Advertisement

Udupi ಆಹಾರ ಇಲಾಖೆಯಲ್ಲಿ ಬಹುಪಾಲು ಹುದ್ದೆ ಖಾಲಿ!

12:29 AM Aug 20, 2023 | Team Udayavani |

ಉಡುಪಿ: ಜನಸಾಮಾನ್ಯರಿಗೆ ತೀರ ಹತ್ತಿರವಿರುವ ಹಾಗೂ ಆದ್ಯತ ಸೇವೆಗಳನ್ನು ಒದಗಿಸುವ ಇಲಾಖೆಯಾಗಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಯಲ್ಲಿ ಬಹುಪಾಲು ಹುದ್ದೆ ಖಾಲಿ ಇರುವುದರಿಂದ ನಿತ್ಯದ ಸೇವೆಗೂ ತೊಡಕಾಗುತ್ತಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜೂರಾದ 51 ಹುದ್ದೆಗಳಲ್ಲಿ 20 ಮಾತ್ರ ಭರ್ತಿಯಾಗಿದ್ದು 31 ಖಾಲಿಯಿವೆ‌. ಉಡುಪಿ ಜಿಲ್ಲೆಯಲ್ಲಿ ಮಂಜೂರಾ ಗಿರುವ 29 ಹುದ್ದೆಗಳಲ್ಲಿ 20 ಖಾಲಿಯಿದ್ದು 9 ಮಾತ್ರ ಭರ್ತಿಯಾಗಿದೆ. ಉಭಯ ಜಿಲ್ಲೆಯಲ್ಲೂ ಉಪನಿರ್ದೇಶಕರ ಹುದ್ದೆ ಖಾಲಿಯಿದ್ದು ಪ್ರಭಾರಿ ಸೇವೆಯಲ್ಲಿ ಇರುವ ಅಧಿಕಾರಿಗಳು ಕಾರ್ಯಭಾರ ನೋಡಿಕೊಳ್ಳುತ್ತಿದ್ದಾರೆ. ಸಹಾಯಕ ನಿರ್ದೇಶಕರ ಹುದ್ದೆಯೂ ಖಾಲಿ ಬಿದ್ದಿದೆ. ವ್ಯವಸ್ಥಾಪಕರ ಹುದ್ದೆಯೂ ಭರ್ತಿಯಾಗಿಲ್ಲ. ದಕ್ಷಿಣ ಕನ್ನಡದಲ್ಲಿ ಲೆಕ್ಕಾಧಿಕಾರಿಯಿದ್ದಾರೆ, ಉಡುಪಿಯಲ್ಲಿ ಆ ಹುದ್ದೆಯೂ ಖಾಲಿಯಾಗಿದೆ.
ಉಡುಪಿ ಜಿಲ್ಲೆಯ 10 ಮಂದಿ ಆಹಾರ ನಿರೀಕ್ಷಕರಲ್ಲಿ ಐವರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಐದು ಖಾಲಿಯಿದೆ. ದ.ಕ.ದಲ್ಲಿ 17 ಹುದ್ದೆಯಲ್ಲಿ 4 ಖಾಲಿಯಿವೆ.

ಉಡುಪಿ ಜಿಲ್ಲಾ ಕಚೇರಿಯಲ್ಲಿ ತಾಂತ್ರಿಕ ಹುದ್ದೆ ಹೊರತುಪಡಿಸಿ ಉಳಿದ ಯಾವುದೇ ಹುದ್ದೆ ಭರ್ತಿಯಿಲ್ಲ. ಇಡೀ ಕಚೇರಿಯೇ ಈಗ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿರುವ ಎರಡು ಮೂರು ಸಿಬಂದಿಯಿಂದ ಮುನ್ನೆಡೆಯುತ್ತದೆ.

ನಿಯೋಜನೆ ಮೇಲೆ ಕೆಲಸ
ಉಭಯ ಜಿಲ್ಲೆಗಳಲ್ಲೂ ಆಹಾರ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬಂದಿ ಕೊರತೆ ಇರುವುದರಿಂದ ಯಾವುದೇ ಕಾರ್ಯವೂ ವೇಗವಾಗಿ ಸಾಗುತ್ತಿಲ್ಲ. ಅನ್ನಭಾಗ್ಯ ಸಹಿತವಾಗಿ ಇಲಾಖೆಯ ಕೇಂದ್ರ ಕಚೇರಿಯಿಂದ ಬರುವ ಹಲವು ಸೂಚನೆ, ಮಾಹಿತಿ ಮತ್ತು ನಿರ್ದೇಶನಗಳನ್ನು ಪಾಲಿಸುವುದು ಹಾಗೂ ಅನುಷ್ಠಾನಕ್ಕೆ ತರುವುದು ನಿಯೋಜನೆಯಲ್ಲಿರುವ ಸಿಬಂದಿಗೆ ಕಷ್ಟವಾಗುತ್ತಿದೆ.

ತಿಂಗಳಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಒದಗಿಸುವುದು, ತಾಲೂಕುಗಳಿಂದ ಮಾಹಿತಿ ಪಡೆಯುವುದು, ಪಡಿತರ ಸಾಮಗ್ರಿ ದಾಸ್ತಾನು, ಕಾಳಸಂತೆ ತಡೆಯುವುದು ಇತ್ಯಾದಿ ಸವಾಲಿನ ಕಾರ್ಯವಾಗಿದೆ. ಪಡಿತರ ಕಾರ್ಡ್‌ ಹಂಚಿಕೆ ಪ್ರಕ್ರಿಯೆ ಆರಂಭವಾದ ಅನಂತರದಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಸಿಬಂದಿ ಕೊರತೆಯ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ನೇಮಕಾತಿಗೆ ಆಗ್ರಹ
ಆಹಾರ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಎರಡು ಜಿಲ್ಲೆಯಲ್ಲಿ ಉಪನಿರ್ದೇಶಕರ ಹುದ್ದೆ ಸೇರಿದಂತೆ ಡಿ ಗ್ರೂಪ್‌ ವರೆಗೂ ಸುಮಾರು 51 ಹುದ್ದೆ ಖಾಲಿಯಿದೆ. ಇದರಲ್ಲಿ ವಾಹನ ಚಾಲಕರು, ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಆಹಾರ ಶಿರಸ್ತೇದಾರರು, ಲೆಕ್ಕಾಧಿಕಾರಿಗಳ ಹುದ್ದೆಯೂ ಸೇರಿದೆ. ಅನೇಕ ವರ್ಷಗಳಿಂದ ನೇಮಕಾತಿ ಸರಿಯಾಗಿ ನಡೆದಿಲ್ಲ. ಅನೇಕ ತಿಂಗಳಿಂದ ಉಪನಿರ್ದೇಶಕರು ಕೂಡ ಪ್ರಭಾರ ಸೇವೆಯಲ್ಲಿ ಇರುವುದರಿಂದ ಎರಡು ಇಲಾಖೆಯನ್ನು ನಿಭಾಯಿಸುವುದು ಅವರಿಗೆ ಕಷ್ಟವಾಗುತ್ತಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ದಿನ ಮಾತ್ರ ಕಚೇರಿಗೆ ಬರಲು ಸಾಧ್ಯವಾಗುತ್ತಿದೆ. ಹೀಗಾಗಿ ಸರಕಾರ ಆದಷ್ಟು ಬೇಗ ಸಿಬಂದಿ ಕೊರತೆ ನೀಗಿಸಬೇಕು. ಇಲ್ಲದಿದ್ದರೆ ಆಹಾರ ಇಲಾಖೆಯಿಂದ ಸಾರ್ವಜನಿಕರ ಸಮರ್ಪಕ ಸೇವೆ ಒದಗಿಸಲು ಕಷ್ಟವಾಗುತ್ತದೆ ಎಂಬ ದೂರುಗಳು ಕೇಳಿಬರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next