Advertisement

ರೂಪಾಂತರಿಗೂ ಲಸಿಕೆ ಸಮರ್ಥ!

01:13 AM Dec 30, 2020 | Team Udayavani |

ಹೊಸದಿಲ್ಲಿ: ಲಸಿಕೆಗಳ ಸಿದ್ಧತೆ ಬಹುತೇಕ ಪೂರ್ಣ ಗೊಂಡಿವೆ. ಈ ನಡುವೆ ರೂಪಾಂತರಿ ಕೊರೊನಾವೂ ಅಬ್ಬರಿಸುತ್ತಿದೆ. ಸಮಾಧಾನಕರ ಸಂಗತಿಯೆಂದರೆ, ಭಾರತದ ಲಸಿಕೆಗಳು ಹೊಸ ರೂಪದ ಕೊರೊನಾ ಸಂಹಾರಕ್ಕೂ ಅತ್ಯಂತ ಸಮರ್ಥ!

Advertisement

ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ| ಕೆ. ವಿಜಯ ರಾಘವನ್‌ ಇದನ್ನು ಖಚಿತಪಡಿಸಿದ್ದಾರೆ. “ಪ್ರಸ್ತುತ ಶೋಧಿಸಲ್ಪಟ್ಟ ಲಸಿಕೆಗಳು ಇಂಗ್ಲೆಂಡ್‌, ದ. ಆಫ್ರಿಕದಲ್ಲಿ ಪತ್ತೆಯಾದ ರೂಪಾಂತರಿ ವೈರಾಣುವನ್ನು ಮಣಿಸುವಷ್ಟು ಸಮರ್ಥ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ.

“ಹೊಸ ಲಸಿಕೆಗಳು ರೂಪಾಂತರಿ ಕೊರೊನಾಕ್ಕೆ ಮದ್ದಲ್ಲ ಎನ್ನುವ ವಾದಕ್ಕೆ ಯಾವುದೇ ಆಧಾರಗಳಿಲ್ಲ. ಬಹುತೇಕ ಲಸಿಕೆಗಳು ಸ್ಪೈಕ್‌ ಪ್ರೊಟೀನ್‌ ಟಾರ್ಗೆಟ್‌ ಮಾಡಿಯೇ ಉತ್ಪಾದಿಸಲಾಗಿದೆ. ಲಸಿಕೆಗಳು ನಮ್ಮಲ್ಲಿನ ಪ್ರತಿರೋಧ ವ್ಯವಸ್ಥೆಗೆ ಉತ್ತೇಜನ ತುಂಬಲಿವೆ. ರೂಪಾಂತರಿ ವೈರಾಣುಗಳಿಗೆ ಲಸಿಕೆಯ ಸಾಮರ್ಥ್ಯ ದುರ್ಬಲಗೊಳಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೊವ್ಯಾಕ್ಸಿನ್‌ ಸಮರ್ಥ: ಇದೇ ವೇಳೆ, ರೂಪಾಂತರಿ ಕೊರೊನಾ ಕಟ್ಟಿಹಾಕಲು ಕೊವ್ಯಾಕ್ಸಿನ್‌ ಪರಿಣಾಮಕಾರಿ ಎಂದು ಭಾರತ್‌ ಬಯೋಟೆಕ್‌ ಎಂಡಿ ಕೃಷ್ಣ ಎಂ. ಎಳ್ಳಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2ನೇ ಹಂತದ ಪ್ರಯೋಗದಲ್ಲಿ ಕೊವ್ಯಾಕ್ಸಿನ್‌, ಸುದೀರ್ಘಾವಧಿಯ ನಿರೋಧಕ ಶಕ್ತಿ ಒದಗಿಸುವ ಭರವಸೆ ನೀಡಿತ್ತು.

ಮೈಮರೆತರೆ ಆಪತ್ತು!: “ಚಳಿಗಾಲದ ಈ ಅವಧಿಯಲ್ಲಿ ಬಹುಪಾಲು ಜನರು ಈಗಲೂ ಸೋಂಕಿಗೆ ತುತ್ತಾಗುವ ಅಪಾಯವಿದೆ’ ಎಂದು ನೀತಿ ಆಯೋಗ ಸದಸ್ಯ ಡಾ| ವಿ.ಕೆ. ಪೌಲ್‌ ಎಚ್ಚರಿಸಿದ್ದಾರೆ. ಇಂಗ್ಲೆಂಡಿನ ರೂಪಾಂತರಿ ವೈರಾಣು ಈಗಾಗಲೇ ಭಾರತ ಸಹಿತ ಹಲವು ದೇಶಗಳಿಗೆ ಕಾಲಿಟ್ಟಾಗಿದೆ. ಹೀಗಾಗಿ ನಾವು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ. ಯಾರೊಬ್ಬರೂ ಇದನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ.

Advertisement

ಪುರುಷರು ಹೆಚ್ಚು ಸಾವು!:“ದೇಶದಲ್ಲಿ ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿದವರಲ್ಲಿ ಶೇ.55 ಮಂದಿ 60 ವರ್ಷ ದಾಟಿದವರು. ಶೇ.70 ಮಂದಿ ಪುರುಷ ಸೋಂಕಿತರು’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ತಿಳಿಸಿದ್ದಾರೆ.

“ಇಂಗ್ಲೆಂಡಿನಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಳ್ಳುವ ಮುಂಚೆಯೇ ಭಾರತದ ಲ್ಯಾಬ್‌ಗಳು 500 ಬಗೆಯ ವಂಶವಾಹಿಗಳ ಪರೀಕ್ಷೆ ನಡೆಸಿವೆ. ಇದಕ್ಕೆ ತಕ್ಕಂತೆ ಲಸಿಕೆ ಶೋಧ ನಡೆಸಲಾಗಿದೆ’ ಎಂದೂ ಧೈರ್ಯ ತುಂಬಿದ್ದಾರೆ.

2 ದಿನಗಳ ಡ್ರೈ ರನ್‌ ಯಶಸ್ವಿ: ಲಸಿಕೆ ಕಾರ್ಯಕ್ರಮದ ಸಂಭಾವ್ಯ ದೋಷ ನಿಯಂತ್ರಿಸುವ ಸಲುವಾಗಿ ನಡೆದ 2 ದಿನಗಳ “ಡ್ರೈ ರನ್‌’ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. 4 ರಾಜ್ಯಗಳಲ್ಲಿ ನಡೆದ ಡ್ರೈ ರನ್‌ ವೇಳೆ ವಿಶೇಷ ತಂಡ, ನಿಗದಿತ ಜಿಲ್ಲಾಡಳಿತಗಳಿಗೆ ಹಲವು ಟಾಸ್ಕ್ಗಳನ್ನು ನೀಡಿತ್ತು. ಕೃತಕ ಫ‌ಲಾನುಭವಿ ದತ್ತಾಂಶಗಳನ್ನು ಕೋವಿನ್‌ ಆ್ಯಪ್‌ಗೆ ನಮೂದಿಸುವುದು, ಲಸಿಕೆ ಕೇಂದ್ರಗಳ ರಚನೆ, ಲಸಿಕೆ ಹಂಚಿಕೆ, ಫ‌ಲಾನುಭವಿ ಮತ್ತು ಚುಚ್ಚುಮದ್ದುಗಾರರ ನಡುವಿನ ಲಸಿಕೆ ಪ್ರಕ್ರಿಯೆಯ ಸಂವಹನ ವಿವರ… ಮುಂತಾದ ಕಾರ್ಯಗಳನ್ನು ವಿಶೇಷ ತಂಡ ಪರಿಶೀಲಿಸಿದೆ.

ರಾಜ್ಯ ಮತ್ತು ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಿಂದ ಡ್ರೈ ರನ್‌ ಕುರಿತಾದ ಎಲ್ಲ ವಿವರಗಳನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಾರ್ವಜನಿಕ ಆರೋಗ್ಯ ವಿಭಾಗದ ಜಂಟಿ ಕಾರ್ಯದರ್ಶಿಗಳು ಪಡೆದಿದ್ದಾರೆ. ತಂಡದ ಪ್ರತಿಕ್ರಿಯೆ ಗಳನ್ನೂ ದಾಖಲಿಸಿಕೊಳ್ಳಲಾಗಿದೆ. ಕೋವಿನ್‌ ಆ್ಯಪ್‌ ಕುರಿತಾಗಿ ಬಂದ ಹೆಚ್ಚುವರಿ ಸಲಹೆಗಳನ್ನೂ ಗಮನಿಸಲಾ ಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದ 50 ಪತ್ರಕರ್ತರು ಸಾವು: ಕೊರೊನಾ ಕಾಲದಲ್ಲಿ ಸದಾ ಸಮಾಜದ ಮಧ್ಯೆ ಇದ್ದು ಕರ್ತವ್ಯ ನಿರ್ವಹಿಸಿದ್ದ ಸುಮಾರು 500ಕ್ಕೂ ಅಧಿಕ ಪತ್ರಕರ್ತರು ಈ ವರ್ಷ ಸಾವನ್ನಪ್ಪಿದ್ದಾರೆ! ಇದು ಪ್ರಸ್‌ ಎಂಬ್ಲಿಮ್‌ ಕ್ಯಾಂಪೇನ್‌ (ಪಿಇಸಿ) ಬಿಡುಗಡೆ ಮಾಡಿರುವ ದತ್ತಾಂಶದ ವರದಿ. ಈ ಪೈಕಿ ಭಾರತದ 50ಕ್ಕೂ ಅಧಿಕ ಪತ್ರಕರ್ತರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇಂಗ್ಲೆಂಡ್‌ನ‌ ವಿಮಾನಗಳಿಗೆ ನಿರ್ಬಂಧ ವಿಸ್ತರಣೆ?: ಇನ್ನೊಂದೆಡೆ, ಇಂಗ್ಲೆಂಡಿನಿಂದ ಭಾರತಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಮತ್ತಷ್ಟು ಕಾಲ ವಿಸ್ತರಿಸಲು ಚಿಂತಿಸುತ್ತಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಈಗಾಗಲೇ ಡಿ.21ರಿಂದ ಡಿ. 31ರ ವರೆಗೆ ಇಂಗ್ಲೆಂಡಿನ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿತ್ತು. ವಿಸ್ತರಣೆ ಅವಧಿ ಕುರಿತು ಸಚಿವಾಲಯ ಶೀಘ್ರವೇ ಪ್ರಕಟನೆ ಹೊರಡಿಸಲಿದೆ.

ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಸಿಎಪಿಎಫ್!: ಲಸಿಕೆ ನೀಡುವಿಕೆ ಕಾರ್ಯಕ್ರಮ ವೇಳೆ ಸೃಷ್ಟಿಯಾ ಗುವ ಮೆಡಿಕಲ್‌ ತಾಜ್ಯಗಳ ಸುರಕ್ಷಿತ ವಿಲೇವಾರಿಗೆ ಕೇಂದ್ರ ಸಶಸ್ತ್ರ ಮೀಸಲು ಪಡೆಗಳು (ಸಿಎಪಿಎಫ್) ನೆರವಾಗಲಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.

6 ತಿಂಗಳಲ್ಲೇ ಕನಿಷ್ಠ ಸೋಂಕು
ಭಾರತದಲ್ಲಿ ಸತತ 3ನೇ ದಿನ 20 ಸಾವಿರಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಒಂದೇ ದಿನ 16,432 ಮಂದಿ ಸೋಂಕಿಗೆ ಒಳಗಾಗಿದ್ದು, 252 ಮಂದಿಗೆ ವೈರಾಣುವಿನಿಂದ ಉಸಿರು ನಿಲ್ಲಿಸಿದ್ದಾರೆ. ಇದು ಕಳೆದ 6 ತಿಂಗಳಲ್ಲೇ ಅತ್ಯಂತ ಕನಿಷ್ಠ .  ಗಣರಾಜ್ಯೋತ್ಸವ ವೀಕ್ಷಕರಿಗೆ ಕತ್ತರಿ: 2021ರ ಜ.26ರ ಗಣರಾಜ್ಯೋತ್ಸವ ಪಥಸಂಚಲನ ವೀಕ್ಷಕರಿಗೆ ಸಾಮಾಜಿಕ ಅಂತರ ದೃಷ್ಟಿಯಲ್ಲಿಟ್ಟುಕೊಂಡು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವೀಕ್ಷಕರ ಸಂಖ್ಯೆಯನ್ನು ಭಾರೀ ಕಡಿತಗೊಳಿಸಲು ಸರಕಾರ ಮುಂದಾಗಿದೆ.

ಲಂಡನ್ನಿಂದ ಮರಳಿದವರಿಗೆ ವಂಶವಾಹಿ ಪರೀಕ್ಷೆ!
ಡಿ.9ರಿಂದ- ಡಿ.22ರ ವರೆಗೆ ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿ, ಪಾಸಿಟಿವ್‌ ದೃಢಪಟ್ಟವರಿಗೆ ಕಡ್ಡಾಯವಾಗಿ ವಂಶವಾಹಿ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಗೃಹ ಸಚಿವಾಲಯ ತನ್ನ ಮಾರ್ಗಸೂಚಿಯಲ್ಲಿ ಸೂಚಿಸಿದೆ. ಪಾಸಿಟಿವ್‌ ವ್ಯಕ್ತಿಗಳಲ್ಲದೆ, ಸೋಂಕಿನ ಲಕ್ಷಣ ಇದ್ದವರೂ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದೆ. ರೂಪಾಂತರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳೂ ಕಟ್ಟುನಿಟ್ಟಿನ ನಿಗಾವಹಿಸುವಂತೆ ಆದೇಶಿಸಿದೆ.

ತೆಲುಗು ಸ್ಟಾರ್‌ ರಾಮ್‌ಚರಣ್‌ಗೂ ಸೋಂಕು!
ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್‌ಚರಣ್‌ಗೆ ಸೋಂಕು ತಗುಲಿದೆ. “ನನಗೆ ಪಾಸಿಟಿವ್‌ ದೃಢಪಟ್ಟಿದೆ. ಯಾವುದೇ ಲಕ್ಷಣಗಳಿಲ್ಲ. ಹೋಮ್‌ ಕ್ವಾರಂಟೈನ್‌ನಲ್ಲಿದ್ದೇನೆ. ಶೀಘ್ರವೇ ಗುಣಮುಖನಾಗಿ ಅಪಾಯದಿಂದ ಹೊರಬರುವ ವಿಶ್ವಾಸವಿದೆ’ ಎಂದು ಟ್ವೀಟಿಸಿದ್ದಾರೆ.
ಸಚಿವ ಚೌಬೆಗೆ ಪಾಸಿಟಿವ್‌: ಕೇಂದ್ರ ರಾಜ್ಯ ಆರೋಗ್ಯ ಖಾತೆ ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

ತೆಲುಗು ಸ್ಟಾರ್‌ ರಾಮ್‌ಚರಣ್‌ಗೂ ಸೋಂಕು!
ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್‌ಚರಣ್‌ಗೆ ಸೋಂಕು ತಗುಲಿದೆ. “ನನಗೆ ಪಾಸಿಟಿವ್‌ ದೃಢಪಟ್ಟಿದೆ. ಯಾವುದೇ ಲಕ್ಷಣಗಳಿಲ್ಲ. ಹೋಮ್‌ ಕ್ವಾರಂಟೈನ್‌ನಲ್ಲಿದ್ದೇನೆ. ಶೀಘ್ರವೇ ಗುಣಮುಖನಾಗಿ ಅಪಾಯದಿಂದ ಹೊರಬರುವ ವಿಶ್ವಾಸವಿದೆ’ ಎಂದು ಟ್ವೀಟಿಸಿದ್ದಾರೆ.

ಸಚಿವ ಚೌಬೆಗೆ ಪಾಸಿಟಿವ್‌: ಕೇಂದ್ರ ರಾಜ್ಯ ಆರೋಗ್ಯ ಖಾತೆ ಸಚಿವ ಅಶ್ವಿ‌ನಿ ಕುಮಾರ್‌ ಚೌಬೆ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next