ಸುರತ್ಕಲ್: ಚಿತ್ರಾಪುರ ಕುಳಾಯಿ ಪ್ರದೇಶದಲ್ಲಿ ಕಡಲ್ಕೊರೆತ ಬಿರುಸುಗೊಂಡಿದ್ದು ಚಿತ್ರಾಪುರ ರಸ್ತೆ ಸಮುದ್ರ ಪಾಲಾಗುವ ಭೀತಿ ತಲೆದೋರಿದೆ. ಒಂದು ಮನೆಯೂ ಅಪಾಯದಂಚಿನಲ್ಲಿದೆ. ಮುಕ್ಕ ಬಳಿ ಕೂಡ ಕಡಲ್ಕೊರೆತ ತೀವ್ರಗೊಂಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮೆಸ್ಕಾಂ ವಿದ್ಯುತ್ ಸರಬರಾಜು ನಿಲುಗಡೆ ಗೊಳಿಸಿದೆ. ಮೀನುಗಾರಿಕೆ ರಸ್ತೆ ಪಣಂಬೂರಿನಿಂದ ಸುರತ್ಕಲ್ ಮುಕ್ಕದವರೆಗೂ ಇದ್ದು, ಹಲವೆಡೆ ಕಲ್ಲುಗಳನ್ನು ತಡೆಗೋಡೆಯಾಗಿ ಬಳಸ ಲಾಗಿದೆ. ಇನ್ನು ಉಳಿದೆಡೆ ಕಾಮ ಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ತುರ್ತು ಕ್ರಮವಾಗಿ ಮರಳು ಚೀಲಗಳನ್ನು ತಡೆಯಾಗಿ ಬಳಸಲು ಕ್ರಮ ಕೈಗೊಳ್ಳಲಾಗಿದೆ.
ಶಾಸಕ ಡಾ| ಭರತ್ ಶೆಟ್ಟಿ ವೈ. ಗುರುವಾರ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ ಜಿಲ್ಲಾ ಧಿಕಾರಿ ಜತೆಗೆ ದೂರವಾಣಿ ಮಾತುಕತೆ ನಡೆಸಿ ತ್ವರಿತವಾಗಿ ಮರಳು ಚೀಲ ಹಾಕು ವಂತೆ ಸೂಚಿಸಿದರು. ಮಾಧ್ಯಮ ದೊಂದಿಗೆ ಮಾತನಾಡಿ, ಅಪಾಯ ದಲ್ಲಿರುವ ಮನೆಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ಅನಿವಾರ್ಯ ವಾದಲ್ಲಿ ಮನೆ ಮಂದಿಯನ್ನು ಸ್ಥಳಾಂತರಿಸುವ ಬಗ್ಗೆ ಅ ಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.
ಡೆಂಗ್ಯೂ ವಿರುದ್ಧ ಈಗಾಗಲೇ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಡೆಂಗ್ಯೂ ಡೇ ಡ್ರೈವ್ ಮೂಲಕ ಜನರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಜನರೂ ತಮ್ಮ ಮನೆಗಳ ಸುತ್ತಮುತ್ತ ಸ್ವತ್ಛತೆ ಕಾಪಾಡಬೇಕು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪಣಂಬೂರು ಮೊಗವೀರ ಮಹಾಸಭಾ ಅದ್ಯಕ್ಷ ಮಾಧವ ಸುವರ್ಣ ಮಾತನಾಡಿ, ಚಿತ್ರಾಪುರ ಭಾಗದಲ್ಲಿ ಮೀನುಗಾರಿಕಾ ರಸ್ತೆವರೆಗೆ ನೀರು ಬಂದು ಕೊರೆತ ಉಂಟಾಗಿರುವುದು ವರ್ಷಗಳಲ್ಲೇ ಪ್ರಥಮ. ತತ್ಕ್ಷಣ ಮರಳು ಚೀಲ ಹಾಕಿ ರಸ್ತೆ ಉಳಿಸಬೇಕು ಎಂದು ಆಗ್ರಹಿಸಿದರು. ಗಣೇಶ್ ಹೊಸಬೆಟ್ಟು, ಕಿರಣ್ ಕುಮಾರ್ ಕೋಡಿಕಲ್, ಭರತ್ರಾಜ್ ಕೃಷ್ಣಾಪುರ, ನವೀನ್ ಉಪಸ್ಥಿತರಿದ್ದರು.