Advertisement

 ಕಾಂಗ್ರೆಸ್‌ಗೆ ಗಾಂಧಿ, ಅಂಬೇಡ್ಕರ್ ಶಾಪ ತಟ್ಟಿದೆ: ನಳೀನ್ ಕುಮಾರ್ ಕಟೀಲ್

08:37 PM Jan 12, 2021 | Team Udayavani |

ಮಂಡ್ಯ: ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಅಂತಹ ಬಿರುಗಾಳಿಯಲ್ಲಿ ಕಾಂಗ್ರೆಸ್ ಪಕ್ಷ ತೂರಿಕೊಂಡು ಹೋಗಿ ಅರಬ್ಬೀಸಮುದ್ರದಲ್ಲಿ ಮುಳುಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

Advertisement

ನಗರದ ಬಿಜಿಎಸ್ ಸಮುದಾಯಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಜನ ಸೇವಕ ಸಮಾವೇಶದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸುದೀರ್ಘವಾದ ರಾಜಕಾರಣ ಮಾಡಿತ್ತು. ಹೆಚ್ಚು ಅಧಿಕಾರ ನಡೆಸಿತ್ತು. ಆದರೆ ಅಧಿಕಾರದ ಅಹಂಕಾರ, ಭ್ರಷ್ಟಾಚಾರ, ದುರಾಡಳಿತ ಹಾಗೂ ರಾಜಪರಂಪರೆಯನ್ನು ಮರೆತು ಕೆಲಸ ಮಾಡಿದ್ದಕ್ಕೆ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಅಧಿಕಾರ ದರ್ಪ ಆಗಬಾರದು. ಜನಸ್ಪಂದನೆಯಾಗಬೇಕು ಎಂದು ಕಿಡಿಕಾರಿದರು.

ಕಾಂಗ್ರೆಸ್‌ಗೆ ಶಾಪ ತಟ್ಟಿದೆ:

ಕಾಂಗ್ರೆಸ್‌ಗೆ ಮಹಾತ್ಮಗಾಂಧೀಜಿ, ಅಂಬೇಡ್ಕರ್ ಹಾಗೂ ಗೋವಿನ ಶಾಪ ತಟ್ಟಿದೆ. ಮಹಾತ್ಮ ಗಾಂಧೀಜಿಯವರು ರಾಮ ರಾಜ್ಯದ ಕನಸು ಕಂಡಿದ್ದರು. ಆದರೆ ಕಾಂಗ್ರೆಸ್ ಅವರ ಆಸೆ ಈಡೇರಿಸಲಿಲ್ಲ. ಕೇವಲ ಮತಕ್ಕಾಗಿ ಬಳಸಿಕೊಂಡಿತು. ಇದರಿಂದ ಗಾಂಧೀಜಿ ಶಾಪ ತಟ್ಟಿದೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ಮಹಾನ್ ನಾಯಕ. ಅವರ ಸಂವಿಧಾನದಿಂದ ಚಹಾ ಮಾರುತ್ತಿದ್ದ ನರೇಂದ್ರಮೋದಿ ಪ್ರಧಾನಿಯಾಗಲು ಸಾಧ್ಯವಾಯಿತು. ಅಂತಹ ನಾಯಕನನ್ನು ಕಾಂಗ್ರೆಸ್‌ನವರು ಸೋಲಿಸಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಂಬೇಡ್ಕರ್ ಭಾವಚಿತ್ರ ಹಿಡಿದು ಮತ ಕೇಳುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ ಮುಖ್ಯಮಂತ್ರಿ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ಕಡೆಗಣಿಸಿದರು. ನಮ್ಮ ಸರ್ಕಾರದಲ್ಲಿ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದೇವೆ. ಇನ್ನೂ ಗೋವಿನ ಹೆಸರಿನಲ್ಲಿ ಮತ ಪಡೆದು ಗೋಮಾಂಸ ತಿಂದರು. ಈಗ ಗೋವು ಹತ್ಯೆ ಮಾಡುವವರ ಪರ ಮಾತನಾಡುತ್ತಿದ್ದಾರೆ. ಇದರಿಂದ ಗೋವಿನ ಶಾಪ ತಟ್ಟಿದೆ. ಈ ಎಲ್ಲ ಶಾಪಗಳಿಂದ ಕಾಂಗ್ರೆಸ್ ಇಂದು ಜನರಿಂದ ತಿರಸ್ಕೃತಗೊಂಡಿದೆ ಎಂದರು.

Advertisement

ನಾಯಕತ್ವ ಬದಲಾವಣೆ ಬಿಜೆಪಿಯಲ್ಲಿಲ್ಲ:

ನಾಯಕತ್ವ ಬದಲಾವಣೆ ಬಿಜೆಪಿ ಪಕ್ಷದಲ್ಲಿಲ್ಲ. ಅದು ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ನಾಯಕತ್ವಕ್ಕಾಗಿ ಕಿತ್ತಾಡುತ್ತಿದ್ದಾರೆ. ಇತ್ತ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದರೆ, ಅತ್ತ ಸತೀಶ್‌ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ನಾಯಕರು ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೂರು ಭಾಗಗಳಾಗಿ ಒಡೆದು ಹೋಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:ಜ.15ರಿಂದ ಉನ್ನತ ಶಿಕ್ಷಣದ ಆಫ್‌ಲೈನ್‌ ತರಗತಿಗಳು ಪ್ರಾರಂಭ; ಹೊಸ SOP ಜಾರಿ: ಡಿಸಿಎಂ

ಬಿಜೆಪಿಗೆ ಜನರ ಒಲವು:

ಇಡೀ ರಾಜ್ಯದಲ್ಲಿ ಜನರು ಬಿಜೆಪಿ ಪರ ಇದ್ದಾರೆ ಎಂಬುದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಾಬೀತಾಗಿದೆ. ಗ್ರಾಪಂ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾದರಿಯಾಗಿದ್ದಾರೆ. ನುಡಿದಂತೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ನಮಗೆಲ್ಲ ಆದರ್ಶರಾಗಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜಗತ್ತಿನಲ್ಲಿ ಪರಿವರ್ತನೆ ಗಾಳಿ ಬೀಸಿದೆ. ಭಾರತದತ್ತ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ್ದಾರೆ. ಗಾಂಧೀಜಯ ಕನಸು ನನಸು ಮಾಡಲು ಮುಂದಾಗಿದ್ದಾರೆ. ಪ್ರತಿ ಗ್ರಾಪಂ ಒಂದು ಕೋಟಿ ರೂ. ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಗೋವುಗಳನ್ನು ರಕ್ಷಿಸಿದ್ದಾರೆ ಎಂದರು.

ಬಿಜೆಪಿ ನಂಬಿದವರ ಕೈಬಿಡುವುದಿಲ್ಲ:

ಬಿಜೆಪಿ ಪಕ್ಷ ಯಾವತ್ತೂ ನಂಬಿದವರ ಕೈಬಿಡುವುದಿಲ್ಲ. ನಮ್ಮ ಜೊತೆ ಬಂದಿದ್ದ 17 ಮಂದಿಗೂ ಸ್ಥಾನ ಕಲ್ಪಿಸಲಾಗಿದೆ. ಈಗಾಗಲೇ ಕೆಲವರು ಸಚಿವರಾಗಿದ್ದಾರೆ. ಇನ್ನೂ ಕೆಲವರು ಸಚಿವರಾಗಲಿದ್ದಾರೆ ಎಂದು ಹೇಳಿದರು.

ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಬಿ.ಸೋಮಶೇಖರ್, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್‌ನಾರಾಯಣ್, ಜಿಲ್ಲಾಧ್ಯಕ್ಷ ಕೆ.ಜೆ.ವಿಜಯ್‌ಕುಮಾರ್, ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕ ಸ್ವಾಮಿ, ಜಿಪಂ ಸದಸ್ಯ ಎನ್.ಶಿವಣ್ಣ, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ನಗರ ಘಟಕ ಅಧ್ಯಕ್ಷ ವಿವೇಕ್, ಮಾಜಿ ಅಧ್ಯಕ್ಷರಾದ ಎಚ್.ಆರ್.ಅರವಿಂದ್, ಕೆ.ನಾಗಣ್ಣಗೌಡ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next