ರಾಯ್ ಪುರ್: ಛತ್ತೀಸ್ ಗಢದಲ್ಲಿ ಮಾವೋವಾದಿ ನಕ್ಸಲರ ಪ್ರತಿದಾಳಿಯಲ್ಲಿ 22 ಯೋಧರು ಹುತಾತ್ಮರಾದ ಘಟನೆ ಸಂದರ್ಭದಲ್ಲಿ ಕೋಬ್ರಾ ಕಮಾಂಡೋ ಒಬ್ಬರನ್ನು ಅಪಹರಿಸಿರುವುದಾಗಿ ನಕ್ಸಲ್ ತಂಡ ಹೇಳಿದ್ದು, ಈ ಬಗ್ಗೆ ಖಚಿತಪಡಿಸಿಕೊಳ್ಳಲು ಭದ್ರತಾ ಪಡೆ ಕಾರ್ಯೋನ್ಮುಖವಾಗಿರುವುದಾಗಿ ಅಧಿಕಾರಿಗಳ ಮೂಲಗಳು ತಿಳಿಸಿದೆ.
ಇದನ್ನೂ ಓದಿ:ಸಿಡಿ ಪ್ರಕರಣ : ಕಿಡ್ನಾಪ್ ಕೇಸ್ ಸಂಬಂಧ ಹೇಳಿಕೆ ನೀಡಲು ಕೋರ್ಟ್ ಗೆ ಬಂದ ಯುವತಿ!
ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಕಮಾಂಡೋ ಅಪಹರಣದ ವಿಷಯ ನಂಬಲು ಒಂದು ಕಾರಣವಿದೆ ಎಂದು ತಿಳಿಸಿದ್ದಾರೆ. ಭಾನುವಾರ ಸಂಜೆ ಬಿಜಾಪುರ್ ಮೂಲದ ಪತ್ರಕರ್ತರೊಬ್ಬರಿಗೆ ಮಾವೋವಾದಿ ಗುಂಪೊಂದು ದೂರವಾಣಿ ಮೂಲಕ ಈ ವಿಷಯ ತಿಳಿಸಿರುವುದು ಸತ್ಯ ಎಂದು ವಿವರಿಸಿದ್ದಾರೆ.
210ನೇ ಕೋಬ್ರಾ ಬೆಟಾಲಿಯನ್ ನ ಕಮಾಂಡೋ ರಾಕೇಶ್ವರ್ ಸಿಂಗ್ ಮಿನ್ಹಾಸ್ ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಈವರೆಗೂ ಸಾಧ್ಯವಾಗಿಲ್ಲ. ಕಮಾಂಡೋ ಸಿಂಗ್ ಅವರನ್ನು ಅಪಹರಿಸಿಕೊಂಡು ಹೋಗಿದ್ದೇವೆ ಎಂಬ ನಕ್ಸಲೀಯರ ಹೇಳಿಕೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಯಾವುದೇ ಬಲವಾದ ಪುರಾವೆ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜಮ್ಮು ಮೂಲದ ಕಮಾಂಡೋ ರಾಕೇಶ್ವರ್ ಅವರ ಪತ್ತೆ ಹಚ್ಚಲು ಹಾಗೂ ನಕ್ಸಲೀಯರ ಚಲನವಲನ ಗಮನಿಸಲು ಭದ್ರತಾ ಪಡೆಯ ಹಲವು ತಂಡ ಇನ್ನೂ ಕಾಡಿನೊಳಗೆ ಇದ್ದಿರುವುದಾಗಿ ವಿವರಿಸಿದ್ದಾರೆ.
ಛತ್ತೀಸ್ ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಶನಿವಾರ ಭದ್ರತಾ ಪಡೆಯ ಮೇಲೆ ನಕ್ಸಲೀಯರ ಗುಂಪು ಏಕಾಏಕಿ ಎ.ಕೆ.47ರಿಂದ ಗುಂಡು ಹಾರಿಸಿ ದಾಳಿ ನಡೆಸಿದ ಪರಿಣಾಮ 22 ಯೋಧರು ಹುತಾತ್ಮರಾಗಿದ್ದರು. ಭದ್ರತಾಪಡೆಯ ಪ್ರತಿದಾಳಿಗೆ 30ಕ್ಕೂ ಅಧಿಕ ಮಾವೋವಾದಿ ನಕ್ಸಲೀಯರು ಸಾವಿಗೀಡಾಗಿದ್ದರು.