Advertisement

ವರ್ಕಾಡಿಯಲ್ಲಿ ಬಾಲಕ ನಿಗೂಢ ಸಾವು

08:59 AM May 22, 2018 | Harsha Rao |

ಮಂಜೇಶ್ವರ: ನಾಲ್ಕನೇ ತರಗತಿ ವಿದ್ಯಾರ್ಥಿಯೋರ್ವ  ರವಿವಾರ ನಿಗೂಢವಾಗಿ ಸಾವಿಗೀಡಾಗಿದ್ದು, ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. 

Advertisement

ವರ್ಕಾಡಿ ಬೇಕರಿ ಜಂಕ್ಷನ್‌ನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಗಂಗಾಧರ ಆಚಾರ್ಯ ಅವರ ಪುತ್ರ, ಕಳಿಯೂರು ಸೈಂಟ್‌ ಜೋಸೆಫ್‌ ಶಾಲೆ ವಿದ್ಯಾರ್ಥಿ ಶ್ರವಂತ್‌ ಆಚಾರ್ಯ(9) ಸಾವಿಗೀಡಾದ ಬಾಲಕ.  

ಕಮ್ಮಾರ ವೃತ್ತಿಯ ಗಂಗಾಧರ ಆಚಾರ್ಯ   ಎರಡು ದಿನಗಳಿಂದ ಅಸೌಖ್ಯ ನಿಮಿತ್ತ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಶಾರದಾ ಮಜಿರ್ಪಳ್ಳದ ಹೊಟೇಲಿನಲ್ಲಿ ಕಾರ್ಮಿಕೆಯಾಗಿದ್ದಾರೆ. 

ಮೇ 20ರಂದು ಶ್ರವಂತ್‌ ಹಾಗೂ ಸಹೋದರ ಜಿತೇಶ್‌ ಮನೆ ಪಕ್ಕದಲ್ಲೇ ಇರುವ ಅಜ್ಜಿ ಮನೆಗೆ ತೆರಳಿದ್ದು, ಸಂಜೆ 4 ಗಂಟೆಗೆ ಅಲ್ಲಿಂದ ಹಿಂದಿರುಗಿದ್ದರು. ಈ ವೇಳೆ ಅಣ್ಣ ಜಿತೇಶ್‌ ಹಾಗೂ ಆತನ ಗೆಳೆಯ ಅಂಗಡಿಯಿಂದ ಸಾಮಗ್ರಿ ತರಲೆಂದು ತೆರಳಿದ್ದಾರೆ. ಆಗ ತಾನು ಕೂಡ ಬರುತ್ತೇನೆಂದ ಶ್ರವಂತ್‌ನಲ್ಲಿ ಅಣ್ಣ ಜಿತೇಶ್‌ ನೀನು ಮನೆಗೆ ಹೋಗು, ನಾವಿಬ್ಬರು ಹೋಗಿ ಬರುತ್ತೇವೆಂದು ಮನೆಗೆ ಕಳುಹಿಸಿದ್ದ. 

ಮರದ ಮಿಲ್ಲಿನ ಸಮೀಪ ಬಿದ್ದಿದ್ದ
ಸಾಮಗ್ರಿ ಖರೀದಿಸಿ ಜಿತೇಶ್‌ ಹಾಗೂ ಗೆಳೆಯ ಹಿಂದಿರುಗುವ ದಾರಿ ಮಧ್ಯೆ ಸಮೀಪದಲ್ಲೇ ಇರುವ ಮರದ ಮಿಲ್ಲೊಂದರ ಪಕ್ಕ ಹಾಕಿದ ಮರದ ದಿಮ್ಮಿಯೊಂದರಲ್ಲಿ ಶ್ರವಂತ್‌ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದ. ಕೂಡಲೇ ಜಿತೇಶ್‌ ಆತನನ್ನು ಕರೆದಿದ್ದು, ಆತ ಅಸ್ವಸ್ಥ ಸ್ಥಿತಿಯಲ್ಲಿದ್ದ. 

Advertisement

ದೇಹದಲ್ಲಿ ಗಾಯದ ಗುರುತು
 ಕುತ್ತಿಗೆಯಲ್ಲಿ ಗೀರಿದ ಗಾಯವಿದ್ದು, ಧರಿಸಿದ್ದ ಚಡ್ಡಿ  ಎಳೆದು ಹಾಕಿದ ಸ್ಥಿತಿಯಲ್ಲಿತ್ತು.  ತೊಡೆಗಳ ಮಧ್ಯೆ ಗಾಯವು ಕಂಡು ಬಂದಿದೆ. ಕೂಡಲೇ ಅಣ್ಣ ಮನೆಗೆ ತೆರಳಿ ಇತರರಲ್ಲಿ ತಿಳಿಸಿದ್ದು, ಬಳಿಕ ಶ್ರವಂತ್‌ನನ್ನು ಆಟೋ ರಿಕ್ಷಾದಲ್ಲಿ ಉಪ್ಪಳದ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತು.

ಅಲ್ಲಿ ಪರೀಕ್ಷಿಸಿದ ವೈದ್ಯರು ಕೂಡಲೇ ಮಂಗಳೂರಿಗೆ ಕೊಂಡು ಹೋಗಲು ತಿಳಿಸಿದಂತೆ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಯಿತು. ಈ ಮಧ್ಯೆ ಬಾಲಕ ಸಾವಿಗೀಡಾಗಿದ್ದಾನೆ. 

ಮನೆಯವರು ಮತ್ತು ಸ್ಥಳೀಯರು ಸಾವಿನಲ್ಲಿ ನಿಗೂಢತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ  ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂಗೆ ಕೊಂಡೊಯ್ಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next