Advertisement

NDA;ಹೊಳೆನರಸೀಪುರಕ್ಕಿಂತ 1 ಮತವಾದರೂ ಲೀಡ್ ಹಾಸನದಲ್ಲಿ ಕೊಡಿಸುತ್ತೇನೆ: ಪ್ರೀತಂ

06:11 PM Apr 08, 2024 | Team Udayavani |

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪರ ಮಾಜಿ ಶಾಸಕ ಪ್ರೀತಂ ಗೌಡ ಅವರು ಪ್ರಚಾರಕ್ಕಿಳಿಯುತ್ತಾರೋ ಎನ್ನುವ ಕುರಿತಾಗಿನ ಕುತೂಹಲ ಇನ್ನಷ್ಟು ಹೆಚ್ಚಿದೆ. ಸೋಮವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ‘ ಪ್ರಜ್ವಲ್ ರೇವಣ್ಣ ಅವರಿಗೆ ಹೊಳೆನರಸೀಪುರಕ್ಕಿಂತ ಒಂದು ಮತವಾದರೂ ಲೀಡ್ ಹಾಸನದಲ್ಲಿ ಕೊಡಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ’ನಾನು ಯುಗಾದಿ ಹಬ್ಬದ ಪ್ರಯುಕ್ತ ಇವತ್ತು ರಾತ್ರಿ ಹಾಸನಕ್ಕೆ ಹೋಗಿ ಅಲ್ಲಿರುತ್ತೇನೆ. ಚರ್ಚೆ ಮಾಡಿ ಯಾವ ರೀತಿ ಸುಸೂತ್ರವಾಗಿ ಎನ್ ಡಿ ಎ ಅಭ್ಯರ್ಥಿ ಗೆಲ್ಲಲು ಏನೆಲ್ಲಾ ಬೇಕೋ ಎಲ್ಲಾ ಕೆಲಸ ಮಾಡುತ್ತೇವೆ’ ಎಂದರು.

‘ಮಾನ್ಯ ಎನ್ ಡಿಎ ಅಭ್ಯರ್ಥಿಗೆ ಹೊಳೆನರಸೀಪುರದಲ್ಲಿ ಎಷ್ಟು ವೋಟ್ ಲೀಡ್ ಇರುತ್ತದೆಯೋ ಅದಕ್ಕಿಂತ ಒಂದು ಮತವಾದರೂ ಹೆಚ್ಚು ಹಾಸನದಲ್ಲಿ ಕೊಡಿಸುತ್ತೇನೆ. ಹೊಳೆನರಸೀಪುರದಲ್ಲಿ ಶಾಸಕರು ಯಾರು? ರೇವಣ್ಣ ಅವರು, ಅಭ್ಯರ್ಥಿ ಅವರ ತಂದೆ” ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಎದುರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ಅವರು 3,152 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು.ಪ್ರಬಲ ಸ್ಪರ್ಧೆ ನೀಡಿದ್ದ ಪಟೇಲ್ ಈಗ ಮತ್ತೆ ರೇವಣ್ಣ ಅವರ ಪುತ್ರನ ವಿರುದ್ಧ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಶ್ರೇಯಸ್ ಪರ ಹೊಳೆನರಸೀಪುರದಲ್ಲಿ ಅನುಕಂಪದ ಅಲೆ ಇದೆ ಎನ್ನಲಾಗಿದ್ದು, ಈ ಬಾರಿ ಹೆಚ್ಚಿನ ಲೀಡ್ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆ ಕಾರಣಕ್ಕಾಗಿ ಪ್ರೀತಂ ಅವರು ಪರೋಕ್ಷವಾಗಿ ರೇವಣ್ಣ ಕುಟುಂಬಕ್ಕೆ ಕುಟುಕಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next