Advertisement

ರಾಷ್ಟ್ರೀಯ ವೈದ್ಯಕೀಯ ಆಯೋಗ; ಚಿಕಿತ್ಸೆ ಫ‌ಲಕಾರಿಯಾಗಿಲ್ಲ!

11:35 AM Feb 26, 2018 | Harsha Rao |

ನೀತಿ ಆಯೋಗದ ಶಿಫಾರಸಿನಂತೆ ಆಮೂಲಾಗ್ರ ತಿದ್ದುಪಡಿಯೊಂದಿಗೆ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ ಬದಲಿಗೆ ನ್ಯಾಷನಲ್‌ ಮೆಡಿಕಲ್‌ ಕೌನ್ಸಿಲ್‌ ಸ್ಥಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಹೊಸ ಕಾಯ್ದೆಯನ್ನು ಒಪ್ಪಿಗೆಗಾಗಿ ಮಂಡಿಸಲಾಗಿದೆ. ಖಾಸಗಿ ವೈದ್ಯರ ಭಾರೀ ವಿರೋಧದ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯ ಪರಿಶೀಲನೆ ಒಪ್ಪಿಸಿ
ಕಾಯ್ದು ನೋಡುವ ಲೆಕ್ಕಾಚಾರಕ್ಕೆ ಇಳಿಯಲಾಗಿದೆ.

Advertisement

ದೇಶದ ಸಾಮಾನ್ಯನ ಆರೋಗ್ಯ ಹದಗೆಡುತ್ತದೆ ಎಂದರೆ ದಶ ದಿಕ್ಕುಗಳಿಂದ ಸಮಸ್ಯೆ ಎದುರಾಗುತ್ತದೆ. ಅನಗತ್ಯವಾದರೂ ಖರ್ಚಾಗಬೇಕಾದ ಔಷಧ, ಆಪರೇಷನ್‌ಗೆ ಕೊರಳೊಡ್ಡುವ ಸ್ಥಿತಿ ಮತ್ತು ಅತಿ ದೊಡ್ಡ ಬಿಲ್‌ ಒಂದು ಕಡೆ, ವೈದ್ಯಕೀಯ ಕಲಿಕೆಗೆ ಖರ್ಚು ಮಾಡಿದ ಹಣ ದುಡಿಯಬೇಕಾದ ಒತ್ತಡಕ್ಕೆ ಸಿಲುಕುವ ವೈದ್ಯರು ಆಸ್ಪತ್ರೆಗಳ “ಟಾರ್ಗೆಟ್‌’ ದಾಟುವ ಸಾಹಸದಲ್ಲಿ ರೋಗಿಗಳ ಆರ್ಥಿಕ ಆರೋಗ್ಯಕ್ಕೆ ಕುತ್ತು ತರುತ್ತಿದ್ದಾರೆ. ಸಮಾಜದಲ್ಲಿ ಶಿಕ್ಷಕರು, ಪುರೋಹಿತ ವರ್ಗಕ್ಕೆ ಇರುವಂತಹ ನೈತಿಕ ಗೌರವವೇ ವೈದ್ಯರಿಗೂ ಸಿಗುವ ದಿನಗಳು ನಶಿಸುತ್ತಿವೆ. ಈ ಹಿನ್ನೆಲೆಯಲ್ಲಿಯೇ ಭಾರತವೂ ಸೇರಿದಂತೆ ವಿಶ್ವದಲ್ಲಿ ಈ ವೃತ್ತಿಗೌರವ ಕಾಪಾಡುವ, ಪದವಿ ಪಡೆಯಲು ಕಟ್ಟುನಿಟ್ಟಿನ ನಿಯಮ ರಚಿಸಲಾಗಿದೆ.

ಭಾರತದಲ್ಲಿರುವ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ, ಹೃಸ್ವವಾಗಿ ಎಂಸಿಐ ಈ ನಿಯಮಗಳ ಪಾಲನೆಯ ನಿರ್ವಹಣೆಯನ್ನು ಹೊತ್ತುಕೊಂಡಿದೆ.   ಹೊಸ ಕಾಲೇಜು ಆರಂಭಿಸಲು, ಸೀಟುಗಳ ಸಂಖ್ಯೆ ನಿರ್ಧಾರ, ಪ್ರವೇಶ ಪರೀಕ್ಷೆ, ಪದವಿ ಅಥವಾ ಸ್ನಾತಕೋತ್ತರ ಪರೀûಾ ಪದ್ಧತಿ ನಿರೂಪಣೆ ಮೊದಲಾದ ನೀತಿಗಳಿಂದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಕಾಪಾಡುವ ಪ್ರಯತ್ನ ಈ ಸಂಸ್ಥೆಯದ್ದು. ಉತ್ತಮ ವೈದ್ಯರು ಸೃಷ್ಟಿಯಾದರೆ ಮಾತ್ರ ದೇಶದ ಜನರಿಗೆ ಆರೋಗ್ಯ, ತನ್ಮೂಲಕ ದೇಶಕ್ಕೆ ನೆಮ್ಮದಿ ಎಂಬುದು ಇದರ ಹಿಂದಿನ ಆಶಯ. ನಮಗೆ ಚಿಕಿತ್ಸೆ ಕೊಡುವ ವೈದ್ಯರೇ ಅಸಮರ್ಥರಾದರೆ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ನಿಯಮಗಳ ಜಾರಿಯಲ್ಲಿ ಸಡಿಲತೆ ಉಂಟಾದಲ್ಲಿ ಇಡೀ ವೈದ್ಯ ವೃತ್ತಿ ಪಾತಾಳಕ್ಕಿಳಿದು ಮಾನವ ಕುಲದ ಆರೋಗ್ಯ ರಕ್ಷಣೆ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸಲು 1933ರ ಕಾಯ್ದೆಯನ್ವಯ 1934ರಲ್ಲಿ ಕಾನೂನುಬದ್ಧವಾಗಿ ಸ್ಥಾಪಿತವಾದ ಸಂಸ್ಥೆ ಈ ಮೆಡಿಕಲ್‌ ಕೌನ್ಸಿಲ್‌. ಕಾಲಕಾಲಕ್ಕೆ ಅಗತ್ಯ ತಿದ್ದುಪಡಿಗಳ ನಂತರ 2011ರಲ್ಲಿ ರ‌ಚಿತವಾದ ಸಮಿತಿ ಜವಾಬ್ದಾರಿ ನಿರ್ವಹಿಸುತ್ತಿದೆ.

ಇಂತಹ ವ್ಯವಸ್ಥಿತ ಸಂಸ್ಥೆಯನ್ನು ಅತಿ ದೊಡ್ಡ ಭ್ರಷ್ಟಾಚಾರ ಹಗರಣ ಅಲುಗಾಡಿಸಿಬಿಟ್ಟಿತು. 2010ರ ಏಪ್ರಿಲ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಲು ಎರಡು ಕೋಟಿ ರೂಪಾಯಿ ಲಂಚ ಪಡೆದ ಅಂದಿನ ಕೌನ್ಸಿಲ್‌ನ ಅಧ್ಯಕ್ಷ ಡಾ. ಕೇತನ್‌ ದೇಸಾಯಿಯವರೂ ಸೇರಿದಂತೆ ಮೂರು ನಿರ್ದೇಶಕರನ್ನು ಬಂಧಿಸಲಾಯಿತು. ಅವರ ಮನೆಯಲ್ಲಿ ಹಲವು ಕೋಟಿ ಮೌಲ್ಯದ ಬೆಳ್ಳಿ ಬಂಗಾರ ವಶ‌ಪಡಿಸಿಕೊಳ್ಳುವ‌ ಜೊತೆಗೆ ಅವರ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸಲಾಯಿತು. ಬ್ರಹ್ಮಾಂಡ ಭ್ರಷ್ಟಾಚಾರದ ಕಾರಣ, ಅದೇ ವರ್ಷದ ಮೇ 15ರಂದು ಕೌನ್ಸಿಲ್‌ನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಯಿತು.

Advertisement

ಇದಾದ ನಂತರ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾಗೆ ಸುಧಾರಣೆ ತರಲು ಸಾರ್ವಜನಿಕರ ಆಗ್ರಹ ಕೇಳಿಬಂತು. ಸುಪ್ರೀಂ ಕೋರ್ಟ್‌ ಸಹ ಮೇ 2016ರಲ್ಲಿ ಮಧ್ಯ ಪ್ರವೇಶಿಸಿ ಕೌನ್ಸಿಲ್‌ಗೆ ಅಗತ್ಯ ಕಾನೂನು ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು. ಅದರ ಫ‌ಲಶ್ರುತಿಯೇ ಈಗ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ. ನೀತಿ ಆಯೋಗದ ಶಿಫಾರಸಿನಂತೆ ಆಮೂಲಾಗ್ರ ತಿದ್ದುಪಡಿಯೊಂದಿಗೆ ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ ಬದಲಿಗೆ ನ್ಯಾಷನಲ್‌ ಮೆಡಿಕಲ್‌ ಕೌನ್ಸಿಲ್‌ ಸ್ಥಾಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಹೊಸ ಕಾಯ್ದೆಯನ್ನು ಒಪ್ಪಿಗೆಗಾಗಿ ಮಂಡಿಸಲಾಗಿದೆ.

ಈಗಿನ ಮೆಡಿಕಲ್‌ ಕೌನ್ಸಿಲ್‌ನಲ್ಲಿ ಪ್ರತಿ ರಾಜ್ಯದಿಂದ ಒಬ್ಬ ನಾಮನಿರ್ದೇಶಿತ ಸದಸ್ಯರ ಲೆಕ್ಕದಲ್ಲಿ 25 ಸದಸ್ಯರು, ಪ್ರತಿ ಯೂನಿವರ್ಸಿಟಿಗಳಿಂದ ಒಬ್ಬ ಚುನಾಯಿತ ಸದಸ್ಯರಂತೆ 51, ಕೇಂದ್ರಾಡಳಿತ ಪ್ರದೇಶದಿಂದ ಒಬ್ಬ ಚುನಾಯಿತ ಸದಸ್ಯ, ರಾಜ್ಯದ ನೋಂದಾಯಿತ ವೃತ್ತಿಪರ ವೈದ್ಯಕೀಯ ವಿದ್ಯಾರ್ಹತೆ ಹೊಂದಿರುವ 19 ಸದಸ್ಯರು ಮತ್ತು ಕೇಂದ್ರ ಸರ್ಕಾರ ನಾಮನಿರ್ದೇಶಿತ 8 ಸದಸ್ಯರು ಸೇರಿದಂತೆ ಒಟ್ಟಾಗಿ 104 ಗಜಗಾತ್ರದ ಸದಸ್ಯರ ಸಮಿತಿ ಕಾರ್ಯಪ್ರವೃತ್ತವಾಗಿತ್ತು.

ಪದವಿ ಮತ್ತು ಸ್ನಾತಕೊತ್ತರ ವೈದ್ಯಕೀಯ ಶಿಕ್ಷಣದಲ್ಲಿ ದೇಶಾದ್ಯಂತ ಏಕರೂಪದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಅಂಗೀಕೃತ ಸಂಸ್ಥೆ ಗಳಲ್ಲಿನ ವೈದ್ಯ ಪದವೀಧರರನ್ನು ರಾಷ್ಟ್ರೀಯ ಮೆಡಿಕಲ್‌ ರಿಜಿಸ್ಟರ್‌ನಲ್ಲಿ ಹೆಸರು ನೋಂದಾಯಿಸುವುದು ಮತ್ತು ಅವರು ವೈದ್ಯವೃತ್ತಿ ಮುಂದುವರೆಸಲು ಪರವಾನಗಿ ನೀಡುವುದು. ವೈದ್ಯವೃತ್ತಿಗೆ ಸಂಬಂಧಿಸಿದ ನೀತಿಸಂಹಿತೆ ರಚಿಸುವುದು ಮತ್ತು ತಪ್ಪಿತಸ್ಥ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸುವುದು, ಭಾರತದ ಅಥವಾ ದೇಶದ ವೈದ್ಯಕೀಯ ಸಂಸ್ಥೆಗಳು ನೀಡುವ ವೈದ್ಯ ಪದವಿಗಳ ಅಂಗೀಕಾರ ಅಥವಾ ತಿರಸ್ಕಾರಕ್ಕೆ ಶಿಫಾರಸು ಮಾಡುವುದು, ಹೊಸ ಕಾಲೇಜು, ಹೊಸ ಕೋರ್ಸ್‌ ಮತ್ತು ಸೀಟುಗಳ ಸಂಖ್ಯೆಯ ಹೆಚ್ಚು ಕಡಿಮೆ ಮಾಡಲು ಪರವಾನಗಿ ನೀಡುವುದು ಕೌನ್ಸಿಲ್‌ನ ಮುಖ್ಯ ಉದ್ದೇಶಗಳು.

ನೀತಿ ಆಯೋಗದ ಉಪಾಧ್ಯಕ್ಷರ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯಿಂದ ಹೊಸ ಮಸೂದೆ ರಚಿಸಲಾಗಿದೆ. ಬರಲಿರುವ ರಾಷ್ಟ್ರೀಯ ವೈದ್ಯ ಆಯೋಗದಲ್ಲಿ ಸದಸ್ಯರ ಸಂಖ್ಯೆ ಕೇವಲ 25. ಇದರಲ್ಲಿ ಕೇಂದ್ರ ಸರ್ಕಾರ ನೇಮಿಸಿದ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿದ ವೈದ್ಯ ಕ್ಷೇತ್ರದ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಯೊಂದಿಗೆ 12 ಅಧಿಕಾರೇತರರ ನಾಮಕರಣವಾಗುತ್ತದೆ. ನಾಲ್ವರು ವೈದ್ಯ ಯೂನಿವರ್ಸಿಟಿಗಳ ಉಪಕುಲಪತಿಗಳು ಅಥವಾ ಅವರು ನಾಮನಿರ್ದೇಶಿಸಿದ ಸದಸ್ಯ, ಆರು ಜನ ಎಐಐಎಂಎಸ್‌, ಪಿಜಿಐಎಂಇಆರ್‌ ಮತ್ತು ಟಾಟಾ ಮೆಮೋರಿಯಲ್‌ ಆಸ್ಪತ್ರೆ ಮುಂತಾದ ಪ್ರತಿಷ್ಟಿತ ಸಂಸ್ಥೆಗಳ ನಿರ್ದೇಶಕರು ಒಳಗೊಳ್ಳುತ್ತಾರೆ. ಹನ್ನೊಂದು ಜನ ಕಾಲಮಿತಿ ಸದಸ್ಯರು ಕೂಡ ಸಮಿತಿಯಲ್ಲಿರುತ್ತಾರೆ. ಈ ಹನ್ನೊಂದರಲ್ಲಿ ಮೂರು ಜನ ವೈದ್ಯಕೀಯ ಸಲಹಾ ಸಂಸ್ಥೆಗಳ ಪ್ರತಿನಿಧಿಗಳು, ಐದು ವೃತ್ತಿನಿರತ ವೈದ್ಯರು, ಮೂರು ಕಾನೂನು, ಗ್ರಾಹಕ ತಸಂರಕ್ಷಣಾ ವೇದಿಕೆ, ಮಾಹಿತಿ ತಂತ್ರಜಾnನ, ಸಂಶೋಧನೆ ಮತ್ತು ಅರ್ಥಶಾಸ್ತ್ರ ಪರಿಣಿತರನ್ನು ಒಳಗೊಳ್ಳಬೇಕಾಗುತ್ತದೆ. ಅಂದರೆ ಸಮಿತಿಯಲ್ಲಿ ಸುಮಾರು 16-21 ಸದಸ್ಯರು ವೈದ್ಯಕೀಯ ಪರಿಣಿತರೇ ಇರುತ್ತಾರೆ. ಕಾಲಕ್ಕೆ ತಕ್ಕಂತೆ ಯೋಗ್ಯವಾದ ಮತ್ತು ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಅನುವಾಗುವಂತೆ ಸಣ್ಣ ಸಮಿತಿ ರಚಿಸಲಾಗಿದೆ. ಈ ಆಯೋಗ ವೈದ್ಯಕೀಯ ಶಿಕ್ಷಣದಲ್ಲಿ  ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವ ಮತ್ತು ಗ್ರಾಮೀಣ ಭಾಗದಲ್ಲಿ ಅಲೋಪತಿ ವೈದ್ಯರ ಕೊರತೆ ತುಂಬುವ ಮುಖ್ಯ ಗುರಿಯನ್ನು ಪೂರೈಸಬೇಕಿದೆ. ಆದರೆ ಅದಕ್ಕೆ ಆರಂಭದಲ್ಲಿಯೇ ಭರಪೂರ ಸಮಸ್ಯೆಗಳು ಎದುರಾಗಿವೆ.

ಈಗ ದೇಶದಲ್ಲಿ ಸುಮಾರು ಏಳು ಲಕ್ಷ ಅಲೋಪತಿ ವೈದ್ಯರಿದ್ದಾರೆ. ಅವರಿಗೆ ಉದ್ಯೋಗ ಸಮಸ್ಯೆಯಲ್ಲ. ಅವರಿಗೆ ವೇತನವಗೈರೆ ಕೊಟ್ಟು ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಮಾತ್ರ ಆಗುತ್ತಿಲ್ಲ. ಇದೇ ವೇಳೆ ದೇಶದಲ್ಲಿರುವ ಸುಮಾರು 7.71 ಲಕ್ಷ ಸಂಖ್ಯೆಯಲ್ಲಿರುವ ಆಯುರ್ವೇದ, ಹೋಮಿಯೋಪತಿ, ಯೋಗ, ಯುನಾನಿ ಮತ್ತು ಸಿದ್ಧ ಒಳಗೊಂಡ ಆಯುಷ್‌ ವೃತ್ತಿಪರ ಪದವೀಧರರಿಗೆ ಹೇಳುವ ಮಟ್ಟಿಗೆ ಕೆಲಸವಿಲ್ಲ. ಅವರಲ್ಲಿ ಹಲವರು ಈಗಾಗಲೇ ಪ್ರಾಥಮಿಕ ಹಂತದ ರೋಗಗಳಿಗೆ ಅಲೋಪತಿಯ ಔಷಧಗಳನ್ನು ಕೊಡುತ್ತಿದ್ದಾರೆ ಮತ್ತು ಅದು ವೈದ್ಯ ಕೊರತೆಯನ್ನು ತುಸು ಪ್ರಮಾಣದಲ್ಲಿ ನಿವಾರಿಸಿದೆ.

ಈ ಅಂಶವನ್ನು ಗಮನಿಸಿರುವ ನೀತಿ ಆಯೋಗ, ಇವರಿಗೆ “ಅಲೋಪಥಿಕ್‌ ಬ್ರಿಜ್‌ ಕೋರ್ಸ್‌’ ನೀಡಿ ಅವರನ್ನು ಗ್ರಾುàಣ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಅಲೋಪತಿ ಔಷಧಿ ಬರೆಯಲು ಅನುಮತಿ ನೀಡುವ ಪ್ರಸ್ತಾಪ ಇಟ್ಟಿದೆ.

ವಿಚಿತ್ರವೆಂದರೆ, ತಮಗೆ ಯಾವ ರೀತಿಯಲ್ಲೂ ವೃತ್ತಿ ಧಕ್ಕೆ ಆಗದಿದ್ದರೂ ಖಾಸಗಿ ವೈದ್ಯರು ಇದನ್ನು ವಿರೋಧಿಸುತ್ತಿದ್ದಾರೆ. ಇದರರ್ಥ, ಜಾರಿಗೊಳ್ಳುವ ಎನ್‌ಎಂಸಿ ಕೌನ್ಸಿಲ್‌ನಲ್ಲಿ ಈ ಸಲಹೆಗೆ ಮಂಜೂರಾತಿ ಕಷ್ಟ. 20 ಜನ ಆಲೋಪತಿ ವೈದ್ಯರಿರುವುದರಿಂದ ಅವರ ಸರ್ವಾನುಮತದ ಒಪ್ಪಿಗೆ ಇಲ್ಲದೆ ಇದು ಸಾಧ್ಯವಿಲ್ಲ. ದೇಶದ ಖಾಸಗಿ ಮತ್ತು ಸ್ವಾಯತ್ತ ಮೆಡಿಕಲ್‌ ಕಾಲೇಜುಗಳಲ್ಲಿ ಶೇ. 40ರಷ್ಟು ಸೀಟುಗಳಿಗೆ ಮೀರದಂತೆ ಶುಲ್ಕ ನಿಗದಿಪಡಿಸಲು ನಿಯಮಾವಳಿಗಳನ್ನು ರಚಿಸುವ ಅಧಿಕಾರವನ್ನು ಎನ್‌ಎಂಸಿ ಕಾಯ್ದೆ ಕರಡಿನಲ್ಲಿ ಹೇಳಲಾಗಿದೆ. ಸಾಮಾನ್ಯ ಬಡ ವಿದ್ಯಾರ್ಥಿಗಳು ಪ್ರತಿಷ್ಟಿತ ಕಾಲೇಜಿನಲ್ಲಿ ಅತಿ ಹೆಚ್ಚು ಡೊನೇಷನ್‌ ಪಾವತಿಸಿ ಸೀಟು ಪಡೆಯುವುದು ಕನಸೇ ಆಗಿರುವ ಹಿನ್ನೆಲೆಯಲ್ಲಿ ಶೇ. 40ರಷ್ಟು ಸೀಟು ಸಾಮಾಜಿಕ ನ್ಯಾಯದ ದರದಲ್ಲಿ ಸಿಗುತ್ತದೆ ಎಂಬ ಆಶಯ ವ್ಯಕ್ತವಾಗಿದೆ. ಆದರೆ ಗರಿಷ್ಠ ಎಂಬುದು ಕೇವಲ ಶೇ. 5, 10ರಷ್ಟಕ್ಕೆ ಮಾತ್ರ ದರ ನಿಗದಿಪಡಿಸುವ ಸೂತ್ರವನ್ನು ಹೇಳಿಕೊಡುವುದಿಲ್ಲವೇ?

ವೈದ್ಯರ ಅನೈತಿಕ ವೃತ್ತಿ, ವೃತ್ತಿಯ ಸೇವಾ ನ್ಯೂನ್ಯತೆಗಳಲ್ಲಿ ತನಿಖೆ ಕೈಗೊಳ್ಳಲು ಮತ್ತು ಶಿಕ್ಷೆ ವಿಧಿಸಲು ಸ್ವಾಯತ್ತ ಮೆಡಿಕಲ್‌ ಬೋರ್ಡ್‌ ಮಾದರಿಯ ಸಂಸ್ಥೆಯೊಂದನ್ನು ರಚಿಸಲು ಹೊಸ ಎನ್‌ಎಂಸಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಸಲಹೆಯೂ ಇದೆ. ಹೊಸ ಕಾಯ್ದೆಯ ಪ್ರಕಾರ, ವೈದ್ಯಕೀಯ ಆಯೋಗಕ್ಕೆ ಪದವಿಯ ಹೊಸ ಕಾಲೇಜು ನಿಯಮಾನುಸಾರ ಸ್ಥಾಪನೆ, ಅಧಿಕೃತಗೊಳಿಸಲು ಮಾತ್ರ ಅಧಿಕಾರವಿದೆ. ಕಾಲೇಜು ಸ್ಥಾಪನೆಯಲ್ಲಿ ನಿಯಮಗಳನ್ನು ಪಾಲಿಸದಿದ್ದರೆ ಕನಿಷ್ಠ ದಂಡ. ಕಾಲೇಜುಗಳು ಸ್ವಯಂ ತಾವಾಗಿಯೇ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಎನ್‌ಎಂಸಿಯ ಅನುಮತಿ ಕಡ್ಡಾಯವಿಲ್ಲ ಎಂಬ ರಿಯಾಯ್ತಿ ನಿಯಮಗಳ ಪ್ರಕಾರ ಹೆಚ್ಚು ವೈದ್ಯರನ್ನು ಉತ್ಪಾದನೆ ಮಾಡುವ ಸೂತ್ರ ಕಾಣಬಹುದೇ ವಿನಃ ಗುಣಮಟ್ಟದ ಹಿಂದೆ ಎನ್‌ಎಂಸಿ ಹೋದಂತೆ ಕಾಣುವುದಿಲ್ಲ.

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next