Advertisement

ನಗರಸಭೆ ಚುನಾವಣೆ: ಜನರ ನಿರೀಕ್ಷೆ ನೂರಾರು

02:57 PM Aug 26, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆ ಘೋಷಣೆಯಾಗಿದ್ದು, ಪ್ರಕ್ರಿಯೆಗಳು ನಡೆಯುತ್ತಿವೆ. ಎರಡೂವರೆ ವರ್ಷಗಳ ನಂತರ ಜನಪ್ರತಿನಿಧಿಗಳ ಕೈಗೆ ಅಧಿಕಾರ ಸಿಗಲಿದೆ. ನಗರಸಭೆಯ ಸಾಮಾನ್ಯ ಹೊಣೆಗಾರಿಕೆ ಹೊರತುಪಡಿಸಿ, ಯಾವುದೇ ಅಭಿವೃದ್ಧಿಗಳಾಗುತ್ತಿಲ್ಲ ಎನ್ನುವುದು ನಾಗರಿಕರ
ದೂರಾಗಿದ್ದು, ಅಭ್ಯರ್ಥಿಗಳು ನಗರದ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನ ಇರುವ ಚುನಾವಣಾ ಪ್ರಣಾಳಿಕೆ ನೀಡಿ ಭರವಸೆಗಳನ್ನು ಈಡೇರಿಸಬೇಕಿದೆ.

ಸ್ವಚ್ಛತೆಗೆ ಆದ್ಯತೆ:
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 1ಲಕ್ಷ ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ವಾಹನಗಳ ಮೂಲಕ ಕಸ ಸಂಗ್ರಹಿಸ ಲಾಗುತ್ತಿದ್ದು, ನಗರದ ಹೊರವಲಯದ ವಡ್ಡರಪಾಳ್ಯದ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಕಸ ಸಂಗ್ರಹಣೆ ವೇಳೆ ಹಸಿ ಕಸ, ಒಣ ಕಸ ವಿಂಗಡನೆ ಮಾಡುವಂತೆ ನಗರಸಭೆ ಆದೇಶವಿದ್ದರೂ ಸಹ ನಾಗರಿಕರು ಕ್ಯಾರೇ ಎನ್ನದೇ ರಾಜಾರೋಷವಾಗಿ ಬೀದಿಬದಿಯಲ್ಲೇ ಕಸ ಎಸೆದು ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಡೆಂಗ್ಯೂ, ಚಿಕೂನ್‌ ಗುನ್ಯಾ ಮಲೇರಿಯಾ ಮೊದಲಾದ ರೋಗಗಳು ಹರಡುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕಿದೆ. ನಗರದ ಸ್ವಚ್ಛತೆ ಕಾಪಾಡಿಕೊಳ್ಳುವುದು, ಬೀದಿ ನಾಯಿಗಳ
ಹಾವಳಿ ತಡೆಯಬೇಕಿದೆ.

Advertisement

ರಸ್ತೆ, ಚರಂಡಿಗಳ ಅವ್ಯವಸ್ಥೆ: ನಗರದಲ್ಲಿ ನಲ್ಲಿ ನೀರಿನ ಸಂಪರ್ಕ, ಕೇಬಲ್‌ ಅಳವಡಿಕೆ ಮೊದಲಾದ ಕಾರಣಗಳಿಂದಾಗಿ ಅಗೆದಿರುವ ರಸ್ತೆಗಳು ಇನ್ನೂ ದುರಸ್ತಿಯಾಗದೇವಾಹನ ಸವಾರರುಪರದಾಡುವಂತಾಗಿದೆ.ಮಳೆ ಬಂದರೆ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗುತ್ತವೆ. ಕೆಲವಡೆ ಕೆಸರು ಗದ್ದೆಗಳಂತಾಗಿವೆ. ಇನ್ನುಹಲವಾರು ವಾರ್ಡ್‌ಗಳಲ್ಲಿ ಚರಂಡಿಗಳು ಕಟ್ಟಿಕೊಂಡಿದ್ದು, ಮಳೆ ಬಂದರೇ ಚರಂಡಿ ನೀರು ರಸ್ತೆಯನ್ನ ಆವರಿಸುತ್ತಿದೆ. ಒಳ ಚರಂಡಿ ಅವ್ಯವಸ್ಥೆಯಿಂದ ನಾಗರಿಕರು ರೋಸಿಹೋಗಿದ್ದಾರೆ.

ವಾಹನ ದಟ್ಟಣೆ: ನಗರ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ಸಹಸ್ರಾರು ವಾಹನಗಳು ಸಂಚರಿಸುತ್ತಿವೆ. ವಾಹನ ದಟ್ಟಣೆ ಹಾಗೂ ಜನಸಂದಣಿ ಯಿಂದಾಗಿ, ರಸ್ತೆಗಳ ಅಗಲೀಕರಣ ಅನಿವಾರ್ಯವಾಗಿದೆ. ಈ ನಡುವೆ ನಗರದ ಹೊರವಲಯದ ರಸ್ತೆಗಳು ಮಾತ್ರ ವಿಸ್ತರಣೆಯಾಗುತ್ತಿದ್ದು, ನಗರದಲ್ಲಿನ ರಸ್ತೆಗಳು ವಿಸ್ತರಣೆಯಾಗಬೇಕಿದೆ ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಇದನ್ನೂ ಓದಿ:ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ರಸ್ತೆ ಅಗಲೀಕರಣ ಹಿನ್ನೆಲೆ: 2009ರಲ್ಲಿ ಆರಂಭವಾದ ರಸ್ತೆ ಅಗಲೀಕರಣ ಪ್ರಸ್ತಾವನೆಯಿಂದ ನಗರದಲ್ಲಿ ಕೋರ್ಟ್‌ ರಸ್ತೆಯಿಂದ ತೇರಿನ ಬೀದಿ ರಸ್ತೆವರೆಗೆ, ಕುಚ್ಚಪ್ಪನಪೇಟೆ ಮುಖ್ಯ ರಸ್ತೆಯಿಂದ ಆಂಜಿನಪ್ಪ ಸಿಲ್ಕ್ ಹೌಸ್‌ ಮುಖಾಂತರ ಬಿಎಂಶ್ರೀ ರಸ್ತೆವರೆಗೆ, ಕುಚ್ಚಪ್ಪನಪೇಟೆ ಮುಖ್ಯ ರಸ್ತೆಯಿಂದಕೊಂಗಾಡಿಯಪ್ಪ ಕಾಲೇಜು ರಸ್ತೆವರೆಗಿನ ಅನಕೃ ರಸ್ತೆ, ಹಾಗೂ ಡಿ.ಕ್ರಾಸ್‌ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207 ರಿಂದ ಗಾಂಧಿ
ವೃತ್ತದವರೆಗೆ ಎರಡೂ ಬದಿ ವಿಸ್ತರಣೆಯಾಗುವ ಪ್ರಸ್ತಾಪವಿತ್ತು. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ಆರಂಭವಾದ ಪ್ರಕ್ರಿಯೆ ನಂತರ 2011ರಲ್ಲಿ, 2016ರಲ್ಲಿ ಹಾಗು 2017ರಲ್ಲಿ ಆಸ್ತಿ ಮಾಲಿಕರಿಗೆ ನೊಟೀಸ್‌ ನೀಡಲಾಗಿತ್ತು. ಈ ಬಗ್ಗೆ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಅಂತಿಮ ತೀರ್ಮಾನವಾಗಿತ್ತು. ಆದರೆ ಆಸ್ತಿ ಮಾಲಿಕರು ನ್ಯಾಯಾಲಯದ ಮೊರೆ ಹೋದ ಪರಿಣಾಮ ಹಾಗೂ ರಸ್ತೆ ವಿಸ್ತರಣೆಗೆ ಅಗತ್ಯ ಅನುದಾನದ ಕೊರತೆಯಿಂದಾಗಿ ರಸ್ತೆ ಅಗಲೀಕರಣ ಯೋಜನೆ ನನೆಗುದಿಗೆ ಬಿದ್ದಿದೆ.

Advertisement

ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು: ನಗರದಲ್ಲಿ ನಲ್ಲಿಗಳಿಗೆ ಮೀಟರ್‌ ಅಳವಡಿಸಲು, ಪೈಪ್‌ಲೈನ್‌ ಅಳವಡಿಸಿ ಮೂರು ವರ್ಷ ಕಳೆದರೂ ಇನ್ನೂ ಸಂಪರ್ಕ ನೀಡಿಲ್ಲ. ಮನೆ ಮುಂದಿನ ಪೈಪ್‌ಗ್ಳು ಹಾಳಾಗುತ್ತಿವೆ. ಕೃಷ್ಣ ರಾಜ ಮಾರುಕಟ್ಟೆಯಲ್ಲಿ ಹೊಸ ತರಕಾರಿ ಅಂಗಡಿಗಳ ನಿರ್ಮಾಣ, ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಸಿಸಿ ಕ್ಯಾಮರಾಗಳ ಅಳವಡಿಕೆ ಹಾಗೂ ನಿರ್ವಹಣೆ, ಈಜುಕೊಳ ನಿರ್ಮಾಣ ಮೊದಲಾದ ಕಾಮಗಾರಿಗಳು ಆಗಬೇಕಿವೆ. ನಗರದ ಹೊರವಲಯದ ಅಕ್ರಮ ಬಡಾವಣೆಗಳಿಗೆ ಕಡಿವಾಣ, ನಗರ ಹಾಗೂ ಗ್ರಾಮಗಳ ಗಡಿ ವಿಂಗಡನೆ ವೈಜ್ಞಾನಿಕವಾಗಿ ಕೈಗೊಳ್ಳಬೇಕಿದೆ.

ಆದಾಯ ಹೆಚ್ಚಳಕ್ಕೆ ಒತ್ತು
ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದಾಗಿ ನಗರಸಭೆಗೆ ಆದಾಯದ ಪ್ರಮಾಣ ಹೆಚ್ಚಾಗಿದೆ. ಆದರೆಬಹಳಷ್ಟು ವಾಣಿಜ್ಯ ಉದ್ದೇಶದ ಕಟ್ಟಡಗಳು ಆಸ್ತಿ ತೆರಿಗೆಯನ್ನು ವಂಚಿಸುತ್ತಿರುವ ದೂರುಗಳಿದ್ದು, ನಗರಸಭೆ ಆದಾಯ ಹೆಚ್ಚಳವಾಗುವ ಹಾಗೂ ನಗರಸಭೆಯ ಆಸ್ತಿಗಳನ್ನು ಸಂರಕ್ಷಿಸುವ ಕೆಲಸಗಳಾಗಬೇಕಿವೆ.

ನಗರಸಭೆಯಿಂದ ಮೂಲ ಸೌಕರ್ಯಗಳೊಂದಿಗೆ ಶಿಕ್ಷಣ,ಆರೋಗ್ಯಕ್ಕೆ ಒತ್ತು ನೀಡಬೇಕಿದ್ದು, ಬಿಬಿಎಂಪಿ ಮಾದರಿಯಲ್ಲಿ ಶಾಲೆಗಳು ಹಾಗೂ ಆರೋಗ್ಯಕೇಂದ್ರಗಳನ್ನು ತೆರೆಯಬೇಕಿದೆ.
– ವೆಂಕಟರಾಜು, ಸೋಮೇಶ್ವರ ಬಡಾವಣೆ ನಿವಾಸಿ

ನಗರಸಭೆಯಿಂದ ಉತ್ತಮ ಪರಿಸರ ನಿರ್ಮಾಣ ಚುನಾವಣಾ ಪ್ರಣಾಳಿಕೆಯಾಗಲಿ. ಉದ್ಯಾನವನಗ  ಳನ್ನುಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವುದರೊಂದಗೆ ಜೀವವೈವಿದ್ಯಕ್ಕೆ ಒತ್ತು ನೀಡಬೇಕು.ಮಲಿನವಾಗಿರುವ ನಾಗರಕೆರೆಯನ್ನು ಪುನಶ್ಚೇತನಗೊಳಿಸಬೇಕು.
– ಚಿದಾನಂದ, ಪರಿಸರ ಪ್ರೇಮಿ

ಉತ್ತಮ ಪರಿಸರ ನಿರ್ಮಾಣಕ್ಕೆ ಆದ್ಯತೆ
ನಗರಸಭೆ ಬರೀ ಮೂಲ ಸೌಕರ್ಯಗಳನ್ನು ನೀಡಿದರೆ ಸಾಲದು, ಉತ್ತಮ ಪರಿಸರವನ್ನು ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ನಗರದಲ್ಲಿ
ಹಲವಾರು ಉದ್ಯಾನವನಗಳು ಸೂಕ್ತ ನಿರ್ವಹಣೆಯಿಲ್ಲದೇ ಸೊರಗುತ್ತಿವೆ. ಇಲ್ಲಿ ವೈವಿದ್ಯಮಯ ಗಿಡಗಳನ್ನು ಬೆಳೆಸಬೇಕಿದೆ. ನಗರದ ಸುತ್ತಲೂ 500ಕ್ಕೂ ಹೆಚ್ಚು ಜೀವ ವೈವಿದ್ಯತೆಗಳಿದ್ದು ಇವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು. ನಗರಕ್ಕೆ ನೀರು ಸರಬರಾಜು ಮಾಡಲು ಜಕ್ಕಲಮಡುಗು ಜಲಾಶಯ ಹಾಗೂ ಕೊಳವೆ ಬಾವಿಗಳೇ ಆಧಾರವಾಗಿವೆ.ಕೆರೆ,ಕುಂಟೆ, ಕಲ್ಯಾಣಿ ಮೊದಲಾಗಿ ನೀರಿನ ಮೂಲಗಳನ್ನು ಸಂರಕ್ಷಿಸಲು ಆದ್ಯತೆ ನೀಡಬೇಕಿದ್ದು, ನೀರಿನ ಸಮಸ್ಯೆ ಬಗೆಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next