Advertisement

ಪೊಲೀಸರಿಗೆ ಎನ್‌ಡಿಎ ಮಾದರಿ ತರಬೇತಿ: ಸಿಎಂ ಬೊಮ್ಮಾಯಿ 

12:05 AM Dec 12, 2022 | Team Udayavani |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯು ಕೆಳ ಹಂತದ ಅಧಿಕಾರಿಗಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಅದೇ ರೀತಿ ಐಪಿಎಸ್‌ ಅಧಿಕಾರಿಗಳಿಗೂ ರಾಷ್ಟ್ರಮಟ್ಟದ ತರಬೇತಿ ದೊರೆಯುತ್ತಿದೆ. ಆದರೆ ಮಧ್ಯಮ ಹಂತದ ಅಧಿಕಾರಿಗಳಿಗೆ ಸಮರ್ಪಕ ತರಬೇತಿ ಸಿಗುತ್ತಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಪೊಲೀಸ್‌ ಇಲಾಖೆಯಿಂದ ರಾಜಭವನದ ಗಾಜಿನಮನೆಯಲ್ಲಿ ಆಯೋ ಜಿಸಲಾಗಿದ್ದ ರಾಷ್ಟ್ರಪತಿಗಳ ಪೊಲೀಸ್‌ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಥ ತರಬೇತಿ ನೀಡಲು ಪ್ರತ್ಯೇಕ ಸಂಸ್ಥೆ ಸ್ಥಾಪಿಸಬೇಕಾಗಿದೆ. ಮಧ್ಯಮ ಹಂತದ ಪೊಲೀಸರಿಗೆ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಮಾದರಿಯಲ್ಲಿ ತರಬೇತಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಸೈಬರ್‌ ಅಪರಾಧಗಳು ಹೆಚ್ಚುತ್ತಿವೆ. ಅದನ್ನು ತಡೆಯಲು ಪೊಲೀಸ್‌ ವ್ಯವಸ್ಥೆಯ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಬೇಕಿದೆ. ಅಪರಾಧಿಗಳು ಚಿಂತಿಸುವ ಮತ್ತು ಬಳಸುವ ತಂತ್ರಜ್ಞಾನದ ಬಗ್ಗೆ ಪೊಲೀಸರು ಅರಿವು ಮೂಡಿಸಿಕೊಳ್ಳಬೇಕು. ಅದಕ್ಕೆ ಬೇಕಾಗುವ ಎಲ್ಲ ನೆರವನ್ನೂ ಸರಕಾರ ನೀಡಲಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನವನ್ನೂ ನಿಗದಿ ಮಾಡಲಾಗುವುದು ಎಂದರು.

ವಿಭಾಗಕ್ಕೆರಡು ಫೊರೆನ್ಸಿಕ್‌ ಲ್ಯಾಬ್‌
ವಿಧಿವಿಜ್ಞಾನ ಪ್ರಯೋಗಾಲಯದ ಕೊರತೆಯಿಂದಾಗಿ ಹಲವು ಅಪರಾ ಧಿಗಳಿಗೆ ಶಿಕ್ಷೆ ವಿಧಿಸುವುದು ತಡವಾ ಗುತ್ತಿದೆ. ಹೀಗಾಗಿ ಅಪರಾಧಿಗಳ ಶೋಧನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಬೇಕಿದೆ. ಪೊಲೀಸ್‌ ಇಲಾಖೆಯ ಪ್ರತಿ ವಿಭಾಗಕ್ಕೆ ಎರಡು ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಬೇಕು. ಅದಕ್ಕೆ ಬೇಕಾಗುವ ತಂತ್ರಜ್ಞರು, ಸಿಬಂದಿ ಯನ್ನು ಒದಗಿಸಬೇಕು. ಗೃಹ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಸಿಎಂ ಹೇಳಿದರು.

ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್ , ಡಿಜಿಪಿ ಪ್ರವೀಣ್‌ ಸೂದ್‌ ಇತರರಿದ್ದರು.

Advertisement

ದೇಶದಲ್ಲೇ ರಾಜ್ಯದ ಪೊಲೀಸ್‌ ವ್ಯವಸ್ಥೆ ದಕ್ಷ: ಆರಗ
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯ ಪೊಲೀಸರಿಗೆ ಅತ್ಯುತ್ತಮ ವಸತಿ ಸೌಲಭ್ಯ, ಸೈಬರ್‌ ಅಪರಾಧ ವಿಭಾಗದ ಬಲಪಡಿಸುವುದು ಸಹಿತ ಅಪರಾಧ ನಿಯಂತ್ರಣದ ಜತೆಗೆ ಪೊಲೀಸರಿಗೆ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 117 ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲಿಯೇ ರಾಜ್ಯ ಪೊಲೀಸ್‌ ವ್ಯವಸ್ಥೆ ದಕ್ಷವಾಗಿದೆ ಎಂದು ತಿಳಿಸಿದರು.

ಪೊಲೀಸರು ತಮ್ಮ ಜೀವನದಲ್ಲಿ ರಾಜಿ ಮಾಡಿಕೊಂಡು ಸೇವೆ ಮಾಡುತ್ತಿದ್ದಾರೆ. ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಕಾನೂನು ಕಾಪಾಡಲು, ಅಪರಾಧ ತಡೆಗೆ ಶ್ರಮಿಸುತ್ತಿದ್ದಾರೆ. ದೇಶದಲ್ಲೇ ರಾಜ್ಯ ಪೊಲೀಸ್‌ ಶ್ರೇಷ್ಠ ಪಡೆಯಾಗಿದೆ. ಈಗ ನಮ್ಮ ಪೊಲೀಸರ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ನೀಡುತ್ತಿರುವುದು ಹೆಮ್ಮೆಯ ವಿಚಾರ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next