Advertisement
60 ವರ್ಷಗಳಿಂದ ನಗರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಕೆ.ಸತ್ಯನಾರಾಯಣ ಸೋಮಯಾಜಿಯವರು ಶ್ರೀ ಟಿಫಾನೀಸ್ನ ಮಾಲಿಕರು. 1960ರ ದಶಕದಲ್ಲೇ ಅವರು ಅಣ್ಣ ರಾಮಕೃಷ್ಣ ಸೋಮಯಾಜಿ ಜೊತೆ ಪುಟ್ಟ ಹೋಟೆಲ್ ಪ್ರಾರಂಭಿಸಿದ್ದರು. ಈ ಸೋಮಯಾಜಿಯವರ ಮಗ ಹೃಷಿಕೇಶ್, ಹೋಟೆಲ್ ನೋಡಿಕೊಳ್ಳುತ್ತಿದ್ದಾರೆ. ಈಗಲೂ ಅವರು ಕಡಿಮೆ ದರದಲ್ಲಿ ಜನರಿಗೆ ಶುಚಿ ಹಾಗೂ ರುಚಿಯಾದ ತಿಂಡಿಯನ್ನು ಕೊಡಬೇಕೆಂಬ ಹಂಬಲವನ್ನೇ ಹೊಂದಿದ್ದಾರೆ. ಹೀಗಾಗಿ ಶ್ರೀ ಟಿಫಾನೀಸ್ ಈಗಲೂ ಕೆ.ಆರ್.ನಗರದಲ್ಲಿ ಫೇಮಸ್. ಈ ಊರಿಗೆ ಬಂದು, ಒಳ್ಳೆ ತಿಂಡಿ ಎಲ್ಲಿ ಸಿಗುತ್ತೆ ಅಂಥಾ ಕೇಳಿದ್ರೆ ಮೊದಲ ಕೇಳಿಬರುವ ಹೆಸರು ಶ್ರೀ ಟಿಫಾನೀಸ್ನದ್ದೇ. ಇಲ್ಲಿನ ಚುಂಚನಕಟ್ಟಿ ಫಾಲ್ಸ್ ವೀಕ್ಷಣೆಗೆ, ಅರಕೇಶ್ವರ ದೇಗುಲ, ಜಾತ್ರೆಗೆಂದು ಬರುವವರು ಶ್ರೀ ಟಿಫಾನೀಸ್ನಲ್ಲಿ ತಿಂಡಿ ತಿನ್ನುತ್ತಾರೆ.
ಬೆಳಗ್ಗೆ 7.30 ರಿಂದ 11.30, ಸಂಜೆ 4ರಿಂದ 7.30 ವರೆಗೆ ತೆರೆದಿರುವ ಈ ಶ್ರೀ ಟಿಫಾನೀಸ್ನಲ್ಲಿ ವಿಶೇಷ ತಿಂಡಿಯಾದ ಬೆಣ್ಣೆದೋಸೆ 2ಕ್ಕೆ 28 ರೂ., ಮಸಾಲೆ ದೋಸೆ 37 ರೂ., ಒಂದು ಪ್ಲೇಟ್ ಬೋಂಡಾ 18 ರೂ., ಗೋಲಿ ಬಂಜೆ 12 ರೂ. ಸಿಗುತ್ತದೆ. ಇನ್ನು ಬಿಸಿಬೆಳೆ ಬಾತ್ ಮುಂತಾದ ರೈಸ್ ಪದಾರ್ಥಗಳು ಗ್ರಾಹಕರ ಕೈಗೆಟಕುವ ದರದಲ್ಲಿ ಸಿಗುತ್ತದೆ. ರಾಜಕಾರಣಿಗಳ ಪ್ರಮುಖ ಉಪಾಹಾರ ಸ್ಥಳ:
ಮೈಸೂರು ಜಿಲ್ಲೆಯ ಪ್ರಮುಖ ರಾಜಕಾರಣಿಗಳಿಗೆ ಈಗಲೂ ಶ್ರೀ ಟಿಫಾನೀಸ್ ಇಷ್ಟವಾಗುವ ಹೋಟೆಲ್. ಸಂಸದ ಪ್ರತಾಪ್ಸಿಂಹ, ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ವಾಸು, ಮಾಜಿ ಸಚಿವ ನಂಜಪ್ಪ ಸೇರಿದಂತೆ ಪ್ರಮುಖ ರಾಜಕಾರಣಿಗಳು ಇಲ್ಲಿ ಉಪಾಹಾರ ಸೇವಿಸಿದ್ದಾರೆ. ಎಚ್.ವಿಶ್ವನಾಥ್ ಈಗಲೂ ಶ್ರೀಟಿಫಾನೀಸ್ನಲ್ಲೇ ಉಪಾಹಾರ ಸೇವಿಸುತ್ತಾರೆ.
Related Articles
ಮೈಸೂರು, ಕೆ.ಆರ್.ನಗರದ ಸುತ್ತಮುತ್ತ ಶೂಟಿಂಗ್ಗೆ ಅಂತ ಬಂದ್ರೆ ವರನಟ ಡಾ.ರಾಜ್ಕುಮಾರ್ ಶ್ರೀ ಟಿಫಾನೀಸ್ನಲ್ಲಿ ಬೆಣ್ಣೆದೋಸೆ ತಿನ್ನದೇ ಹೋಗುತ್ತಿರಲಿಲ್ಲವಂತೆ. ಇಲ್ಲಿನ ಸ್ವತ್ಛತೆ, ರುಚಿಗೆ ಮನಸೋತಿದ್ದ ರಾಜ್ಕುಮಾರ್, ಶೂಟಿಂಗ್ ಸ್ಥಳಕ್ಕೂ ಇಲ್ಲಿನ ದೋಸೆ ಕಟ್ಟಿಸಿಕೊಂಡು ಹೋಗುತ್ತಿದ್ದರಂತೆ. ಅಷ್ಟೇ ಅಲ್ಲ, ಹಿರಿಯ ನಟ ಮೈಸೂರಿನ ಅಶ್ವತ್ಥ್ ಅವರಿಗೆ ಶ್ರೀ ಟಿಫಾನೀಸ್ ಪ್ರಮುಖ ಉಪಾಹಾರ ಸ್ಥಳ. ಕೆ.ಆರ್.ನಗರದಲ್ಲಿನ ತಮ್ಮ ಸಂಬಂಧಿಕರ ಮನೆಗೆ ಬಂದ್ರೆ ಅಶ್ವತ್ಥ್ ಮರೆಯದೇ ಇಲ್ಲಿ ತಿಂಡಿ ತಿನ್ನುತ್ತಿದ್ದರಂತೆ. ಸಂಗೀತ ನಿರ್ದೇಶಕ ಹಂಸಲೇಖ, ಮೈಸೂರು ಲೋಕೇಶ್ ಮುಂತಾದ ಸೆಲೆಬ್ರಿಟಿಗಳು ಇಲ್ಲಿ ಉಪಾಹಾರ ಸೇವಿಸಿದ್ದಾರೆ.
Advertisement
ಎಲ್ಲಕ್ಕೂ ಬಿಸಿನೀರು ಬಳಕೆ:ಗ್ರಾಹಕರು ತಿಂದ ತಟ್ಟೆ, ಲೋಟ, ಬಳಸಿದ ಪಾತ್ರೆಗಳನ್ನು ಬಿಸಿ ನೀರಿನಲ್ಲೇ ತೊಳೆಯಲಾಗುತ್ತದೆ. ಗ್ರಾಹಕರಿಗೂ ಬಿಸಿನೀರನ್ನೇ ಕುಡಿಯಲು ಕೊಡುತ್ತಾರೆ. ಅಲ್ಲದೆ, ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡು ಸದಾ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. – ಎ.ಚೈತನ್ಯ, ಭೋಗೇಶ ಎಂ.ಆರ್.