Advertisement

ಕೊಲೆ ಪ್ರಕರಣ: ಜ್ಯೋತಿ ಸೋದರ ಬಂಧನ

10:48 AM Dec 06, 2018 | Team Udayavani |

ಕಲಬುರಗಿ: ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ವಧುದಕ್ಷಿಣೆಗಾಗಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕೊಲೆಯಾದ ಅಜಯ ಅಲಿಯಾಸ್‌ ನಾಗೇಶ ಮತ್ತು ಜ್ಯೋತಿ ಅಲಿಯಾಸ್‌ ಲಲಿತಾ ಪತಿ-ಪತ್ನಿಯರಲ್ಲ. ಈ ಇಬ್ಬರೂ ಮದುವೆಯಾಗದೆ ಸಹಜೀವನ
ನಡೆಸುತ್ತಿದ್ದರು. ಜ್ಯೋತಿಯ ಸಹೋದರನೇ ಈ ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸ್‌ ತನಿಖೆಯಿಂದ ಬಯಲಿಗೆ ಬಂದಿದೆ.

Advertisement

ಕಳೆದ ನ.2ರಂದು ರಾತ್ರಿ ನಿಡಗುಂದಾ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಅಜಯ ಮತ್ತು ಜ್ಯೋತಿ ಒಟ್ಟಿಗೆ ಇದ್ದಾಗ ಮೂವರು ಆರೋಪಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಜೋಡಿಯನ್ನು ಕೊಲೆ ಮಾಡಿದ್ದರು. ನಂತರ ಇಬ್ಬರ ಶವಗಳನ್ನು ಗ್ರಾಮದಿಂದ ಒಂದು ಕಿ.ಮೀ ದೂರದ ಹೊಲವೊಂದರಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.

ಪ್ರಕರಣದ ಸಂಬಂಧ ಡಿ.4 ರಂದು ಸೇಡಂ ಬಸ್‌ ನಿಲ್ದಾಣದಲ್ಲಿ ನಿಡಗುಂದಾ ಗ್ರಾಮದ ನಿವಾಸಿ, ಜ್ಯೋತಿಯ ಮಲತಾಯಿ ಮಗ ದತ್ತು ಅಲಿಯಾಸ್‌ ದತ್ತಪ್ಪ ಪಾರ್ದಿ ಎನ್ನುವಾತನನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ತಿಳಿಸಿದ್ದಾರೆ.

ನಗರದ ಪೊಲೀಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಯಾದ ಅಜಯ ಮಹಾರಾಷ್ಟ್ರ ಮೂಲದವನಾಗಿದ್ದು, ಕಳ್ಳತನದಂತ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಅದೇ ರೀತಿ ದತ್ತು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಈ ನಡುವೆ ಇಬ್ಬರ ಮಧ್ಯೆ ಸೇ°ಹ ಬೆಳೆದು, ಅಲ್ಲಿಂದ ಅಜಯ ನಿಡಗುಂದಾ ಗ್ರಾಮದಲ್ಲಿ ಬಂದು ನೆಲೆಸಿದ್ದ. ತದನಂತರ ದತ್ತುವಿನ ಸಹೋದರಿಯಾದ ಜ್ಯೋತಿ ಮತ್ತು
ಅಜಯ ನಡುವೆಯೂ ಸ್ನೇಹ ಬೆಸೆದಿತ್ತು. ಜ್ಯೋತಿ ಹಾಗೂ ಅಜಯ ಇಬ್ಬರೂ ಮದುವೆಯಾಗಲು ಒಪ್ಪಿಕೊಂಡು ಒಟ್ಟಿಗೆ ವಾಸವಾಗಿದ್ದರು ಎಂದರು.

ಇವರು ಪಾರ್ದಿ ಸಮುದಾಯದವರಾಗಿದ್ದು, ತಮ್ಮ ಸಂಪ್ರದಾಯದಂತೆ ಜ್ಯೋತಿಯನ್ನು ಮದುವೆಯಾಗಲು ಒಂದು ಲಕ್ಷ ರೂ. ವಧುದಕ್ಷಿಣೆ ನೀಡಲು ಅಜಯ ಒಪ್ಪಿಕೊಂಡಿದ್ದ. ಆದರೆ, ಮದುವೆಗೆ ಮುನ್ನವೇ ಜ್ಯೋತಿಯೊಂದಿಗೆ ಸಹ ಜೀವನ ನಡೆಯುತ್ತಿರುವುದರಿಂದ ವಧುದಕ್ಷಿಣೆ ನೀಡಲು ಅಜಯ ನಿರಾಕರಿಸಿದ್ದ. ಅಲ್ಲದೇ, ಈ ಹಿಂದೆ ಕಳ್ಳತನ ಮಾಡಿದ್ದ ಚಿನ್ನಾಭರಣದಲ್ಲಿ 80 ಗ್ರಾಂ ಚಿನ್ನದ ಪಾಲನ್ನು ದತ್ತುವಿಗೆ ಅಜಯ ನೀಡಬೇಕಿತ್ತು ಅದನ್ನು ನೀಡಿರಲಿಲ್ಲ ಎಂದು ವಿವರಿಸಿದರು.

Advertisement

ವಧುದಕ್ಷಿಣೆ ನಿರಾಕರಣೆ ಹಾಗೂ ತನಗೆ ಸಿಗಬೇಕಿದ್ದ ಚಿನ್ನದ ಪಾಲು ಸಿಕ್ಕಿಲ್ಲ ಎನ್ನುವ ಸಿಟ್ಟಿನಿಂದ ನ.2ರಂದು ಅಜಯ, ಜ್ಯೋತಿ ಒಟ್ಟಿಗೆ ಇದ್ದ ಸ್ಥಳಕ್ಕೆ ಆರೋಪಿ ದತ್ತು ತನ್ನ ಇಬ್ಬರು ಸಹಚರರೊಂದಿಗೆ ತೆರಳಿದ್ದ. ಈ ವೇಳೆ ಅಜಯ ನೊಂದಿಗೆ ಮೂವರು ಜಗಳ ತೆಗೆದು ಕೊಲೆ ಮಾಡಿದ್ದರು.
 
ಜತೆಗೆ ಅಜಯ ಕೊಲೆಯ ವಿಷಯ ಹಾಗೂ ಹಿಂದಿನ ಕಳ್ಳತನ ಪ್ರಕರಣಗಳು ಬೆಳಕಿಗೆ ಬರಬಾರದೆಂದು ಜ್ಯೋತಿಯನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲಿಂದ ಶವಗಳನ್ನು ಸಾಗಿಸಿ ಹೊಲದಲ್ಲಿ ಸುಟ್ಟು ಪರಾರಿಯಾಗಿದ್ದರು. ಈ ಕೊಲೆಗಳನ್ನು ಮುಂಬೈ ಕಡೆಯಿಂದ ಬಂದು ಯಾರೋ ಮಾಡಿ ಹೋಗಿದ್ದಾರೆ ಎಂಬಂತೆ ಬಿಂಬಿಸಲು ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದರು.

ಸೇಡಂ ತಾಲೂಕಿನ ಅಪರಿಚಿತ ಮಹಿಳೆ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ವೇಳೆ ಅಜಯ ಮತ್ತು ಜ್ಯೋತಿ ಕೊಲೆ ಪ್ರಕರಣ ಬಯಲಿಗೆ ಬಂದಿದೆ ಎಂದು ಮಾಹಿತಿ ನೀಡಿದರು. ಎಸ್‌ಪಿ, ಹೆಚ್ಚುವರಿ ಎಸ್‌ಪಿ ಮಾರ್ಗದರ್ಶನದಲ್ಲಿ ಶಹಾಬಾದ ಡಿಎಸ್‌ಪಿ ಕೆ. ಬಸವರಾಜ, ಸುಲೇಪೇಟ್‌ ಸಿಪಿಐ ಡಿ.ವಿ. ಕಟ್ಟಿಮನಿ, ಸೇಡಂ ಸಿಪಿಐ ಶಂಕರಗೌಡ, ಸುಲೇಪೇಟ್‌ ಪಿಎಸ್‌ಐ ರಾಜಶೇಖರ, ಸೇಡಂ ಪಿಎಸ್‌ಐ ಸುನೀಲ ಕುಮಾರ
ಹಾಗೂ ಸಿಬ್ಬಂದಿಯಾದ ಶ್ರೀಕಾಂತ, ಹಣಮಂತ, ಜಗನ್ನಾಥ, ದುಧಿರಾಮ, ಮನೋಹರ, ಶಿವಕುಮಾರ, ಯೋಗೇಂದ್ರ ಅವರನ್ನೊಳಗೊಂಡ ತನಿಖಾ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ಸಿಪಿಐ ಶಂಕರಗೌಡ ಹಾಗೂ ಮತ್ತಿತರ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

ಅಜಯ ಐದು ಮಕ್ಕಳ ತಂದೆ
ಕೊಲೆಯಾದ ಅಜಯ ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಲ್ಟನ್‌ ತಾಲೂಕಿನ ರಾಜೀವ ನಗರ ಕೊಳಗಿ ನಿವಾಸಿಯಾಗಿದ್ದಾನೆ. ಈ ಮೊದಲೇ ಈತನಿಗೆ ಮದುವೆಯಾಗಿದ್ದು, ಐವರು ಮಕ್ಕಳಿದ್ದಾರೆ. ಕಳ್ಳತನವೇ ವೃತ್ತಿಯಾಗಿದ್ದ ಈತನ ವಿರುದ್ಧ ಮುಂಬೈ ಸೇರಿದಂತೆ ಇತರ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅಜಯಗಾಗಿ ಮಹಾರಾಷ್ಟ್ರ ಪೊಲೀಸರು ಶೋಧ ನಡೆಸುತ್ತಿದ್ದರು. ಆದರೆ, ಮಹಾರಾಷ್ಟ್ರದಿಂದ ಎರಡೂಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈತ ದತ್ತು ಸ್ನೇಹದಿಂದಾಗಿ ನಿಡಗುಂದಾ ಗ್ರಾಮದಲ್ಲಿ ನೆಲೆಸಿದ್ದ. ಈ ವೇಳೆ ಜ್ಯೋತಿಯೊಂದಿಗೆ ಸಂಬಂಧ ಬೆಳೆದಿತ್ತು ಎಂದು ಎಸ್‌ಪಿ ಎನ್‌. ಶಶಿಕುಮಾರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next