Advertisement

ಚನ್ನವೀರ ದೇವರು ಅವರಿಗೆ ಗೌರವ ಡಾಕ್ಟರೇಟ್

09:29 PM Oct 21, 2021 | Adarsha |

ಮುದ್ದೇಬಿಹಾಳ: ತಾಲೂಕಿನ ಸುಕ್ಷೇತ್ರ ಕುಂಟೋಜಿಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರು ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವರ್ಚುವಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.

Advertisement

ಚನ್ನವೀರ ದೇವರು ಅವರು ಈಚೆಗೆ ತಮ್ಮ ನೇತೃತ್ವದ ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ನಅಡಿ ರಸ್ತೆ ಪಕ್ಕ, ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೊಡೆ ಮತ್ತು ನೆರವು ವಿತರಿಸುವ ಮೂಲಕ ʼಮಾನವೀಯ ನೆರಳುʼ ಹೆಸರಲ್ಲಿ ನೆರವಿನ ಕಾರ್ಯವನ್ನು ಮಾಡಿದ್ದರು.

ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲೆಡೆ ಪ್ರಚಾರಗೊಂಡಿತ್ತು. ಇದನ್ನು ಕಂಡು ಸ್ವಾಮೀಜಿಯವರ ಅಭಿಮಾನಿ ಭಕ್ತರು ಸ್ವಾಮೀಜಿಯವರ ಹೆಸರನ್ನು ಗೌರವ ಡಾಕ್ಟರೇಟ್‍ಗೆ ನಾಮಿನೇಟ್ ಮಾಡಿದ್ದರು.

ಗುರುವಾರ ಸಂಜೆ ಶ್ರೀಗಳು ತಮ್ಮ ಸಹವರ್ತಿಗಳೊಂದಿಗೆ ತಮಿಳುನಾಡಿನ ಕೊಯಂಬತ್ತೂರಿಗೆ ಹುಬ್ಬಳ್ಳಿ ಮೂಲಕ ವಿಮಾನದಲ್ಲಿ ತೆರಳಿದ್ದು ಶುಕ್ರವಾರ ಅಥವಾ ಶನಿವಾರ ನಡೆಯುವ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾವು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಗಮನಿಸಿ ತಮಗೆ ನೀಡಿರುವ ಗೌರವ ಡಾಕ್ಟರೇಟ್ ಅನ್ನು ಫೌಂಡೇಶನ್‍ನ ಎಲ್ಲ ಸದಸ್ಯರಿಗೆ ಮತ್ತು ಕನ್ನಡ ನಾಡಿನ ಜನತೆಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ್ ದೊರಕಿದ್ದಕ್ಕೆ ಹಲವು ಮಠಾಧೀಶರು, ಸಂಘ ಸಂಸ್ಥೆಗಳ ಮುಖಂಡರು, ರಾಜಕಾರಣಿಗಳು, ಭಕ್ತರು ಸೇರಿ ಹಲವರು ಹರ್ಷ ವ್ಯಕ್ತಪಡಿಸಿ ಸ್ವಾಮೀಜಿಯವರನ್ನು ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next