Advertisement

ಬಂಗಾಳದಲ್ಲಿ ಮತ್ತೆ ಮುಕುಲ್‌ ಗೊಂದಲ

09:57 PM Apr 19, 2023 | Team Udayavani |

ಕೋಲ್ಕತ: “ನಾನು ಬಿಜೆಪಿ ಶಾಸಕನಾಗಿದ್ದು, ಬಿಜೆಪಿಯಲ್ಲೇ ಉಳಿಯಲಿದ್ದೇನೆ. ಟಿಎಂಸಿ ಜತೆ ಮತ್ತೆ ಹೋಗುವುದಿಲ್ಲ. ಈ ಬಗ್ಗೆ ನನಗೆ ಶೇ.100 ವಿಶ್ವಾಸವಿದೆ” ಎಂದು ಮಾಜಿ ಟಿಎಂಸಿ ನಾಯಕ ಮುಕುಲ್‌ ರಾಯ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮಂಗಳವಾರ ರಾತ್ರಿ ದೆಹಲಿಗೆ ಬಂದಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ” ಎಂದಿದ್ದಾರೆ. ಒಟ್ಟಾರೆ ಮುಕುಲ್‌ ರಾಯ್‌, ಅವರ ಪುತ್ರನ ಹೇಳಿಕೆಗಳು ಬಂಗಾಳದಲ್ಲಿ ತೀವ್ರ ಗೊಂದಲ ಸೃಷ್ಟಿಸಿವೆ.

Advertisement

ಟಿಎಂಸಿಯ ಮಾಜಿ ನಾಯಕ ಮುಕುಲ್‌ ರಾಯ್‌, 2017ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2020ರಲ್ಲಿ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. 2021ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೃಷ್ಣರಾಜನಗರ ಉತ್ತರ ಕ್ಷೇತ್ರದ ಶಾಸಕರಾದರು. 2021, ಜೂನ್‌ನಲ್ಲಿ ಪುನಃ ಟಿಎಂಸಿಗೆ ಮರಳುವ ಘೋಷಣೆ ಮಾಡಿದರು. ಆದರೆ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡದೇ ಇದ್ದಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನ ಕಳೆದುಕೊಳ್ಳುವುದರಿಂದ ಬಚಾವಾದರು!

ಇನ್ನೊಂದೆಡೆ, ಮುಕುಲ್‌ ರಾಯ್‌ ನಾಪತ್ತೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಅವರ ಪುತ್ರ ಸುಬ್ರಾಂಶು ರಾಯ್‌ ಈಗ ಬೇರೆ ರೀತಿಯ ಮಾತನ್ನಾಡುತ್ತಿದ್ದಾರೆ. “ನಮ್ಮ ತಂದೆಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಅವರಿಗೆ ದೈಹಿಕ ಮತ್ತು ನರದೌರ್ಬಲ್ಯದ ಸಮಸ್ಯೆಯಿದೆ. ಅವರು ಬಿಜೆಪಿಗೆ ಮರಳುತ್ತೇನೆ ಎಂದು ಹೇಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬಾರದು. ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ನಮ್ಮ ತಂದೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಮಮತಾ ಬ್ಯಾನರ್ಜಿ, “ಮುಕುಲ್‌ ರಾಯ್‌ ಅವರು ಬಿಜೆಪಿಯಲ್ಲೇ ಇದ್ದಾರೆ. ಅವರ ಹೇಳಿಕೆಗಳ ಬಗ್ಗೆ ನನಗೆ ಏನೂ ತಿಳಿದಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next