Advertisement

Mysuru Dasara ಅರಮನೆ ನಗರಿ ಮಧುವಣಗಿಯಂತೆ ಸಿಂಗಾರ

10:56 PM Oct 14, 2023 | Team Udayavani |

ಮೈಸೂರು: 2023ನೇ ಸಾಲಿನ ದಸರಾ ಮಹೋತ್ಸವ ಉದ್ಘಾಟಕರಾದ ಹಂಸಲೇಖ ಅವರು ಶನಿವಾರ ಕುಟುಂಬ ಸಮೇತ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

Advertisement

ನಂಜನಗೂಡು ತಾಲೂಕಿನ ಸುತ್ತೂರಿ ನಲ್ಲಿರುವ ಶ್ರೀಮಠಕ್ಕೆ ಆಗಮಿಸಿದ ಹಂಸಲೇಖ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪತ್ನಿ, ಮಕ್ಕಳು, ಅಳಿಯಂದಿರ ಜತೆ ಭೇಟಿ ನೀಡಿದ ಹಂಸಲೇಖ ಅವರಿಗೆ ಸುತ್ತೂರಿನ ಶಾಲಾ ಮಕ್ಕಳು ಸ್ವಾಗತ ಕೋರಿದರು.

ಇದಕ್ಕೂ ಮುನ್ನ ಮೈಸೂರು ಜಿಲ್ಲಾಡಳಿತ ವತಿಯಿಂದಲೂ ಹಂಸಲೇಖ ಅವರನ್ನು ಮೈಸೂರು ತಹಶೀಲ್ದಾರ್‌ ಗಿರೀಶ್‌ ಸ್ವಾಗತಿಸಿದರು. ಹಂಸಲೇಖರನ್ನು ಸುತ್ತೂರು ಶ್ರೀಗಳು ಫಲತಾಂಬೂಲ ನೀಡಿ ಗೌರವಿಸಿದರು.
ಸರಕಾರಿ ಮಳಿಗೆಗಳ ಉದ್ಘಾಟನೆ: ಪೂರ್ವಭಾವಿ ಸಭೆ ದಸರಾ ಸಿದ್ಧತೆಗಳ ಬಗ್ಗೆ ಮತ್ತು ದಸರಾ ಮಹೋತ್ಸವದ ಅಂಗವಾದ ವಸ್ತು ಪ್ರದರ್ಶನದಲ್ಲಿ ಸರಕಾರಿ ಮಳಿಗೆಗಳ ಉದ್ಘಾಟನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ ಮೈಸೂರು ಅರಮನೆ ಆವರಣದಲ್ಲಿ ದಸರಾ ಉಪಸಮಿತಿಗಳ ಮುಖ್ಯಸ್ಥರ ಜತೆ ಪೂರ್ವಭಾವಿ ಸಭೆ ನಡೆಸಿದರು.

ಸರಕಾರಿ ಮಳಿಗೆ ಉದ್ಘಾಟನೆ ದಿನ ಸಂಪೂರ್ಣವಾಗಿ ಸಿದ್ಧವಿರುವಂತೆ ಕ್ರಮ ಕೈಗೊಳ್ಳಲು ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಸ್ತು ಪ್ರದರ್ಶನ ಪ್ರಾಧಿಕಾರದವರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಇಂದು ದಸರಾ ಪುಸ್ತಕ ಮೇಳ ಉದ್ಘಾಟನೆ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.15ರಿಂದ 23ರ ವರೆಗೆ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಹಳೆ ಡಿಸಿ ಆಫೀಸ್‌ ಪಕ್ಕದ ಓವೆಲ್‌ ಗ್ರೌಂಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ. ಅ.15ರ ಸಂಜೆ 5ಕ್ಕೆ ಸಚಿವ ಶಿವರಾಜ ತಂಗಡಗಿ ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ.

Advertisement

ಪುಸ್ತಕ ಮೇಳದಲ್ಲಿ ಪ್ರತಿದಿನ ಹೆಸರಾಂತ ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ “ಸೆಲ್ಫಿ ವಿತ್‌ ಸಾಹಿತಿ’ ಎಂಬ ಶೀರ್ಷಿಕೆಯಡಿ ಸಾಹಿತಿಗಳ ಜತೆ ಪುಸ್ತಕ ಮೇಳಕ್ಕೆ ಬರುವ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅ.15ರಂದು ಎನ್‌.ಬಸವಯ್ಯ ಮತ್ತು ತಂಡದಿಂದ ಜಾನಪದ ಗಾಯನ, ಅ.16ರಂದು ಪ್ರೊ| ಎಂ.ಕೃಷ್ಣೇಗೌಡ ಅವರಿಂದ ನಗೆ ನುಡಿ, ಅ.17ರಂದು ಗಾನ ಸಾವಿರದ ಯಕ್ಷಗಾನ ಶಾಲೆ ವತಿಯಿಂದ ಕಂಸ ವಧೆ ಪ್ರಸಂಗ, ಅ.18ರಂದು ವೈ.ಎಂ.ಪುಟ್ಟಣ್ಣಯ್ಯ ಮತ್ತು ತಂಡದಿಂದ ರಂಗಗೀತೆ, ಅ.19ರಂದು ಡಾ| ಎಂ.ಖಾಸಿಂ ಮಲ್ಲಿಗೆ ಮತ್ತು ತಂಡದಿಂದ ಸುಗಮ ಸಂಗೀತ, ಅ.20ರಂದು ಉಷಾ ಅವರಿಂದ ನೃತ್ಯ, ಅ.21ರಂದು ಗಂಗಾಧರ ಮೂರ್ತಿ ಅವರಿಂದ ಪ್ರಾತ್ಯಕ್ಷಿಕೆ ಹಾಗೂ ಅ.22ರಂದು ಡಾ| ರಾಘವೇಂದ್ರ ಎಚ್‌. ಕುಲಕರ್ಣಿ ಅವರಿಂದ ಕರ್ನಾಟಕದಲ್ಲಿ ಶಿಲ್ಪಕಲೆ ವೈವಿಧ್ಯಗಳ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ.

ಇಂದು ಚಲನಚಿತ್ರೋತ್ಸವ ಉದ್ಘಾಟನೆ
ದಸರಾ ಮಹೋತ್ಸವದ ಅಂಗವಾಗಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅ.15ರ ಬೆಳಗ್ಗೆ 11.30ಕ್ಕೆ ನಗರದ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಉದ್ಘಾಟಿಸುವರು. ಸಚಿವ ಕೆ.ವೆಂಕಟೇಶ್‌, ಶಾಸಕ ಕೆ. ಹರೀಶ್‌ಗೌಡ ಹಾಜರಿರುವರು.

ಡಿಸಿ ಪರಿಶೀಲನೆ
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ|ಕೆ.ವಿ.ರಾಜೇಂದ್ರ ದಸರಾ ಉದ್ಘಾಟನೆ ಸಿದ್ಧತಾ ಕಾರ್ಯ ಪರಿಶೀಲಿಸಿದರು. ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿ ಶುದ್ಧೀಕರಣ ಕಾರ್ಯ, ಬೆಳ್ಳಿಯ ರಥದ ಸಿದ್ಧತೆ ಕುರಿತು ಅಗತ್ಯ ನಿರ್ದೇಶನ ನೀಡಿದರು.

ಇಂದು ಕಾರಂಜಿ ಉದ್ಘಾಟನೆ
ಶ್ರೀರಂಗಪಟ್ಟಣ: 2 ಕೋಟಿ ರೂ.ನಲ್ಲಿ ನವೀಕ ರಣಗೊಂಡ ಕೆಆರ್‌ಎಸ್‌ ಬೃಂದಾವನದ ಸಂಗೀತ ಕಾರಂಜಿಗೆ ಅ.15ರಂದು ಚಾಲನೆ ನೀಡಲಾಗುತ್ತಿದೆ ಎಂದು ಕೆಆರ್‌ಎಸ್‌ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ| ಕುಮಾರ, ಸಚಿವರು ಹಾಗೂ ಉನ್ನತ ಅಧಿ ಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವ ಹಿಸಲಿದ್ದಾರೆ ಎಂದು ಹೇಳಿದ್ದಾರೆ.

ದಸರಾ ಆಚರಣೆ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನ ಬೃಂದಾವನಕ್ಕೆ ವಿಶೇಷವಾಗಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಚಾಲನೆಗೊಳ್ಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀ ಕ್ಷಕ ಎಂಜಿನಿಯರ್‌ ಕೆ.ರಘುರಾಮ್‌ ವಿವರಿಸಿದ್ದಾರೆ.
6 ತಿಂಗಳಿಂದ 2 ಕೋಟಿ ರೂ.ನಲ್ಲಿ ಬೃಂದಾವನದ ಉತ್ತರ ಭಾಗದಲ್ಲಿರುವ ಸಂಗೀತ ನೃತ್ಯ ಕಾರಂಜಿಯನ್ನು ನವೀಕರಣಗೊಳಿಸಲಾಗಿತ್ತು. ದಸರಾ ಮಹೋತ್ಸವದಂದು ಕಾರಂಜಿಗೂ ಚಾಲನೆ ದೊರೆಯಲಿದೆ. ಇದರಿಂದ ಬೃಂದಾವ ನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next