Advertisement

Mother: ಅಮ್ಮನ ವರ್ಣನೆಯಲ್ಲಿ ಸೋಲುವ ಲೇಖನಿಗಳೇ ಹೆಚ್ಚು

03:23 PM Aug 31, 2024 | Team Udayavani |

ಕೆಲವರನ್ನು ಕೆಲವನ್ನು ವರ್ಣಿಸುವಾಗ ಸರಳ ವರ್ಣನೆ ಕೊಟ್ಟು ಬಿಟ್ಟರೆ ತೃಪ್ತಿ ಎನಿಸುವುದಿಲ್ಲ. ಅಂತಹದೇ ಸಾಲಿಗೆ ಸೇರುವ ಪದ ಅದು “ಅಮ್ಮ”.ಗರ್ಭದುಂಡೆಯ ಒಳಗೂ ಅದರಾಚೆಗೂ ಜತೆ ನಿಂತು ಕಾಯುವ ಆ ಜೀವದ ವರ್ಣನೆಯಲಿ ಸೋಲುವ ಲೇಖನಿಗಳೇ ಹೆಚ್ಚು. ಬರೆಯುವ ನನ್ನ ಲೇಖನಿ ಅದೇ ರೀತಿ ಸೋಲುವ ಮುನ್ನ ನನ್ನಮ್ಮನ ಕುರಿತು ಗೀಚಿದ್ದು ಹೀಗೆ…

Advertisement

ಅಮ್ಮ ಎಂದಾಗ ಮೊದಲು ನೆನಪಾಗುವುದೇ ಅವಳ ಸ್ವಾಭಿಮಾನದ ಬದುಕು. ಯಾರಾ ಹಂಗು ಇಲ್ಲದೆ ಸ್ವತಂತ್ರವಾಗಿ ಬದುಕಬೇಕೆನ್ನುವ ಅವಳ ಛಲ.ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಆ ಛಲಗಾತಿ,ತುಳಿಯುವ ಜನರೆದುರು ತಲೆಎತ್ತಿ ಬದುಕಿದ ಬಾಲ್ಯದ ಅಸ್ಪಷ್ಟ ಚಿತ್ರಣಗಳು. ಬಡತನದ ಬೇಗುದಿ ಅವಳ ಬಾಲ್ಯದ ಆಸೆಗಳನು ಚಿವುಟಿತು. ಶಿಕ್ಷಣದ ಕನಸು ಅದೇ ಪರಿಯಲಿ ಕಮರಿತು.ಬಡತನದ ಆರ್ಭಟಕೆ ಆಕೆಯ ನೂರು ಕನಸುಗಳು ಸತ್ತ ಸದ್ದು, ಜಗಕೆ ಮಾತ್ರ ನಿಶಬ್ಧ.

ಹೋರಾಟದಿಂದಲೇ ಶುರುವಾದ ಅವಳ ಬದುಕು ಇಂದಿಗೂ ಜಗದ ರಣರಂಗದಲಿ ಹೋರಾಟದ ಕಿಚ್ಚ ಪಿಡಿದು ಮುನ್ನುಗ್ಗುತ್ತಲೇ ಇದೆ.

ದುಡಿಯುವ ತಂದೆಗೆ ಜೊತೆಯಾಗಿ ದುಡಿದು ಕುಟುಂಬದ ಬಂಡಿ ಎಳೆಯುತಿರುವ ಅವಳ ಆಸೆ-ಕನಸುಗಳ ಬಗೆಗೆ ಕೇಳಿದಾಗ ಮಿಡಿಯುವುದು “ನೀನು ಮತ್ತು ನಿನ್ನಕ್ಕಒಳ್ಳೆಯ ಹಾದಿಗೆ ಹೋದರೆ ಸಾಕು ಮಗ” ಅನ್ನುವ ಆಕೆಯ ಮಾತೃ ಹೃದಯ. ಮಕ್ಕಳಿಗೆ ಗದರುವುದು, ಹೊಡೆಯುವುದು ತಾಯಂದಿರ ಸಹಜ ಗುಣ. ನನ್ನ ತಾಯಿಯು ಕೂಡ ಆ ಗುಣದಿಂದ ಹೊರತಾಗಿಲ್ಲ. ಅವಳು ನನಗೆ ಹೊಡೆದ ಸನ್ನಿವೇಶಗಳು ಬಹಳ ವಿರಳ. ಆದರೆ ಅವಳ ಕೆಲವೇ ಹೊಡೆತಗಳಿಂದ ಕಲಿತ ಪಾಠಗಳು ಮಾತ್ರ ಬಹಳ.

ಕೋಪದಿಂದ ಗದರಿ ನಮ್ಮಿಬ್ಬರ ನಡುವೆ ಸಣ್ಣದೊಂದು ಜಗಳವಾದ ಬಳಿಕ ಆಕೆಯೇ ಮರಳಿ ಬಂದು ನನ್ನನ್ನು ಮಾತನಾಡಿಸುವ ಆ ಗುಣವೇ ನನಗವಳಲ್ಲಿ ಅಚ್ಚುಮೆಚ್ಚು. ಸಾಮಾನ್ಯ ವಾಗಿ ತಾಯಂದಿರು ಮಕ್ಕಳ ಶಿಕ್ಷಣ ವಿಚಾರವಾಗಿ ಅವರ ಮೇಲೆ ಒತ್ತಡ ಹೇರುವುದು ನಿತ್ಯಕಾಣುವ ದೃಶ್ಯ. ಆದರೆ ಆ ವಿಚಾರದಲ್ಲಿ ನಾನು ಮಾತ್ರ ಪುಣ್ಯವಂತ, ಇಂದಿಗೂ ನನ್ನ ತಾಯಿ ಓದಿನ ವಿಚಾರದಲ್ಲಿ ಒತ್ತಡ ಹೇರಿಲ್ಲ ಮತ್ತು ಅಂಕಗಳು ಕಡಿಮೆ ಯಾದಾಗ ಗದರಿದ ಪ್ರಸಂಗವೂ ಎನಗೆ ನೆನಪಿಲ್ಲ.

Advertisement

ಆಕೆಯ ಅಡುಗೆಯ ಉಪ್ಪು ಹುಳಿ ಖಾರ ನೋಡುವ ಕೆಲಸ ಏನಿದ್ದರೂ ಸದಾ ನನ್ನದೇ. ನಾನು ಚೆನ್ನಾಗಿದೆ ಅಸ್ತು ಅಂದಮೇಲೆಯೇ ಆಕೆಯ ಮನಸಿಗೂ ತೃಪ್ತಿಯಾಗುವುದು. ಆಕೆಯ ಅಡುಗೆಗೆ,ಆಕೆ ತಲೆನೋವು ಎಂದಾಗ ಮಾಡಿ ಕೊಡುವ ಆ ವಿಶೇಷ ಚಹಾದ ಕಂಪಿಗೆ ನಾನೆಂದಿಗೂ ಅಭಿಮಾನಿಯೇ ಸರಿ.

ಮಾತೃಭಾಷೆಯನ್ನಷ್ಟೇ ಸ್ಪಷ್ಟವಾಗಿ ಮಾತನಾಡಬಲ್ಲ, ಕೇವಲ ಕನ್ನಡದಲ್ಲಿ ಸಹಿಯಷ್ಟೇ ಮಾಡಲು ಬರುವ, ಶಾಲೆಯ ಗಾಳಿಯು ಸೋಕದ ಅವಳು ನನ್ನ ಪಾಲಿಗೆ ಮಾತ್ರ ಅಸಾಮಾನ್ಯ ಶ್ರಮಜೀವಿ, ಜಗತ್ತಿನ ಶ್ರೇಷ್ಠ ತಾಯಿ, ಕುಟುಂಬ ನಿರ್ವಹಣೆಯಲ್ಲಿ ಉನ್ನತ ಪಧವೀದರೆ, ಅಡುಗೆಯಲ್ಲಿ ಅಸಾಧರಣ ಪ್ರತಿಭೆ, ಕಣ್ಣು ನೋಡಿಯೇ ನನ್ನ ಮನಸನರಿಯುವ ಮನೋವಿಜ್ಞಾನಿ, ಬಾಯಿಲೆಕ್ಕದಲ್ಲಿ ಕೂಡಿಸು, ಕಳೆ, ಗುಣಿಸು, ಭಾಗಿಸನ್ನು ಅರೆದು ಕುಡಿದಿರುವ ಗಣಿತ ಪಂಡಿತೆ.. ಹೀಗೆ ಹೇಳುತಾ ಹೋದರೆ ಆಕೆಯ ಗುಣಗಾನ ಅನಂತ.

ಕಷ್ಟಗಳ ಬೇಗೆಯಲ್ಲೇ ಬೆಂದ ಮತ್ತು ಬೆಯುತ್ತಿರುವ ಅವಳನ್ನು ಸುಖದ ಸುಪತ್ತಿಗೆಯಲ್ಲಿ ತೇಲಿಸುವುದೇ ನನ್ನ ಬಹುದೊಡ್ಡ ಕನಸು. ಅವರವರ ತಾಯಿಯ ವರ್ಣನೆಗೆ ಕೂತಾಗ ಪ್ರತಿಯೊಬ್ಬರು ಅಕ್ಷರ ಕೊರತೆಯ ತೊಂದರೆ ಎದುರಿಸುವ ಕವಿಗಳೇ. ಆಕೆಯ ವರ್ಣನೆ ನಿರಂತರ ಮತ್ತು ಅನಂತ ಅದಕೆ ಕೊನೆಯಿಲ್ಲ.

 ಚೇತನ್‌ ಕಾಶಿಪಟ್ನ

ಎಸ್‌.ಡಿ.ಎಂ. ಕಾಲೇಜು

ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next