Advertisement

ಸಿಲಿಕಾನ್‌ ಸಿಟಿಗೆ ಬೇಕು ಡಿಜಿಟಲ್‌ ನಕ್ಷೆ

06:36 AM Jan 28, 2019 | |

ನೀರಿನ ಕೊಳವೆ, ಒಳಚರಂಡಿ, ಒಎಫ್ಸಿ, ಮೆಟ್ರೋ ಸುರಂಗ, ಅನಿಲ ಕೊಳವೆ ಮಾರ್ಗಗಳು ನಗರದ ರಸ್ತೆಗಳಡಿ ಹಾದುಹೋಗಿವೆ. ಆದರೆ, ಎಲ್ಲಿ ಯಾವ ಕೇಬಲ್‌, ಕೊಳವೆ ಎಲ್ಲಿ ಹಾದು ಹೋಗಿದೆ ಎಂಬ ಬಗ್ಗೆ ಆಯಾ ಸಂಸ್ಥೆಗಳ ಬಳಿಯೇ ನಿಖರ ಮಾಹಿತಿ ಇಲ್ಲ. ಇದರಿಂದಾಗಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡ ತಕ್ಷಣ ಮತ್ತೂಂದು ದುರಸ್ತಿಗೆ ಬಂದಿರುತ್ತದೆ. ಕೇವಲ 20 ದಿನಗಳ ಅಂತರದಲ್ಲಿ ಮಹದೇವಪುರ ಮತ್ತು ಬೆಳ್ಳಂದೂರು ಬಳಿಯ ಸರ್ಜಾಪುರ ರಸ್ತೆಯಲ್ಲಿ ಸಂಭವಿಸಿದ ಅನಿಲ ಸೋರಿಕೆ ಪ್ರಕರಣಗಳು ಯುಟಿಲಿಟಿಗಳ ಸಮರ್ಪಕ ನಕ್ಷೆಯ ಅಗತ್ಯತೆಯನ್ನು ಎತ್ತಿ ತೋರಿಸಿವೆ.

Advertisement

ಕುಳಿತಲ್ಲಿಂದಲೇ ನೆರೆಯ ಪಾಕಿಸ್ತಾನದ ಗಡಿಯಲ್ಲಿರುವ ಮನೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸುವಂತಹ ಬಾಹ್ಯಾಕಾಶ ತಂತ್ರಜ್ಞಾನ ನಮ್ಮ ಬಳಿ ಇದೆ. ಆದರೆ, ಅದೇ ತಂತ್ರಜ್ಞಾನ ಬಳಸಿಕೊಂಡು ನಗರದ ರಸ್ತೆಗಳಲ್ಲಿ ಹಾದು ಹೋಗಿರುವ ಯುಟಿಲಿಟಿಗಳ ಸಮಗ್ರ ನಕ್ಷೆ ಸಿದ್ಧಪಡಿಸುವ ಪ್ರಯತ್ನ ನಾವು ಮಾಡುತ್ತಿಲ್ಲ. ಇದರ ಪರಿಣಾಮವೇ ಅನಿಲ ಸೋರಿಕೆಯಂತಹ ಪ್ರಕರಣಗಳು ಪುನರಾವರ್ತನೆ ಆಗುತ್ತಿವೆ. ಈ ಮೂಲಕ ನಮಗೆ ಎಚ್ಚರಿಕೆಯನ್ನೂ ನೀಡುತ್ತಿವೆ.

ವಿದ್ಯುತ್‌ ಮಾರ್ಗ, ನೀರಿನ ಕೊಳವೆ, ಒಳಚರಂಡಿ ಕೊಳವೆ, ಒಎಫ್ಸಿ ಕೇಬಲ್‌, ಟೆಲಿಕಾಂ ಲೈನ್‌, ಮೆಟ್ರೋ ರೈಲು ಮಾರ್ಗ ಜತೆಗೆ ಈಗ ಅನಿಲ ಕೊಳವೆಮಾರ್ಗ ನಗರದ ರಸ್ತೆಗಳ ಬುಡದಲ್ಲಿ ಹಾದುಹೋಗಿವೆ. ಆದರೆ, ಎಲ್ಲೆಲ್ಲಿ ಯಾವ ಕೇಬಲ್‌ ಅಥವಾ ಕೊಳವೆ ಹಾದು ಹೋಗಿದೆ ಎಂಬುದರ ಬಗ್ಗೆ ಆಯಾ ಸಂಸ್ಥೆಗಳ ಬಳಿಯೇ ನಿಖರ ಮಾಹಿತಿ ಇಲ್ಲ. ಇದರಿಂದಾಗಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡ ತಕ್ಷಣ ಮತ್ತೂಂದು ದುರಸ್ತಿಗೆ ಬಂದಿರುತ್ತದೆ. ಕೇವಲ 20 ದಿನಗಳ ಅಂತರದಲ್ಲಿ ಸತತ ಎರಡು ಕಡೆ (ಮಹದೇವಪುರ ಮತ್ತು ಬೆಳ್ಳಂದೂರು ಬಳಿಯ ಸರ್ಜಾಪುರ ರಸ್ತೆ) ಸಂಭವಿಸಿದ ಅನಿಲ ಸೋರಿಕೆ ಪ್ರಕರಣಗಳು ಯುಟಿಲಿಟಿಗಳ ಸಮರ್ಪಕ ನಕ್ಷೆಯ ಅಗತ್ಯತೆಯನ್ನು ಎತ್ತಿ ತೋರಿಸಿವೆ.

ಮಾಹಿತಿ ಕೊರತೆ; ಮೆಟ್ರೋ ಮಾರ್ಗ ವಿಳಂಬ: ಅಷ್ಟೇ ಅಲ್ಲ, ಈ ಗ್ಯಾಸ್‌ ಪೈಪ್‌ಲೈನ್‌ ಹಾದು ಹೋಗಿದ್ದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗವನ್ನು ಬದಲಿಸಿತು. ಮೊದಲೇ ಈ ಬಗ್ಗೆ ಮಾಹಿತಿ ಇದ್ದರೆ, ವಿನಾಕಾರಣ ವಿಳಂಬ ಆಗುವುದನ್ನು ತಪ್ಪಿಸಬಹುದಿತ್ತು. ಸಚಿವ ಸಂಪುಟದಿಂದ ಅನುಮೋದನೆ ದೊರೆತ ನಂತರ ಉದ್ದೇಶಿತ ಮಾರ್ಗದಲ್ಲಿ ಅನಿಲ ಮಾರ್ಗ ಇರುವುದು ತಿಳಿಯಿತು.

ಅಂದಹಾಗೆ ಸಾಂದ್ರೀಕೃತ ನೈಸರ್ಗಿಕ ಅನಿಲ ಕೊಳವೆಮಾರ್ಗ (ಸಿಎನ್‌ಜಿ ಪೈಪ್‌ಲೈನ್‌) ನಗರದಲ್ಲಿ ಹೆಚ್ಚು-ಕಡಿಮೆ ಸಾವಿರ ಕಿ.ಮೀ. ಹಾದುಹೋಗಿದೆ. ಈಗಾಗಲೇ 1.80 ಲಕ್ಷ ಗ್ರಾಹಕರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಸುಮಾರು ಹತ್ತು ಸಾವಿರ ಮನೆಗಳಿಗೆ ಈಗಾಗಲೇ ಪೂರೈಕೆಯೂ ಆಗುತ್ತಿದೆ. ಆದರೆ, ಈ ಪೈಪ್‌ಲೈನ್‌ ಜಾಲ ಎಲ್ಲೆಲ್ಲಿ ಹಾದುಹೋಗಿದೆ ಎಂಬ ಕುರಿತು ನಿರ್ದಿಷ್ಟ ನಕ್ಷೆಯೇ ಇಲ್ಲ. ಪರಿಣಾಮ ಅನಿಲ ಸೋರಿಕೆ ಪ್ರಕರಣಗಳು ಪುನರಾವರ್ತನೆ ಆಗುತ್ತಿವೆ. ಇದೆಲ್ಲದರ ಮೂಲ, ಸಮನ್ವಯದ ಕೊರತೆ ಮತ್ತು ಮ್ಯಾಪಿಂಗ್‌ ಇಲ್ಲದಿರುವುದು ಎನ್ನುತ್ತಾರೆ ತಜ್ಞರು.

Advertisement

ಇದಕ್ಕೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸ್ಥಳೀಯ ಸಂಸ್ಥೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಸ್ವತಃ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಕೂಡ ಆಯಾ ಸಂಸ್ಥೆಗಳಿಗೆ ಯುಟಿಲಿಟಿ ನಕ್ಷೆ ಸಿದ್ಧಪಡಿಸುವುದರ ಜತೆಗೆ ಆ ನಕ್ಷೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದೂ ಸೂಚಿಸಿದ್ದಾರೆ. ಈ ಪೈಕಿ ಕೆಲವರು ತಮ್ಮ ಬಳಿ ನಕ್ಷೆ ಇದೆ ಎಂದು ಹೇಳಿದ್ದರೂ, ಅದು ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ಇನ್ನು ಹಲವರು ಭೌತಿಕ ನಕ್ಷೆ ಸಿದ್ಧಪಡಿಸಿದ್ದಾರೆಯೇ ಹೊರತು, ಡಿಜಿಟಲ್‌ ಮ್ಯಾಪ್‌ ಹೊಂದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಬೆಂಗಳೂರು ಒಂದು ದುರಸ್ತಿ ನಗರ ಎಂಬಂತಾಗಿದೆ. ನೀರು, ಕೇಬಲ್‌, ಒಳಚರಂಡಿ ಹೀಗೆ ಒಂದಿಲ್ಲೊಂದು ಕಾರಣಕ್ಕಾಗಿ ರಸ್ತೆ ಅಗೆಯುವ ಕಾರ್ಯ ಇಲ್ಲಿ ನಿರಂತರ. ಈ ಹಿನ್ನೆಲೆಯಲ್ಲಿ ನಗರಕ್ಕೊಂದು ಸಮಗ್ರ ಡಿಜಿಟಲ್‌ ನಕ್ಷೆಯ ಅವಶ್ಯಕತೆ ಇದೆ ಎಂದು ಉನ್ನತ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

“ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೇಲ್‌) ಈಗಾಗಲೇ ಅನಿಲ ಕೊಳವೆ ಮಾರ್ಗ ನಕ್ಷೆಯನ್ನು ಸಿದ್ಧಪಡಿಸಿದೆ. ಜತೆಗೆ ಆ ಮಾಹಿತಿಯನ್ನು ಬಿಎಂಆರ್‌ಸಿಎಲ್‌ಗ‌ೂ ನೀಡಿದೆ. ಮಾತ್ರವಲ್ಲದೆ, ಮೆಟ್ರೋ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನಾವು ನೀಡಿದ್ದೇವೆ. ಅಲ್ಲದೆ, ಕೊಳವೆ ಮಾರ್ಗದ ಉದ್ದಕ್ಕೂ ಹಳದಿ ಬಣ್ಣದ ಕಲ್ಲುಗಳನ್ನು ಹಾಕಲಾಗಿದ್ದು, ಹಲವೆಡೆ ಸುರಕ್ಷತೆಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರೆಲ್ಲಾ ನಿತ್ಯ ಪಾಳಿಯಲ್ಲಿ ವಿವಿಧೆಡೆ ಗಸ್ತು ತಿರುಗುತ್ತಾರೆ’ ಎಂದು “ಗೇಲ್‌’ನ ಪ್ರಧಾನ ವ್ಯವಸ್ಥಾಪಕರೊಬ್ಬರು “ಉದಯವಾಣಿ’ಗೆ ತಿಳಿಸಿದರು. 

ಸೋರಿಕೆಯಾದ್ರೂ ಅಪಾಯ ಇಲ್ಲ?: ಅನಿಲ ಸೋರಿಕೆಯಿಂದ ಯಾವುದೇ ಅಪಾಯ ಇಲ್ಲ. ಏಕೆಂದರೆ ಈ ಸಾಂದ್ರೀಕೃತ ನೈಸರ್ಗಿಕ ಅನಿಲವು ಗಾಳಿಗಿಂತ ಹಗುರವಾಗಿರುತ್ತದೆ. ಹಾಗಾಗಿ, ಸೋರಿಕೆಯಾದರೂ ಗಾಳಿಯಲ್ಲಿ ಮರೆಯಾಗಿಬಿಡುತ್ತದೆ. ಅಪಾರ ಪ್ರಮಾಣದಲ್ಲಿ ಸೋರಿಕೆಯಾಗಿ, ಹತ್ತಿರದಲ್ಲಿ ಯಾವುದಾದರೂ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿದ್ದರೆ, ಆಗ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಆದರೆ, ಅಂತಹ ಘಟನೆಗಳು ಇದುವರೆಗೆ ನಡೆದಿಲ್ಲ ಎಂದು “ಗೇಲ್‌’ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಎಲ್ಲೆಲ್ಲಿ ನಿರ್ಮಾಣ?: ನಗರದ ಬಿಇಎಲ್‌ ಕಾಲೊನಿ, ಜಿಂದಾಲ್‌ ಕಾಲೊನಿ, ಎಚ್‌ಎಸ್‌ಆರ್‌ ಲೇಔಟ್‌, ಸಿಂಗಸಂದ್ರ, ಬೆಳ್ಳಂದೂರು, ಸರ್ಜಾಪುರ, ಹರಲೂರು, ಸೆಂಟ್ರಲ್‌ ಜೈಲು ರಸ್ತೆ, ವೈಟ್‌ಫೀಲ್ಡ್‌ (ಭಾಗಶಃ), ಮಹದೇವಪುರ, ಎಲೆಕ್ಟ್ರಾನಿಕ್‌ ಸಿಟಿ ಹಂತ-1, ಮಣಿಪಾಲ್‌ ಕೌಂಟಿ, ಜಿಗಣಿ, ಬೊಮ್ಮಸಂದ್ರ, ಯಶವಂತಪುರ, ಸಂಜಯನಗರ, ಡಾಲರ್ ಕಾಲೊನಿ, ಆರ್‌ಎಂವಿ 2ನೇ ಹಂತದಲ್ಲಿ ಈಗಾಗಲೇ ಕೊಳವೆಮಾರ್ಗ ನಿರ್ಮಿಸಲಾಗಿದೆ. 

ಬಾಕಿ ಇರುವುದು ಎಲ್ಲೆಲ್ಲಿ?: ವಿದ್ಯಾರಣ್ಯಪುರ, ಜಾಲಹಳ್ಳಿ, ಹಗದೂರ, ಕಾಡುಗೋಡಿ, ಗರುಡಾಚಾರಪಾಳ್ಯ, ದೊಡ್ಡನೆಕ್ಕುಂದಿ, ಎಲೆಕ್ಟ್ರಾನಿಕ್‌ ಸಿಟಿ ಹಂತ-2, ಎಚ್‌ಬಿಆರ್‌ ಲೇಔಟ್‌, ಮಾರತ್‌ಹಳ್ಳಿ, ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ, ನಾಗವಾರ, ಥಣಿಸಂದ್ರ, ಹೆಗಡೆ ನಗರ, ಕನಕಪುರ ರಸ್ತೆ, ಮೈಸೂರು ರಸ್ತೆ, ಆರ್‌.ಆರ್‌. ನಗರ, ಯಲಹಂಕ, ಹೆಬ್ಟಾಳ, ಜಕ್ಕೂರು, ಕಂಟೋನ್ಮೆಂಟ್‌, ಮಲ್ಲೇಶ್ವರದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಜೋಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಂಪರ್ಕ ಕಲ್ಪಿಸುವ ಗುರಿ ಇದೆ ಎಂದು “ಗೇಲ್‌’ ತಿಳಿಸಿದೆ.

ಎಲ್ಲೆಲ್ಲಿ ಹಾದು ಬಂದಿದೆ?: ಒಂದು ಸಾವಿರ ಕಿ.ಮೀ. ಉದ್ದದ ಈ ಮಾರ್ಗವು 300 ಕಿ.ಮೀ. ಪಶ್ಚಿಮಘಟ್ಟ ಪ್ರದೇಶ, 263 ಕಿ.ಮೀ. ಮಹಾರಾಷ್ಟ್ರ ಮತ್ತು 36 ಕಿ.ಮೀ. ಗೋವಾದಲ್ಲಿ ಹಾದುಬಂದಿದೆ. ಈ ಮಾರ್ಗದಲ್ಲಿ 11 ಪ್ರಮುಖ ನದಿ ತಿರುವುಗಳು, 20 ರೈಲ್ವೆ ತಿರುವುಗಳು, 276 ನೀರಿನ ಕೊಳಗಳ ತಿರುವುಗಳು ಬಂದಿವೆ. 

ಎರಡು ಪ್ರಮುಖ ಉದ್ದೇಶಗಳು: ದಾಬೋಲ್‌ನಿಂದ ಹರಿದುಬರುವ ಈ ನೈಸರ್ಗಿಕ ಅನಿಲ ಮಾರ್ಗವು ನಗರದ ಎರಡು ಮಹತ್ವದ ಬೇಡಿಕೆಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಒಂದು ಬಿಡದಿಯಲ್ಲಿರುವ ವಿದ್ಯುತ್‌ ಘಟಕದಲ್ಲಿ ಈ ಅನಿಲ ವಿದ್ಯುತ್‌ ರೂಪದಲ್ಲಿ ಪರಿವರ್ತನೆಗೊಂಡು ನಗರಕ್ಕೆ ಪೂರೈಕೆಯಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 700 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಕೆಪಿಸಿಎಲ್‌ ಹೊಂದಿದೆ.

ಇದಕ್ಕಾಗಿ ನಿತ್ಯ 3.2 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ ನೈಸರ್ಗಿಕ ಅನಿಲ ದಾಬೋಲ್‌ನಿಂದ ಇಲ್ಲಿಗೆ ಬರಲಿದೆ. ಮತ್ತೂಂದೆಡೆ ಅಡುಗೆ ಅನಿಲದ ರೂಪದಲ್ಲಿ ಮನೆ ಬಾಗಿಲಿಗೆ ಬರಲಿದೆ. ಹೊರ ವರ್ತುಲದಲ್ಲಿ 18 ಇಂಚು ಸುತ್ತಳತೆಯ ಪೈಪ್‌ಲೈನ್‌ ಅಳವಡಿಸಿದ್ದು, ಅಲ್ಲಿಂದ ನಗರದ ಬಡಾವಣೆಗಳು, ಮನೆಗಳಿಗೆ ಅನಿಲ ಪೂರೈಕೆಯಾಗಲಿದೆ.

ಉಪರಸ್ತೆಗಳು ಸಂಪೂರ್ಣ ಹಾಳು: ನಗರದ ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ದುರಸ್ತಿ ಮಾಡುವಂತೆ ಹೈಕೋರ್ಟ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಶರವೇಗದಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಆದರೆ, ನಗರದ ಉಪಮುಖ್ಯರಸ್ತೆಗಳು ಹೆಚ್ಚು ಹಾಳಾಗಿದ್ದು, ಅಧಿಕಾರಿಗಳು ಅವುಗಳನ್ನು ಸರಿಪಡಿಸುತ್ತಿಲ್ಲ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಜಲಮಂಡಳಿ, ಬೆಸ್ಕಾಂ, ಒಎಫ್ಸಿ ಸೇರಿ ವಿವಿಧ ಸೇವಾ ಜಾಲಗಳ ಅಳವಡಿಕೆಗಾಗಿ ರಸ್ತೆಗಳನ್ನು ಮನಬಂದಂತೆ ಅಗೆಯಲಾಗುತ್ತಿದೆ.

ಆದರೆ, ಕಾಮಗಾರಿ ಮುಗಿದ ನಂತರ ಸಮರ್ಪಕವಾಗಿ ದುರಸ್ತಿ ಮಾಡುತ್ತಿಲ್ಲ. ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಗರದ ಕೇಂದ್ರ ಭಾಗಕ್ಕಿಂತಲೂ ಹೆಚ್ಚಾಗಿ ಹೊರವಲಯದ ವಾರ್ಡ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. ಸ್ಥಳೀಯ ಸಂಸ್ಥೆಗಳ ನಡುವೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗುತ್ತಿರುವುದು ಒಂದೆಡೆಯಾದರೆ, ಅನಾಹುತಗಳೊಂದಿಗೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. 

ಹೇಳುವುದೊಂದು, ಮಾಡುವುದೊಂದು!: ಮನೆ ಮನೆಗೆ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಉದ್ದೇಶದಿಂದ ರಸ್ತೆ ಅಗೆಯಲು “ಗೇಲ್‌’ ಸಂಸ್ಥೆ ಪಾಲಿಕೆಯಿಂದ ಅನುಮತಿ ಪಡೆಯುತ್ತಿದೆ. ಆದರೆ, ಪೈಪ್‌ಲೈನ್‌ ಅಳವಡಿಕೆ ಜವಾಬ್ದಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಅನುಮತಿ ಪಡೆದ ಆಳಕ್ಕಿಂತ ಕಡಿಮೆ ಆಳದಲ್ಲಿ ಪೈಪ್‌ಲೈನ್‌ ಅಳವಡಿಸಿದ್ದರಿಂದ ಕೆಲವೆಡೆ ಅನಿಲ ಕೋರಿಕೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಅವರು, “ಗೇಲ್‌’ ಸಂಸ್ಥೆ ಪೈಪ್‌ಲೈನ್‌ ಅಳವಡಿಕೆಗೆ ಪಾಲಿಕೆಯಿಂದ ಅನುಮತಿ ಪಡೆಯುವುದು ಒಂದು ಅಳತೆಯಾದರೆ, ವಾಸ್ತವದಲ್ಲಿ ಪೈಪ್‌ಲೈನ್‌ ಅಳವಡಿಸಿರುವ ಅಳತೆ ಬೇರೆಯೇ ಇದೆ. ಸರ್ಜಾಪುರ ಮುಖ್ಯರಸ್ತೆಯಲ್ಲಿ “ಗೇಲ್‌’ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ನಡೆಸಿದರೂ ಪೈಪ್‌ ಒಡೆದು ಅನಿಲ ಸೋರಿಕೆಯಾಗಿದೆ. “ಗೇಲ್‌’ ಅಧಿಕಾರಿಗಳು 1 ಮೀ. ಆಳದಲ್ಲಿ ಪೈಪ್‌ ಇದೆ ಎಂದು ಹೇಳಿದ್ದರು. ಆದರೆ, ಅರ್ಧ ಮೀಟರ್‌ ಅಗೆದ ಕೂಡಲೇ ಪೈಪ್‌ ಸಿಕ್ಕರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. 

ಸಮಗ್ರ ಮ್ಯಾಪಿಂಗ್‌ ವ್ಯವಸ್ಥೆ ಅಗತ್ಯ: ನಗರದ ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ ಸೇವಾ ಜಾಲಗಳನ್ನು ಭೂಗರ್ಭದಲ್ಲಿಯೇ ಅಳವಡಿಸುತ್ತಿವೆ. ಆ ಹಿನ್ನೆಲೆಯಲ್ಲಿ ಯಾವ ಸಂಸ್ಥೆಯ ಸೇವಾ ಜಾಲ ಎಲ್ಲಿ ಹಾದು ಹೋಗಿದೆ ಎಂಬ ಸಮಗ್ರ ಮಾಹಿತಿ ವ್ಯವಸ್ಥೆ ಅಗತ್ಯವಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳುತ್ತಾರೆ.

ಅದರಂತೆ ಪಾಲಿಕೆಯಿಂದಲೇ ಮಲ್ಟಿ ಏಜೆನ್ಸಿ ರೋಡ್‌ ಕಟ್ಟಿಂಗ್‌ ಸಿಸ್ಟಂ (ಎಂಎಆರ್‌ಸಿಎಸ್‌) ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಮತ್ತೆ ಮತ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ಅದನ್ನು ಜಾರಿಗೊಳಿಸಿದ್ದು, ಪ್ರತಿಯೊಂದು ಸ್ಥಳೀಯ ಸಂಸ್ಥೆ ಕಾಮಗಾರಿ ನಡೆಸುವ ಮೊದಲು ಈ ವಿಭಾಗದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ನಗರದ ಸ್ಥಳೀಯ ಸಂಸ್ಥೆಗಳು ಭೂಗರ್ಭದಲ್ಲಿ ಅಳವಡಿಸಿರುವ ಸೇವಾ ಜಾಲಗಳ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಪಾಲಿಕೆ ಮುಂದಾಗಿದ್ದು, ಈಗಾಗಲೇ ಬೆಸ್ಕಾಂ, ಜಲಮಂಡಳಿ ತನ್ನ ಸೇವಾಜಾಲಗಳನ್ನು ಅಳವಡಿಸಿರುವ ಮಾಹಿತಿಯನ್ನು ನೀಡಿವೆ. ಅದೇ ರೀತಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಿರುವ ಮಾಹಿತಿ ನೀಡುವಂತೆ “ಗೇಲ್‌’ ಸಂಸ್ಥೆಯನ್ನು ಕೋರಿದ್ದು, ಈವರೆಗೆ ಅವರು ಮಾಹಿತಿ ಒದಗಿಸಿಲ್ಲ ಎಂದು ಮಾಹಿತಿ ನೀಡಿದರು.

ವಿವಿಧ ಸ್ಥಳೀಯ ಸಂಸ್ಥೆಗಳ ಹಳೆಯ ಹಾಗೂ ಹೊಸ ಸೇವಾ ಜಾಲಗಳನ್ನು ಜಿಐಎಸ್‌ ಆಧಾರಿತವಾಗಿ ಮ್ಯಾಪ್‌ ಮಾಡಲು ಸರ್ಕಾರ ಮುಂದಾಗಬೇಕಿದ್ದು, ನಿರಂತರವಾಗಿ ಅದನ್ನು ನಿರ್ವಹಿಸಲು ಕೇಂದ್ರೀಕೃತ ಮ್ಯಾಪಿಂಗ್‌ ಕೇಂದ್ರ ಸ್ಥಾಪಿಸಬೇಕಿದೆ. ರಾಜ್ಯದಲ್ಲಿ ಈಗಾಗಲೇ ಕರ್ನಾಟಕ ಜಿಐಎಸ್‌ ಸಂಸ್ಥೆ ಅಸ್ತಿತ್ವದಲ್ಲಿದ್ದು, ಎಲ್ಲ ಸಂಸ್ಥೆಗಳು ತಾವು ಅಳವಡಿಸುವ ಸೇವಾಜಾಲಗಳ ಮಾಹಿತಿಯನ್ನು ಜಿಐಎಸ್‌ ಮ್ಯಾಪಿಂಗ್‌ ಮಾಡಿಸಲು ಮುಂದಾಗಬೇಕು.
-ರವಿಚಂದರ್‌, ನಗರ ತಜ್ಞ

* ವಿಜಯಕುಮಾರ್‌ ಚಂದರಗಿ/ ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next