Advertisement

ಕೃಷಿ ಲೋಕದ ಯಶಸ್ಸಿನ ಕಥಾಪ್ರಸಂಗ….ಭತ್ತದ ಗದ್ದೆಗೆ ಇಳಿದು ಬದುಕು ಕಟ್ಟಿಕೊಂಡು ಗೆದ್ದ ನಾರಿ

03:22 PM Oct 06, 2020 | Suhan S |

ಕಷ್ಟಪಟ್ಟು, ನೀರು ಹರಿದಂತೆ ಹಣೆಯ ಮೇಲೆ ಬೆವರಿನ ಸೆಲೆಗಳು ಬಿಸಿಲಿನ ಬೇಗೆಗೆ ಹರಿದರೆ ಅಂಥವರು ಶ್ರಮಿಕರೆನ್ನಿಸಿಕೊಳ್ಳುತ್ತಾರೆ. ಶ್ರಮಿಕ ವರ್ಗದಲ್ಲಿ ಅತ್ಯಂತ ಹೆಚ್ಚು ಶ್ರಮ ವಹಿಸುವ ಈ ವರ್ಗದಲ್ಲಿ ಒಂದು ವರ್ಗ ಅದು ಕೃಷಿಕ ವರ್ಗ.

Advertisement

ಮನೆ. ಅಲ್ಲಿರುವ ತಮ್ಮ ಮನಕ್ಕೆ ಹಾರೈಕೆ ಹಾಗೂ ಆರೋಗ್ಯದ ಆರೈಕೆಯಲ್ಲಿ ನಿರತರಾಗಿರುವವರು ನಮ್ಮೆಲ್ಲರ ಮನೆಯ ಹೆಂಗಸರು. ಅವರ ಪ್ರಪಂಚವೇ ಅಡುಗೆ ಮನೆ ಹಾಗೂ ಮನೆ ಮಂದಿಯ ನೆಮ್ಮದಿ. ಹೀಗೊಂದು ಕಾಲ ಹತ್ತಿಪ್ಪತ್ತು ವರ್ಷಗಳ ಹಿಂದೆ ಇತ್ತು. ಈಗಲೂ ಕೆಲವಡೆ ಇದೆ. ಈ ಕಾಲ ಸ್ಪರ್ಧೆಯ ಕಾಲ, ಗಂಡಿನ ಶ್ರಮಕ್ಕೂ ಹೆಣ್ಣೊಬ್ಬಳು ಸರಿಸಾಟಿಯಾಗಿ ನಿಲ್ಲುವ ಯುಗ ಇದು. ಎಲ್ಲಾ ಕ್ಷೇತ್ರದಲ್ಲಿ ತನ್ನ ಸಾಧನೆಯ ಛಾಪನ್ನು ಅಚ್ಚಾಗಿಸುತ್ತಿದೆ ನಾರಿ ಶಕ್ತಿಯ ವರ್ಗ.

ಕೇರಳದ ಕೊಕ್ಕೂರ್ ಗ್ರಾಮದ  ಸೀನತ್  ರೈತ ಕುಟುಂಬದಲ್ಲಿ ಬೆಳೆದು  ಹೆಚ್ಚು ಶಿಕ್ಷಣವನ್ನು ಪಡೆಯಲು ನಿರ್ಬಂಧವಿದ್ದ ಕಟ್ಟುನಿಟ್ಟಿನ ಸಂಪ್ರದಾಯಸ್ಥ ಮುಸ್ಲಿಂ ಸಮುದಾಯದ ಹೆಣ್ಣು. ಹತ್ತನೇ ತರಗತಿವರೆಗಿನ ಶಿಕ್ಷಣ ನಂತರ ಕೆಲ‌ ಸಮಯದ ಬಳಿಕ‌ ಮದುವೆ, ಕೆಲಸವನ್ನು ಪಡೆದು ದುಡಿಯುವ ಕನಸನ್ನು ಬಚ್ಚಿಟ್ಟಿಕೊಂಡು ಮನೆಯ ಕೆಲಸದಲ್ಲೇ ಗಂಡನ ದಿನಚರಿಯಲ್ಲಿ ಪಾಲುದಾರಿಕೆ ಆಗುವ ದಿನಗಳು. ಇವು ಇಷ್ಟೇ ಆಗಿದ್ದ ಸೀನತ್ ಜೀವನದಲ್ಲಿ ರಕ್ತಗತವಾಗಿ ಬಂದಿದ್ದ ಕೃಷಿಕ ಗುಣ ದಿನ ಕಳೆದಂತೆ ಚಿಗುರಲು ಆರಂಭವಾಗುತ್ತದೆ. ಪ್ರಾರಂಭವಾದ ಯೋಚನೆಯ ಮೊದಲ ಯೋಜನೆ ಕಾರ್ಯಗತಕ್ಕೆ ಬರುವುದು ಸೀನತ್ ತನ್ನ ವರಾಂಡದಲ್ಲಿ ಕೃಷಿ ಕಾಯಕವನ್ನು ಮಾಡಲು ಶುರು ಮಾಡಿದಾಗ.

ಸೀನತ್ ಕೆಲ ಸಮಯದ ಬಳಿಕ, ಕೃಷಿ ಭವನದಿಂದ ಸಸಿ ಹಾಗೂ ಬೀಜಗಳನ್ನು ತಂದು ನೆಡುತ್ತಾರೆ. ಅವುಗಳ ಪೋಷಣೆ ಮಾಡುತ್ತಾ ಸಸಿಗಳು ಮೊಳಕೆಯೊಡೆದು ಟೊಮ್ಯಾಟೊ ಬೆಳೆ ಹಣ್ಣಾಗಿ ಬೆಳೆದಾಗ ಸೀನತ್ ಗೆ ಆದ ಖುಷಿಯೇ ಅವರನ್ನು ಕೃಷಿಯಲ್ಲಿ ಇನ್ನಷ್ಟು ಸಾಧಿಸಲು ಪ್ರೇರಣೆ ಆಗುತ್ತದೆ. ಸೀನತ್ ಕೃಷಿ ಕಾಯಕದ ದಾರಿಯಲ್ಲಿ ಮುಂದುವರೆಯಲು ನಿರ್ಧಾರಿಸುತ್ತಾರೆ. ತಾವು ಬೆಳೆದಿರುವ ಸಣ್ಣ ತೋಟವನ್ನು ವಿಸ್ತರಣೆ‌ ಮಾಡಿ, ಹಸಿರು ಮೆಣಸಿನಕಾಯಿ ಹಾಗೂ ಹೂಕೋಸು ಬೆಳೆಯನ್ನು ಬೆಳೆಸುತ್ತಾರೆ. ಎಲ್ಲಾ ಹೆಂಗಸರು ಸಹ ಇದೇ ರೀತಿ ಕೃಷಿಯಲ್ಲಿ ತೊಡಗಿಕೊಳ್ಳಬೇಕೆನ್ನುವ ಇವರ ಇಚ್ಛೆಗೆ ಸ್ಥಳೀಯ ಹೆಂಗಸರೆಲ್ಲಾ‌ ಸಹಕಾರ ನೀಡಲು ಮುಂದಾಗುತ್ತಾರೆ. ಇದೇ ಸಹಕಾರ ಮುಂದೆ ಸೀನತ್ ನೇತೃತ್ವದಲ್ಲಿ ಮಹಿಳಾ ಕೃಷಿಕ ಗುಂಪು  ಒಟ್ಟಾಗಿ “ಪೆಣ್ಮಿತ್ರಾ ” ( ಹೆಂಗಸಿನ ಸ್ನೇಹಿತ) ಎನ್ನುವ  ಗುಂಪನ್ನು 10 ಜನರ ಸಹಯೋಗದೊಂದಿಗೆ ಆರಂಭವಾಗುತ್ತದೆ. ತಮ್ಮ ಸ್ವಂತ ಅಗತ್ಯಕ್ಕಾಗಿ, ತರಕಾರಿ ಬೆಳೆಗಳನ್ನು ಹೆಂಗಸರು ಬೆಳೆಯಲು ಆರಂಭಿಸುತ್ತಾರೆ.

ಪೆಣ್ಮಿತ್ರಾ ಸಾಗಿದ ದಾರಿ ; ಸಾಧಿಸಿದ ಗುರಿ : ತಮ್ಮ ತಮ್ಮ ಮನೆಯಲ್ಲಿ ವ್ಯವಸಾಯ ಮಾಡುತ್ತಾ‌ ಒಂದಿಷ್ಟು,ತರಕಾರಿ ಹಣ್ಣುಗಳನ್ನು ಬೆಳೆದು ಹಾಗೆಯೇ ಅದನ್ನು ಉಪಯೋಗಿಸಿ ಸುಮ್ಮನೆ ಕೂರಲಿಲ್ಲ ಈ ಮಹಿಳಾ ಕೃಷಿಕರು. ಪೆಣ್ಮಿತ್ರಾ ಬಳಗ ತಮ್ಮ ಕೃಷಿಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು  ಕೃಷಿ ಸಂಬಂಧಿತ ಕಾರ್ಯಾಗಾರಗಳಿಗೆ, ವಿವಿಧ ಮಾಹಿತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭಾಂಶವನ್ನು ಗಳಿಸುವುದು ಮಾತ್ರವಲ್ಲ, ಬಹುಬೇಗನೆ ಜನಪ್ರಿಯತೆಯನ್ನೂ ಪಡೆದುಕೊಳ್ಳುತ್ತದೆ.

Advertisement

2015 ರಲ್ಲಿ ಆರಂಭವಾದ ಪೆಣ್ಮಿತ್ರಾ ಕೃಷಿ ಬಳಗ ಇಂದು ಬರೀ 5 ವರ್ಷದಲ್ಲಿ ಬಹಳಷ್ಟು ವಿಸ್ತಾರವಾಗಿ ಬೆಳೆದು, ಇಂದು ಕೊಕ್ಕೂರ್ ಗ್ರಾಮದಲ್ಲಿ ಪ್ರತಿ ಮನೆಯೂ ವ್ಯವಸಾಯ, ಕೃಷಿಯನ್ನು ಅನುಸರಿಸುವಷ್ಟರ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಸಾಧಿಸಲು ಹೊರಟಿರುವ ಪ್ರತಿಯೊಬ್ಬರಿಗೂ ಪ್ರೇರಣೆ.

ಭತ್ತದ ಗದ್ದೆಯಲ್ಲಿ ಗೆದ್ದ ನಾರಿಯರು : ಪೆಣ್ಮಿತ್ರಾ ಹಣ್ಣು ತರಕಾರಿಗಳನ್ನು ಬೆಳೆದು ಜನಪ್ರಿಯ ಆದ ಬಳಿಕ ಬೆವರು ಸುರಿಸಿ ಬಿಸಿಲಿನಲ್ಲಿ ಬಳಲುವ ಭತ್ತದ ಗದ್ದೆಯಲ್ಲಿ ದಣಿದು ದುಡಿಯಲು ಸಿದ್ದರಾಗುತ್ತಾರೆ. 5 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಆ ಭೂಮಿಯನ್ನು ಭತ್ತದ ಬೆಳೆಗೆ ಅನುಗುಣವಾಗಿ ಮಣ್ಣನ್ನು ಹದ ಮಾಡಿ ಕೃಷಿ ಕಾಯಕವನ್ನು ಮಾಡುತ್ತಾರೆ. ತರಕಾರಿಗಳನ್ನು ಬೆಳೆದು ಹೆಸರಾಗಿದ್ದ ಕೊಕ್ಕೂರ್ ಗ್ರಾಮ ಈಗ ಭತ್ತವನ್ನು ಬೆಳೆಸಿ ಸೈ ಎನ್ನಿಸಿಕೊಳ್ಳುತ್ತದೆ. ಇವರ ಉಮೇದಿಗೆ ಊರಿನ ಮಕ್ಕಳು ಜೊತೆ ಆಗಿ ಸಹಕಾರ ನೀಡಲು ಬರುತ್ತಾರೆ.‌ ಹಗಲು ಇರುಳು ಎನ್ನದೆ ಎರಡು ಗುಂಪುಗಳನ್ನು ವ್ಯಾಟ್ಸಾಪ್ ನಲ್ಲಿ ರಚಿಸಿ  ಗದ್ದೆಯಲ್ಲಿ ಬೆವರು ಸುರಿಸಿ‌ ದುಡಿಯುತ್ತಾರೆ.

 

 

 

ವೈಯಕ್ತಿಕವಾಗಿ, ಆರ್ಥಿಕವಾಗಿ ಮಹಿಳೆಯೂ ಸ್ವಾತಂತ್ರ್ಯಳು ಎಂದು ಪೆಣ್ಮಿತ್ರಾ ಸಾಬೀತು ಮಾಡುತ್ತದೆ. ಕೃಷಿಯ ಚಟುವಟಿಕೆಗಳೊಂದಿಗೆ ಪೆಣ್ಮಿತ್ರಾ, ನಾನಾ ಬಗೆಯ ಹವ್ಯಾಸಿ ಚಟುವಟಿಕೆಯಲ್ಲಿ ‌ನಿರತವಾಗಿದೆ. ಚೆಂಗಿನ ಚಿಪ್ಪು ಹಾಗೂ ನೈಸರ್ಗಿಕ ತ್ಯಾಜ್ಯಗಳಿಂದ ವಿವಿಧ ಬಗೆಯ ವಸ್ತುಗಳನ್ನು ಮಾಡಿ ಅದನ್ನು ಪ್ರದರ್ಶನ ಮಾಡಿ ವಿವಿಧೆಡೆಯಿಂದ ಪ್ರಸಿದ್ಧಿಯನ್ನು ‌ಪಡೆಯುತ್ತಿದೆ.

” ನಾನು ತುಂಬಾ ‌ಕನಸನ್ನು ಕಂಡಿದ್ದೆ, ಪೆಣ್ಮಿತ್ರಾ ಶುರು ಮಾಡಿದಾಗ ನನ್ನ ಗಂಡ ಜೊತೆಗೆ ನನ್ನ ಆತ್ಮೀಯರು ಯಾರೂ ಮುಂದೆ ಹೋಗಲು ಸಹಕಾರ ನೀಡಿಲ್ಲ, ಆದರೂ ಯಾರಿಂದಲೂ ನನ್ನನ್ನು ತಡೆಯೋಕೆ ಆಗಿಲ್ಲ” ಎನ್ನುತ್ತಾರೆ ಸೀನತ್.

ಸೀನತ್ ನೇತೃತ್ವದಲ್ಲಿ 10 ಜನರಿಂದ ರಿಂದ ಶುರುವಾದ ಪೆಣ್ಮಿತ್ರಾ ಕೃಷಿ ಬಳಗ ಇಂದು 50 ಜನರ ಸದಸ್ಯರಿಂದ ಮುನ್ನಡೆಯುತ್ತಿದೆ. ಇದರೊಂದಿಗೆ ಕನಸು ಕಂಡಿದ್ದ ಸೀನತ್ ತನ್ನ ಶಿಕ್ಷಣವನ್ನು ಪೂರ್ತಿ‌ ಮಾಡಿದ್ದಾರೆ. ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿಯಿಂದ ದೂರ ಶಿಕ್ಷಣವನ್ನು ಪೂರ್ತಿ ಮಾಡಿ, ಪೆಣ್ಮಿತ್ರಾದ ಮುಖ್ಯಸ್ಥರಾಗಿದ್ದಾರೆ ಹಾಗೂ ಇತಿಹಾಸದಲ್ಲಿ ಬಿಎ ಪದವಿಯನ್ನು ಗಳಿಸಿ, ಕರಾಟೆ ತಜ್ಞರಾಗಿರುವುದು ಕೂಡ ವಿಶೇಷ.

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next