Advertisement

ನಗರಸಭೆ ಕಟ್ಟಡ ಕಾಮಗಾರಿ ಅರೆಬರೆ

06:22 PM Oct 04, 2021 | Team Udayavani |

ರಾಯಚೂರು: ನಗರಸಭೆ ಕಟ್ಟಡ ಕಾಮಗಾರಿ ಬಹುತೇಕ ಅರೆಬರೆಯಾಗಿದ್ದು, ಅದರಲ್ಲೇ ಈಗ ಎಲ್ಲ ಕಚೇರಿ ಕೆಲಸಗಳು ನಡೆಯುತ್ತಿದೆ. ಕಟ್ಟಡ ಕಾಮಗಾರಿ ಬಾಕಿ ಉಳಿದಿದ್ದು, ಅದನ್ನು ಶೀಘ್ರ ಮುಗಿಸಬೇಕೆನ್ನುವ ಇಚ್ಛಾಶಕ್ತಿ ಚುನಾಯಿತ ಜನಪ್ರತಿನಿಧಿಗಳಲ್ಲಿ ಕಾಣಿಸದಿರುವುದು ವಿಪರ್ಯಾಸ.

Advertisement

ತಮ್ಮ ವಾರ್ಡ್‌ಗೆ ಬರಬೇಕಾದ ಅನುದಾನ ಬಗ್ಗೆ ಪ್ರಶ್ನಿಸುವ ಸದಸ್ಯರು ಕಟ್ಟಡದ ದುಃಸ್ಥಿತಿ ಬಗ್ಗೆ ಒಮ್ಮೆಯೂ ಚಕಾರ ಎತ್ತುತ್ತಿಲ್ಲ. ಇಡೀ ನಗರದ ಕೇಂದ್ರಾಡಳಿತ ಪ್ರದೇಶವೇ ಅವ್ಯವಸ್ಥೆ ಆಗರವಾದರೂ ಕ್ಯಾರೇ ಎನ್ನುವವರಿಲ್ಲ. ನಗರಸಭೆ ಕಟ್ಟಡ ಕಾಮಗಾರಿ ಒಂದು ಹಂತದವರೆಗೆ ಪೂರ್ಣಗೊಂಡಿದ್ದು, ಬಹುತೇಕ ಕಡೆ ಅಂತಿಮ ಸ್ಪರ್ಶ ನೀಡಿಲ್ಲ. ತಮಗೆ ಬೇಕಿರುವ ಕಚೇರಿಗಳಲ್ಲಿ ಮಾತ್ರ ಸುಸಜ್ಜಿತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ವಿಭಾಗಗಳಲ್ಲೇ ಕಾಮಗಾರಿ ಮುಗಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದಾಖಲೆ ಇಡಲು ಸುಸಜ್ಜಿತ ವ್ಯವಸ್ಥೆ ಇಲ್ಲದಂಥ ಪರಿಸ್ಥಿತಿ ನಗರಸಭೆಗೆ ಒದಗಿಸುವುದು ದುರಂತವೇ ಸರಿ.

ಕಡತಗಳಿಗಿಲ್ಲ ರಕ್ಷಣೆ: ಒಂದು ಸರ್ಕಾರಿ ಕಚೇರಿಯ ಜೀವಾಳವೇ ದಾಖಲೆಗಳು. ಆದರೆ ನಗರಸಭೆಯಲ್ಲಿ ಆ ದಾಖಲೆಗಳಿಗೆ ಬೆಲೆಯಿಲ್ಲ ಎನ್ನುವಂತಹ ಸ್ಥಿತಿ ಇದೆ. ಸುಸಜ್ಜಿತ ಸಂಗ್ರಹಾಲಯ ಇಲ್ಲದ ಕಾರಣಕ್ಕೆ ಬಹುತೇಕ ಕಡತಗಳನ್ನು ಗಂಟು ಮೂಟೆ ಕಟ್ಟಿ ಬಹಿರಂಗವಾಗಿಯೇ ಇಡಲಾಗಿದೆ. ದಾಖಲೆಗಳ ಅಲ್ಮೆರಾಗಳನ್ನು ಹೊರಗಡೆಯೇ ಇಟ್ಟಿದ್ದು, ಕೆಲವುಗಳಿಗೆ ಬೀಗವೂ ಇಲ್ಲ. ಕೆಲವೊಮ್ಮೆ ಮಳೆ ಜೋರಾಗಿ ಬಂದರೆ ಕಡತಗಳೆಲ್ಲ ತೋಯ್ದು ಹೋಗುವಂಥ ಸ್ಥಿತಿಯಲ್ಲಿವೆ.

ಅನುದಾನದ್ದೇ ಸಮಸ್ಯೆ: ನಗರಸಭೆಗೆ ಪ್ರತಿ ವರ್ಷ ಕೋಟ್ಯಂತರ ರೂ. ಸಂಗ್ರಹವಾಗುವ ಕರದಿಂದ ಸಿಬ್ಬಂದಿಗೆ ವೇತನ, ಕಚೇರಿ ನಿರ್ವಹಣೆಗೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಉಳಿಯುವುದೇ ಇಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ಇದರಿಂದ ಅನೇಕ ವರ್ಷಗಳಿಂದ ಕಚೇರಿ ಕೆಲಸ ಕಾರ್ಯಗಳು ಅರೆಬರೆಯಾಗಿವೆ. ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನ ಯಾವೆಲ್ಲ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎಂಬ ಶಂಕೆ ಜನರನ್ನು ಕಾಡುವಂತಾಗಿದೆ.

ಸುಣ್ಣ-ಬಣ್ಣವೂ ಇಲ್ಲ
ಕಟ್ಟಡ ಕಾಮಗಾರಿ ಮುಗಿಯುವುದಿರಲಿ ಈಗಾಗಲೇ ಮುಗಿದ ಕೆಲಸಗಳಿಗೂ ಸರಿಯಾದ ಸುಣ್ಣ-ಬಣ್ಣ ಕಾಣದಿರುವುದು ವಿಪರ್ಯಾಸವೇ ಸರಿ. ಸಿವಿಲ್‌ ಕೆಲಸ ಬಹುತೇಕ ಅಂತಿಮಗೊಂಡಿದೆ. ಕೊನೆ ಸುತ್ತಿನ ಕಾಮಗಾರಿ ಸುಣ್ಣ ಬಣ್ಣ ಬಳಿದರೆ ಒಂದು ಸುಂದರ ರೂಪವಾದರೂ ಸಿಗುತ್ತದೆ. ಇಲ್ಲಿ ಮಾತ್ರ ಯಥಾ ರೀತಿಯಲ್ಲೇ ಬಳಸಲಾಗುತ್ತಿದೆ. ಕಂಬಗಳಿಗೆ ಕೊನೆ ಸುತ್ತಿನ ಗಿಲಾವ್‌ ಮಾಡದ ಕಾರಣ ಸಿಮೆಂಟ್‌ ಕಳಚಿ ಬೀಳುತ್ತಿದೆ. ಮೆಟ್ಟಿಲುಗಳಿಗೆ ತಡೆಗೋಡೆ ಕೂಡ
ನಿರ್ಮಿಸಿಲ್ಲ. ಯಾರಾದರೂ ವಯಸ್ಸಾದವರು ಮೇಲೆ ಏರುವಾಗ ಆಯ ತಪ್ಪಿದರೆ ಅನಾಹುತ ಖಚಿತ ಎನ್ನುವಂತಿದೆ ಸ್ಥಿತಿ.

Advertisement

ನಗರಸಭೆ ಕಟ್ಟಡದಲ್ಲಿ ಇನ್ನೂ ಕೆಲ ಕಾಮಗಾರಿಗಳು ಬಾಕಿ ಉಳಿದಿರುವುದು ನಿಜ. ನಮಗೆ ಬರುವ ತೆರಿಗೆ ಹಣದಲ್ಲಿ ಸಿಬ್ಬಂದಿಗೆ ವೇತನ, ಕಚೇರಿ ನಿರ್ವಹಣೆಗೆ ಬಳಸಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಸಿಗುವ ಅನುದಾನದಲ್ಲಿ ಎಲ್ಲ ಕೆಲಸಗಳನ್ನು ಮುಗಿಸಲು ಯೋಜನೆ ರೂಪಿಸಲಾಗಿದೆ. ದಾಖಲೆಗಳ ಸಂಗ್ರಹಕ್ಕೆ ಪ್ರತ್ಯೇಕ ದಾಖಲೆ ಅಭಿಲೇಖಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಎಲ್ಲ ಕಡತಗಳನ್ನು ಅಲ್ಲಿಯೇ ಸಂಗ್ರಹಿಸಲಾಗುವುದು.
ಮುನಿಸ್ವಾಮಿ,
ನಗರಸಭೆ ಪೌರಾಯುಕ್ತ, ರಾಯಚೂರು

ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next