Advertisement

ಪ್ರೇರಕ ಶಕ್ತಿ ನಳಿನಿ ಶೇಖರ್‌

05:17 PM Jun 06, 2020 | sudhir |

ಕೈ ಮೆತ್ತಿದ ಕೆಸರು, ಸುತ್ತ ಹರಡಿಹುದು ವಾಸನೆ. ಸುಗಂಧ ಪರಿಮಳದಲ್ಲೇ ಮಿಂದ ಜನರ ಮಲೀನ ಗಂಧವದು. ಎತ್ತಲೇಬೇಕು ಸಮಾಜದ ಕಟ್ಟುಪಾಡುಗಳಿಗೆ ಸಿಲುಕಿದ ಈ ಸಮೂಹವ ಎಂದು ಪಣತೊಟ್ಟವರೇ ನಳಿನಿ ಶೇಖರ್‌.

Advertisement

ಮಹಿಳೆ ಇಂದು ಸಮಾಜದ ನಾಲ್ಕು ಗೋಡೆಯ ಮಧ್ಯೆ ಬಂಧಿಯಲ್ಲ; ಮನಸ್ಸು ಮಾಡಿದರೆ ಇತರರಿಗೆ ಆಕೆ ಮಾರ್ಗದರ್ಶಕಳೂ, ಪ್ರೇರಕ ಶಕ್ತಿಯೂ ಆಗಬಲ್ಲಳು. ಈ ಮಾತಿಗೆ ಸಾಟಿಯಾದವರು ನಳಿನಿ ಶೇಖರ್‌. ನಳಿನಿ ನಿಸ್ವಾರ್ಥ ಸೇವೆಯ ಮೂಲಕ ಭಾರತ, ಅಮೆರಿಕ ಸೇರಿದಂತೆ ಇತರೆಡೆಯ ಸಾವಿರಾರು ಮಂದಿ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾಗಿದ್ದಾರೆ.

1990ರ ದಶಕ. ಪುಣೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಎಲ್ಲೆ ಮೀರಿದ ಕಾಲವದು. ಅಂಥಹ ಸಂದರ್ಭದಲ್ಲಿಯೂ ಶೋಷಿತರ ಪರ ನಿಂತು ಸಮಾಜ ಸೇವೆ ಮಾಡಿದ ಧೈರ್ಯವಂತೆ ನಳಿನಿ. 2013ರಲ್ಲಿ ಬೆಂಗಳೂರಿನಲ್ಲಿ ತಮ್ಮದೇ ಆದ ಎನ್‌ಜಿಒ “ಹಸಿರು ದಳ’ದ ಮೂಲಕ ನೈರ್ಮಲ್ಯ ಸಮಸ್ಯೆ ಕುರಿತು ಸಾಮಾನ್ಯ ಜನರ ಪರವಾಗಿ ನಿಂತರು. ಜತೆಗೆ ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಪ್ರಗತಿಪರರಲ್ಲಿ ಮುಂಚೂಣಿ ಸ್ಥಾನದಲ್ಲಿರುವ ನಳಿನಿ ಅವರಿಗೆ ಕ್ಯಾಲಿಫೋರ್ನಿಯಾ ಗವರ್ನರ್‌ ಅವರಿಂದಲೂ ಮೆಚ್ಚುಗೆಯ ಪ್ರಮಾಣ ಪತ್ರಗಳು ಸಂದಿವೆ.

ಗಾಂಧಿ, ಅಂಬೇಡ್ಕರ್‌ ಅವರಿಂದ ಪ್ರೇರಣೆ ಪಡೆದ ನಳಿನಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆ ಹೊಂದಿದವರು. ಜನಿಸಿದ್ದು, ಓದಿದೆಲ್ಲ ಬೆಂಗಳೂರಿನಲ್ಲೆ. ಮಕ್ಕಳ ಅಭಿವೃದ್ಧಿ (ಚೈಲ್ಡ್‌ ಡೆವಲಪ್‌ಮೆಂಟ್‌)ಯಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಮದುವೆ ಆದ ಬಳಿಕ ಪುಣೆಯಲ್ಲಿ ಕೆಲವು ಸಮಯಗಳ ಕಾಲ ಎಸ್‌ಎನ್‌ಡಿಟಿ ವಿಶ್ವವಿದ್ಯಾಲಯದ ವಯಸ್ಕರ ಶಿಕ್ಷಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಯಸ್ಕರ ಬದಲು ಮಕ್ಕಳಿಗೆ ಶೈಕ್ಷಣಿಕ ಸೇವೆ ನೀಡುವುದು ಭವಿಷ್ಯತ್ತಿಗೆ ಅಡಿಪಾಯ ಹಾಕಿದಂತೆ ಎಂದುಕೊಂಡು ಅದರ ಕಾರ್ಯ ಸಿದ್ಧಿಗಾಗಿ ಪ್ರಯತ್ನಿಸಿದರು. ಅವರ ಈ ಆಲೋಚನೆಯೇ ಜೀವನಕ್ಕೆ ಹೊಸ ತಿರುವು ನೀಡಿತು.

ಸಿರಿವಂತ ಮಕ್ಕಳಿಗೆ ವಿದ್ಯೆ ಒಲಿಯಲು ಲಕ್ಷ್ಮೀ ಬೆಂಬಲವಿರುತ್ತದೆ. ಆದರೆ ದಲಿತ ಮಕ್ಕಳಿಗೆ ನೂರಾರು ಗುರಿಗಳಿದ್ದರೂ ಈಡೇರಿಕೆ ಮಾತ್ರ ಕನಸಿನ ಮಾತಾಗಿರುತ್ತದೆ. ಇಂತಹ ಆಲೋಚನೆ ಕೈಗೂಡುತ್ತಲೇ ಮೊದಲು ಅವರ ಪಾಲಕರ ಸ್ಥಿತಿ ಸುಧಾರಿಸುವ ನೆಲೆಯಲ್ಲಿ ತನ್ನ ಸ್ನೇಹಿತರ ಜತೆಗೂಡಿ ಕಾಗದ ಕಚ್ಚಾ ಪಾತ್ರ ಕಷ್ಟಕಾರಿ ಪಂಚಾಯತ್‌ ಎಂಬ ಒಕ್ಕೂಟ ಸ್ಥಾಪಿಸಿದರು. ಸಾವಿರದ ನೂರು ಜನ ಸದಸ್ಯರನ್ನು ಒಳಗೊಂಡ ಈ ಸಂಘದ ಮೂಲಕ ಜನರಲ್ಲಿ ಹಕ್ಕುಗಳ ಕುರಿತು ಅರಿವು ಮೂಡಿಸುವುದೇ ಅವರ ಮೂಲ ಉದ್ದೇಶವಾಗಿತ್ತು. ಕಸವನ್ನು ಒಣ ಮತ್ತು ಹಸಿಯಾಗಿ ಬೇರ್ಪಡಿಸುವ ಕಾನೂನು ಜಾರಿಗೆ ಬರಲು ಇವರ ಶ್ರಮ ಸಾಕಷ್ಟಿದೆ.
ಪತಿಯ ಕೆಲಸದಿಂದ ಇವರೂ ಅಮೇರಿಕದ ಕ್ಯಾಲಿಪೋರ್ನಿಯಾಗೆ ತೇರಳಬೇಕಾಗಿ ಬಂತು. ಅಲ್ಲಿಗೆ ತೆರಳಿದ ಮೂರ್‍ನಾಲ್ಕು ತಿಂಗಳಲ್ಲೇ ಅಲ್ಲಿನ ನೆಲೆಸಿದ್ದ ದ. ಏಷ್ಯಾದ ಮಹಿಳೆಯರ ಬೆಂಬಲದೊಂದಿಗೆ “ಮೈತ್ರಿ’ ಎಂಬ ತಂಡದ ಮೂಲಕ ಸ್ವಯಂ ಸೇವೆಯನ್ನು ಪ್ರಾರಂಭಿಸಿದರು. ಈ ಅವಧಿಯಲ್ಲಿ ವಿದೇಶದಲ್ಲಿ ಕಾರ್ಮಿಕರಿಗೆ ಹಿಂಸೆ, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ಲೈಂಗಿಕ ದೌರ್ಜನ್ಯ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದ ನಳಿನಿ ಕಾರ್ಮಿಕರಿಗೆ ಬೆಂಬಲವಾಗಿ ನಿಂತಿದ್ದರು.

Advertisement

ಗುರುತಿನ ಕಾರ್ಡ್‌
ಅನಂತರ ಪತಿಯೊಂದಿಗೆ ದೇಶಕ್ಕೆ ಮರಳಿದ ಅವರು ಬೆಂಗಳೂರಿನ “ಹಸಿರು ದಳ’ದ ಮೂಲಕ ನೊಂದ ಕಾರ್ಮಿಕರ ಧ್ವನಿಯಾಗಿ ನಿಂತಿದ್ದಾರೆ. ತ್ಯಾಜ್ಯ ನಿರ್ವಹಣೆ ಮಾಡುವ ಕಾರ್ಮಿಕರಿಗಾಗಿಯೇ ಗುರುತಿನ ಚೀಟಿಯನ್ನು ನೀಡುವಂತೆ ನ್ಯಾಯಾಲಯದ ಮೊರೆ ಹೋದರು. ಪರಿಣಾಮವಾಗಿ ಇಂದು ಹತ್ತು ಸಾವಿರಕ್ಕೂ ಅಧಿಕ ಮಂದಿ ಗುರುತು ಚೀಟಿ ಹೊಂದಿದ್ದಾರೆ. ಅಲ್ಲದೇ 2016ರಲ್ಲಿ ಗುರುತಿನ ಕಾರ್ಡ್‌ ನೀಡುವುದನ್ನೇ ದೇಶದೆಲ್ಲಡೆ ಕಡ್ಡಾಯಗೊಳಿಸಲಾಗಿದ್ದು, ಪರಿಶ್ರಮಕ್ಕೆ ಸರ್ಕಾರದ ಬೆಂಬಲವೂ ದೊರೆತಂತಾಗಿದೆ.

ಸಮಾಜದ ಸ್ವತ್ಛತೆಗೆ ಬೆಂಬಲವಾಯ್ತು ಹಸಿರು ದಳ
ಬೆಂಗಳೂರಿನಂತಹ ನಗರ ಪ್ರದೇಶ ಅಭಿವೃದ್ಧಿ ಹೊಂದಿದಷ್ಟೇ ವೇಗವಾಗಿ ತ್ಯಾಜ್ಯದ ರಾಶಿಯು ನಿರ್ಮಾಣವಾಯಿತು. ಮುಕ್ತಿ ಕಾಣದ ಈ ಸಮಸ್ಯೆ ಬಗೆಹರಿಸಲು ಹಸಿರು ದಳದಂತಹ ಸ್ವಯಂ ಸೇವಾ ತಂಡವನ್ನು ಸಂಘಟಿಸಿದ ಕೀರ್ತಿ ನಳಿನಿ ಅವರದ್ದು. “ಹಸಿರು ದಳ’ವು ಬೆಂಗಳೂರು ಮೂಲದ ಜೈನ್‌ ವಿ.ವಿ.ಯೊಂದಿಗೆ ಒಪ್ಪಂದ ಮಾಡಿಕೊಂಡು ಆ ಮೂಲಕ ಕಸ ಹೆಕ್ಕುವವರು ಮತ್ತು ಸ್ಕ್ರಾಪ್‌ ವಿತರಕರಿಗಾಗಿ ತ್ಯಾಜ್ಯ ನಿರ್ವಹಣೆ ಕುರಿತು ಸರ್ಟಿಫಿಕೆಟ್‌ಕೋರ್ಸ್‌(ಪ್ರಾಮಾಣಿಕೃತ ಕೋರ್ಸ್‌) ಮಾಡಲು ಮುಂದೆ ನಿಂತರು.

ಜೀವನೋಪಾಯ ಮತ್ತು ಸಾಮಾಜಿಕ ಭದ್ರತೆ ನೀಡುವ ಮೂಲ ಉದ್ದೇಶ ಹೊಂದಿದ “ಹಸಿರುದಳ’ ಸ್ವಲ್ಪ ಸಮಯದಲ್ಲಿಯೇ ಜನಮಾನ್ಯತೆ ಪಡೆಯಿತು. 2019ರಲ್ಲಿ ಇತರ ಕಡೆಯಲ್ಲಿ “ಹಸಿರು ದಳ’ದ ಐದು ಕೇಂದ್ರಗಳನ್ನು ಸ್ಥಾಪಿಸಿ ಸೇವೆ ನೀಡುತ್ತಿದೆ.
ಇವರು ತ್ಯಾಜ್ಯ ನಿರ್ವಹಣೆ ಜತೆಗೆ ಕಾರ್ಮಿಕರಿಗಾಗಿ ಕೆಲವೊಂದು ಕಾರ್ಯಕ್ರಮ, ಪರಿಸರ ಜಾಗೃತಿ ನಡೆಸುತ್ತಿದ್ದಾರೆ. ಕೆಳವರ್ಗದ ಸಮುದಾಯಕ್ಕೆ ಸೇರಿದ ಸುಮಾರು 18,000 ಜನರ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮವನ್ನು “ಹಸಿರು ದಳ’ದ ಮೂಲಕ ಮಾಡಲಾಗಿದೆ. ಯೂರೋಪ್‌ ತ್ಯಾಜ್ಯ ನಿರ್ವಹಣೆಯನ್ನೇ ಮಾದರಿಯಾಗಿಟ್ಟುಕೊಂಡು ತ್ಯಾಜ್ಯ, ಪ್ಲಾಸ್ಟಿಕ್‌ ಮರುಬಳಕೆ ವಿಧಾನವನ್ನು ಅನುಸರಿಸಲಾಗಿದ್ದು ಪರಿಸರ ಜಾಗೃತಿಯೊಂದಿಗೆ ಕಾರ್ಮಿಕರ ಆರ್ಥಿಕ ಭದ್ರತೆಗೆ “ಹಸಿರುದಳ’ ಬೆಂಗಾವಲಾಗಿದೆ.

ಮಹಿಳಾ ಸಬಲೀಕರಣದತ್ತ ನಡೆ
ದೇಶದಲ್ಲಿ ಲಿಂಗ ಅಸಮಾನತೆ ವಿರುದ್ಧ ಕಿಡಿಕಾರಿದ ಅತ್ಯಂತ ಪ್ರಭಲ ಮಹಿಳೆ ಎಂಬ ಹೆಗ್ಗಳಿಕೆ ನಳಿನಿ ಅವರದ್ದು . “ಮಹಿಳಾ ಸಬಲೀಕರಣಕ್ಕೆ ಪುರುಷರೂ ಬೆಂಬಲಿಸಬಹುದು, ಇಲ್ಲಿ ಯಾರೂ ಅಶಕ್ತರೆಂಬ ಭಾವ ಬೇಡ. ಎಲ್ಲರಲ್ಲೂ ಒಂದೊಂದು ಶಕ್ತಿ ಅಡಗಿದೆ. ಅದ್ಯಾವುದೆಂದು ಕಂಡುಕೊಳ್ಳುವುದು ಅವರವರ ನಿರ್ಧಾರಕ್ಕೆ ಬಿಟ್ಟಿದ್ದು’ ಎನ್ನುವುದು ಅವರ ಅಭಿಪ್ರಾಯ.

-ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next