Advertisement

ಷೇರುಪೇಟೆಗೆ ದಾಖಲೆಯ ಸುಗ್ಗಿ

01:39 AM Jan 15, 2021 | Team Udayavani |

ಮುಂಬಯಿ: ಒಂದು ದಿನದ ವಿರಾಮದ ಬಳಿಕ ಮತ್ತೆ ಮುಂಬಯಿ ಷೇರುಪೇಟೆಯಲ್ಲಿ ಏರಿಕೆಯ “ಸುಗ್ಗಿ’ ಶುರುವಾಗಿದೆ. ಇನ್ಫೋಸಿಸ್‌, ವಿಪ್ರೋದಂತಹ ಕಂಪೆನಿಗಳ ತ್ತೈಮಾಸಿಕ ಆದಾಯದ ಫ‌ಲಿತಾಂಶವು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದ್ದು, ಗುರುವಾರ ಷೇರುಗಳ ಖರೀದಿ ತುಸು ಜೋರಾಗಿಯೇ ನಡೆಯಿತು.

Advertisement

ಪರಿಣಾಮ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 91.84 ಅಂಕಗಳ ಏರಿಕೆ ಕಂಡು, 49,584.16ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಹೊಸ ಸಾರ್ವಕಾಲಿಕ ದಾಖಲೆ ಬರೆಯಿತು. ನಿಫ್ಟಿ ಕೂಡ 30.75 ಅಂಕಗಳ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 14,595.60ರಲ್ಲಿ ಅಂತ್ಯಗೊಂಡಿತು.

ಹೂಡಿಕೆದಾರರು ಟಿಸಿಎಸ್‌ ಷೇರುಗಳ ಖರೀದಿಯಲ್ಲಿ ತೊಡಗಿದ ಕಾರಣ, ಕಂಪೆನಿಯ ಷೇರು ಮೌಲ್ಯ ಶೇ.2.89ರಷ್ಟು ಏರಿಕೆಯಾಯಿತು. ಇದರೊಂದಿಗೆ ಇಂಡಸ್‌ಇಂಡ್‌ ಬ್ಯಾಂಕ್‌, ಎಲ್‌ಆ್ಯಂಡ್‌ ಟಿ, ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಯುಎಲ್‌ ಮತ್ತು ಸನ್‌ ಫಾರ್ಮಾ ಕೂಡ ಲಾಭ ಗಳಿಸಿದವು. ಎಚ್‌ಸಿಎಲ್‌ ಟೆಕ್‌, ಆಕ್ಸಿಸ್‌ ಬ್ಯಾಂಕ್‌, ಏಷ್ಯನ್‌ ಪೈಂಟ್ಸ್‌, ಅಲ್ಟ್ರಾ ಟೆಕ್‌ ಸಿಮೆಂಟ್‌, ಇನ್ಫೋಸಿಸ್‌, ಟೆಕ್‌ ಮಹೀಂದ್ರಾ ಷೇರುಗಳು ನಷ್ಟ ಎದುರಿಸಿದವು.

ಚಿನ್ನದ ಬೆಲ 369ರೂ. ಇಳಿಕೆ: ದಿಲ್ಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 369 ರೂ. ಇಳಿಕೆಯಾಗಿ, 10 ಗ್ರಾಂಗೆ 48,388 ರೂ. ಆಗಿದೆ. ಬೆಳ್ಳಿ ಬೆಲೆ ಕೂಡ 390 ರೂ. ಕಡಿಮೆಯಾಗಿ, ಕೆಜಿಗೆ 64,534 ರೂ. ಆಗಿದೆ. ಇದೇ ವೇಳೆ, ಸತತ 3ನೇ ದಿನವೂ ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದೆ. ಗುರುವಾರ 11 ಪೈಸೆ ಹೆಚ್ಚಳವಾಗಿ, 74.04ರೂ. ಆಗಿದೆ.

ದೇಶದ ಮಧ್ಯಮಾವಧಿ ಪ್ರಗತಿ ದರ ಇಳಿಕೆ? :

Advertisement

ದೇಶದ ಆರ್ಥಿಕತೆಯ ಮೇಲೆ ಕೊರೊನಾದ ದೀರ್ಘ‌ಕಾಲಿಕ ಪರಿಣಾಮ ಮುಂದುವರಿಯಲಿದ್ದು, ಎಪ್ರಿಲ್‌ 2021ರಿಂದ ಆರಂಭವಾಗುವ ವಿತ್ತ ವರ್ಷದಲ್ಲಿ ಆರ್ಥಿಕ ಪ್ರಗತಿಯು ಚೇತರಿಕೆ ಕಾಣಲಿದೆಯಾದರೂ ಅನಂತರದ ದಿನಗಳಲ್ಲಿ ಮತ್ತೆ ಕುಸಿತದ ಆಘಾತ ಎದುರಿಸಲಿದೆ ಎಂದು ಫಿಚ್‌ ರೇಟಿಂಗ್ಸ್‌ ಸಂಸ್ಥೆ ಭವಿಷ್ಯ ನುಡಿದಿದೆ. ಎಪ್ರಿಲ್‌ 2022ರಿಂದ ಮಾರ್ಚ್‌ 2026ರ ವರೆಗೆ ದೇಶದ ಆರ್ಥಿಕ ಪ್ರಗತಿ ಶೇ.6.5ರಷ್ಟಿರಲಿದೆ ಎಂದೂ ಹೇಳಿದೆ.

ಸಗಟು ಹಣದುಬ್ಬರ ಇಳಿಕೆ :

ಈರುಳ್ಳಿ, ಆಲೂಗಡ್ಡೆ ಮತ್ತಿತರ ವಸ್ತುಗಳ ಬೆಲೆ ಕುಸಿತಗೊಂಡ ಪರಿಣಾಮ 2020ರ ಡಿಸೆಂಬರ್‌ನಲ್ಲಿ ಸಗಟು ದರ ಆಧರಿತ ಹಣದುಬ್ಬರ ಶೇ.1.22ಕ್ಕೆ ಇಳಿಕೆಯಾಗಿದೆ ಎಂದು ಸರಕಾರ ಹೇಳಿದೆ. ನವೆಂಬರ್‌ನಲ್ಲಿ ಇದು ಶೇ.1.55 ಆಗಿತ್ತು. 2019ರ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.2.76ರಷ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next