Advertisement

ಪಕ್ಷದ ಚಿಹ್ನೆ ಮೇಲೆ ಪಾಲಿಕೆ ಚುನಾವಣೆ?  

08:30 PM Aug 13, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಎರಡು ವರ್ಷಗಳ ನಂತರ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಪಕ್ಷಗಳ ಚಿಹ್ನೆಯ ಮೇಲೆ ಅಭ್ಯರ್ಥಿಗಳ ಸ್ಪರ್ಧೆಯನ್ನು ಕಾಣಬಹುದೇ? ಇಲ್ಲವೇ ಮೊದಲಿನಂತೆ ಭಾಷಾ ಆಧಾರಿತ ಚುನಾವಣೆಯೇ ನಡೆಯಲಿದೆಯೇ? ಇಂತಹ ಒಂದು ಗಂಭೀರ ಚರ್ಚೆ ಈಗ ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಆರಂಭವಾಗಿದೆ.

ಏನೇ ಆದರೂ ಸರಿ ಈ ಬಾರಿಯ ಚುನಾವಣೆಯನ್ನು ಪಕ್ಷಗಳ ಚಿಹ್ನೆಯ ಮೇಲೆ ಎದುರಿಸಲಾಗುವುದು ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಹೇಳಿರುವುದರಿಂದ ಸಹಜವಾಗಿಯೇ ಪಾಲಿಕೆ ಚುನಾವಣೆ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಕುತೂಹಲವನ್ನೂ ಮೂಡಿಸಿದೆ. ಆದರೆ ಈಗಿನ ಲಕ್ಷಣಗಳು ಹಾಗೂ ಬೆಳವಣಿಗೆಗಳನ್ನು ಗಮನಿಸಿದರೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವ ಸಾಧ್ಯತೆಗಳು ಬಹಳ ಕಡಿಮೆ. ಈ ವಿಷಯದಲ್ಲಿ ಬಿಜೆಪಿಗೆ ಇರುವ ಆಸಕ್ತಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ದಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಹೀಗಾಗಿ ಎರಡೂ ಪಕ್ಷಗಳ ಸ್ಥಳೀಯ ನಾಯಕರು ತಮ್ಮ ಮೇಲಿನ ಭಾರವನ್ನು ಪಕ್ಷದ ವರಿಷ್ಠರ ಮೇಲೆ ಹಾಕಿ ಕುಳಿತಿದ್ದಾರೆ.

ಕಾಂಗ್ರೆಸ್‌ನ ರಾಜ್ಯ ನಾಯಕರಿಗೆ ಪಕ್ಷ ಆಧಾರಿತ ಚುನಾವಣೆಯ ಮೇಲೆ ಆಸಕ್ತಿ ಇದ್ದರೂ ಸ್ಥಳೀಯರಿಗೆ ಇದು ಬೇಡವಾಗಿದೆ. ಮುಖ್ಯವಾಗಿ ಕಾಂಗ್ರೆಸ್‌ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಂ ಇ ಎಸ್‌ ಹಾಗೂ ಶಿವಸೇನೆ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಮೂಲಗಳ ಪ್ರಕಾರ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡದೆ ಎಂಇಎಸ್‌ ಹಾಗೂ ಶಿವಸೇನೆ ಹೆಚ್ಚಿನ ಸ್ಥಾನ ಪಡೆದರೆ ಅದರ ಜೊತೆ ಅಧಿಕಾರಕ್ಕಾಗಿ ಪಕ್ಷೇತರರಾಗಿ ಕೈಜೋಡಿಸುವದು, ಅದರ ಬದಲಾಗಿ ವಿಧಾನಸಭೆ ಚುನಾವಣೆಯಲ್ಲಿ ಅವರ ಸಹಾಯ ಪಡೆಯುವದು ಕಾಂಗ್ರೆಸ್‌ ಲೆಕ್ಕಾಚಾರ ಎನ್ನಲಾಗುತ್ತಿದೆ. ಬೆ

ಳಗಾವಿ ಮಹಾನಗರ ಪಾಲಿಕೆ ರಾಜ್ಯದ ಉಳಿದ ಪಾಲಿಕೆಗಳಂತಲ್ಲ. ಇಲ್ಲಿ ಅಭಿವೃದ್ಧಿಗಿಂತ ಭಾಷಾ ರಾಜಕಾರಣವೇ ಬಹಳ ಮುಖ್ಯ. ಹೀಗಾಗಿ ಯಾವತ್ತೂ ಪಕ್ಷ ಆಧಾರಿತ ಚುನಾವಣೆ ನಡೆದೇ ಇಲ್ಲ. ಪಕ್ಷೇತರರಾಗಿ ಆಯ್ಕೆಯಾಗಿ ಬರುವ ಸದಸ್ಯರು ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ತಮ್ಮ ನಿಲುವು ಸಹ ಬದಲಾಯಿಸುತ್ತಾರೆ. ಕರ್ನಾಟಕ ಮತ್ತು ಮಹಾರಾಷ್ಟÅ ಗಡಿ ವಿವಾದ ಜೀವಂತವಿರುವ ಕಾರಣ ಭಾಷೆಯ ಆಧಾರದ ಮೇಲೆಯೇ ಚುನಾವಣೆ ನಡೆಯುತ್ತ ಬಂದಿದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸಹಕಾರ ನೀಡುತ್ತ ಬಂದಿವೆ. ಗಮನಿಸಬೇಕಾದ ಸಂಗತಿ ಎಂದರೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯ ಮೊದಲಿನಂತೆ ಉಳಿದಿಲ್ಲ. ಸಾಕಷ್ಟು ಕಡಿಮೆಯಾಗಿದೆ. ದಶಕಗಳಿಂದ ಇರುವ ಭಾಷಾ ರಾಜಕೀಯ ಸ್ವತಃ ಮರಾಠಿ ಭಾಷಿಕರಿಗೂ ಸಾಕಾಗಿದೆ. ಇದೇ ಕಾರಣದಿಂದ ಮುಖ್ಯ ವಾಹಿನಿಗೆ ಬಂದಿರುವ ಅವರು ರಾಷ್ಟ್ರೀಯ ಪಕ್ಷಗಳ ಮೂಲಕ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ.

Advertisement

ಮಹಾರಾಷ್ಟ್ರ ಏಕೀಕರಣ ಸಮಿತಿಯ ಮೊಂಡು ವಾದದಿಂದ ಬೇಸತ್ತ ಅನೇಕ ಮರಾಠಿ ಭಾಷಿಕ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದೇ ಇನ್ನೊಂದು ಕಡೆ ಕಳೆದ ಆರು ದಶಕಗಳಿಂದ ಭಾಷೆ ಹಾಗೂ ಗಡಿ ವಿಷಯದ ಮೇಲೆಯೇ ರಾಜಕಾರಣ ಮಾಡುತ್ತ ಬಂದಿರುವ ಎಂಇಎಸ್‌ಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವದು ಎಳ್ಳಷ್ಟೂ ಬೇಕಾಗಿಲ್ಲ. ಕಾರಣ ಪಾಲಿಕೆಯಲ್ಲಿನ ಇದುವರೆಗಿನ ಆಡಳಿತ. ಮಹಾಪೌರ ಹಾಗೂ ಉಪಮಹಾಪೌರರ ಚುನಾವಣೆಯಲ್ಲಿ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯುವ ವಿಷಯದಲ್ಲಿ ಕೆಲವು ಕನ್ನಡ ಸದಸ್ಯರು ಎಂ ಇ ಎಸ್‌ ಜೊತೆ ಕೈಜೋಡಿಸಿದ ಉದಾಹರಣೆಗಳಿವೆ. ಆಗ ಯಾವ ಸದಸ್ಯರು ಯಾರ ಪರ ಇದ್ದಾರೆ ಎಂಬುದನ್ನು ಹೇಳಲು ಕಷ್ಟವಾಗಿತ್ತು. ಒಂದು ವೇಳೆ ಈ ಬಾರಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆದರೆ ಆಗ ಗೆದ್ದ ಸದಸ್ಯರಿಗೆ ಪಕ್ಷದ ಮೂಗುದಾರ ಇರುತ್ತದೆ. ಆಗ ಭಾಷಾ ಹೆಸರಿನಲ್ಲಿ ಕುತಂತ್ರ ರಾಜಕಾರಣಕ್ಕೆ ಕಡಿವಾಣ ಹಾಕಬಹುದು ಎಂಬುದು ಎಲ್ಲರ ಲೆಕ್ಕಾಚಾರ. ಇದೇ ಕಾರಣದಿಂದ ಪಕ್ಷದ ಹೆಸರಿನಲ್ಲಿ ಚುನಾವಣೆ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ದುರ್ಬಲವಾಗಿದ್ದರೂ ಅದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮಹಾನಗರ ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿದ ವಿಷಯ, ನಂತರ ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರದರ್ಶನ ಎಂ ಇ ಎಸ್‌ದಲ್ಲಿ ಹೊಸ ಭರವಸೆ ಹುಟ್ಟಿಸಿದೆ. ಈ ಎರಡೂ ವಿಷಯಗಳು ಎಂ ಇ ಎಸ್‌ ಮತ್ತು ಶಿವಸೇನೆಗೆ ಸ್ವಲ್ಪ ಬಲ ತಂದಿರುವದು ಸುಳ್ಳಲ್ಲ. ಕನ್ನಡ ಬಾವುಟ ಹಾರಿಸಿರುವದನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಎಂ ಇ ಎಸ್‌ ಪಾಲಿಕೆಯ ಎದುರು ಭಗವಾಧ್ವಜ ಹಾರಿಸೋಣ ಎಂಬ ವಿಷಯದೊಂದಿಗೆ ಚುನಾವಣೆಗೆ ಹೋಗುತ್ತಿರುವದು ಆತಂಕ ತರುವ ಸಂಗತಿ. ಎಂ ಇ ಎಸ್‌ ಜೊತೆಗೆ ಶಿವಸೇನೆ ಸಹ ಈ ಬಾರಿ ಪ್ರತ್ಯೇಕವಾಗಿ ಚುನಾವಣೆಗೆ ಧುಮುಕುವುದು ಖಚಿತ. ಇದು ನಿಜವಾದರೆ ಚುನಾವಣೆಗೆ ಮತ್ತಷ್ಟು ರಂಗು ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next