Advertisement

ಸಾರ್ವಕಾಲಿಕ ಮೌಲ್ಯವಾಗಿ ನಾರಾಯಣ ಗುರು

11:10 PM Sep 09, 2022 | Team Udayavani |

ನಾರಾಯಣ ಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯ ಗಳು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ. ಅವರೇ ಸೂಚಿಸಿದ ಹಿಂದೂವಿನ ಜ್ಞಾನ, ಬುದ್ಧನ ಕರುಣೆ, ಕ್ರಿಸ್ತರ ಪ್ರೀತಿ, ಮೊಹ ಮ್ಮದರ ಸಹೋದರತ್ವವನ್ನು ಲೋಕ ಶಾಂತಿಗಾಗಿ ಬಯಸುವಂತಾಗಿದೆ.

Advertisement

ಓರ್ವ ಸಾಧಕನ ನೆಲೆ-ಬೆಲೆಗಳೆರಡೂ ಮಹತ್ವ ಪಡೆದು ಕೊಳ್ಳುವುದು ಆತನಿದ್ದ ಕಾಲಕ್ಕಿಂತಲೂ ಆತ ನಿಲ್ಲದ ಕಾಲದಲ್ಲಿ, ಅದು ಕಾರ್ಯೋನ್ಮುಖ ಗೊಳ್ಳುವುದರಲ್ಲಿ. ತಾನಿಲ್ಲದ ಕಾಲದಲ್ಲಿ ತನ್ನಿರವನ್ನು ಉಳಿಸಬೇಕಾದರೆ ಅವನ ಜೀವನಕ್ರಮ ಮತ್ತು ಸಾಧನೆಗಳು ಕಾಲಾ ತೀತವಾಗಿರಬೇಕು. ಹತ್ತೂಂಬತ್ತನೆಯ ಶತ ಮಾನದಲ್ಲಿ ಆಗಿ ಹೋದ ಬ್ರಹ್ಮಶ್ರೀ ನಾರಾ ಯಣ ಗುರುಗಳು ಈ ಬಗೆಯಲ್ಲಿ ವರ್ತ ಮಾನಕ್ಕೂ, ಭವಿಷ್ಯದ ಎಲ್ಲ ತಲೆಮಾರು ಗಳಿಗೂ ಪ್ರಸ್ತುತರೆನಿಸುವ ಸಾರ್ವಕಾಲಿಕ ದಾರ್ಶನಿಕರು.

1856, ಆಗಸ್ಟ್‌ 20 ರಂದು ಕೇರಳದ ಈಗಿನ ರಾಜಧಾನಿ ತಿರುವನಂತಪುರದಿಂದ ಏಳು ಮೈಲು ಪೂರ್ವೋತ್ತರಕ್ಕೆ ಚೆಂಬಳತಿ ಎಂಬ ಪುಟ್ಟ ಹಳ್ಳಿಯಲ್ಲಿ ವಯಲ್‌ ವಾರಂ ಎಂಬ ಮನೆಯಲ್ಲಿ ನಾರಾಯಣ ಗುರು ಜನಿಸಿದರು.

“ನಾಣು’ ಎಂಬ ಮುದ್ದಿನ ಹೆಸರಿನಿಂದ ಎಲ್ಲರಿಗೂ ಆತ್ಮೀಯರಾಗಿ ಬಾಲ್ಯದಲ್ಲೇ ತಮ್ಮ ದಿವ್ಯಭವಿಷ್ಯವನ್ನು ಮುನ್ಸೂಚಿಸಿದವರು. ಕರ್ಮಟ ಮನಸ್ಸಿನ ಅಂದಿನ ಕೇರಳದಲ್ಲಿ ಮಡಿ ಮಡಿ ಎಂದು ಅಡಿಗಡಿಗೆ ಹಾರಾಡುತ್ತಿದ್ದವರನ್ನು ಬೇಕಂತಲೇ ಮುಟ್ಟಾಡಿ ಕ್ರಾಂತಿಗೆ ನಾಂದಿಯಿತ್ತವರು.

ಸಂತರೆನಿಸಿಕೊಂಡ ಬಳಿಕವೂ ನಾರಾಯಣ ಗುರುಗಳು ಬರಿಯ ಸ್ವಯಂ ಸಿದ್ಧಿ- ಪ್ರಸಿದ್ಧಿಗಳಲ್ಲೇ ತಲ್ಲೀನರಾಗಿರುತ್ತಿದ್ದರೆ ಅವರೊಬ್ಬ ಸಾಧಕ ಯತಿವರೇಣ್ಯ ಎಂದಷ್ಟೇ ಹೆಸರು ಗಳಿಸಿ ಧರ್ಮಸಂಪುಟ ಗಳಲ್ಲಿ ಭದ್ರವಾಗಿರುತ್ತಿದ್ದರು. ಆದರೆ ತಮಗೊದಗಿದ ಯತಿತ್ವವನ್ನು ಸಮಾಜದ ಪರಿವರ್ತನೆಗಾಗಿ ವಿನಿಯೋಗಿಸಿ ಕೊಂಡದ್ದರಿಂದಲೇ ಅವರೊಬ್ಬ ಅನನ್ಯ ಸಮಾಜಸುಧಾರಕ ಸಂತರಾಗುತ್ತಾರೆ. ನಾರಾಯಣ ಗುರುಗಳ ಅಧ್ಯಾತ್ಮ ಪೂರ್ವಪರಂಪರೆಯ ಮುಂದುವರಿಕೆಯಲ್ಲ. ಕಠಿನ ರಿವಾಜುಗಳ ಶರಣಾಗತಿಯಲ್ಲ. ಕರ್ಮಟ ಆಚರಣೆಗಳುಳ್ಳ ಸೂತ್ರವಳಿಯಲ್ಲ. ಅದು ಪರಿಶುದ್ಧ ಮತ್ತು ತಣ್ತೀಬದ್ಧ ಪ್ರಯೋಗಶೀಲ ಅಧ್ಯಾತ್ಮ.

Advertisement

ಅಂದಿನಿಂದ ಇಂದಿನವರೆಗೂ ಭಾರತೀಯರಲ್ಲಿ ಭೌತಿಕ ರೂಪ ಸ್ವರೂಪಗಳನ್ನು ಮಾತ್ರ ದೇವರು ಎಂಬುದಾಗಿ ಬಲವಾಗಿ ನಂಬಿಕೊಂಡು ಬಂದವರು ಹೆಚ್ಚು. ಅದರ ಹಿಂದಿರುವ ಮತ್ತು ಅದು ಆ ಮೂಲಕ ಸಂಕೇತಿಸುವ ತಾತ್ವಿಕ ಅರ್ಥವನ್ನು ಪ್ರಚುರ ಹೊಂದಲು ವಿಫ‌ಲವಾಗಿದೆ ಎಂದರಿತ ಗುರುಗಳು ಆರಾಧನೆ-ಆಚರಣೆಗಳ ಮೂಲಾರ್ಥ ಶೋಧದಲ್ಲಿ ತೊಡಗುತ್ತಾರೆ. ಅರ್ಥಹೀನ ಮತ್ತು ಅಮಾನವೀಯ ಎಂದೆನಿಸಿದ್ದನ್ನು ಕೈಬಿಡಲು ಸೂಚಿ ಸುತ್ತಾರೆ. ಅಂತರ್ಮುಖಿಯಾದ ಜ್ಞಾನ ಉಂಟಾಗದಿದ್ದರೆ ಮಾಯೆ ಎಂಬ ದೊಡ್ಡ ಶತ್ರುವು ಹಲವು ವಿಧದ ಭ್ರಮೆಗಳನ್ನು ಹುಟ್ಟುಹಾಕುತ್ತದೆ. ಅಂತಹ ಭ್ರಮೆಗೆ ಬಿದ್ದರೆ ದೇವರೂ ಒಂದು ಭ್ರಮೆಯೇ ಆಗಿಬಿಡುತ್ತಾನೆ ಎಂಬ ಅವರ ಆತೊ¾àಪದೇಶ ಶತಕದ ವಿವರಣೆ ಗಮನೀಯ.

ಆರಾಧನೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಆದ್ಯತೆ ದೊರಕ ಬೇಕು. ಪ್ರತಿಯೊಬ್ಬರೂ ತಂತಮ್ಮ ದೇವರನ್ನು ತಾವೇ ಪೂಜಿಸುವ ಹಕ್ಕನ್ನು ಪಡೆಯಬೇಕು. ನಿರಾಡಂಬರ ಪೂಜಾ ಪದ್ಧತಿ ರೂಢಿಯಾಗ ಬೇಕು. ಅದು ಎಲ್ಲರನ್ನೂ ಒಳ ಗೊಳ್ಳಬೇಕು. ಸರ್ವರಿಗೂ ಸಮಪಾಲಿರಬೇಕು. ತಾವು ಸ್ಥಾಪಿಸಿದ ದೇಗುಲಗಳಲ್ಲಿ “ಓಂ ಶಾಂತಿ, ದಯೆ, ಕರುಣೆ’ ಎಂದು ಬರೆದಂತೆ ಜೀವಪರ ಹಾಗೂ ಜೀವನಪರವಾದ ಧರ್ಮ ನೀತಿ ಸಾಕ್ಷಾತ್ಕಾರಗೊಳ್ಳಬೇಕು ಎಂಬುದು ಅವರ ನಿರೀಕ್ಷೆಯಾಗಿತ್ತು. ನಮ್ಮೊಳಗಿನ ಸದ್ಯದ ಭಗವಂತನ ಕಲ್ಪನೆ – ಚಿಂತನೆಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾಗಿದೆ.

ಧರ್ಮಾಚರಣೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಧಾರ್ಮಿಕ ಚೌಕಟ್ಟಿನೊಳಗೇ ಪರಿಹಾರವನ್ನು ಶೋಧಿಸ ಬೇಕು ಎಂಬ ನಿಲುವು ನಾರಾಯಣ ಗುರುಗಳದ್ದಾಗಿತ್ತು. ಜಡ್ಡುಗಟ್ಟಿದ್ದ ಸಾಂಸ್ಥಿಕ ಧರ್ಮದ ಮೂಲಸತ್ವಗಳಾದ ಸರಳತೆ, ಸಜ್ಜನಿಕೆ, ಸಾತ್ವಿಕತೆ ಮತ್ತು ಜೀವಪರತೆಯ ಗುಣ ಗಳನ್ನು ಎತ್ತಿಹಿಡಿಯಲು ಶ್ರಮಿಸಿದರು. ನಿರ್ಭಾಗ್ಯರಿಗಾಗಿ ನೂತನ ದೇಗುಲಗಳನ್ನು ತೆರೆದರು. ಪ್ರವೇಶ, ಪ್ರತಿಷ್ಠೆ ಮತ್ತು ಪ್ರಯೋಗ ಎಂಬ ಮೂರು ನೆಲೆಗಳಲ್ಲಿ ಮರೆಯಲಾಗದ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದರು. ಅವರ ಆಶಯದಂತೆ ದೇಗುಲಗಳು ಕತ್ತಲೆ ಕೋಣೆಯಲ್ಲಿ ಉಸಿರು ಗಟ್ಟುವಂತಿರಬಾರದು. ಪ್ರಶಾಂತ ವಾತಾವರಣ, ಹೂ ದೋಟ, ವಾಚನಾಲಯ, ಧ್ಯಾನಯುಕ್ತ ಪೂಜಾ ವಿಧಾನ ಗಳಿಂದ ಮನೋವರ್ಧನೆಗೆ ಪೂರಕವಾಗಿರಬೇಕು. ಧರ್ಮ ಕೇಂದ್ರವೊಂದು ಶಾಲೆ, ಆಸ್ಪತ್ರೆಯಂತಹ ಸಾಮಾಜಿಕ ಸೌಲಭ್ಯ ಗಳ ಸ್ಥಾಪನೆಗೆ ಕಾರಣವಾಗಬೇಕು. ಈ ಬಗ್ಗೆ ಇಂದಿನ ಶ್ರದ್ಧಾ ಕೇಂದ್ರಗಳು ಆಸಕ್ತಿ ತೋರುವುದು ಅವಶ್ಯವಷ್ಟೆ.

ಸಮಾಜ ಬದಲಾಗಬೇಕಾದರೆ ಜನರಲ್ಲೇ ಸ್ವಜಾಗೃತಿ ಮೂಡಬೇಕೆಂಬ ಸದಾಶಯವಿಟ್ಟುಕೊಂಡು ನಾರಾಯಣ ಗುರುಗಳು ಶಿಕ್ಷಣ ಪ್ರಸರಣಕ್ಕೆ ವಿಶೇಷ ಒತ್ತು ನೀಡಿದರು. ಶಿಕ್ಷಣ ಇದಕ್ಕೆ ಸುಲಭ ಮಾರ್ಗ ಎಂದರಿತ ನಾರಾಯಣ ಗುರುಗಳು 1903ರಲ್ಲಿ ಎಸ್‌ಎನ್‌ಡಿಪಿ ಸ್ಥಾಪಿಸಿ ಎಲ್ಲ ವರ್ಗ ಗಳ ಜನರಿಗಾಗಿ ನೂರಾರು ಪ್ರಾಥಮಿಕ, ಪ್ರೌಢ, ಕಾಲೇಜು, ಕೈಗಾರಿಕಾ ತರಬೇತಿ ಶಿಕ್ಷಣ ಕೊಡಿಸಿದರು. ಮಹಿಳಾ ಶಿಕ್ಷಣಕ್ಕೆ ಪ್ರೇರೇಪಿಸಿದರು. ಹತ್ತಾರು ಸೇವಾ ಟ್ರಸ್ಟ್‌, ಸ್ವ ಉದ್ಯೋ ಗಾಲಯ, ಆಸ್ಪತ್ರೆಗಳನ್ನು ತೆರೆದರು. ಶ್ರೀ ನಾರಾಯಣ ಧರ್ಮ ಸಂಘ ಸ್ಥಾಪಿಸಿ ತಳವರ್ಗದ ಆಸಕ್ತರಿಗೂ ಸನ್ಯಾಸ ದೀಕ್ಷೆ ಮತ್ತು ಪೂಜಾ ಅಧಿಕಾರ ಕಲ್ಪಿಸಿದರು. ಮತಾಂತರ ಗೊಳ್ಳುತ್ತಿದ್ದ ಅನಕ್ಷರಸ್ಥ ಹಿಂದೂಗಳ ಜಾಗೃತಿಗಾಗಿ 1924ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜಿಸಿದರು. ಮರಳಿ ಸ್ವಧರ್ಮಕ್ಕೆ ಕರೆತರುವುದರಲ್ಲಿ ಯಶಸ್ವಿಯಾದರು.

ಕೇರಳದ ಸ್ವಾಭಿಮಾನದ ಮಾತೃಭಾಷೆಯಾಗಿ ಮಲ ಯಾಳ, ವೈದಿಕ ಪೂಜಾಪಠ್ಯಗಳ ತಿಳಿವಳಿಕೆಗಾಗಿ ಸಂಸ್ಕೃತ, ಮತ್ತು ಜಾಗತಿಕ ಜ್ಞಾನಕ್ಕಾಗಿ ಇಂಗ್ಲಿಷ್‌ ಹೀಗೆ ಆ ಕಾಲದಲ್ಲೇ ಆದರ್ಶವಾದ ತ್ರಿಭಾಷಾ ಸೂತ್ರದ ಶಿಕ್ಷಣ ಜಾರಿಗೊಳಿಸಿದ್ದು ಇಂದಿಗೂ ಪ್ರಸ್ತುತ. ಅವರ ಶಿಕ್ಷಣ ನೀತಿಯ ಪ್ರಕಾರ ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ಇತ್ತು. ಮಾಡುವ ಪೂಜೆ, ಪಠಿಸುವ ಮಂತ್ರಗಳ ಅರ್ಥ, ಹಿನ್ನೆಲೆ ತಿಳಿದಿರಬೇಕೆಂಬ ಕಾರಣಕ್ಕೆ ಸಂಸ್ಕೃತ ಭಾಷಾಜ್ಞಾನ ಅವಶ್ಯ. ಸಂತರಾಗಿದ್ದರೂ ಆಂಗ್ಲ ಭಾಷೆಯ ಕುರಿತು ಅನಗತ್ಯ ಮಡಿವಂತಿಕೆ ಇರಲಿಲ್ಲ.

ನಾರಾಯಣ ಗುರುಗಳು ಬರಿಯ ಜಾತಿನಾಯಕರಲ್ಲ. ಹಾಗೆ ಪರಿಗಣಿಸುವುದು ಅವರ ಜೀವನದರ್ಶನವನ್ನೇ ಸಂಕುಚಿತಗೊಳಿಸಿದಂತೆ. ಅವರು ಮಾನವಕುಲದಲ್ಲಿ ಸಮಾ ನತೆ ಬರಬೇಕಾದರೆ ಜಾತಿನಿಷ್ಠವಾಗಿ ನಡೆಯುವ ಆಚರಣೆ ಗಳು ಕಡಿಮೆಯಾಗಬೇಕು ಎಂದು ಅಭಿಪ್ರಾಯ ಪಟ್ಟವರು.

ಈ ಬಾರಿ 168ನೇ ನಾರಾಯಣ ಗುರು ಜನ್ಮದಿನಾ ಚರಣೆ. ಒಂದು ಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಶುಭಾವಸರವನ್ನು ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಆಚರಿಸುವಂತಾದದ್ದು ಶುಭಲಕ್ಷಣವೆಂದೇ ಹೇಳಬೇಕು. ಈ ಮೂಲಕ ನಾರಾಯಣ ಗುರುಗಳ ತತ್ತಾದರ್ಶಗಳು ವರ್ಗಪ್ರಜ್ಞೆಯನ್ನು ಮೀರಿ ವಿಶ್ವಪ್ರಜ್ಞೆಯಾಗಿ ಹಬ್ಬುವಂತಾದರೆ ಇಂತಹ ಪ್ರತೀ ಜಯಂತಿಯೂ ಸಾರ್ಥಕ್ಯದ ದಿನಗಳಾಗುತ್ತದೆ.

-ಡಾ| ಅರುಣ್‌ ಉಳ್ಳಾಲ್

Advertisement

Udayavani is now on Telegram. Click here to join our channel and stay updated with the latest news.

Next