Advertisement

ಹೊರ ರಾಜ್ಯ, ದೇಶದಲ್ಲಿರುವ ಕನ್ನಡ ಪೀಠಕ್ಕೆ ಬೇಕಿದೆ ನೆರವು

11:55 PM Oct 26, 2021 | Team Udayavani |

ಬೆಂಗಳೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ದೊರೆತಿದ್ದರೂ, ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯ ವಾಗುತ್ತಿಲ್ಲ. ಹೊರ ರಾಜ್ಯ, ರಾಷ್ಟ್ರಗಳ ವಿಶ್ವ ವಿದ್ಯಾನಿಲಯಗಳಲ್ಲಿ ಇರುವ ಕನ್ನಡ ಅಧ್ಯಯನ ಪೀಠಗಳನ್ನು ಜೀವಂತ ವಾಗಿಟ್ಟು ಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

Advertisement

ಹೊರ ರಾಜ್ಯಗಳಲ್ಲಿ ಮುಂಬಯಿ ವಿಶ್ವವಿದ್ಯಾ ನಿಲಯ, ಮದ್ರಾಸ್‌ ವಿಶ್ವ ವಿದ್ಯಾನಿಲಯ, ದಿಲ್ಲಿ ವಿಶ್ವವಿ ದ್ಯಾನಿಲಯ, ವಾರಂ ಗಲ್‌ ವಿಶ್ವವಿದ್ಯಾನಿಲಯ, ಜೆಎನ್‌ಯು ಹಾಗೂ ಬನಾರಸ್‌ ಹಿಂದು ವಿಶ್ವ ವಿದ್ಯಾನಿಲಯಗಳಲ್ಲಿ ಕನ್ನಡ ಭಾಷೆ ಅಧ್ಯಯನಕ್ಕೆ ಪೀಠಗಳಿದ್ದು, ದಿಲ್ಲಿ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರ ಎರಡು ಹುದ್ದೆ ಗಳಿದ್ದವು, 2011 ರಿಂದಲೂ ಖಾಲಿ ಇವೆ. ಇದುವರೆಗೂ ಭರ್ತಿ ಯಾಗಿಲ್ಲ. ಜೆಎನ್‌ಯುನಲ್ಲಿ ಒಬ್ಬರು ಪ್ರಾಧ್ಯಾ ಪಕರ ಹುದ್ದೆ ಇದೆ. ಕರ್ನಾಟಕ ಸರಕಾರ ಈ ವಿವಿಯಲ್ಲಿ ಕನ್ನಡ ಭಾಷೆ ಬೋಧನೆ ನಿರಂತರವಾಗಿಡಲು 5 ಕೋಟಿ ರೂ. ಹಣ ನೀಡಿದ್ದು, ಆ ಹಣದ ಬಡ್ಡಿಯಲ್ಲಿಯೇ ಕನ್ನಡ ಪೀಠ ಜೀವಂತವಾಗಿಡುವ ಪ್ರಯತ್ನ ನಡೆಸಲಾಗುತ್ತಿದೆ.

ಅತ್ಯಂತ ಪ್ರಾಚೀನ ಬನಾರಸ್‌ಹಿಂದು ವಿಶ್ವ ವಿದ್ಯಾನಿಲಯದಲ್ಲಿಯೂ ಒಂದು ಕನ್ನಡ ಅಧ್ಯಯನ ಪೀಠವಿತ್ತು. 1998 ರಿಂದಲೇ ಕನ್ನಡ ಪೀಠಕ್ಕೆ ಬಾಗಿಲು ಹಾಕಿದ್ದು, ಅದರ ಬಾಗಿಲು ತೆರೆಯುವ ಪ್ರಯತ್ನ ನಡೆದಿಲ್ಲ. ಕೋಲ್ಕತಾದಲ್ಲಿರುವ ರಾಷ್ಟ್ರೀಯ ಗ್ರಂಥಾಲ ಯದಲ್ಲಿ ಎರಡು ಕನ್ನಡ ಅಧಿಕಾರಿಗಳ ಹುದ್ದೆಗಳಿವೆ. 2014 ರಿಂದ ಎರಡೂ ಹುದ್ದೆಗಳು ಖಾಲಿ ಇವೆ.

ಮುಂಬಯಿ ವಿಶ್ವ ವಿದ್ಯಾನಿಲಯದಲ್ಲಿನ ಕನ್ನಡ ಅಧ್ಯಯನ ಪೀಠ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಮದ್ರಾಸ್‌ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಿದ್ದರೂ ವಿದ್ಯಾರ್ಥಿಗಳ ಕೊರತೆ ಕಾಡುತ್ತಿದೆ. ತಮಿಳುನಾಡಿನ ಮಧುರೈ ಹಾಗೂ ಆಂಧ್ರಪ್ರದೇಶದ ವಾರಂಗಲ್‌ ವಿಶ್ವ ವಿದ್ಯಾನಿಲಯ ದಲ್ಲಿಯೂ ಅದೇ ಪರಿಸ್ಥಿತಿ ಇದೆ.

ಸರಕಾರದ ಪ್ರೋತ್ಸಾಹ: ಹೊರ ರಾಜ್ಯಗಳಲ್ಲಿರುವ ವಿಶ್ವ ವಿದ್ಯಾನಿಲಯಗಳಲ್ಲಿ ಕನ್ನಡ ಪಿಜಿ ಕೋರ್ಸ್‌ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ವಾರ್ಷಿಕ 25,000 ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ 25,000 ರೂ.ಗಳನ್ನು ಪಡೆದು ಹೊರ ರಾಜ್ಯಕ್ಕೆ ಹೋಗಿ ಕನ್ನಡದ ವಿದ್ಯಾರ್ಥಿಗಳ ಅಧ್ಯಯನ ಮಾಡುವುದು ಕಷ್ಟ ಸಾಧ್ಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಇದನ್ನೂ ಓದಿ:ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಕಣ್ತೆರೆದು ನೋಡಬೇಕಿದೆ: ಹೊರ ರಾಜ್ಯಗಳಲ್ಲಿ ಕನ್ನಡ ಅಧ್ಯಯನ ಮಾಡಲು ರಾಜ್ಯದ ವಿದ್ಯಾರ್ಥಿಗಳು ತೆರಳುವುದು ವಿರಳ. ಹೊರ ರಾಜ್ಯಗಳಲ್ಲಿಯೇ ಉದ್ಯೋಗಕ್ಕಾಗಿ ತೆರಳಿರುವ ಕನ್ನಡಿಗರ ಮಕ್ಕಳು ಹಾಗೂ ಹೊರ ರಾಜ್ಯದ ಕನ್ನಡೇತರರು ಅಧ್ಯಯನ ನಡೆಸಲು ಬರುತ್ತಾರೆ.

ಹೊರ ರಾಜ್ಯದ ಕನ್ನಡ ಪೀಠಗಳಲ್ಲಿ ಅನ್ಯ ಭಾಷಿಕರು ಕನ್ನಡ ಅಧ್ಯಯನ ನಡೆಸು ವಂತೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಅಲ್ಲದೇ ಹೊರ ನಾಡಿನಲ್ಲಿ ಅನ್ಯಭಾಷಿಕರು ಕನ್ನಡ ಭಾಷೆ ಕಲಿಯುವಂತೆ ಹಾಗೂ ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರುವಂತೆ ಕನ್ನಡ ಅಧ್ಯಯನ ಪೀಠಗಳು ಕೆಲಸ ಮಾಡು ವಂತಾಗಬೇಕು. ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕನ್ನಡದ ಪ್ರಸಿದ್ಧ ಸಾಹಿತಿಗಳ ಕೃತಿಗಳ ಕುರಿತು ಕನ್ನಡೇತರ ಭಾಷಾ ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪ್ರೇಮಿಗಳ ಜತೆ ಸಂವಾದ ಏರ್ಪಡಿಸುವ ಮೂಲಕ ಕನ್ನಡದ ಭಾಷೆ ಹಾಗೂ ಸಾಹಿತ್ಯವನ್ನು ಕನ್ನಡೇತರರಿಗೆ ತಲುಪಿಸುವ ಪ್ರಯತ್ನವನ್ನು ಕನ್ನಡ ಪೀಠಗಳು ಮಾಡಬೇಕಿದೆ. ಆದರೆ ಕನ್ನಡ ಪೀಠಗಳು ಜೀವಂತ ವಾಗಿರಲು ರಾಜ್ಯ ಸರಕಾರ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ.

ಕನ್ನಡ ಒಂದು ಶಾಸ್ತ್ರೀಯ ಭಾಷೆಯಾಗಿರುವುದರಿಂದ ದೇಶದಲ್ಲಿರುವ ಎಲ್ಲ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ಪೀಠವನ್ನು ಕಡ್ಡಾಯವಾಗಿ ತೆರೆಯುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಜತೆಗೆ ಸಂಸದರಶ್ರಮ ಮುಖ್ಯವಾಗಿದ್ದು, ಸಂಸದರು ಹೊರ ರಾಜ್ಯಗಳ ವಿಶ್ವ ವಿದ್ಯಾನಿಲಯಗಳಲ್ಲಿರುವ ಕನ್ನಡ ಅಧ್ಯಯನ ಪೀಠಗಳು ಮುಚ್ಚದಂತೆ ಒತ್ತಡ ಹೇರುವ ಪ್ರಯತ್ನ ಮಾಡಬೇಕಿದೆ ಎನ್ನುವುದು ಹಿರಿಯ ಸಾಹಿತಿಗಳ ಅಭಿಪ್ರಾಯವಾಗಿದೆ.

ಉದ್ಯೋಗ ಭರವಸೆಯ ಅಗತ್ಯತೆ
ಹೊರ ರಾಜ್ಯಗಳ ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಭಾಷಾ ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಾದ ತಕ್ಷಣ ಹುದ್ದೆ ಭರ್ತಿ ಮಾಡುವ ಕೆಲಸವಾಗಬೇಕಿದೆ ಹಾಗೂ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಅಥವಾ ಪಿಎಚ್‌ಡಿ ಮಾಡಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಹುದ್ದೆಗಳಲ್ಲಿ ಕನಿಷ್ಠ ಶೇ.3ರಿಂದ 5ರಷ್ಟು ಹುದ್ದೆಗಳನ್ನು ಮೀಸಲಿಡುವ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತಾಗಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಹೊರ ದೇಶಗಳ ಕನ್ನಡ ಪೀಠಗಳಿಗೆ ತೋರದ ಆಸಕ್ತಿ
ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೊರ ದೇಶಗಳಲ್ಲಿ ಭಾಷೆ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಹೂಸ್‌ಬರ್ಗ್‌ ವಿವಿ, ಜರ್ಮನಿಯ ಮಿನಿಚ್‌ ಹಾಗೂ ಆಸ್ಟ್ರೀಯಾದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಪೀಠ ತೆರೆಯಲು ಅಲ್ಲಿನ ವಿಶ್ವ ವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ರಾಜ್ಯ ಸರಕಾರ ಅಲ್ಲಿನ ಅಧ್ಯಯನ ಪೀಠ ನಡೆಸಿಕೊಂಡು ಹೋಗಲು ಆರಂಭದಲ್ಲಿ ಒಂದು ಬಾರಿ 5 ಕೋಟಿ ರೂ. ಹಣ ನೀಡಿದರೆ, ಅಲ್ಲಿನ ವಿಶ್ವ ವಿದ್ಯಾನಿಲಯಗಳು ಮುಂದುವರಿಸಿಕೊಂಡು ಹೋಗುವಂತೆ ಮಾತುಕತೆ ನಡೆಸಿ ಅನುಷ್ಠಾನಕ್ಕೆ ಮುಂದಾಗಿದ್ದರು. ಆದರೆ ರಾಜ್ಯ ಸರಕಾರ ಒಪ್ಪಿಕೊಂಡಂತೆ 5 ಕೋಟಿ ರೂ. ನೀಡದ ಕಾರಣ ಕನ್ನಡ ಪೀಠಗಳು ಬಾಗಿಲು ಮುಚ್ಚುವಂತಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.

ಬನಾರಸ್‌ನಲ್ಲಿದೆ ಕನ್ನಡದ ಜಾಗ
ಬನಾರಸ್‌ನಲ್ಲಿ ಮೈಸೂರು ಅರಸರ ಅವಧಿಯಲ್ಲಿಯೇ ಹಿಂದೂ ವಿಶ್ವ ವಿದ್ಯಾನಿಲಯ ಬಳಿ ಕನ್ನಡದ ಕಟ್ಟಡವನ್ನು ನಿರ್ಮಿಸಿದ್ದು, ಈಗ ಅದು ಅನಾಥ ಸ್ಥಿತಿಯಲ್ಲಿದ್ದು, ಯಾರೂ ಅದರ ಗೊಡವೆಗೆ ಹೋಗದಿರುವುದರಿಂದ ಅದರ ಸುತ್ತಲೂ ಅತಿಕ್ರಮಣ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಹೊರನಾಡಿನಲ್ಲಿ ಕನ್ನಡದ ಸಮರ್ಥ ಪ್ರಾತಿನಿಧ್ಯ ಕನ್ನಡ ಪೀಠಗಳ ಮೂಲಕ ಆಗಬೇಕಿದೆ. ಅದಕ್ಕಾಗಿ ಕನ್ನಡ ಅಧ್ಯಯನ ಪೀಠಗಳು ಸಕ್ರಿಯವಾಗಿ ಕಾರ್ಯ ನಿರ್ವ ಹಿಸಬೇಕು. ಹೊರ ನಾಡಿನಲ್ಲಿ ಕನ್ನಡ ಕಾರ್ಯಕ್ರಮವನ್ನು ಕನ್ನಡೇತರರ ಮುಂದೆ ಮಾಡಿದಾಗ ಕನ್ನಡ ಭಾಷೆ ಹಾಗೂ ಸಾಹಿತ್ಯ ಇತರರಿಗೂ ತಲುಪುತ್ತದೆ.
-ಪುರುಷೋತ್ತಮ ಬಿಳಿಮಲೆ,
ನಿವೃತ್ತ ಪ್ರಾಧ್ಯಾಪಕ. ಜೆಎನ್‌ಯು ದಿಲ್ಲಿ,

ಹೊರ ರಾಜ್ಯಗಳಲ್ಲಿರುವ ಕನ್ನಡ ಪೀಠ ಗಳಲ್ಲಿ ಕನ್ನಡ ಭಾಷೆಯನ್ನು ಜೀವಂತ ವಾಗಿಡಬೇಕಾದರೆ ಸರಕಾರ ಜಾರಿಗೆ ತರುವ ನೀತಿ ನಿಯಮಗಳು ಕಡ್ಡಾಯವಾಗಿ ಜಾರಿ ಯಾಗಬೇಕು. ಜಾರಿ ಗೊಳಿಸದವರ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು.
-ಟಿ.ಎಸ್‌.ನಾಗಾಭರಣ,
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next