Advertisement

ನಕ್ಸಲ್‌ ಬಿ.ಜಿ. ಕೃಷ್ಣಮೂರ್ತಿ,ಸಾವಿತ್ರಿ ಇಂದು ಕಾರ್ಕಳಕ್ಕೆ

02:01 AM May 04, 2022 | Team Udayavani |

ಕಾರ್ಕಳ: ನಕ್ಸಲ್‌ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಮತ್ತು ನಕ್ಸಲ್‌ ಸದಸ್ಯೆ ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿಯ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್‌ ಹಾಗೂ ನ್ಯಾಯಾಂಗ ತನಿಖೆಗಾಗಿ ಚಿಕ್ಕಮಗಳೂರಿನಿಂದ ಮೇ 4ರಂದು ಕಾರ್ಕಳಕ್ಕೆ ಬಿಗು ಪೊಲೀಸ್‌ ಬಂದೋಬಸ್ತಿನಲ್ಲಿ ಕರೆತರಲಾಗುತ್ತಿದೆ.

Advertisement

20 ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿ ಅವರಿಬ್ಬರನ್ನು 12ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಕಾರ್ಕಳ ತಾಲೂಕಿನಲ್ಲಿ ಬಿಗು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ನಕ್ಸಲರನ್ನು ಇರಿಸುವ ಠಾಣೆಗಳಲ್ಲಿ 120ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಪರಿಸರದಲ್ಲೂ ಬಿಗು ಬಂದೋಬಸ್ತು ಇರಲಿದೆ.

ಪ್ರತ್ಯೇಕ ಕೌಂಟರ್‌
ದೂರು ನೀಡಲು ಬರುವ ಸಾರ್ವಜನಿಕರಿಗೆ ಭದ್ರತೆ ದೃಷ್ಟಿಯಿಂದ ಹೊರಗೆ ಪ್ರತ್ಯೇಕ ದೂರು ಸ್ವೀಕಾರ ಕೌಂಟರನ್ನು ತೆರೆಯಲಾಗಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಐಜಿ ಮೇಲುಸ್ತುವಾರಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿಂದೆ ನಕ್ಸಲ್‌ ಕೃತ್ಯಗಳು ನಡೆದಿರುವ ಹೆಬ್ರಿ, ಈದು, ಅಜೆಕಾರಿನ ಸ್ಥಳಗಳಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.

ನೆತ್ತರು ಚೆಲ್ಲಿದ್ದರು
2008ರ ಮೇ 15ರಂದು ಚುನಾವಣೆಯ ಮುನ್ನಾ ದಿನ ಸೀತಾನದಿ ಬಳಿಯ ನಾಡ್ಪಾಲಿನಲ್ಲಿ ಶಿಕ್ಷಕ ಭೋಜ ಶೆಟ್ಟಿ ಮತ್ತು ಚಿಕ್ಕಮ್ಮನ ಮಗ ಸುರೇಶ್‌ ಶೆಟ್ಟಿ ಅವರು ನಕ್ಸಲರಿಂದಹತ್ಯೆಗೊಳಗಾಗಿದ್ದರು. 2008ರ ಡಿ. 7ರಂದು ಹಳ್ಳಿಹೊಳೆ ಕೃಷಿಕ ಕೇಶವ ನಕ್ಸಲ್‌ಗೆ ಬಲಿ, 2011ರ ಡಿ. 19ರಂದು ತಿಂಗಳಮಕ್ಕಿ ಮಲೆಕುಡಿಯ ಸದಾಶಿವ ಗೌಡ ಹತ್ಯೆ, ಈದುವಿನ ಕುಟ್ಟಿ ಶೆಟ್ಟಿ ಅವರಿಗೆ ಬೆದರಿಕೆ, ಮತ್ತಾವು ಪೊಲೀಸ್‌ ಜೀಪ್‌ ಸ್ಫೋಟ ಇತ್ಯಾದಿ ಪ್ರಕರಣಗಳಲ್ಲಿ ತನಿಖೆ ನಡೆಯಲಿದೆ.

ಎನ್‌ಕೌಂಟರ್‌ನಲ್ಲಿ ಜೀವ ತೆತ್ತ ನಕ್ಸಲರು
2003ರ ನ. 17ರಂದು ಕಾರ್ಕಳ ತಾಲೂಕು ಈದು  ರಾಮಪ್ಪ ಪೂಜಾರಿ ಅವರ ಮನೆ ಬಳಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ರಾಯಚೂರಿನ ಹಾಜಿಮ, ಕೊಪ್ಪದ ಪಾರ್ವತಿ ಮೃತಪಟ್ಟಿದ್ದರು. 2010ರಲ್ಲಿ ಹೆಬ್ರಿ ಮುಟ್ಲುಪ್ಪಾಡಿ ಎನ್‌ಕೌಂಟರ್‌ನಲ್ಲಿ ಕುತ್ಲೂರಿನ ವಸಂತ ಬಲಿಯಾಗಿದ್ದ. 2012ರಲ್ಲಿ ಸುಬ್ರಹ್ಮಣ್ಯ ಎನ್‌ಕೌಂಟರ್‌ ನಲ್ಲಿ ರಾಯಚೂರಿನ ಯಲ್ಲಪ್ಪ ಹತನಾಗಿದ್ದ.

Advertisement

ಡ್ರಾಪ್‌ ನೆಪದಲ್ಲಿ ಜೀಪಿಗೆ ಹತ್ತಿಸಿ ಬಂಧಿಸಿದ್ದರು!
ಶೃಂಗೇರಿ ಮೂಲದ ಬಿ.ಜಿ. ಕೃಷ್ಣಮೂರ್ತಿ (49) ಶಿವಮೊಗ್ಗ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದ. ಬಳಿಕ ಎಲ್‌ಎಲ್‌ಬಿ ಶಿಕ್ಷಣ ಪಡೆದಿದ್ದ. ವಿದ್ಯಾರ್ಥಿ ದೆಸೆಯಲ್ಲಿ ಎಡಪಂಥೀಯ ಚಿಂತನೆಗಳಿಂದ ಪ್ರೇರಿತನಾಗಿ 2000ದ ಆಸುಪಾಸಿನಲ್ಲಿ ನಡೆದಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳವಳಿಯಲ್ಲಿ ಸಕ್ರಿಯನಾಗಿದ್ದ. 2003ರಿಂದ ಭೂಗತನಾಗಿ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. 2005ರಲ್ಲಿ ಸಾಕೇತ್‌ ರಾಜನ್‌ ಹತ್ಯೆ ಬಳಿಕ ನಾಯಕತ್ವ ಈತನ ಹೆಗಲೇರಿತ್ತು. 2018ರಲ್ಲಿ ತಂದೆ ತೀರಿಕೊಂಡಾಗಲೂ ಮನೆಗೆ ಬಂದಿರಲಿಲ್ಲ. ಮೈಸೂರು ಭಾಗದಲ್ಲಿ ಓಡಾಡಿಕೊಂಡಿದ್ದ ಈತ 2021ರ ನ. 9ರಂದು ಸಾಗುತ್ತಿದ್ದ ಕಾರು ರಾಜ್ಯದ ಗಡಿಭಾಗದ ವಯನಾಡ್‌ನ‌ಲ್ಲಿ ಕೆಟ್ಟು ನಿಂತಿತ್ತು. ಸಂಚಾರದ ಮಾಹಿತಿ ಅರಿತು ಹಿಂಬಾಲಿಸುತ್ತಿದ್ದ ಕೇರಳ ಎಟಿಎಸ್‌ ಡ್ರಾಪ್‌ ಕೊಡುವ ನೆಪದಲ್ಲಿ ಕೃಷ್ಣಮೂರ್ತಿ ಮತ್ತು ಸಾವಿತ್ರಿಯನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಬಳಿಕ ಬಂಧಿಸಿತ್ತು. ಈತನ ಮೇಲೆ 53 ಪ್ರಕರಣಗಳಿವೆ.

2001ರಿಂದಲೂ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದ ಸಾವಿತ್ರಿ (37) ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ. ವಯನಾಡ್‌- ಕೊಯಿಕ್ಕೋಡ್‌ನ‌ಲ್ಲಿ ಕಬಿನಿ ದಳದ ಮುಖ್ಯಸ್ಥೆಯಾಗಿದ್ದಳು. ಆಕೆ ಹೆಬ್ರಿಯ ಕೂಡ್ಲು ನಾಡ್ಪಾಲು ಗ್ರಾಮದ ವಿಕ್ರಮ್‌ ಗೌಡ ಆಲಿಯಾಸ್‌ ಶ್ರೀಕಾಂತ್‌ನ ಪತ್ನಿ. ಈಕೆಯ ಮೇಲೆ 22 ಪ್ರಕರಣಗಳಿವೆ.

ನಕ್ಸಲ್‌ ಚಟುವಟಿಕೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಡಿ ಕಾರ್ಕಳ ತಾಲೂಕಿನ ವಿವಿಧ ಠಾಣೆಗಳಲ್ಲಿ ದಾಖಲಾದ 7 ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರಿಗೆ ಈರ್ವರನ್ನು ಕರೆತರಲಾಗುತ್ತಿದೆ. ಎಷ್ಟು ದಿನ ಇರಿಸಿಕೊಳ್ಳಲಾಗುತ್ತದೆ ಎನ್ನುವುದು ನ್ಯಾಯಾಲಯದ ಸೂಚನೆ ಮೇರೆಗೆ ನಿರ್ಧಾರವಾಗಲಿದೆ.
– ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next