Advertisement

ಕಾಟಾಚಾರಕ್ಕೆ ಉಪಗ್ರಹ ಆಧಾರಿತ ತರಬೇತಿ

09:05 PM Oct 14, 2019 | Team Udayavani |

ಹುಣಸೂರು: ಸರ್ಕಾರದ ನಮ್ಮ ಗ್ರಾಮ ನಮ್ಮ ಯೋಜನೆಯ ಅನುಷ್ಠಾನ ಕುರಿತು ಮಿಶನ್‌ ಅಂತ್ಯೋದಯ ಯೋಜನೆಯಡಿ ಗ್ರಾಪಂ ಪ್ರತಿನಿಧಿಗಳಿಗೆ ಆಯೋಜಿಸಿರುವ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಟಿವಿ ಪರದೆಯಲ್ಲಿನ ಸಿನಿಮಾದಂತಾಗಿದ್ದು, ಕಾಟಾಚಾರಕ್ಕೆ ಎಂಬಂತೆ ನಡೆಸಲಾಗುತ್ತಿದೆ. ಸರ್ಕಾರದ ಹಣ ಲೂಟಿ ಮಾಡುವ ದಂಧೆಯಾಗಿದೆ.

Advertisement

ಹುಣಸೂರು ತಾಲೂಕಿನ ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಕಳೆದ ಒಂದು ವಾರದಿಂದ ಆಯೋಜನೆ ಮಾಡಿರುವ ತಾಲೂಕು ಆಡಳಿತ ಹಾಗೂ ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂಬಂತಿದೆ. ಇನ್ನು ಕೇವಲ ಮೂರು ತಿಂಗಳ ಅಧಿಕಾರಾವಧಿ ಮಾತ್ರ ಇದ್ದು, ಲಕ್ಷಾಂತರ ರೂ. ಹಣ ಖರ್ಚುಮಾಡಿ ಇಂತ ಅವೈಜ್ಞಾನಿಕ ತರಬೇತಿಗೆ ಮುಂದಾಗಿರುವುದು ಆಶ್ಚರ್ಯವೆನಿಸಿದೆ.

ಪ್ರತಿದಿನ ಎರಡು ತಂಡಗಳಾಗಿ ಮೂರ್‍ನಾಲ್ಕು ಗ್ರಾಪಂಗಳಿಂದ ಪ್ರತ್ಯೇಕವಾಗಿ ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಭಾಗವಹಿಸಬೇಕಾದ ಈ ತರಬೇತಿಗೆ ಕೇವಲ ನಾಲೈದು ಮಂದಿ ಸದಸ್ಯರು ಮಾತ್ರ ಭಾಗವಹಿಸುತ್ತಿದ್ದಾರೆ. ಇದು ವ್ಯವಸ್ಥೆಯ ಧ್ಯೋತಕವೋ, ಅಧಿಕಾರಿಗಳ ನಿರ್ಲಕ್ಷ್ಯವೋ, ಅಸಡ್ಡೆಯೋ ತಿಳಿಯದಾಗಿದೆ. ತರಬೇತಿ ನಡೆಯುವ ಮಧ್ಯ ಎದ್ದು ಹೋಗುವುದು ಸಾಮಾನ್ಯವಾಗಿದ್ದು, ಕಾರ್ಯಕ್ರಮದ ಸಾರ್ಥಕತೆಯೇ ಇಲ್ಲದಂತಾಗಿದೆ.

ನಮ್ಮ ಗ್ರಾಮ ನಮ್ಮ ಯೋಜನೆ ಒಂದು ಸಮಗ್ರ ಅಭಿವೃದ್ಧಿಯ ಮುನ್ನೋಟವಾಗಿದ್ದು, ಚುನಾಯಿತ ಪ್ರತಿನಿಧಿಗಳ ಜತೆಗೆ ಗ್ರಾಪಂ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳಿಗೆ ತರಬೇತಿಯ ಉದ್ದೇಶ ಹಾಗೂ ತರಬೇತಿ ಪಡೆದ ನಂತರ ಕಾರ್ಯ ಕ್ಷೇತ್ರದಲ್ಲಿ ಮಾಡಬಹುದಾದ ಕಾರ್ಯಚಟುವಟಿಕೆಗಳನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ. ಆದರೆ, ತರಬೇತಿಯನ್ನು ಆಯೋಜನೆ ಮಾಡಿ ಸರಿಯಾಗಿ ನಿರ್ವಹಿಸದೆ ಕೈ ತೊಳೆದುಕೊಂಡಿರುವ ಅಧಿಕಾರಿಗಳ ಬೇಜವಾಬ್ದಾರಿತನದ ಕಾರಣ ತರಬೇತಿ ಪ್ರಯೋಜನ ವಿಲ್ಲದಂತಾಗಿದೆ.

ಕಾಟಾಚಾರದ ತರಬೇತಿ: ಗ್ರಾಪಂ ಸದಸ್ಯರಾಗಿ ಆಯ್ಕೆಯಾದವರಿಗೆ ವಿವಿಧ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ 11 ದಿನಗಳ ತರಬೇತಿ ನೀಡಲಾಗುತಿತ್ತು. ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾದ ಸದಸ್ಯರುಗಳಿಗೆ ಅವಧಿ ಮುಗಿಯುತ್ತಾ ಬಂದರೂ, ಕೇವಲ ಕಾಟಾಚಾರಕ್ಕೆ 3 ದಿನಗಳ ತರಬೇತಿಯನ್ನು ಮಾತ್ರ ನೀಡಲಾಗಿದೆ. ಬಹಳ ವ್ಯವಸ್ಥಿತವಾದ ಷಂಡ್ಯತರದಿಂದ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಸಂಸ್ಥೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕೆ ಮುಂದಾಗಿರುವುದು ಈ ಯೋಜನೆಯಿಂದ ಸ್ಪಷ್ಟವಾಗಿದೆ.

Advertisement

ಆತುರದ ಏಕಮುಖ ತರಬೇತಿ: ಸಂಸ್ಥೆಗೆ ಬಂದಿರುವ ಹಣವನ್ನು ಖರ್ಚು ಮಾಡುವ ಆತುರದಲ್ಲಿ ಏಕಮುಖ ತರಬೇತಿಯನ್ನು ಸಂಸ್ಥೆಯ ಅಧಿಕಾರಿಗಳು ಹಮ್ಮಿಕೊಂಡಿರುವದಕ್ಕೆ ಪ್ರತಿನಿಧಿಗಳಿಂದ ಟೀಕೆ ವ್ಯಕ್ತವಾಗಿದೆ. ಉಪಗ್ರಹ ಆಧಾರಿತ ತರಬೇತಿಗೆ ಆಗಮಿಸುವ ಶಿಭಿರಾರ್ಥಿಗಳಿಗೆ ವಿಷಯದ ಕುರಿತು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ಹಿಂದಿನ ತರಬೇತಿಗಳಲ್ಲಿ ಒಂದು ತಂಡಕ್ಕೆ 50 ಶಿಬಿರಾರ್ಥಿಗಳಿಗೆ ಸೀಮಿತಗೊಳಿಸಲಾಗಿತ್ತು. ಆತುರದಲ್ಲಿ ತರಬೇತಿ ಮಾಡುವ ಉದ್ದೇಶದಿಂದ ಒಂದು ತಂಡಕ್ಕೆ 150 ಸದಸ್ಯರನ್ನು ಆಹ್ವಾನಿಸಿ ತರಬೇತಿ ನಡೆಸುವುದಕ್ಕೆ ಮುಂದಾಗಿರುವುದು ಯಾವ ಸಾರ್ಥಕತೆಗೆ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕಾಡುತ್ತಿದೆ.

ಚರ್ಚೆ-ಸಂವಾದಕ್ಕೂ ಅವಕಾಶವಿಲ್ಲ: ಎಲ್ಲೋ ಕುಳಿತುಕೊಂಡು ಅಧಿಕಾರಿಗಳು ನೀಡುವ ಮಾಹಿತಿಯನ್ನಷ್ಟೆ ತರಬೇತಿಯಲ್ಲಿ ಪಡೆದುಕೊಳ್ಳಬೇಕು, ಧ್ವನಿಯಲ್ಲಿ ಸ್ಪಷ್ಟತೆ ಇರುವುದಿಲ್ಲ ಮತ್ತು ಹಿಂದಿ ಬಾಷೆಯ ಕ್ಲಿಪ್ಪಿಂಗ್‌ಗಳನ್ನು ಬಳಸಲಾಗುತ್ತಿದೆ. ಕೆಲ ಸದಸ್ಯರಿಗೆ ಹಿಂದಿ ಬಾರದು, ಅರ್ಥವಾಗದಿದ್ದರೆ ಚರ್ಚೆ ಆಸ್ಪದವೆಲ್ಲಿ? ಸಂವಾದಕ್ಕೂ ಅವಕಾಶವಿಲ್ಲ, ಹೀಗಾಗಿ ಇದೊಂದು ವ್ಯರ್ಥ ತರಬೇತಿಯಾಗಿದೆ ಎನ್ನುತ್ತಾರೆ ಗ್ರಾಪಂ ಸದಸ್ಯರು.

ಈ ತರಬೇತಿಗೆ ಆಗಮಿಸುವ ಗ್ರಾಪಂ ಸದಸ್ಯರಿಗೆ ಕುಡಿವ ನೀರು, ಊಟದ ಸೌಲಭ್ಯವಿಲ್ಲ. ತರಬೇತಿ ನೀಡುವ ಸಾಮರ್ಥ್ಯ ಸೌಧದ ಶೌಚಾಲಯ ಅಶುಚಿಯಿಂದ ಕೂಡಿದೆ. ಇಂಥ ಅವ್ಯವಸ್ಥೆಗಳ ನಡುವೆ ಟಿವಿ ಪರದೆ ಮೇಲೆ ನೋಡಿ, ಹೇಳಿದ್ದನ್ನು ಕೇಳಿಕೊಂಡು ಹೋಗುವ ಪರಿಸ್ಥಿತಿ ಇದೆ. ಹೀಗೆ ಮುಂದುವರಿದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ಗ್ರಾಪಂ ಸದಸ್ಯರು

ಇದೊಂದು ಉಪಗ್ರಹ ಆಧಾರಿತ ರೆಕಾರ್ಡೆಡ್‌ ಕಾರ್ಯಕ್ರಮ. ತರಬೇತಿಯಲ್ಲಿ ಭಾಗವಹಿಸಲು ಮಾಹಿತಿ ನೀಡಲಾಗಿದ್ದರೂ ಸದಸ್ಯರು ಆಸಕ್ತಿ ತೋರುತ್ತಿಲ್ಲ. ಸೌಲಭ್ಯಗಳ ಕೊರತೆಯನ್ನು ಸರಿಪಡಿಸಲಾಗುವುದು.
-ಗಿರೀಶ್‌, ತಾಪಂ ಇಒ

Advertisement

Udayavani is now on Telegram. Click here to join our channel and stay updated with the latest news.

Next