿ ಪಾಲ್ಗೊಂಡವರು ಆ ಕ್ಷಣದಲ್ಲಿ ಈ ಜಗತ್ತಿನಲ್ಲಿ ಇರುವುದೇ ಇಲ್ಲ. ಅವರಿಗೆ ಹಿಂದೆ ಕಾರಿನಲ್ಲೋ, ಬೈಕಿನಲ್ಲೋ ಸಿಕ್ಕಿಬಿದ್ದ ನಿಮ್ಮಂಥವರ ಸಂಯಮದ ಮೇಲೆ ಬಹಳ ನಂಬಿಕೆಯಿರುತ್ತದೆ!

Advertisement

ಇಂಥ ಮೆರವಣಿಗೆಗಳು ಎದುರಾದಾಗ ನಾವು ಒಂದೋ ಅದನ್ನು ನೋಡಿ ಎಂಜಾಯ್‌ ಮಾಡಬೇಕು ಅಥವಾ ಕಿವಿಗೆ ಹೆಡ್‌ಫೋನ್‌ ಚುಚ್ಚಿಕೊಂಡು ಎಫ್ಎಂ ಕೇಳಿಯೋ ಅಥವಾ ನಮ್ಮ ಅತಿ ನಂಬಿಕಸ್ಥ ಗೆಳೆಯ ಸ್ಮಾರ್ಟ್‌ಫೋನ್‌ನತ್ತ ನಿಟ್ಟುಸಿರು ಬಿಟ್ಟು ನೋಡಿ ಸುಮ್ಮನಾಗಬೇಕು. ಅಷ್ಟರಲ್ಲಿ ಎಲ್ಲಿಂದಲೋ ಪ್ರತ್ಯಕ್ಷನಾಗುವ ಪ್ರಜ್ಞಾವಂತ ವ್ಯಕ್ತಿಯೊಬ್ಬ ಬಾರಾತ್‌ನ ಹಿಂದೆ ಸಾಲುಗಟ್ಟಿ ನಿಂತ ಕಾರುಗಳಿಗೆ ದಿಕ್ಕು ತೋರಿಸಿ ಪುಣ್ಯ ಕಟ್ಟಿಕೊಳ್ಳುತ್ತಾನೆ. ಭಾರತೀಯರ ನಿತ್ಯ ಜೀವನದ ಸಾಮಾನ್ಯ ದೃಶ್ಯವಿದು. ಹೌದು ಇದೇ ಭಾರತ. ಗದ್ದಲದಲ್ಲೇ ಸೌಂದರ್ಯವಿರುವ, ಬಹುಸಂಸ್ಕೃತಿಯ ದೇಶ.  

ನಾನು ವಾಸಿಸುವ ಪ್ರದೇಶದಲ್ಲಿರುವ ಚಚೊìಂದು ದಿನ ಬೆಳಗ್ಗೆ 6 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಲೌಡ್‌ ಸ್ಪೀಕರ್‌ನಲ್ಲಿ ಬೆಲ್‌ ಬಾರಿಸಲು ಆರಂಭಿಸಿದೆ. ನಮ್ಮ ವಸತಿ ಸಮುಚ್ಚಯದಲ್ಲಿರುವ ಬಹಳಷ್ಟು ಹಿರಿಯ ನಾಗರಿಕರಿಗೆ ಈ ಜೋರು ಸದ್ದಿನಿಂದ ನಿಜಕ್ಕೂ ತೊಂದರೆಯಾಗುತ್ತಿದೆ. ಇನ್ನೂ ಕೆಲವೊಮ್ಮೆ ಚರ್ಚ್‌ನ ಬೆಲ್‌ ಮತ್ತು ನಮಾಜಿನ ಕರೆಗಳ ನಡುವೆ ಜಟಾಪಟಿ ಏರ್ಪಟ್ಟುಬಿಡುತ್ತದೆ. ಇನ್ನು ಗಣೇಶ ಉತ್ಸವ, ರಾಮನವಮಿ, ನವರಾತ್ರಿಯ ಸಮಯದಲ್ಲಿ ಗಣಪತಿ ಮತ್ತು ಸಾಯಿ ಮಂದಿರಗಳ ಲೌಡ್‌ಸ್ಪೀಕರ್‌ಗಳು ಜೀವಪಡೆದುಬಿಡುತ್ತವೆ. ನನ್ನನ್ನು ಕೇಳುವುದಾದರೆ, ಲೌಡ್‌ಸ್ಪೀಕರ್‌ಗಳ ಬಳಕೆಯ ಅಗತ್ಯ ಇಲ್ಲವೇ ಇಲ್ಲ. 

ದೇವರಿಗೆ ನಮ್ಮ ಮೌನವನ್ನೂ ಕೇಳಿಸಿಕೊಳ್ಳುವ ಶಕ್ತಿಯಿದೆ. ಆದರೆ ನಾವು ಬಿಡಬೇಕಲ್ಲ? ದೇವರನ್ನು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ತೋರಿಸಲು ನಮಗೆ ಗದ್ದಲ, ಪ್ರದರ್ಶನ ಬೇಕೇ ಬೇಕು ಅಲ್ಲವೇ?! ಬೆಳಗ್ಗೆ ಇಂಪಾಟೆಂìಟ್‌ ಕೆಲಸ ಇದ್ದು, ಬೇಗ ಎದ್ದೇಳಬೇಕೆಂದರೆ ನಾವೊಬ್ಬರೇ ಎದ್ದೇಳುತ್ತೇವೋ ಅಥವಾ ಇಡೀ ಬಿಲ್ಡಿಂಗಿನ ಜನರನ್ನು ಎಬ್ಬಿಸುತ್ತೇವೋ? ನಮ್ಮ ಮನೆಯ ಸದಸ್ಯರಿಗೂ ಡಿಸ್ಟರ್ಬ್ ಆಗದಂತೆ ಅಲಾರಾಂ ಇಟ್ಟುಕೊಂಡು ಏಳುತ್ತೇವೆ ತಾನೆ? 
ದಿನದ ನಿರ್ದಿಷ್ಟ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸುವುದು ಮುಖ್ಯ ಎಂದು ಭಾವಿಸುವವರಿಗೆ ಆ ಸಮಯಕ್ಕೆ ಅಲಾರಾಂ ಸೆಟ್‌ ಮಾಡಿಕೊಳ್ಳುವುದು ಕಷ್ಟವೇ? ಯಾವುದೇ ಆಚರಣೆಯಿರಲಿ ಅದಕ್ಕೆ ಲೌಡ್‌ಸ್ಪೀಕರ್‌ಗಳ ಅಗತ್ಯ ಇಲ್ಲವೇ ಇಲ್ಲ. ಆದರೆ ಸದ್ದು ಗದ್ದಲವಿಲ್ಲದಿದ್ದರೆ ನಮ್ಮ ಭಾರತೀಯತೆ ರುಜುವಾತಾಗಬೇಕಲ್ಲ?!

ನಮಗೇನು ಮುಖ್ಯ ಎನ್ನುವುದನ್ನು ನಾವು ಒಂದು ದೇಶವಾಗಿ ನಿರ್ಧರಿಸಬೇಕು. ನಾವು ನಾಗರಿಕ ರೂಢಿಗಳನ್ನು ಮತ್ತು ಶಬ್ದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದಾದರೆ, ಪ್ರತಿಯೊಂದು ಧರ್ಮದ ಪ್ರಾರ್ಥನೆಗೂ, ಉತ್ಸವಕ್ಕೂ, ಮದುವೆಗೂ ಈ ನಿಯಮ ಅನ್ವಯವಾಗಬೇಕು. 

ಹಾಡುಕೇಳಬೇಕೆಂದರೆ ಹೆಡ್‌ಫೋನ್‌ ಕಿವಿಯಲ್ಲಿ ಚುಚ್ಚಿಕೊಳ್ಳಬಹುದು. ಬೆಳಗ್ಗೆ ಗದ್ದಲದಿಂದ ಎಚ್ಚರವಾಗಬಾರದು ಎಂದರೆ ತಲೆದಿಂಬನ್ನೋ ಅಥವಾ ಹತ್ತಿಯನ್ನೋ ಕಿವಿಗೆ ಇಟ್ಟುಕೊಳ್ಳಬಹುದು. ಆದರೆ ಸದ್ದು ವಿಪರೀತವಾದಾಗ ಏನು ಮಾಡುವುದು? 

ಇದೇನೇ ಇದ್ದರೂ, ಒಂದು ವೇಳೆ ನಿಮಗೆ ಅನ್ಯ ಧರ್ಮದ ಹಾಡುಗಳೆಲ್ಲವೂ ಗದ್ದಲವೆಂದು ಭಾಸವಾದರೆ ಅಥವಾ ನಿಮ್ಮ ಧರ್ಮದ ಗದ್ದಲವೆಲ್ಲ ಸಂಗೀತವೆಂದೆನಿಸಿದರೆ, ಖಂಡಿತ ಅದು ಶಬ್ದದ ಸಮಸ್ಯೆಯಲ್ಲ. ಬದಲಿಗೆ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ಇರುವ ಕೆಟ್ಟ ಭಾವನೆಯೇ ಅದಕ್ಕೆ ಕಾರಣ!

ನನ್ನ ಮಟ್ಟಿಗೆ ಹೇಳುವುದಾದರೆ, ನನಗೆ ಸಂಗೀತವೆನ್ನುವುದು ಪ್ರಿಯವಾಗಿರುವುದರಿಂದ ಮತ್ತು “ಬದುಕಿ, ಬದುಕಲು ಬಿಡಿ’ ಎನ್ನುವ ಮಾತಿನ ಮೇಲೆ ನಂಬಿಕೆಯಿರುವುದರಿಂದ, ಮುಂಜಾನೆಯ ಹೊತ್ತು ಹೊರಹೊಮ್ಮುವ ಸಂಗೀತವನ್ನು (ಕೆಲವೊಮ್ಮ ಕರ್ಣಕಠೊರವಾಗಿರುತ್ತವೆ) ನಾನು ಸ್ವಾಗತಿಸುತ್ತೇನೆ. ಆದರೆ ಅವು ಸಕ್ರಮವಾಗಿರಬೇಕಷ್ಟೆ!

ಯಾವುದೇ ಶಬ್ದಮಾಲಿನ್ಯವಿರಲಿ ಅದು ನ್ಯಾಯಸಮ್ಮತವಲ್ಲದಿದ್ದರೆ, ಅದರೆಡೆಗೆ ಬಿಗಿ ನಿಲುವು ತಾಳಬೇಕೆಂದು ನಾನು ಅಧಿಕಾರವರ್ಗವನ್ನು ಒತ್ತಾಯಿಸುತ್ತೇನೆ. ಯಾವುದು ಅಕ್ರಮವೋ ಅದನ್ನು ನಾನು ಖಂಡಿತ ಕ್ಷಮಿಸುವುದಿಲ್ಲ. ಏಕೆಂದರೆ ನಾವು ನಿಯಮ ಪಾಲಿಸುವುದನ್ನು ಬಿಟ್ಟೆವೆಂದರೆ, ಮುಂದಿನ ನಿಲ್ದಾಣವೇ ಅರಾಜಕತೆ! ಅರಾಜಕತೆಯಲ್ಲಿ ಸಾಮರಸ್ಯಕ್ಕೆ ಜಾಗವಿಲ್ಲ. 

ಬೆಳಗ್ಗೆ ಪ್ರಾರ್ಥನೆ ಮಾಡುವ ಎಲ್ಲರಿಗೂ ನನ್ನ ವಿನಂತಿಯಿದು. ಪ್ರಾರ್ಥನೆಯನ್ನು ರಾಜಕಾರಣಿಗಳು- ರೈಟ್‌-ಲೆಫ್ಟ್-ಸೆಂಟರಿಸ್ಟ್‌ ಗಳಿಗೆ ಲಾಭ ತಂದುಕೊಡುವ ವಿವಾದಾತ್ಮಕ ವಿಷಯ ಮಾಡುವುದು ಬೇಡ. ಅವರು ಇಂಥ ವಿವಾದದ ಮೇಲೆ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಾರೆ, ವೋಟ್‌ ಸೃಷ್ಟಿಸಿಕೊಳ್ಳುತ್ತಾರೆ. ಪ್ರಾರ್ಥನೆ ಎನ್ನುವುದು ತೀರಾ ವೈಯಕ್ತಿಕ ವಿಷಯವಲ್ಲವೇನು? ಅದನ್ನು ಸೇತುವೆ ಕಟ್ಟಿಕೊಳ್ಳಲು ಬಳಸೋಣವೇ ಹೊರತು ಒಡಕು ಮೂಡಿಸುವುದಕ್ಕಲ್ಲ.  

ಇನ್ನು, ಸೋನು ನಿಗಂ ವಿಷಯಕ್ಕೆ ಬರುವುದಾದರೆ, ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಎಲ್ಲಾ ಹಕ್ಕೂ ಇದೆ. ಅದೇಕೆ ಇತ್ತೀಚಿನ ದಿನಗಳಲ್ಲಿ ಯಾರು ಏನೇ ಮಾತನಾಡಿದರೂ ಇಷ್ಟೊಂದು ಆಕ್ರೋಶ ಸೃಷ್ಟಿಯಾಗುತ್ತಿದೆ? ಹೌದು, ಸೋನು ಹೇಳಿದ್ದನ್ನು ನಾನು ಒಪ್ಪುವುದಿಲ್ಲ. ಆದರೆ ಅವರಿಗೆ ನನಗಿಂತಲೂ ಭಿನ್ನವಾದ ಅಭಿಪ್ರಾಯ ಹೊಂದುವ ಎಲ್ಲಾ ಹಕ್ಕೂ ಇದೆ. ಆ ಹಕ್ಕನ್ನು ನಾನು ಗೌರವಿಸುತ್ತೇನೆ. ಆದಾಗ್ಯೂ, ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದ ರೀತಿ ಮಾತ್ರ ಅಷ್ಟು ಸರಿಯಾಗಿರಲಿಲ್ಲ. 

ಬಹುಶಃ ಸೋನು ನಿಗಂ ಅವರ ಇಡೀ ಸಂಗೀತ ವೃತ್ತಿಯಲ್ಲಿ ಅಪಸ್ವರವಾಗಿ ಹೊರಹೊಮ್ಮಿದ್ದು ಈ ಘಟನೆಯೊಂದೇ ಇರಬೇಕು. ಅಥವಾ ಅವರು ಸರಿಯಾದ ಸ್ವರವನ್ನೇ ಹೊಮ್ಮಿಸಲು ಪ್ರಯತ್ನಿಸುತ್ತಿದ್ದಾರಾ? ಈ ಪ್ರಶ್ನೆಗೆ ಉತ್ತರ ಮೇಲೆ ಕುಳಿತಿರುವವನಷ್ಟೇ ಬಲ್ಲ!  

– ರೇಣುಕಾ ಶಹಾನೆ ,ಬಾಲಿವುಡ್‌ ನಟಿ

Advertisement

Udayavani is now on Telegram. Click here to join our channel and stay updated with the latest news.

Next