Advertisement

ನಂದಿಕೂರು-ಕೇರಳ 400 ಕೆ.ವಿ. ವಿದ್ಯುತ್‌ ಮಾರ್ಗ ಪರಿಹಾರ ಬೇಡ, ಪರ್ಯಾಯ ಮಾರ್ಗ ಬಳಸಿ: ರೈ

01:18 AM Oct 17, 2023 | Team Udayavani |

ಮಂಗಳೂರು: ಉಡುಪಿಯ ನಂದಿಕೂರಿನಿಂದ ಕೇರಳಕ್ಕೆ 400 ಕೆ.ವಿ. ವಿದ್ಯುತ್‌ ಮಾರ್ಗ ನಿರ್ಮಾಣ ಯೋಜನೆಯು ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂಕಷ್ಟ ತಂದೊಡ್ಡಲಿದೆ. ಹಾಗಾಗಿ ಯಾವುದೇ ರೈತರು ಪರಿಹಾರ ಪಡೆಯುವುದಕ್ಕೆ ಸಿದ್ಧರಿಲ್ಲ, ಬದಲಿಗೆ ಯೋಜನೆಯ ಪ್ರವರ್ತಕರು ಪರ್ಯಾಯ ಮಾರ್ಗಗಳ ಮೂಲಕ ಕಾಮಗಾರಿ ಮುಂದುವರಿಸಬೇಕು ಇದಕ್ಕೆ ಸರಕಾರ ಸೂಕ್ತ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಈ ಯೋಜನೆ ಹಾದುಹೋಗುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿದಂತೆ ಉಭಯ ಜಿಲ್ಲೆಗಳ ರೈತರನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಹಲವು ಸಮಯದಿಂದ ರೈತರು ಪ್ರತಿಭಟನೆಯ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಆ ರೈತರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಗುತ್ತಿಗೆ ವಹಿಸಿರುವ ಸ್ಟಲೈìಟ್‌ ಕಂಪೆನಿಯು ಹೈಟೆನ್ಶನ್‌ ಮಾರ್ಗ ನಿರ್ಮಾಣಕ್ಕಾಗಿ ಲೈನ್‌ ಹಾಕಲು ಸಮೀಕ್ಷೆ ನಡೆಸುತ್ತಿದೆ. ಇದರಿಂದ ರೈತರಿಗೆ ತೊಂದರೆ ಮಾತ್ರವಲ್ಲದೆ ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದ ಜಾಗ ಅಥವಾ ಸಮುದ್ರ ಮೂಲಕ ಈ ಸಂಪರ್ಕಕ್ಕೆ ಪರ್ಯಾಯ ಕ್ರಮ ವಹಿಸಬೇಕು. ಈ ಹೈಟೆನ್ಶನ್‌ ಲೈನ್‌ ಹಾದುಹೋಗುವ ಭಾಗಗಳಲ್ಲಿ ಗರಿಷ್ಠ ಮೂರು ಎಕರೆಯೊಳಗಿನ ಭೂಮಿಯನ್ನು ಹೊಂದಿರುವ ಸಣ್ಣ ರೈತರು, ಅಡಿಕೆ, ತೆಂಗು, ಕರಿಮೆಣಸು ಮೊದಲಾದ ತೋಟಗಾರಿಕೆ ಬೆಳೆಯನ್ನು ಅವಲಂಬಿಸಿರುವವರು. ಗ್ರಾಮೀಣ ವಿದ್ಯುತ್ಛಕ್ತಿ ನಿಗಮ (ಆರ್‌ಇಸಿ) ಈ ಬಗ್ಗೆ ಗಮನ ಹರಿಸಬೇಕು. 900 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಇಷ್ಟು ದೊಡ್ಡ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಗೆ ಪರ್ಯಾಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕ್ರಮ ವಹಿಸುವುದು ದೊಡ್ಡ ವಿಷಯವೇನಲ್ಲ ಎಂದರು.

ಜೀವಕ್ಕೂ ಅಪಾಯಕಾರಿ
ಈ ಹೈಟೆನ್ಶನ್‌ ಲೈನ್‌ ಕೃಷಿ ಭೂಮಿಯಲ್ಲಿ ಹಾದು ಹೋಗುವು ದರಿಂದ ಮಳೆಗಾಲದಲ್ಲಿ ಇದರಿಂದಾಗ ಬಹುದಾದ ಅಪಾಯ ಊಹಿಸಲು ಅಸಾಧ್ಯ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರದ ಗಮನ ಸೆಳೆಯಲಾಗಿದೆ. ನಾವು ಪರಿಹಾರದ ಬಗ್ಗೆ ಯೋಚಿಸುವುದೇ ಇಲ್ಲ, ಪರಿಹಾರದ ಅಗತ್ಯವಿಲ್ಲ, ಜಿಲ್ಲಾಡಳಿತ ರೈತರ ಪರ ನಿಂತು ಕ್ರಮ ವಹಿಸಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಶ್ಯಾಂ ಪ್ರಸಾದ್‌ ತಿಳಿಸಿದರು.

ಲೋಹಿತಾಶ್ವ, ಬೇಬಿಕುಂದರ್‌, ಸುಧೀರ್‌ ಕುಮಾರ್‌ ಶೆಟ್ಟಿ, ಚಿತ್ತರಂಜನ್‌, ಅಣ್ಣು ಗೌಡ, ಸಂಜೀವಗೌಡ, ಪದ್ಮನಾಭ ಗೌಡ, ಆಲ್ವಿನ್‌ ಪ್ರಕಾಶ್‌, ಪಿಯುಸಿಲ್‌ ರಾಡ್ರಿಗಸ್‌ ಉಪಸ್ಥಿತರಿದ್ದರು.

Advertisement

“ಉಡುಪಿ, ದ.ಕ. ಜಿಲ್ಲೆಯ ಸುಮಾರು 17 ಗ್ರಾಮಗಳ 500ಕ್ಕೂ ಅಧಿಕ ಕುಟುಂಬಗಳು ಈ 400 ಕೆ.ವಿ. ಹೈಟೆನ್ಶನ್‌ ಲೈನ್‌ ವ್ಯಾಪ್ತಿಗೊಳಪಡುತ್ತಿದ್ದು, ಕಳೆದ ಮೂರೂವರೆ ವರ್ಷಗಳಿಂದ ನಮಗೆ ಪರಿಹಾರ ಬೇಡ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ಕೇಂದ್ರ ಸರಕಾರವು ಭಾರತದಿಂದ ದುಬಾೖಗೆ ಸಮುದ್ರದ ಮೂಲಕ ಕೇಬಲ್‌ ಹಾಕಿ ವಿದ್ಯುತ್‌ ಸಂಪರ್ಕಕ್ಕೆ ಮುಂದಾಗಿದ್ದು, ಅದೇ ತಂತ್ರಜ್ಞಾನದೊಂದಿಗೆ ಇಲ್ಲಿಯೂ ಕ್ರಮ ವಹಿಸಬಹುದಾಗಿದೆ. ವೀರಕಂಭದ 600 ಹೆಕ್ಟೇರ್‌ ಪ್ರದೇಶದ ಸಿರಿಚಂದನ ವನ್ನು ಗುರುತಿಸಿ ಮೀಸಲು ಅರಣ್ಯವಾಗಿ ಬೇಲಿ ಹಾಕುವ ಕಾರ್ಯವನ್ನು ಹಿಂದೆ ಅರಣ್ಯ ಸಚಿವರಾಗಿದ್ದಾಗ ರಮಾನಾಥ ರೈ ಮಾಡಿದ್ದಾರೆ. ಇದೀಗ ಈ ವಿದ್ಯುತ್‌ ಸಂಪರ್ಕದ ಯೋಜನೆಯು ಆ ಮೀಸಲು ಅರಣ್ಯದಲ್ಲಿಯೂ ಹಾದು ಹೋಗುತ್ತಿದೆ. – ಶ್ಯಾಂ ಪ್ರಸಾದ್‌, ರೈತ ಹಾಗೂ 400 ಕೆವಿ ವಿರೋಧಿ ಹೋರಾಟ ಸಮಿತಿ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next