Advertisement

Mudhol ಸಾವಿರ ಶ್ರೀಗಂಧ ಸಸಿಗಳ ಸರದಾರ; ಅರಣ್ಯ ಕೃಷಿಯಲ್ಲಿ ಖುಷಿ ಜೀವನ ಕಂಡ‌‌ ನಾಗಪ್ಪ

08:23 PM Jul 24, 2024 | Team Udayavani |

ಮುಧೋಳ: ಮುಧೋಳ ಎಂದೊಡನೆ ತಟ್ಟನೆ ನೆನಪಾಗುವುದು ಕವಿ ಚಕ್ರವರ್ತಿ ರನ್ನ, ಬೇಟೆ ನಾಯಿ‌ ಇವುಗಳ ತರುವಾಯ ಹೊಳೆಯುವುದೆ ಇಲ್ಲಿನ ಕಬ್ಬು. ತಾಲೂಕಿನಲ್ಲಿ ಶೇ.90ಕ್ಕಿಂತ ಹೆಚ್ಚು ಭೂಪ್ರದೇಶದಲ್ಲಿ ಕಬ್ಬು ಬೆಳೆಯುತ್ತಾರೆ ಇಂತಹ ಕಬ್ಬು ಕೃಷಿಯ ಮಧ್ಯೆ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಶ್ರೀಗಂಧದ ಸುವಾಸನೆ ಹರಡುವ ಸಾಹಸಕ್ಕೆ ಕೈಹಾಕಿರುವ ನಾಗಪ್ಪ ಅಂಬಿ ಇಂದು ಸಾವಿರ ಶ್ರೀಗಂಧ ಸಸಿಗಳ ಸರದಾರನೆನಿಸಿಕೊಂಡಿದ್ದಾರೆ.

Advertisement

ಚನ್ನಾಳ ಗ್ರಾಮದ ನಿವಾಸಿ ನಾಗಪ್ಪ ಅಂಬಿ ರೈತ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಶ್ರೀಗಂಧ ಬೆಳೆಯುವ ಮೂಲಕ ಈ ಭಾಗದಲ್ಲಿಯೂ ಅರಣ್ಯ ಕೃಷಿ‌ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕಳೆದು ಐದು ವರ್ಷದ ಹಿಂದೆ ನಾಟಿ‌ ಮಾಡಿದ್ದ ಶ್ರೀಗಂಧ ಸಸಿಗಳು ಇಂದು ಆಳೆತ್ತರಕ್ಕೆ ಬೆಳೆದಿದ್ದು, ಹಚ್ಚ ಹಸಿರಿನ ಐಸಿರಿ ಹೊದ್ದು ಜಮೀನಿಗೆ ಹೊಸ ಮೆರಗು ತಂದಿವೆ.

ಆಡಿಕೊಂಡವರು ಕೊಂಡಾಡುವಂತಾಗಿದೆ : ಹಲವು ವರ್ಷಗಳ ಹಿಂದೆ ಗುಡ್ಡಗಾಡು ಪ್ರದೇಶದಲ್ಲಿ ಜಮೀನು ಖರೀದಿಸುವಾಗ ಇಂತಹ ಗುಡ್ಡದಲ್ಲೇನು ಬೆಳೆಯಲು ಸಾಧ್ಯ ಎಂದು ಆಡಿಕೊಂಡವರು ಇಂದು ಇಲ್ಲಿನ ಸಮಗ್ರ ಕೃಷಿ‌ ಪದ್ದತಿ‌ ಕಂಡು‌ ಕೊಂಡಾಡುತ್ತಿದ್ದಾರೆ. ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆ ಅರಣ್ಯ ಕೃಷಿಗೆ ಮೀಸಲಿಟ್ಟಿದ್ದರೆ ಇನ್ನೆರಡು ಎಕರೆ ಭೂಮಿಯನ್ನು ಕುರಿ ಕೋಳಿ‌ಸಾಕಾಣಿಕೆ ಮೇವು ತಯಾರಿಕೆಂತಹ ಕೃಷಿಯೇತರ‌ ಕಾರ್ಯಕ್ಕೆ ಬಳಕೆ‌ ಮಾಡುವ ಮೂಲಕ ಅಪತ್ಕಾಲದ ಅಗತ್ಯ ಖರ್ಚನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ.

ಶ್ರೀಗಂಧದ ನಡುವೆ ನಳನಳಿಸುತ್ತಿದೆ ಹೆಬ್ಬೇವು : ಶ್ರೀಗಂಧದೊಂದಿಗೆ ಹೆಬ್ಬೇವು ಬೆಳೆಗೂ ಒತ್ತು ನೀಡಿದ್ದ ನಾಗಪ್ಪ ಅಂಬಿ ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿನ ಹೆಬ್ಬೇವು ಬೆಳೆ‌ ಕಟಾವು ಮಾಡಿ ಲಕ್ಷಾಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಇನ್ನೂ ಒಂದು ಎಕರೆಯಲ್ಲಿ ಹೆಬ್ನೇವು ಕಟಾವು ಹಂತಕ್ಕೆ ಬಂದಿದ್ದು ಅದರಿಂದಲೂ ನಿರೀಕ್ಷಿತ ಲಾಭ ಎದುರು ನೋಡುತ್ತಿದ್ದಾರೆ. 400 ರಿಂದ 500 ಹೆಬ್ಬೇವು ಮರ ಕಟಾವು ಮಾಡಿದ್ದು ಅಷ್ಟೇ ಪ್ರಮಾಣ ಹೆಬ್ಬೇವನ್ನು ಇದೀಗ ಶ್ರೀಗಂಧದೊಂದಿಗೆ ಬೆಳೆಸುತ್ತಿದ್ದಾರೆ.

Advertisement

ಸಾವಯವ ಕೃಷಿಗೆ ಒತ್ತು : ಅರಣ್ಯ ಕೃಷಿಗೆ ಅಗತ್ಯವಾದ ಸಾವಯವ ಕೃಷಿಗೆ ಒತ್ತು ನೀಡಿರುವ ರೈತ ತಮ್ಮ ಜಮೀನಿಗೆ ಅಗತ್ಯವಿರುವ ಗೊಬ್ಬರವನ್ನು ತಮ್ಮಲ್ಲಿಯೇ ತಯಾರಿಸಿಕೊಳ್ಳುತ್ತಾರೆ. ಆಡಿನ ಹಿಕ್ಕಿ, ಕೋಳಿ ಗೊಬ್ಬರದ ಮೂಲಕ ಕೃಷಿಗೆ ಬೇಕಾದ ಗೊಬ್ಬರವನ್ನು ತಾವೇ ತಾಯಾರಿಸಿಕೊಳ್ಳುತ್ತಾರೆ. ಅಗತ್ಯವಿದ್ದಾಗ ಜೀವಾಮೃತ ನೀಡುವ ನಾಗಪ್ಪ ಅಂಬಿ ಸಸಿಗಳ ಆರೈಕೆಗೆ ಕಾಲಕ್ಕೆ ತಕ್ಕ ಅಗತ್ಯ ಕ್ರಮ ಕೈಗೊಳ್ಳುತ್ತಾರೆ.

ಜವಾರಿ ಕೋಳಿ ಫಾರ್ಮ : ತಮಗೆ ಅನುಕೂಲವಿರುವ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಜವಾರಿ ಕೋಳಿ ಫಾರ್ಮ್ ಕೃಷಿಕರ ಆಕರ್ಷಿಯ ಕೇಂದ್ರವಾಗಿದೆ. ತೆರೆದ ವಾತಾವರಣದಲ್ಲಿ 300ಕ್ಕೂ ಹೆಚ್ಚು ಕೋಳಿಗಳನ್ನು ಸಾಕಿರುವ ಅಂಬಿ ಅವುಗಳು ನೀಡುವ ಗೊಬ್ಬರವನ್ನು ಸಮರ್ಪಕವಾಗಿ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ‌. ಜವಾರಿ ಕೋಳಿ‌ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದರಿಂದ ಅಧಿಕ ಲಾಭ ಪಡೆಯುತ್ತಿದ್ದಾರೆ. ಮೊಟ್ಟೆಗಳಿಂದಲೂ ಲಾಭ ಬರುತ್ತಿದ್ದು ಕೋಳಿ ಫಾರ್ಮ್ ವಿಸ್ತರಣೆ ಉಮೇದಿನಲ್ಲಿದ್ದಾರೆ ಅಂಬಿ.

ತೋಟದಲ್ಲಿವೆ ವಿವಿಧ ತಳಿಯ ಆಡುಗಳು : ಕೃಷಿಯೊಂದಿಗೆ ಆಡು ಸಾಕಾಣಿಕೆಗೆ ಒತ್ತು ನೀಡಿರುವ ನಾಗಪ್ಪ‌ ಅಂಬಿ ಗುಜರಾತನ ಬೀಟಲ್, ಶಿರೋಹಿ‌ ಹಾಗೂ ಸ್ಥಳೀಯವಾದ ಜಮನಾಪುರಿ ಆಡುಗಳ ಸಾಕಾಣಿಕೆನ್ನು ಮಾಡುತ್ತಿದ್ದಾರೆ. ಸದ್ಯ 40-45 ಆಡುಗಳನ್ನು ಸಾಕುತ್ತಿರುವ ಅಂಬಿಯವರು ಕೇಂದ್ರ ಸರ್ಕಾರದ ಎನ್ಎಲ್ಎಂ ಯೋಜನೆಯಡಿ ಮುನ್ನೂರು ಆಡು ಸಾಕಾಣಿಕೆ‌ ಕೇಂದ್ರ ತಯಾರಿಸಲು ಯೋಜನೆ ಹಾಕಿಕೊಂಡಿದ್ದಾರೆ.



ಅರಣ್ಯ ಇಲಾಖೆಯಿಂದ ಸಸಿ :
ಎರಡು ಎಕರೆ ಜಮೀನಿನಲ್ಲಿ ನೆಟ್ಟಿರುವ ಶ್ರೀಗಂಧ ಸಸಿಗಳನ್ನು ಅರಣ್ಯ ಇಲಾಖೆಯಿಂದ ಪಡೆದಿರುವ ನಾಗಪ್ಪ ಅವರು ಅಧಿಕಾರಿಗಳ ಮಾರ್ಗದರ್ಶದಂತೆ ಸಸಿ ಆರೈಕೆ‌ ಮಾಡಿ ಇಂದು ಮರಗಳಾಗಿ ಬೇಳೆಸಿದ್ದಾರೆ. ಹಣಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು ಮಿತ ನೀರಿನಲ್ಲಿ‌ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಿನಲ್ಲಿ‌ ಲಾಭದಾಯಕ‌ ಎನಿಸಿಕೊಂಡಿರುವ ಕಬ್ಬು ಬೆಳೆಯಿಂದ ವಿಮುಖವಾಗಿರುವ ನಾಗಪ್ಪ ಅಂಬಿ ಅರಣ್ಯ ಕೃಷಿ ಪದ್ಧತಿಯಿಂದ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿಯಲ್ಲಿ ಕಬ್ಬು ಬೆಳೆಯೊಂದೆ ಲಾಭದಾಯಕವಲ್ಲ. ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಡುವ ಅರಣ್ಯ ಕೃಷಿಯತ್ತ ನಮ್ಮ ರೈತರು ಹೆಚ್ಚಿನ ಗಮನ ಹರಿಸಬೇಕು. ಅಗತ್ಯದ ಖರ್ಚಿಗಾಗಿ ಕೃಷಿಯೇತರ ಕಾರ್ಯಗಳಾದ ಕುರಿ ಕೋಳಿ ಸಾಕಾಣಿಕೆಯಂತಹ ಕೆಲಸದಲ್ಲಿ ನಿರತರಾಗಬೇಕು. ಇದರಿಂದ ನಮ್ಮ ದೈನಂದಿನ ಖರ್ಚುಗಳು ಸರಿದೂಗುತ್ತವೆ. ಅರಣ್ಯ ಕೃಷಿಯಿಂದ ದೀರ್ಘಾವಧಿಯಲ್ಲಿ ನಮಗೆ ಹೆಚ್ಚಿನ ಪ್ರಮಾಣದ ಲಾಭ ಬರುವುದರಿಂದ ಆರ್ಥಿಕವಾಗಿ ಸದೃಢವಾಗಬಹುದು.
-ನಾಗಪ್ಪ ಅಂಬಿ ಅರಣ್ಯ ಕೃಷಿ ಮೂಲಕ‌ ಶ್ರೀಗಂಧ ಬೆಳೆದಿರುವ ರೈತ

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next