Advertisement

ರಾಷ್ಟ್ರೀಯ ಹೆದ್ದಾರಿ ಮರಣ ಗುಂಡಿಗಳ ತಾಣ 

06:00 AM Aug 11, 2018 | |

ಕಾಸರಗೋಡು: ಚತುಷ್ಪಥ ರಸ್ತೆಯ ಕನಸು ಕಾಣುತ್ತಿರುವ ಕಾಸರಗೋಡಿನ ಜನರು ರಾಷ್ಟ್ರೀಯ ಹೆದ್ದಾರಿ-66 ರ ಶೋಚನೀಯ ಸ್ಥಿತಿಯನ್ನು ನೋಡುತ್ತಿದ್ದಾರೆ. 

Advertisement

ತಲಪಾಡಿಯಿಂದ ಆರಂಭಿಸಿ ಕಾಸರಗೋಡು ತನಕ ರಸ್ತೆಯುದ್ದಕ್ಕೂ ಮರಣಗುಂಡಿಗಳು ಸೃಷ್ಟಿಯಾಗಿದ್ದು ಭಯ ಹುಟ್ಟಿಸುತ್ತಿದೆ. ಸಂಪೂರ್ಣ ಹದಗೆಟ್ಟ  ರಸ್ತೆಯಲ್ಲಿನ ಭೀಮ ಗಾತ್ರದ ಹೊಂಡಗಳು ವಾಹನ ಸವಾರರಿಗೆ ಪ್ರಾಣ ಭೀತಿ ತಂದಿಟ್ಟಿವೆ. 

ಮೂರು ವರ್ಷಗಳ ಹಿಂದೆ ಟಾರಿಂಗ್‌ ಮೂಲಕ ಹೊಸ ಛಾಯೆ ಮೂಡಿಸಿದ್ದ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚಾರ ನಡೆಸುತ್ತಿದ್ದು, ಪ್ರಸ್ತುತ ಮಳೆಗಾಲದ ವೇಳೆ ಸಂಪೂರ್ಣ ಹದಗೆಟ್ಟ ಹೆದ್ದಾರಿಯಲ್ಲಿ ಸುಗಮ ರಸ್ತೆ ಸಂಚಾರ ಗಗನ ಕುಸುಮವಾಗಿದೆ.

ಕಾಡಿದ ಮಳೆಗೆ ಹದಗೆಟ್ಟ ರಸ್ತೆ
ಕರ್ನಾಟಕದಿಂದ ಕೇರಳಕ್ಕೆ ಸಾಗುವ ಗಡಿ ಪ್ರದೇಶವಾದ ತಲಪಾಡಿಯಿಂದ ಕಾಸರಗೋಡು ತನಕದ 34 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯು ಮಳೆ ಆರ್ಭಟಕ್ಕೆ ಸಂಪೂರ್ಣ ಹದಗೆಟ್ಟಿದ್ದು, ಘನ ವಾಹನ, ದ್ವಿಚಕ್ರ ವಾಹನ ಸಹಿತ ವಾಹನಗಳ ಸಂಚಾರ ಸವಾಲೇ ಸರಿ. ರಸ್ತೆಯಲ್ಲಿ ಸೃಷ್ಟಿಯಾಗಿರುವ ಮರಣಗುಂಡಿಗಳಿಂದಾಗಿ ಪ್ರತಿದಿನ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಈಗಾಗಲೇ ಹಲವಾರು ಅಮಾಯಕರು ಬಲಿಯಾಗಿದ್ದಾರೆ. ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 16 ದಿನಗಳಲ್ಲಿ ಒಟ್ಟು 9 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
 
ಪ್ರತಿಭಟನೆಗಿಲ್ಲ ತುರ್ತು ಸ್ಪಂದನೆ
ರಸ್ತೆಯ ಶೋಚನೀಯ ಸ್ಥಿತಿಯನ್ನು ಪರಿಹರಿಸಬೇಕೆಂದು ಹಲವು ಬಾರಿ ಲೋಕೋಪಯೋಗಿ ಇಲಾಖೆ ಮತ್ತು ಜನಪ್ರತಿನಿಧಿಗಳಲ್ಲಿ ವಿನಂತಿಸಿದರೂ ಯಾವುದೇ ಫಲಪ್ರದ ಬದಲಾವಣೆಗಳು ನಡೆದಿಲ್ಲ. ರಸ್ತೆ ದುಸ್ಥಿತಿಯನ್ನು ವಿರೋಧಿಸಿ ಸ್ಥಳೀಯ ಸಂಘ ಸಂಸ್ಥೆಗಳು ಸಹಿತ    ರಾಜಕೀಯ ಪಕ್ಷಗಳು ಪ್ರತಿಭಟನೆಗಳನ್ನು ನಡೆಸಿದ್ದರೂ ಪ್ರಯೋಜನವಾಗಿಲ್ಲ. ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ನೇತೃತ್ವದಲ್ಲಿ ಲೋಕೋಪಯೋಗಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆದಿದೆ. ಬಿಎಂಎಸ್‌ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಿದ್ದಾರೆ. ಇಂತಹ ಯಾವುದೇ ಪ್ರತಿಭಟನೆಗೂ ಸಂಬಂಧಪಟ್ಟವರು ಸ್ಪಂದಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ರಸ್ತೆ ಅಗಲೀಕರಣಕ್ಕೆ ಮುಂದಿನ ತಿಂಗಳಲ್ಲಿ ಗುತ್ತಿಗೆ ನೀಡುವ ಕಾರಣ ದುರಸ್ತಿ ಕಾರ್ಯಕೈಗೊಂಡಿಲ್ಲ ಎನ್ನಲಾಗುತ್ತಿದೆ.

80 ಕಿ.ಮೀ. ರಸ್ತೆಯ 
30 ಕಿ.ಮೀ. ವ್ಯಾಪ್ತಿಯಲ್ಲಿ ಹೊಂಡಗಳು

ಸಾರ್ವಜನಿಕರ ಅಹವಾಲುಗಳನ್ನು ಗಮನದಲ್ಲಿರಿಸಿ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ  ವಿಭಾಗವು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ 95 ಲಕ್ಷ ರೂ. ಮೀಸಲಿರಿಸಲಿದ್ದು, ಶೀಘ್ರವೇ  ಹೆದ್ದಾರಿಯ ಗುಂಡಿ ಮುಚ್ಚುವ ಕಾರ್ಯವನ್ನು ನಡೆಸಲಿದೆ ಎಂದು ತಿಳಿಸಿದೆ. ಒಟ್ಟು 80 ಕಿ.ಮೀ.  ರಾಷ್ಟ್ರೀಯ ಹೆದ್ದಾರಿಯು ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಇದರಲ್ಲಿ 30 ಕಿ.ಮೀ. ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ. 

Advertisement

ತಲಪಾಡಿಯಿಂದ ಉಪ್ಪಳ – 12 ಕಿ.ಮೀ. ರಸ್ತೆ, ಮೊಗ್ರಾಲ್‌ನಿಂದ ಕಾಸರಗೋಡು -10 ಕಿ.ಮೀ., ನೀಲೇಶ್ವರದಿಂದ ಕಾಲಿಕಡವಿನ – 10 ಕಿ.ಮೀ. ರಸ್ತೆ ಸಂಪೂರ್ಣ ಹೊಂಡಗಳಿಂದ ಆವೃತವಾಗಿದೆ. ಈ ರಸ್ತೆಗಳಲ್ಲಿ 2013ರಲ್ಲಿ ಟಾರಿಂಗ್‌ ನಡೆಸಲಾಗಿತ್ತು, ಆದರೆ ಅವುಗಳ ಕಾಲಾವಧಿ 2016ಕ್ಕೆ ಮುಗಿದಿದೆ ಎನ್ನುತ್ತಾರೆ ಅಧಿಕಾರಿಗಳು. ಸಾಮಾನ್ಯವಾಗಿ ಮೂರು ವರ್ಷಕ್ಕೊಮ್ಮೆ ಟಾರಿಂಗ್‌ಕಾರ್ಯ ನಡೆಯುತ್ತದೆ. 2016ರಲ್ಲಿ ರಾ. ಹೆದ್ದಾರಿಯ ಚತುಷ್ಪಥ ನಿರ್ಮಾಣ ಅನುಮತಿ ನೀಡಲ್ಪಟ್ಟ ಕಾರಣ ಟಾರಿಂಗ್‌ ಕಾರ್ಯಕ್ಕೆ ಪ್ರತ್ಯೇಕ ಹಣ ಮೀಸಲಿಟ್ಟಿರಲಿಲ್ಲ ಎನ್ನಲಾಗಿದೆ.

ಟೆಂಡರ್‌ ಹಂಚಿಕೆ
ಎಂಟು ರೀಚ್‌ಗಳಲ್ಲಿ  ಟೆಂಡರ್‌ ನೀಡಲಾಗಿದೆ. ತಲಪಾಡಿ – ಉಪ್ಪಳ, ಉಪ್ಪಳ – ಪೆರುವಾಡ್‌, ಪೆರುವಾಡ್‌ – ಪನ್ನಿಕುನ್ನು, ಪನ್ನಿಕುನ್ನು – ಎರಿಯಾಲ್‌ ಸೇತುವೆ, ಎರಿಯಾಲ್‌ ಸೇತುವೆ- ಅಣಂಗೂರು, ಅಣಂಗೂರು – ಚಟ್ಟಂಚಾಲ್‌, ನೀಲೇಶ್ವರ ಪೋಲೀಸ್‌ ಸ್ಟೇಷನ್‌- ಚೆರುತ್ತೂರು ಚೆಕ್‌ಪೋಸ್ಟ್‌, ಚೆರುವತ್ತೂರು ಚೆಕ್‌ಪೋಸ್ಟ್‌ – ಕಾಲಿಕ್ಕಡವ್‌ ಎಂಬೀ ರೀಚ್‌ಗಳಲ್ಲಿ ಹೊಂಡ ಗುಂಡಿಗಳನ್ನು  ದುರಸ್ತಿ  ಮಾಡಲು 1.35 ಕೋಟಿ ರೂ. ಗಳನ್ನು  ಮಂಜೂರು ಮಾಡಲಾಗಿದೆ. ಈಗಾಗಲೇ 70 ಲಕ್ಷ  ರೂ. ಗಳನ್ನು  ಮಂಜೂರು ಮಾಡಿದ್ದರೂ ಟೆಂಡರ್‌ ನಡೆಸಲು ಗುತ್ತಿಗೆದಾರರು ಬಂದಿಲ್ಲ. ಈ ಸಂಬಂಧ ರಾಜ್ಯ ಸರಕಾರವು ಸ್ಥಳೀಯ ನಿಧಿಯಿಂದ 1.35 ಕೋಟಿ ರೂ. ಗಳನ್ನು  ಮಂಜೂರು ಮಾಡಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ದುರಸ್ತಿಗಾಗಿ ಇದೀಗ ಅನುದಾನ ಮಂಜೂರುಗೊಳಿಸುತ್ತಿಲ್ಲ. ಆದುದರಿಂದ ರಾಜ್ಯ ಸರಕಾರವು ತನ್ನ  ಸ್ವಂತ ಅನುದಾನವನ್ನು  ಒದಗಿಸ ಬೇಕಾಗಿದೆ. ಹೆದ್ದಾರಿ ದುರಸ್ತಿ  ವಿಚಾರದಲ್ಲಿ  ಅಧಿಕಾರಿಗಳ ಲೋಪಗಳನ್ನು  ಸಭೆಯಲ್ಲಿ  ಚರ್ಚಿಸಲಾಯಿತು. ಅಲ್ಲದೆ ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು.

ಮಳೆಯ ಮೊದಲು ದುರಸ್ತಿ  ಕಾಮಗಾರಿಯನ್ನು  ಮುಗಿಸಿರುತ್ತಿದ್ದರೆ ರಸ್ತೆ  ಇಷ್ಟೊಂದು ಹದಗೆಟ್ಟು  ಹೋಗುತ್ತಿರಲಿಲ್ಲ. ರಸ್ತೆ ನಿರ್ಮಾಣದಲ್ಲಿನ ಲೋಪದಿಂದ ರಸ್ತೆ  ಹಾನಿಗೀಡಾಗಲು ಕಾರಣವಾಗಿದೆ. ಚತುಷ್ಪಥ ಅಭಿವೃದ್ಧಿ  ವಿಳಂಬಗೊಳಿಸಿದರೆ ಹೋರಾಟ ನಡೆಸುವುದು ಅನಿವಾರ್ಯ ಎಂಬುದನ್ನು  ಸಭೆಯಲ್ಲಿ  ಕೆಲವು ಜನಪ್ರತಿನಿಧಿಗಳು ಎಚ್ಚರಿಕೆ ನೀಡಿದರು. ತಲಪಾಡಿ – ಕಾಲಿಕ್ಕಡವ್‌ ಹೆದ್ದಾರಿ ಅಭಿವೃದ್ಧಿಗಾಗಿ 32 ಕೋಟಿ ರೂ. ಗಳ ಯೋಜನೆ  ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು    ವಿವರಿಸಿದರು.  ಕೇರಳ ದಲ್ಲಿ  ರಾ. ಹೆದ್ದಾರಿ ಅಭಿವೃದ್ಧಿಯನ್ನು  ಕೇಂದ್ರ ಸರಕಾರವು ನಿರ್ದೇಶಿಸಿದ ವೇಗದಲ್ಲಿ  ಜಾರಿಗೊಳಿಸಲು ಸಾಧ್ಯವಾಗದು. ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಹಳಷ್ಟು  ಹೊಂಡಗಳಿವೆ. ಅವುಗಳನ್ನು ಭ‌ರ್ತಿ ಮಾಡಿ ಸಂಚಾರಯೋಗ್ಯವನ್ನಾಗಿ ಮಾಡಲು ಕಳೆದ ಮೇ ತಿಂಗಳಲ್ಲೇ ನಿರ್ದೇಶಿಸಲಾಗಿತ್ತು  ಎಂದು ಸಭೆಯಲ್ಲಿ ವಿವರಿಸಲಾಯಿತು.

ಶಾಸಕರಾದ ಎನ್‌.ಎ. ನೆಲ್ಲಿಕುನ್ನು, ಕೆ. ಕುಂಞಿರಾಮನ್‌, ಪಿ.ಬಿ. ಅಬ್ದುಲ್‌ ರಝಾಕ್‌, ಎಡಿಎಂ ಎನ್‌. ದೇವಿದಾಸ್‌, ಆರ್‌ಡಿಒ ಅಬ್ದುಲ್‌ ಸಮದ್‌, ವಿವಿಧ‌ ಜನಪ್ರತಿನಿಧಿಗಳು, ರಾಷ್ಟ್ರೀಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಇತರರು ಸಭೆಯಲ್ಲಿ  ಉಪಸ್ಥಿತರಿದ್ದರು.

ರಸ್ತೆ ಅಗಲಗೊಳಿಸಲು ಟಾರಿಂಗ್‌ಗೆ ತಡೆ
ರಸ್ತೆ ನಿರ್ವಹಣೆಯ ಕಾರ್ಯ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಟಾರಿಂಗ್‌ಗೆ ಗುತ್ತಿಗೆ ನೀಡಲಾಗಿತ್ತು. ಲೋಕೋಪಯೋಗಿ ಇಲಾಖೆಯ ರಾ.ಹೆ. ವಿಭಾಗ ರಸ್ತೆ ಚತುಷ್ಪಥ  ಹಾಗೂ ಅಗಲೀಕರಣ ಮಾಡುವ ನಿಟ್ಟಿನಲ್ಲಿ ಟಾರಿಂಗ್‌ ಮಾಡಲು ಒಪ್ಪಿಗೆ ಸೂಚಿಸಲಿಲ್ಲ. ಮಳೆಗಾಲದ ಅನಂತರವಷ್ಟೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಗುತ್ತಿಗೆ ಪಡೆದ ಯಾರೂ ರಸ್ತೆ ಕಾಮಗಾರಿಯನ್ನು ಮಳೆಗಾಲದಲ್ಲಿ ಕೈಗೆತ್ತಿಕೊಳ್ಳುವುದಿಲ್ಲ. ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿತ್ತು. ಆದರೆ ಅಧಿಕಾರಿಗಳು ಏನೂ ಮಾಡಿಲ್ಲ.

ಅಪಘಾತ‌ ಹೆಚ್ಚಳ
ಮಳೆಗಾಲದ ವೇಳೆ ರಾ. ಹೆದ್ದಾರಿ ಯಲ್ಲಿ ರಸ್ತೆ ಅಪಘಾತಗಳು ಹೆಚ್ಚಿವೆ. ಕಳೆದ 16 ದಿನಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಹಲವು ಮಂದಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹಂತಗಳಲ್ಲಿ ದುರಸ್ತಿ
ತಲಪಾಡಿಯಿಂದ ಕಾಲಿಕ್ಕಡವ್‌ವರೆಗೆ ಹಲವು ಹಂತಗಳಲ್ಲಿ ದುರಸ್ತಿ ಕಾಮಗಾರಿ ನಡೆಸಲು ಒಂದೂವರೆ ತಿಂಗಳ ಹಿಂದೆ 1.35 ಕೋಟಿ ರೂ.  ಮಂಜೂರು ಮಾಡಿದ್ದಾಗಿ ಸಚಿವ ಜಿ. ಸುಧಾಕರನ್‌ ಹೇಳಿದ್ದಾರೆ. ಎಲ್ಲ  ಕಾಮಗಾರಿಗಳಿಗೆ ಜೂ. 22ರಂದು ಆಡಳಿತಾನುಮತಿ ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿವೆ. ಆದರೆ ನಾಲ್ಕು ಗುತ್ತಿಗೆದಾರರಿಂದ ಪ್ರತಿಕ್ರಿಯೆ ಲಭಿಸಲಿಲ್ಲ. ಇದರಿಂದ ಮರು ಟೆಂಡರ್‌ ಮಾಡಿ ಕಾಮಗಾರಿ ನಡೆಸಬೇಕಾಗಿದೆ.

ಆ.31ರೊಳಗೆ ದುರಸ್ತಿ!
ತಲಪಾಡಿ – ಕಾಲಿಕ್ಕಡವ್‌ ರಾ.ಹೆ.ದುರಸ್ತಿ  ಕಾಮಗಾರಿಯನ್ನು  ಆ. 31ರೊಳಗೆ ಪೂರ್ತಿಗೊಳಿಸಲು ಕಾಸರ ಗೋಡು ಸಂಸದ ಪಿ. ಕರುಣಾ ಕರನ್‌ ಅಧ್ಯಕ್ಷತೆ ಯಲ್ಲಿ  ಕಾಸರಗೋಡಿ ನಲ್ಲಿ  ಜರಗಿದ ಸಭೆ ಯಲ್ಲಿ  ನಿರ್ಣಯ ಕೈಗೊಳ್ಳಲಾಗಿದೆ.

ಹೊಂಡಗಳು ಎಲ್ಲೆಲ್ಲಿ ಎಷ್ಟೆಷ್ಟು?
ಹೆದ್ದಾರಿ ರಸ್ತೆ ಹೊಂಡ-ಗುಂಡಿಗಳ ಸಂಖ್ಯೆ 500 ದಾಟಿವೆ. ಕಾಸರ ಗೋಡು ಹೊಸ ಬಸ್ಸು ನಿಲ್ದಾಣದಿಂದ – ಅಶ್ವಿ‌ನಿ ನಗರ-16, ಅಶ್ವಿ‌ನಿ ನಗರದಿಂದ ಕರಂದಕ್ಕಾಡು-17, ಕರಂದಕ್ಕಾಡು-ತಾಳಿಪಡು³-52, ತಾಳಿಪಡು³-ಎರಿಯಾಲ್‌-22, ಎರಿಯಾಲ್‌ ಸೇತುವೆಯಿಂದ ಪೆಟ್ರೋಲ್‌ ಬಂಕ್‌-30, ಎರಿಯಾಲ್‌ – ಮೊಗ್ರಾಲ್‌ಪುತ್ತೂರು- 53, ಮೊಗ್ರಾಲ್‌ಪುತ್ತೂರು-ಮೊಗ್ರಾಲು ಪೇಟೆ-98, ಮೊಗ್ರಾಲು ಪೇಟೆ ಯಿಂದ – ಕುಂಬಳೆ ಪೇಟೆ-55, ಕುಂಬಳೆ ಪೇಟೆ- ಕುಂಬಳೆ ಸೇತುವೆ-11, ಕುಂಬಳೆ ಸೇತುವೆಯಿಂದ – ಬಂದ್ಯೋಡು- 20, ಬಂದ್ಯೋಡು-ಉಪ್ಪಳ ಗೇಟ್‌-11, ಉಪ್ಪಳ ಗೇಟ್‌ನಿಂದ – ಹೊಸಂಗಡಿ-16, ಹೊಸಂಗಡಿ – ಮಂಜೇಶ್ವರ-49, ಮಂಜೇಶ್ವರ- ಉದ್ಯಾವರ (ಕುಂಜತ್ತೂರು)-18, ಕುಂಜತ್ತೂರು – ತಲಪಾಡಿ-32 ಎಂಬಂತೆ ಹೊಂಡಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next