Advertisement

Ayodhya Temple: ಭಗವಾನ್‌ ಶ್ರೀರಾಮನ ವಿಗ್ರಹ ರಚನೆಯಲ್ಲಿ ಮುಸ್ಲಿಂ ಶಿಲ್ಪಿಗಳ ಕೈಚಳಕ

01:30 PM Dec 29, 2023 | ನಾಗೇಂದ್ರ ತ್ರಾಸಿ |

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬೃಹತ್‌ ರಾಮಮಂದಿರದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೇ ರಾಮಮಂದಿರ ಉದ್ಘಾಟನಾ ಸಮಾರಂಭ, ವಿಗ್ರಹ ಸ್ಥಾಪನೆಯ ರೂಪರೇಷೆ ಸಿದ್ಧಗೊಂಡಿದ್ದು, ಅಯೋಧ್ಯೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಏತನ್ಮಧ್ಯೆ ಪಶ್ಚಿಮಬಂಗಾಳದ ಉತ್ತರ 24 ಪರಾಗಣ ಜಿಲ್ಲೆಯ ಇಬ್ಬರು ಮುಸ್ಲಿಂ ಶಿಲ್ಪಿಗಳು ಅಯೋಧ್ಯೆ ದೇವಾಲಯದ ಅಲಂಕಾರಕ್ಕಾಗಿ ಭಗವಾನ್‌ ಶ್ರೀರಾಮನ ವಿಗ್ರಹ ರಚನೆಯಲ್ಲಿ ತೊಡಗಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಯಾರೀವರು?

ಮೊಹಮ್ಮದ್‌ ಜಮಾಲುದ್ಧೀನ್‌ ಮತ್ತು ಅವರ ಮಗ ಬಿಟ್ಟು ಅಯೋಧ್ಯೆ ರಾಮಮಂದಿರದ ಸಂಕೀರ್ಣವನ್ನು ಅಲಂಕರಿಸುವ ಭವ್ಯವಾದ ಶ್ರೀರಾಮನ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ರಾಮರಾಜ್ಯದ ನೆನಪನ್ನು ಮರುಕಳಿಸುವ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನ ಭರದಿಂದ ಸಾಗಿದೆ. ಭಗವಾನ್‌ ರಾಮಲಲ್ಲಾನ ವಿಗ್ರಹ ಸ್ಥಾಪನೆಯ ಗರ್ಭಗುಡಿಗೆ ನೇಪಾಳದಿಂದ ತಂದ ಪವಿತ್ರ ಸಾಲಿಗ್ರಾಮ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಮತ್ತೊಂದೆಡೆ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಡೀ ಅಯೋಧ್ಯಾ ನಗರವನ್ನು ಅಲಂಕರಿಸುವ ಕಾರ್ಯ ನಡೆಯುತ್ತಿದೆ. ವಿದ್ಯುದೀಪಗಳಿಂದ ಅಲಂಕಾರಗೊಳ್ಳಲಿರುವ ರಸ್ತೆಯ ಸ್ಥಳಗಳಲ್ಲಿ ಭಗವಾನ್‌ ಶ್ರೀರಾಮನ ವಿಗ್ರಹಗಳನ್ನು ಇಡಲು ಸಿದ್ಧತೆ ನಡೆಯುತ್ತಿದೆ.

Advertisement

ಕುತೂಹಲಕಾರಿ ಅಂಶ ಎಂಬಂತೆ ಈ ಅಲಂಕಾರಿಕ ಶ್ರೀರಾಮನ ವಿಗ್ರಹಗಳು ಅಯೋಧ್ಯೆಯಿಂದ ದೂರದಲ್ಲಿರುವ ಪಶ್ಚಿಮಬಂಗಾಳದ ಉತ್ತರ ೨೪ ಪರಗಣ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. 24 ಪರಗಣದಲ್ಲಿನ ದತ್ತಪುಕುರ್‌ ಎಂಬಲ್ಲಿ ಭಗವಾನ್‌ ಶ್ರೀರಾಮನ ಬೃಹತ್‌ ಗಾತ್ರದ ಫೈಬರ್‌ ಮೂರ್ತಿಗಳನ್ನು ಜಮಾಲುದ್ದೀನ್‌ ಮತ್ತು ಪುತ್ರ ಬಿಟ್ಟು ತಯಾರಿಸುತ್ತಿದ್ದಾರೆ. ಮಳೆ ಹಾಗೂ ಬಿಸಿಲಿನ ತಾಪಮಾನವನ್ನು ತಡೆದುಕೊಂಡು ಗಮನಾರ್ಹ ಬಾಳಿಕೆಗೆ ಈ ವಿಗ್ರಹ ಹೆಸರುವಾಸಿಯಾಗಿದೆ. ಸಾಂಪ್ರದಾಯಿಕ ಮಣ್ಣಿನ ಮೂರ್ತಿಗಿಂತ ಈ ಫೈಬರ್‌ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಮುಖವಾಗಿ ಪ್ರತಿಕೂಲ ಹವಾಮಾನ ತಡೆದುಕೊಳ್ಳಬಲ್ಲ ಈ ಫೈಬರ್‌ ಮೂರ್ತಿಯನ್ನು ಹೊರಾಂಗಣದಲ್ಲಿ ಹೆಚ್ಚಾಗಿ ಇಡಲು ಬಳಸಿಕೊಳ್ಳಲಾಗುತ್ತದೆ.

ಇತ್ತೀಚೆಗೆ ಫೈಬರ್‌ ಶ್ರೀರಾಮನ ವಿಗ್ರಹವನ್ನು ತಯಾರಿಸಿಕೊಡಬೇಕೆಂಬ ಆರ್ಡರ್‌ ಅಯೋಧ್ಯೆಯಿಂದ ತಮಗೆ ಬಂದಿರುವುದಾಗಿ ಜಮಾಲುದ್ದೀನ್‌ ಪುತ್ರ ಬಿಟ್ಟು ತಿಳಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ವರ್ಕ್‌ ಶಾಪ್‌ ಮಣ್ಣಿನ ವಿಗ್ರಹಕ್ಕೆ ಹೆಸರುವಾಸಿಯಾಗಿತ್ತು. ಆದರೆ ಫೈಬರ್‌ ವಿಗ್ರಹದ ಬೇಡಿಕೆ ಹೆಚ್ಚಾಗಿದ್ದರಿಂದ ಅದಕ್ಕೆ ಹೆಚ್ಚು ಒತ್ತು ನೀಡಿ ವಿಗ್ರಹ ತಯಾರಿಸುತ್ತಿದ್ದಾರಂತೆ. ಬೃಹತ್‌ ಗಾತ್ರದ ವಿಗ್ರಹ ತಯಾರಿಕೆಗೆ ಅಂದಾಜು 2.8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಕರಕುಶಲ ಕೆಲಸದ ಸಂಬಳವೂ ಸೇರಿರುತ್ತದೆ.

ಸುಮಾರು 30ರಿಂದ 35 ಜನರು ಈ ಬೃಹತ್‌ ಶ್ರೀರಾಮನ ವಿಗ್ರಹ ತಯಾರಿಯಲ್ಲಿ ತೊಡಗಿಕೊಂಡಿದ್ದು, ಸುಮಾರು ಒಂದೂವರೆ ತಿಂಗಳು ಕಾಲ ವಿಗ್ರಹ ತಯಾರಿಸಲು ಬೇಕಾಗಿದ್ದು, ನಂತರ ಈ ವಿಗ್ರಹಗಳನ್ನು ಉತ್ತರ 24 ಪರಗಣದಿಂದ ಅಯೋಧ್ಯೆಗೆ ಸಾಗಿಸಲು 45 ದಿನಗಳ ಅಗತ್ಯವಿದೆ ಎಂದು ಯುವಶಿಲ್ಪಿ ಬಿಟ್ಟು ತಿಳಿಸಿದ್ದಾರೆ.

ವಿಗ್ರಹ ತಯಾರಿ ಬಗ್ಗೆ ಪ್ರಶ್ನಿಸಿದಾಗ ಜಮಾಲುದ್ದೀನ್‌ ಹೇಳಿದ್ದಿಷ್ಟು: ಧರ್ಮ ಎಂಬುದು ನಮ್ಮ ವೈಯಕ್ತಿಕ ವಿಚಾರ. ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಆದರೆ ಇದರಲ್ಲಿ ನಮ್ಮ ಸಂದೇಶ ಸಿಂಪಲ್ಲಾಗಿದೆ…ಕೋಮುವಾದದ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಒಟ್ಟಾಗಿ ಬಾಳಬೇಕಾಗಿದೆ. ಆ ನಿಟ್ಟಿನಲ್ಲಿ ಭಗವಾನ್‌ ಶ್ರೀರಾಮನ ವಿಗ್ರಹ ತಯಾರಿ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಮೂಲಕ ನಾನೊಬ್ಬ ಕಲಾವಿದ ಎಂಬ ಸಂದೇಶದೊಂದಿಗೆ ಭ್ರಾತೃತ್ವ ಸಂಸ್ಕೃತಿ ಬೆಳೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next