Advertisement

ಕೆಂಡದಂತ ಬಿಸಿಲಿಗೆ ನಾರಾಯಣಪುರ ಡ್ಯಾಂ ಬರಿದು

12:00 PM Mar 21, 2017 | Team Udayavani |

ಯಾದಗಿರಿ: ಬರಗಾಲ ಹಾಗೂ ಕೆಂಡದಂತಹ ಬಿಸಿಲಿಗೆ ನಾರಾಯಣಪುರ ಜಲಾಶಯ ತಳಕಂಡಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇನ್ನೊಂದೆಡೆ ಕೃಷಿ ಚಟುವಟಿಕೆಗೂ ನೀರಿಲ್ಲದೆ ರೈತರು ಆತಂಕ
ಎದುರಿಸುತ್ತಿದ್ದಾರೆ. ಕೃಷ್ಣಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯ ನಿರ್ಮಿಸಲಾಗಿದೆ. ಯಾದಗಿರಿ,
ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಯ ಸುಮಾರು 5.50 ಲಕ್ಷ ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರು ಒದಗಿಸುವ ಜಲಾಶಯ ಈಗ ಬಹುತೇಕ ಬರಿದಾಗಿದ್ದು, ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ರೈತರು ಕಂಗಲಾಗಿದ್ದಾರೆ.

Advertisement

ಅರ್ಧಕ್ಕಿಂತ ಕಡಿಮೆ: ಬಸವಸಾಗರ ಜಲಾಶಯ 33.313 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಈಗ ಜಲಾಶಯದಲ್ಲಿ 15.593 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 14.942 ಟಿಎಂಸಿ ನೀರಿನ ಸಂಗ್ರಹವಿತ್ತು. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ನೀರಿನ ಪ್ರಮಾಣ ಕೊಂಚ ಜಾಸ್ತಿಯಿದ್ದರೂ ಸದ್ಯ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ಕುಡಿಯಲು ಹಾಗೂ ರಾಯಚೂರಿನಲ್ಲಿರುವ ಶಾಖೋತ್ಪನ್ನ ಕೇಂದ್ರಕ್ಕೆ
(ಆರ್‌ಟಿಪಿಎಸ್‌) ವಿದ್ಯುತ್‌ ಉತ್ಪಾದನೆಗಷ್ಟೇ ಬಳಸಲು ನಿರ್ಧರಿಸಲಾಗಿದೆ. ನಾರಾಯಣಪುರ ಜಲಾಶಯದಲ್ಲಿ ಈಗ ಅರ್ಧಕ್ಕಿಂತ ಹೆಚ್ಚು ನೀರು ಖಾಲಿಯಾಗಿದೆ. ಹೀಗಾಗಿ, ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ಕೃಷ್ಣೆ ಮತ್ತು ಭೀಮಾ ನದಿಗಳೂ ಬತ್ತಿದ್ದು, ಕೃಷಿ ಚಟುವಟಿಕೆಗೆ ನೀರು ಲಭ್ಯವಾಗದೆ ರೈತರು ಪರಿತಪಿಸುತ್ತಿದ್ದಾರೆ.
ಜನ ಹಾಗೂ ಜಾನುವಾರುಗಳೂ ನೀರಿಗಾಗಿ ಅಲೆದಾಡುವ ಸ್ಥಿತಿ ಉದ್ಭವಿಸಿದೆ. ಪ್ರತಿ ವರ್ಷ ಬರಗಾಲದಿಂದ ತತ್ತರಿಸುವ
ಈ ಭಾಗದ ಜಿಲ್ಲೆಗಳು ನೀರಿನ ಸಮಸ್ಯೆಯನ್ನು ನಿರಂತರವಾಗಿ ಎದುರಿಸುತ್ತಿವೆ. ಆದರೆ ಯಾವುದೇ ಸರ್ಕಾರ ಸಮಸ್ಯೆಯ ಶಾಶ್ವತ ನಿವಾರಣೆಗೆ ಗಮನ ಹರಿಸುತ್ತಿಲ್ಲ. ಕಾಲುವೆಗಳಲ್ಲಿ ನೀರು ಹರಿಯಲು ಬೇಕಾದ ವ್ಯವಸ್ಥೆ ಮಾಡುತ್ತಿಲ್ಲ.

ಜಲಾಶಯದ ನೀರನ್ನು ನಂಬಿ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿದ್ದು, ಸರ್ಕಾರ ಈಗಲಾದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದೇ ಎಂಬುದು ಸ್ಥಳೀಯರ ನಿರೀಕ್ಷೆ.

ಏ. 15ರ ವರೆಗೆ ನೀರು ಕೊಡಿ
ನಾರಾಯಣಪುರ ಜಲಾಶಯದಿಂದ ಎಡದಂಡೆ ಕಾಲುವೆಗೆ ಏ.15ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದ ನಿಯೋಗದಲ್ಲಿ ರೈತರು ಬೆಂಗಳೂರಿನಲ್ಲಿ ಕೆಬಿಜೆಎನ್ನೆಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೆಜ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

Advertisement

ನೀರು ಗುಂಡಿಗೆ ವನ್ಯಪ್ರಾಣಿಗಳ ದಂಡು
ಹುಣಸೂರು:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೂ ಬರದ ಬಿಸಿ ತಟ್ಟಿದ್ದು, ದಟ್ಟಾರಣ್ಯವಿರುವ ಕೆಲವೆಡೆ ನೀರಿಗೆ ತತ್ವಾರವಿರುವ ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೋಡಿದ್ದ ಗುಂಡಿಯಲ್ಲಿ ಅಂತರ್ಜಲ ಹೊರಚಿಮ್ಮಿದ್ದು,
ದಣಿವಾರಿಸಿಕೊಳ್ಳಲು ಇದೀಗ ವನ್ಯಪ್ರಾಣಿಗಳು ಧಾವಿಸುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ(ಮೂರ್ಕಲ್‌) ವಲಯದ ಈರನ ಹಡ್ಲುಪಾರೆ ತೋಡು ಎಂಬಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿಗಳು
ಬರುತ್ತಿರುವುದನ್ನು ಮನಗಂಡಿದ್ದ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಸಿಬ್ಬಂದಿ ತೋಡಿದ್ದ ಗುಂಡಿಯಲ್ಲಿ ಸಾಕಷ್ಟು ನೀರು ಶೇಖರಣೆಯಾಗಿದ್ದು, ಹುಲಿ, ನವಿಲು, ಚಿರತೆ, ಕಾಟಿ, ಜಿಂಕೆಗಳು ನೀರು ಕುಡಿದಿರುವ ಬಗ್ಗೆ ಕ್ಯಾಮರಾದಲ್ಲಿ ಚಿತ್ರಗಳು ಸೆರೆಯಾಗಿವೆ.

ಶುಕ್ರವಾರ ಚಿರತೆಯೊಂದು ನೀರು ಕುಡಿದು ತೆರಳುತ್ತಿದ್ದರೆ, ಅದೇ ಹಳ್ಳಕ್ಕೆ ಬೆಳಗ್ಗೆ ನೀರು ಕುಡಿಯಲು ಭಾರೀ
ಗಾತ್ರದ ಹುಲಿ ಆಗಮಿಸಿರುವುದು ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next