Advertisement

ಬೇಕಿದೆ ಶರಣರ ಜಾತ್ಯತೀತ ಪರಿಕಲ್ಪನೆ

05:53 AM Jan 21, 2019 | Team Udayavani |

ದಾವಣಗೆರೆ: ಇಂದಿನ ಆಧುನಿಕ ಭಾರತದಲ್ಲಿ ಜಾತಿಯ ಬೇಲಿಯನ್ನು ಮತ್ತೆ ಮತ್ತೆ ಭದ್ರಗೊಳಿಸುತ್ತಿರುವುದು ಕಂಡು ಬರುತ್ತಿದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಆತಂಕ ವ್ಯಕ್ತಪಡಿಸಿದರು.

Advertisement

ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ಅಂತಿಮ ದಿನ ಭಾನುವಾರದ ಸರ್ವ ಧರ್ಮ ಸಮಾವೇಶದಲ್ಲಿ ಬಹುತ್ವದ ಭಾರತ: ಆತಂಕಗಳು ಮತ್ತು ಸವಾಲುಗಳು… ವಿಷಯ ಕುರಿತು ಅಧ್ಯಕ್ಷೀಯ ನುಡಿಗಳಾಡಿದರು.

ಸ್ವತಂತ್ರ್ಯ ಪೂರ್ವ ಮತ್ತು ಸ್ವತಂತ್ರ್ಯ ಭಾರತದಲ್ಲಿ ನಾವೆಲ್ಲರೂ ಸಾಧಿಸಬೇಕಾಗಿರುವುದು ಜಾತ್ಯತೀತತೆ. ಆದರೆ, ಆಧುನಿಕ ಭಾರತದಲ್ಲಿ ಜಾತಿಯ ಬೇಲಿಯನ್ನು ಮತ್ತೆ ಮತ್ತೆ ಭದ್ರಗೊಳಿಸುತ್ತಿರುವುದು ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ಭಾರತವನ್ನು ಒಗ್ಗೂಡಿಸುವ ಧರ್ಮ ಎಂದರೆ ಭಾರತೀಯ ಧರ್ಮ. ಅದುವೆ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರು ನೀಡಿರುವ ನಮ್ಮ ರಾಷ್ಟ್ರೀಯ ಧರ್ಮ ಸಂವಿಧಾನ. ನಾವೆಲ್ಲರೂ ಸಂವಿಧಾನದ ಆಶಯದಂತೆ ಜಾತ್ಯತೀತ, ಭಾವೈಕ್ಯತೆ, ಮಾನವೀಯತೆಯ ಪಾಲಿಸಬೇಕು ಎಂದು ತಿಳಿಸಿದರು.

ಇಂದಿನ ಆಧುನಿಕ ಬದುಕಿನಲ್ಲಿ ಅನೇಕರು ಪಶು, ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಆದರೆ ಯಾರಾದರೂ ಮನೆಗೆ ಬರುವಾಗ ಜಾತಿಯನ್ನು ಕೇಳಲಾಗುತ್ತದೆ. ಪ್ರತಿಯೊಬ್ಬರು ಎಲ್ಲ ಹಂತದಲ್ಲಿ ಮಾನವ ಪ್ರೀತಿ ತೋರಿಸಬೇಕು. ಅದು ಬರೀ ಬಾಯಿ ಮಾತಿಗೆ ಸೀಮಿತವಾಗದೆ ಪಾಲನೆಯ ಮಂತ್ರವಾಗಬೇಕು. ಜಾತಿ ಯಾವುದೇ ಆದರೂ ಎಲ್ಲರನ್ನೂ ಮಾನವ ಪ್ರೀತಿಯಿಂದ ಕಾಣಬೇಕು. ಧಾರ್ಮಿಕ, ರಾಜಕೀಯ ಮುಖಂಡರು, ಪ್ರಗತಿಪರ ಚಿಂತಕರು ಮಾನವ ಪ್ರೀತಿಯನ್ನು ತೋರಬೇಕು ಎಂದು ಶ್ರೀಗಳು ಆಶಿಸಿದರು.

ಪಂಚಭೇದ ನಿವಾರಿಸಿ ಸಮ ಸಮಾಜ ಕಟ್ಟಿಕೊಟ್ಟಿರುವ ಕೀರ್ತಿ ಹೊಂದಿರುವ ಬಸವಾದಿ ಶರಣರ ಚಳವಳಿಯೇ ದೇಶದ ಮೊದಲ ಚಳವಳಿ. ಅದು ಎಲ್ಲವುದರ ಮೂಲ ಚಳವಳಿಯಾಗಿತ್ತು. ಆ ಕಾರಣಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹರ್ಡೇಕರ್‌ ಮಂಜಪ್ಪನವರ ಮೂಲಕ ಬಸವಣ್ಣನವರ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಬಸವಣ್ಣನವರಂತಹ ಮಹಾನ್‌ ಮಾನವತಾವಾದಿಯ ಬಗ್ಗೆ ತಿಳಿದ ನಂತರ ಗಾಂಧೀಜಿಯವರು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ ಬಸವಣ್ಣನವರ ಅನುಸರಣೆ ಮಾಡುವುದಾಗಿ ಹೇಳಿದ್ದರು ಎಂದು ಸ್ಮರಿಸಿದರು.

Advertisement

ಜಾತ್ಯತೀತ, ಭಾವೈಕ್ಯತೆ, ಸಮಾನತೆಯ ಬಸವಣ್ಣನವರ ವಚನ ಸಂವಿಧಾನವನ್ನು ಭಾರತ ಏನಾದರೂ ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಬುದ್ಧ, ಬಸವಣ್ಣನನ್ನು ಯಾರೂ ಒಪ್ಪಿಕೊಳ್ಳಲೇ ಇಲ್ಲ. ವಿವೇಕಾನಂದರನ್ನೂ ಅರ್ಧಂಬರ್ಧ ಒಪ್ಪಿಕೊಂಡಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಭಾರತದ ಸಮಗ್ರತೆ ಸಾಧಿಸುವ ನಿಟ್ಟಿನಲ್ಲಿ ಬಸವಾದಿ ಶರಣರ ಜಾತ್ಯತೀತ ಪರಿಕಲ್ಪನೆ ಬೇಕಾಗಿದೆ ಎಂದರು.

ನಾವು ಬಸವಣ್ಣನವರ ಆಶಯಗಳನ್ನ ಅಂತರಂಗ ಮತ್ತು ಬಹಿರಂಗವಾಗಿ ಆಚರಣೆ ಮಾಡುತ್ತಿದ್ದೇವೆ. ಕೆಲವರು ಬಹಿರಂಗವಾಗಿ ಬಸವಣ್ಣನವರ ವಚನಗಳ ಹೇಳುತ್ತಾರೆ. ಅಂತರಂಗದಲ್ಲಿ ವೈದಿಕತೆಯ ಅನುಸರಿಸುತ್ತಾರೆ. ರುದ್ರಾಭಿಷೇಕ ಮಾಡುತ್ತಾರೆ. ನಾವು 18 ಜಾತಿಯವರನ್ನ ಹತ್ತಿರಕ್ಕೆ ಕರೆದು, ಮಾನವ ಪ್ರೀತಿಯಿಂದ ಕಾಣುತ್ತಿರುವುದಕ್ಕಾಗಿಯೇ ಎಲ್ಲರೂ ತಮ್ಮನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂದರು.

ಮಠಾಧೀಶರು, ಸ್ವಾಮಿತ್ವ ಎಂಬುದು ಕೆಲವರಿಗೆ ಮಾತ್ರ ಸೀಮಿತ ಎಂಬ ವಾತಾವರಣ, ವೈಧಿಕ ಧರ್ಮದಿಂದ ದೂರ ಇಟ್ಟಂತಹವರಿಗೆ ಸಮಾಜ ಸೇವೆ ದೀಕ್ಷೆ ನೀಡುತ್ತಿದ್ದೇವೆ. ಬಸವಣ್ಣನವರ ಬಗ್ಗೆ ಸರಿಯಾಗಿ ಅಧ್ಯಯನ ಮಾಡದೇ ಇದ್ದಂತಹವರು ಮುರುಘಾ ಶರಣರು ಎಲ್ಲಾ ಜಾತಿಯವರಿಗೆ ಮಠ ಮಾಡಿಕೊಡುತ್ತಿದ್ದಾರೆ ಎಂಬ ಟೀಕೆ ಮಾಡುತ್ತಿದ್ದಾರೆ. ನಾವು ಜಾತಿಗೊಂದು ಮಠ ಮಾಡುತ್ತಿರುವುದು ಜಾತಿ ಪ್ರೀತಿಯಿಂದ ಅಲ್ಲವೇ ಅಲ್ಲ. ಮಾನವ ಪ್ರೀತಿಯಿಂದ ಎನ್ನುವ ಮೂಲಕ ತಮ್ಮ ನಿಲುವನ್ನ ಪ್ರಬಲವಾಗಿ ಸಮರ್ಥಿಸಿಕೊಂಡರು.

ಜಾತ್ಯತೀತತೆ, ಭಾವೈಕ್ಯತೆ, ಮಾನವೀಯತೆ, ಜೀವಕಾರುಣ್ಯ, ಜೀವ, ಜನಪರ ಚಿಂತನೆ ಯಾವತ್ತೂ ಬೇಕು. ಕಾಲ, ವೃತ್ತಿ, ಜೀವನ ಧರ್ಮ ನಾವೆಲ್ಲರೂ ಮುಂದುವರೆಸಬೇಕು ಎಂದು ಶ್ರೀಗಳು ಆಶಿಸಿದರು.

ನಂದಿಗುಡಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗದ ಡಾ| ಫ್ರಾನ್ಸಿಸ್‌ ಸೆರಾವೋ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಪ್ರಗತಿ ಚಿಂತಕ ರಂಜಾನ್‌ ದರ್ಗಾ, ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಶಾಮನೂರು ಶಿವಶಂಕರಪ್ಪ, ಕೆಪಿಟಿಸಿಎಲ್‌ ನಿರ್ದೇಶಕ ಶಿವಕುಮಾರ್‌, ಡಿ. ಬಸವರಾಜ್‌, ಡಾ| ಎಸ್‌.ಎಂ. ಎಲಿ ಇತರರು ಇದ್ದರು.

ಹುಬ್ಬಳ್ಳಿಯ ಕಾರಟಗಿ ಆಸ್ಪತ್ರೆಯ ಡಾ| ರಾಮಚಂದ್ರ ಕಾರಟಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಜೀ ಕನ್ನಡ ಸರಿಗಮಪ ಪ್ರಶಸ್ತಿ ವಿಜೇತರಾದ ಚನ್ನಪ್ಪ ಹುದ್ದಾರ್‌, ವಿಶ್ವಪ್ರಸಾದ್‌ ಮಲ್ಲಿಕಾರ್ಜುನ ಗಾಣಿಗ, ಪ್ರೇರಣಾ ಎಂ. ಧರ್ಮರಾಜ್‌ ಸಾಂಸ್ಕೃತಿಕ ಸಂಭ್ರಮ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next