Advertisement

Movies: ಹತ್ತಾರು ಸಿನಿಮಾ ಮಾಡಿ ಗೆದ್ದವರು, ಸೋಲೇ ಕಾಣದೇ ಮಿಂಚಿದ ದಕ್ಷಿಣದ ನಿರ್ದೇಶಕರಿವರು..

05:06 PM Sep 09, 2023 | ಸುಹಾನ್ ಶೇಕ್ |

ಚೆನ್ನೈ/ ಬೆಂಗಳೂರು: ಒಂದು ಸಿನಿಮಾಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದು ಸಿನಿಮಾ ನಿರ್ಮಾಣ ಮಾಡುವುದಾಗಲಿ ಅಥವಾ ಸಿನಿಮಾ ನಿರ್ದೇಶನ ಮಾಡುವುದಾಗಲಿ ಯಾವುದು ಕೂಡ ಅಷ್ಟು ಸುಲಭವಲ್ಲ. ಕಥೆಯನ್ನು ದೃಶ್ಯ ರೂಪಕ್ಕೆ ತಂದು ಅದನ್ನು ದೊಡ್ಡ ಸ್ಕ್ರೀನ್‌ ನಲ್ಲಿ ತೆರೆಗೆ ತರುವುದರ ಹಿಂದೆ ಕಾಣದ ಹತ್ತಾರು ಸವಾಲುಗಳನ್ನು ನಿರ್ದೇಶಕರು, ನಿರ್ಮಾಪಕರು ಹಾಗೂ ಅದರ ಹಿಂದೆ  ನಟಿಸಿರುವ ಕಲಾವಿದರು ಎದುರಿಸಿರುತ್ತಾರೆ.

Advertisement

ದಕ್ಷಿಣ ಭಾರತದ ಸಿನಿಮಾರಂಗ ಕಳೆದ ಕೆಲ ವರ್ಷಗಳಿಂದ ಭಾರತೀಯ ಸಿನಿಮಾರಂಗದಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಕೆಲ ನಿರ್ದೇಶಕರ ಸಿನಿಮಾಗಳು ಪ್ರೇಕ್ಷಕರ ಮನದಲ್ಲಿ ಹೆಚ್ಚು ಪ್ರೀತಿ ಸಂಪಾದಿಸಿದೆ. ಸೋಲನ್ನೇ ಕಾಣದೆ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಕೊಟ್ಟ ದಕ್ಷಿಣದ ನಿರ್ದೇಶಕರು ಇವರು..

ಕಾಲಿವುಡ್‌ ನಲ್ಲಿ ಮೋಡಿ ಮಾಡಿದ ವೆಟ್ರಿಮಾರನ್, ಅಟ್ಲಿ, ಲೋಕೇಶ್ ಕನಕರಾಜ್:

ಕಾಲಿವುಡ್‌ ಸಿನಿಮಾರಂಗದ ಖ್ಯಾತ ನಿರ್ದೇಶಕರ ಪಟ್ಟಿಯನ್ನು ನೋಡಿದರೆ ಅದರಲ್ಲಿ ವೆಟ್ರಿಮಾರನ್, ಅಟ್ಲಿ ಕುಮಾರ್, ಲೋಕೇಶ್‌ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಇವರಲ್ಲಿ ವೆಟ್ರಿಮಾರನ್, ಅಟ್ಲಿ ಕುಮಾರ್  ಸಿನಿಮಾರಂಗಕ್ಕೆ ಬಂದು 10 ವರ್ಷಗಳೇ ಕಳೆದಿವೆ. ಈ ನಡುವೆ ಅವರು ನಿರ್ದೇಶನ ಮಾಡಿರುವ ಸಿನಿಮಾಗಳಿಗೆ ಒಂದು ಪ್ರತ್ಯೇಕ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗಿದೆ. ಇವರ ಸಿನಿಮಾಗಳಿಗಾಗಿ ಕಾದು ಕೂರುವ ಪ್ರೇಕ್ಷಕರ ವರ್ಗವೇ ಇದೆ.

ʼಪೊಲ್ಲಾಧವನ್ʼʼವಿಸಾರಣೈʼ,ʼವಡಾ ಚೆನ್ನೈʼ ಅಸುರನ್, ʼವಿದುತಲೈʼ.. ಹೀಗೆ ವೆಟ್ರಿಮಾರನ್ ನಿರ್ದೇಶನ ಮಾಡಿರುವ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಗಳಿಕೆಯೊಂದಿಗೆ ಪ್ರೇಕ್ಷಕರ ಮನದಲ್ಲೂ ಮೋಡಿ ಮಾಡಿವೆ.

Advertisement

ಇನ್ನು ʼತೇರಿʼ, ʼಮೆರ್ಸಲ್ʼ ʼರಾಜಾ ರಾಣಿʼ,ʼ ಬಿಗಿಲ್ʼ ಸೇರಿದಂತೆ ಈಗ ಬಂದಿರುವ ʼಜವಾನ್‌ʼ ಸಿನಿಮಾ ಅಟ್ಲಿ ಸಿನಿ ಕೆರಿಯರ್‌ ನಲ್ಲಿ ದಾಖಲೆಯತ್ತ ಸಾಗುತ್ತಿದೆ. ʼಜವಾನ್‌ʼ ಮೂಲಕ ಅಟ್ಲಿ ಬಾಲಿವುಡ್‌ ಗೆ ಎಂಟ್ರಿ ಕೊಟ್ಟಿದ್ದಾರೆ.

ಕಾಲಿವುಡ್‌ ಸಿನಿಮಾರಂಗದಲ್ಲಿ  ಲೋಕೇಶ್ ಸಿನಿಮಾ ಯೂನಿವರ್ಸ್ ಮೂಲಕ ತನ್ನದೇ ಪ್ರತ್ಯೇಕ ಅಭಿಮಾನಿಗಳ ವರ್ಗವನ್ನೇ ಸೃಷ್ಟಿಸಿಕೊಂಡು ಹಿಟ್‌ ಕೊಟ್ಟಿರುವ ಲೋಕೇಶ್‌ ಕನಕರಾಜ್‌ ಕಾಲಿವುಡ್‌ ನಲ್ಲಿ ಮಾಡಿರುವ ಸಿನಿಮಾಗಳು ಸೋಲು ಕಂಡೇ ಇಲ್ಲ.

ʼಮಾನಗರಂʼ,ʼ ಕೈತಿ ʼʼವಿಕ್ರಮ್‌ʼ,ʼ,ಮಾಸ್ಟರ್‌ʼ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆದಿದೆ. ಅವರ ಸಿನಿಮಾಗಳಲ್ಲಿ ಒಂದು ಕ್ರೇಜ್‌ ಹುಟ್ಟಿಸುವ ಅಂಶಗಳು ಇರುತ್ತವೆ. ಅದರಿಂದಾಗಿ ಅವರ ಸಿನಿಮಾಗಳನ್ನು ಕಾದು ನೋಡುವ ಪ್ರೇಕ್ಷಕರು ಹೆಚ್ಚಿರುತ್ತಾರೆ.  ಸದ್ಯ ಅವರ ʼಲಿಯೋʼ ಬಿಡುಗಡೆಗೆ ಸಿದ್ದವಾಗಿದೆ.

ʼಕೆಜಿಎಫ್‌ʼ, ʼಕಾಂತಾರʼ ದ ಮೂಲಕ ಗ್ಲೋಬಲ್ ಮಟ್ಟದಲ್ಲಿ ಮಿಂಚಿದ ಸ್ಯಾಂಡಲ್‌ ವುಡ್..‌

ಕನ್ನಡ ಸಿನಿಮಾರಂಗ ಕಳೆದ ಕೆಲ ವರ್ಷದಲ್ಲಿ ಮಾಡಿರುವ ಸಾಧನೆ ಭಾರತೀಯ ಸಿನಿರಂಗದ ಇತಿಹಾಸದಲ್ಲಿ ಅಚ್ಚಾಗಿದೆ. ಇಲ್ಲಿ ಬಂದಿರುವ ಕೆಲ ಸಿನಿಮಾಗಳು, ಸಿನಿಮಾದ ಜೊತೆ ನಿರ್ದೇಶಕರಿಗೂ ಶಹಬ್ಬಾಸ್‌ ಗಿರಿಯನ್ನು ತಂದುಕೊಟ್ಟಿದೆ. ಪ್ರಶಾಂತ್‌ ನೀಲ್‌ ಅವರ ʼಉಗ್ರಂʼ , ʼಕೆಜಿಎಫ್‌ʼ ಭಾಗ-1,2 ಸಿನಿಮಾಗಳು ಸೂಪರ್‌ ಹಿಟ್‌ ಆಗಿರುವುದರ ಜೊತೆಗೆ ಅವರ ಪ್ರತಿಭೆಯನ್ನು ಇಡೀ ಸಿನಿರಂಗಕ್ಕೆ ತಲುಪವಂತೆ ಮಾಡಿದೆ. ಅವರು ಮಾಡಿರು ಸಿನಿಮಾಗಳು ಇದುವರಗೆ ಸೋಲು ಕಂಡಿಲ್ಲ. ಸದ್ಯ ಅವರು ʼಸಲಾರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ʼಕಾಂತಾರʼದಲ್ಲಿನ ನಿರ್ದೇಶನ ಹಾಗೂ ನಟನೆ ಮೂಲಕ ಮಿಂಚಿರುವ ರಿಷಬ್‌ ಶೆಟ್ಟಿ ಅವರು ಇದುವರೆಗೆ ನಿರ್ದೇಶಕನಾಗಿ ಸೋತಿಲ್ಲ ಅವರ ʼಕಿರಿಕ್‌ ಪಾರ್ಟಿʼ, ʼಸ.ಹಿ.ಪ್ರಾ. ಶಾಲೆ ಕಾಸರಗೋಡುʼ ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ನಿರ್ದೇಶಕನಾಗಿ ಸೋಲು ಕಾಣದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕರಲ್ಲಿ ರಾಜ್‌ ಬಿ ಶೆಟ್ಟಿ ಕೂಡ ಒಬ್ಬರು. ಅವರ ʼಒಂದು ಮೊಟ್ಟೆಯ ಕಥೆʼ ʼಗರುಡ ಗಮನ ವೃಷಭ ವಾಹನʼ ಸಿನಿಮಾಗಳು ನಿರ್ದೇಶಕನಾಗಿ ಅವರಿಗೆ ಸೋಲು ತಂದು ಕೊಟ್ಟಿಲ್ಲ.

ಸೋಲಿಲ್ಲದ ಸರದಾರ, ಟಾಲಿವುಡ್‌ ನಲ್ಲಿ ಇವರೇ ʼಬಾಹುಬಲಿʼ..

ಮಾಸ್‌ ಮಸಲಾ ಸಿನಿಮಾಗಳನ್ನು ನೀಡುವ ಟಾಲಿವುಡ್‌ ಸಿನಿಮಾರಂಗದಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಿಧ ಸಿನಿಮಾಗಳನ್ನು ನೀಡಿ, ಸೋಲೇ ಕಾಣದ ನಿರ್ದೇಶಕರಲ್ಲಿ ಮೊದಲಿಗೆ ಬರುವವರು ಎಸ್‌ ಎಸ್‌ ರಾಜಮೌಳಿ. ʼ ಛತ್ರಪತಿʼ, ʼಈಗʼ, ʼಬಾಹುಬಲಿʼ(ಭಾಗ-1,2) ʼಆರ್‌ ಆರ್ ಆರ್‌ʼ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡಮಟ್ಟದ ಗಳಿಕೆ ಕಾಣುವುದರ ಜೊತೆಗೆ ಅಪಾರ ಮಂದಿಯ ಮೆಚ್ಚುಗೆಯನ್ನು ಪಡೆದುಕೊಂಡಿದೆ ʼಆರ್‌ ಆರ್‌ ಆರ್‌ʼ ಸಿನಿಮಾಕ್ಕೆ ಆಸ್ಕರ್‌ ಪ್ರಶಸ್ತಿ ಬಂದಿರುವುದು ರಾಜಮೌಳಿ ಅವರ ನಿರ್ದೇಶನಕ್ಕೆ ಸಿಕ್ಕ ದೊಡ್ಡ ಗೆಲುವು ಎಂದೇ ಹೇಳಬಹುದು.

ಮಲಯಾಳಂ ಸಿನಿಮಾರಂಗ: ಇನ್ನು ಮಲಯಾಳಂ ಸಿನಿಮಾರಂಗದಲ್ಲಿ ಕೂಡ ತಮ್ಮ ಸಿನಿಮಾಗಳ ಮೂಲಕ ಜನರ ಮನಗೆದ್ದ ನಿರ್ದೇಶಕರಿದ್ದಾರೆ. ಮುಖ್ಯವಾಗಿ ನೋಡಿದರೆ ‘ಕುಂಜಿರಾಮಾಯಣಂ’ ‘ಗೋಧಾ’ ‘ಮಿನ್ನಲ್ ಮುರಳಿ’ ಸಿನಿಮಾಗಳನ್ನು ನೀಡಿ ಗಮನ ಸೆಳೆದಿರುವ ಬಾಸಿಲ್ ಜೋಸೆಫ್ ಅವರು ಮಾಲಿವುಡ್‌ ಸಿನಿಮಾರಂಗದಲ್ಲಿ ಸೋಲನ್ನೇ ಕಾಣದ ನಿರ್ದೇಶಕರಲ್ಲಿ ಒಬ್ಬರು. ʼ ಕೇರಳ ಕೆಫೆʼ ʼಬೆಂಗಳೂರು ಡೇಸ್‌ʼ, ʼ ಕೂಡೆʼ ಮುಂತಾದ ಸಿನಿಮಾಗಳನ್ನು ಮಾಡಿರುವ ಅಂಜಲಿ ಮೆನನ್ ಸೇರಿದಂತೆ ಸಮೀರ್ ತಾಹಿರ್, ಗೀತು ಮೋಹನ್ ದಾಸ್ ಅವರು ಕೊಟ್ಟಿರುವ ಸಿನಿಮಾಗಳು ಕೂಡ ಪ್ರೇಕ್ಷಕರ ಮನಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next