ಮುದ್ದೇಬಿಹಾಳ: ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸಂಬಳವನ್ನು ಕೋವಿಡ್ ಹಾವಳಿ ಮುಗಿಯುವವರೆಗಾದರೂ ದ್ವಿಗುಣಗೊಳಿಸಲು ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಎಂಜಿವಿಸಿ ಕಾಲೇಜು ಮೈದಾನದಲ್ಲಿ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕವಚ ಆ್ಯಂಬುಲೆನ್ಸ್ ಸಿಬ್ಬಂದಿ ಸೇರಿ ಸುಮಾರು 400 ಜನರಿಗೆ ಮಂಗಳವಾರ ಅಲೊ³àಪಹಾರ, ಗುಣಮಟ್ಟದ ಎನ್-95 ಮಾಸ್ಕ್, ಆಹಾರ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹಾರಕ್ಕೆ ಮತ್ತು ಸಂಬಳ ಹೆಚ್ಚಳ ವಿಷಯ ಪ್ರಸ್ತಾಪಿಸುವೆ ಎಂದರು.
ಇದುವರೆಗೆ ತಾಲೂಕಿನಾದ್ಯಂತ ಎನ್-95 ಗುಣಮಟ್ಟದ 1000 ಮಾಸ್ಕ್ ಹಂಚಲಾಗಿದೆ. ಇನ್ನೂ ಹೆಚ್ಚಿನ ಮಾಸ್ಕ್ಗಳನ್ನು ಅಹಮದಾಬಾದ್ನಿಂದ ತರಿಸಿ ಎಲ್ಲರಿಗೂ ತಲುಪಿಸುವ ಉದ್ದೇಶವಿದೆ. ಕೋವಿಡ್ ಹಾವಳಿ ಸಂಪೂರ್ಣ ತೊಲಗುವವರೆಗೂ ನಿಮ್ಮೆಲ್ಲರ ಮನೆ ಮನೆಗೆ ಆಹಾರದ ಕಿಟ್ ತಲುಪಿಸುವೆ ಎಂದರು. ಸರ್ಕಾರ ವಿಶೇಷ ಅನುಮತಿ ಕೊಟ್ಟಕೂಡಲೇ ಬೇರೆ ರಾಜ್ಯಕ್ಕೆ ದುಡಿಯಲು ಹೋದ ಇಲ್ಲಿನ ಬಡಜನರು ಮರಳಿ ಬರುತ್ತಾರೆ. ಅವರ ಆರೋಗ್ಯ ತಪಾಸಣೆ ಜೊತೆಗೆ ಹಸಿವನ್ನು ತಣಿಸುವುದು ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲು. ಇದನ್ನು ವ್ಯವಸ್ಥಿತವಾಗಿ ಮಾಡಬೇಕಿದೆ ಎಂದರು.
ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸರ್ಕಾರಿ ನೌಕರರ ಸಂಘದ ಆರೋಗ್ಯ ಇಲಾಖೆ ಪ್ರತಿನಿಧಿ ಎಂ.ಎಸ್.ಗೌಡರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಪುರಸಭೆ ಸಿಬ್ಬಂದಿ ರಮೇಶ ಮಾಡಬಾಳ, ಬಸವರಾಜ ನಂದಿಕೇಶ್ವರಮಠ, ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು. ಶಾಸಕರು ಸ್ವತಃ ತಾವೇ ಎಲ್ಲರಿಗೂ ಅಲ್ಪೋಪಹಾರ ಹಂಚಿ ಸರಳತೆ ಮೆರೆದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಸುಣ್ಣದ ಗೆರೆಯ ಬಾಕ್ಸ್
ನಲ್ಲೇ ಎಲ್ಲರನ್ನೂ ಕೂಡಿಸಿದ್ದು ಗಮನಸೆಳೆಯಿತು.