Advertisement

ನಮ್ಮ ಸಂತೆ ಉದ್ಘಾಟನೆ; ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ಅಗತ್ಯ: ಡಾ|ಗಿರಿಧರ್‌

04:15 PM Feb 11, 2023 | Team Udayavani |

ಮಣಿಪಾಲ: ಆರ್ಥಿಕ ವ್ಯವಸ್ಥೆ ಉತ್ತೇಜನಕ್ಕೆ ಸ್ಥಳೀಯ ಮಾರಾಟಗಾರರಿಗೆ ಅಗತ್ಯ ಪ್ರೋತ್ಸಾಹ ಮತ್ತು ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕಿದೆ ಎಂದು ಮಾಹೆ ರಿಜಿಸ್ಟ್ರಾ ರ್‌ ಡಾ| ಗಿರಿಧರ್‌ ಕಿಣಿ ಹೇಳಿದರು.

Advertisement

ಉದಯವಾಣಿ- ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯೂನಿಕೇಶನ್‌ (ಎಂಐಸಿ) ಸಹಯೋಗದಲ್ಲಿ ಎಂಐಸಿ ಕ್ಯಾಂಪಸ್‌ನಲ್ಲಿ ಎರಡು ದಿನ ಆಯೋಜಿಸಲಾದ “ನಮ್ಮ ಸಂತೆ’ಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಉದಯವಾಣಿ-ಎಂಐಸಿ ಸಹಯೋಗದಲ್ಲಿ ಇದೊಂದು ವಿಶಿಷ್ಟ ಸಮಾಜಮುಖಿ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಕಲಿಕೆ ಜತೆಗೆ ಇಂಥಹ ಸಾಮಾಜಿಕ ನೆಲೆಗಟ್ಟಿನ ಕಾರ್ಯಕ್ರಮಗಳ ನಿರ್ವಹಣೆ, ಆಯೋಜನೆ ಬಗ್ಗೆ ಉತ್ತಮ ಅನುಭವವನ್ನು ಪಡೆದುಕೊಳ್ಳುತ್ತಿರುವುದು ಶ್ಲಾಘನೀಯ. ಸಣ್ಣ ಉದ್ಯಮಿಗಳಿಗೆ, ಸ್ವ ಉದ್ಯೋಗದಾತರಿಗೆ ಈ ರೀತಿ ದೊಡ್ಡಮಟ್ಟದ ಮಾರುಕಟ್ಟೆ ಒದಗಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುವುದು ಇಂದಿನ ಅಗತ್ಯವಾಗಿದೆ. ಮಣಿಪಾಲ ಪರಿಸರದಲ್ಲಿ ಇಂಥ ಕಾರ್ಯಕ್ರಮ ಉತ್ತಮ ಸ್ಪಂದನೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಮಣಿಪಾಲ ಮೀಡಿಯ ನೆಟ್‌ವಕ್‌ ಲಿ. ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಸಣ್ಣ, ಮಧ್ಯಮ, ಗೃಹ ಕೈಗಾರಿಕೆಗಳಿಗೆ ವ್ಯವಸ್ಥಿತ ಮಾರುಕಟ್ಟೆ ರೂಪಿಸಿ, ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಬೇಕು ಎಂಬ ಚಿಂತನೆಯಲ್ಲಿ “ನಮ್ಮ ಸಂತೆ’ ಆಯೋಜಿಸಲಾಗಿದೆ. ಕರಕುಶಲ, ಗೃಹಪಯೋಗಿ ಸಣ್ಣ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕೊಡುವ ಮೂಲಕ ಸ್ಥಳೀಯ ಆರ್ಥಿಕತೆಗೆ ಬೆಂಬಲ ನೀಡುವುದು ಇಲ್ಲಿನ ಜನರ ಕೌಶಲವನ್ನು ಗೌರವಿಸುವುದು ನಮ್ಮ ಆಶಯ. ದೇಸಿ ಕರಕುಶಲ ಉತ್ಪನ್ನಗಳು, ಆಹಾರ ಉತ್ಪನ್ನಗಳಂತ ಸಣ್ಣಸಣ್ಣ ಮಾರಾಟಗಾರರನ್ನು ಒಗ್ಗೂಡಿಸಿದ್ದು, ನಮ್ಮ ಸಂತೆ ಎಂಬುದು ಒಂದೆ ನೆಲೆಯಲ್ಲಿ ದೊಡ್ಡ ಸ್ಥಳೀಯ ಮಾರುಕಟ್ಟೆಯಾಗಿ ಅನಾವರಣಗೊಂಡಿದೆ. ಉಡುಪಿ-ಮಣಿಪಾಲ ಜನರು ಇದರ ಸದುಪಯೋಗಪಡಿಸಿಕೊಂಡ ಸ್ಥಳೀಯ ಆರ್ಥಿಕತೆಗೆ ಬೆಂಬಲಿಸಬೇಕು ಎಂದು ಆಶಿಸಿದರು.

ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರತವು ಮುಂಚೂಣಿ ನೆಲೆಯಲ್ಲಿರುವಾಗ ಕೋವಿಡ್‌ ಹೊಡೆತದಿಂದಾಗಿ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುವಂತಾಯಿತು. ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಳೀಯ ಮಾರುಕಟ್ಟೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಲೋಕಲ್‌ ಫಾರ್‌ ವೋಕಲ್‌ ಎಂಬ ಸ್ಲೋಗನ್‌ ದೊಡ್ಡಮಟ್ಟದಲ್ಲಿ ಪರಿಣಾಮ ಬೀರಿತು. ಸ್ಥಳೀಯ ಉತ್ಪನ್ನಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ವಹಿಸಬೇಕು.

ಸ್ಥಳೀಯ ಮಾರುಕಟ್ಟೆ ಆರ್ಥಿಕ ಬಲ ಸಿಗಬೇಕು ಇದರಿಂದ ಸಣ್ಣ ಮತ್ತು ಮಧ್ಯಮವರ್ಗದ ಉದ್ದಿಮೆಗಳಿಗೆ ಪುನಶ್ಚೇತನ ಸಿಗಲಿದೆ. ಸ್ಥಳೀಯ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಇಲ್ಲದ ಕಾಲಘಟ್ಟದಲ್ಲಿ ಲೋಕಲ್‌ ಫಾರ್‌ ವೋಕಲ್‌ ದೊಡ್ಡ ಬಲವಾಯಿತು. ಕೇಂದ್ರ ಸರಕಾರದ ಹಲವಾರು ಸ್ಟಾರ್ಟ್‌ಅಪ್‌ ಯೋಜನೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಎಂಎಸ್‌ಎಂಇ, ಮುದ್ರ ಯೋಜನೆಗಳು ಸಣ್ಣ ಮತ್ತು ಮಧ್ಯಮ ವರ್ಗದ ಭರವಸೆಯಾಗಿದೆ. ಡಿಜಿಟಲ್‌ ಇಂಡಿಯ ಯೋಜನೆ ಸ್ಥಳೀಯ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರಕ್ಕೆ ದೊಡ್ಡ ವೇದಿಕೆಯಾಗಿದೆ ಎಂದು ಮಾಹೆಯ ಎಂಯುಟಿಬಿಐ ಎಜಿಎಂ ಡಾ| ಸಂತೋಷ್‌ ರಾವ್‌ ಹೇಳಿದರು.

ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ, ಕಾರ್ಪೋರೇಟ್‌ ಕಮ್ಯೂನಿಕೇಶನ್‌ ಎಚ್‌ಒಡಿ ಡಾ| ಪದ್ಮಕುಮಾರ್‌ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ| ಮಂಜುಳಾ ವೆಂಕಟರಾಘವನ್‌ ಸ್ವಾಗತಿಸಿ, ಪೂನಂ ಗೌರ್‌ ವಂದಿಸಿದರು. ಶ್ರುತಿ ಸುಬ್ರಹ್ಮಣ್ಯ ನಿರೂಪಿಸಿದರು.

ನಮ್ಮ ಸಂತೆಯ ವಿಶೇಷತೆ:

*ಎರಡು ದಿನಗಳ ಕಾಲ ಎಂಐಸಿ ಕ್ಯಾಂಪಸ್ ನಲ್ಲಿ ನಡೆಯಲಿರುವ ನಮ್ಮ ಸಂತೆಯಲ್ಲಿ ಕರಕುಶಲ, ಮಣ್ಣಿನ ಉತ್ಪನ್ನಗಳು, ನಾನಾ ಬಗೆಯ ಅಲಂಕಾರಿಕ ವಸ್ತುಗಳು, ಖಾದಿ ದಿರಿಸುಗಳು, ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

*ಚನ್ನಪಟ್ಟಣ ಗೊಂಬೆ, ಇಳಕಲ್ ಸೀರೆ, ಕಾಂಚಿಪುರಂ, ಪೈತಾನಿ, ಮಹೇಶ್ವರಿ, ಪ್ಯೂರ್ ಸಿಲ್ಕ್, ಕ್ರಾಫ್ಟ್, ಗ್ರೀಟಿಂಗ್ಸ್, ಹ್ಯಾಂಡ್ ಮೇಡ್ ಬ್ಯಾಗ್ಸ್, ಹತ್ತಿಯ ಕೈಮಗ್ಗದ ಸೀರೆಗಳ ಪ್ರದರ್ಶನ ಮತ್ತು ಮಾರಾಟ.

*ವಿದ್ಯಾರ್ಥಿಗಳೇ ತಯಾರಿಸಿದ ಆಕರ್ಷಕ ಗೋಡೆ ಗಡಿಯಾರ, ಬನಿಯನ್, ಕನ್ನಡಕ, ಗೋವಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

 

Advertisement

Udayavani is now on Telegram. Click here to join our channel and stay updated with the latest news.

Next