Advertisement

ಕೋಟ: ಸೊಳ್ಳೆ ಕಾಟಕ್ಕೆ ಇಲ್ಲ ಲಗಾಮು

03:10 AM Jul 04, 2018 | Karthik A |

ವಿಶೇಷ ವರದಿ – ಕೋಟ: ಮಳೆ ಜತೆಗೆ ಕೋಟ ಭಾಗದಲ್ಲಿ ಸೊಳ್ಳೆ ಕಾಟ ಜೋರಾಗಿದ್ದು, ಜನರಿಗೆ ನಿದ್ರೆ ಇಲ್ಲದ ರಾತ್ರಿಯನ್ನು ಉಂಟುಮಾಡಿದೆ. ಚರಂಡಿ, ಕೊಳಚೆ ಪ್ರದೇಶಗಳನ್ನು ಶುಚಿಗೊಳಿಸದ ಪರಿಣಾಮ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ಸ್ಥಳೀಯಾಡಳಿತವೂ ತಲೆ ಕೆಡಿಸಿ ಕೊಂಡಿಲ್ಲ. ಸಾಸ್ತಾನ ಮೀನು ಮಾರುಕಟ್ಟೆ ಸೊಳ್ಳೆ ಉತ್ಪಾದನೆ ಕೇಂದ್ರ ಸಾಸ್ತಾನದ ಮೀನು ಮಾರುಕಟ್ಟೆ ತಾತ್ಕಾಲಿಕವಾಗಿ ಕೋಡಿ ರಸ್ತೆಗೆ ತಾಗಿಕೊಂಡು ನಡೆಯುತ್ತಿದ್ದು ಇಲ್ಲಿನ ತ್ಯಾಜ್ಯ ನೀರು ರಸ್ತೆಯಲ್ಲಿ ನಿಲ್ಲುತ್ತಿದೆ. ಬುಧವಾರ ನಡೆಯುವ ಸಂತೆಯ ತ್ಯಾಜ್ಯಗಳನ್ನೂ ರಸ್ತೆ ಪಕ್ಕದಲ್ಲಿ ರಾಶಿ ಹಾಕಲಾಗುತ್ತದೆ. ಇದರಿಂದ ಇಲ್ಲೊಂದು ತ್ಯಾಜ್ಯ ಗುಂಡಿ ಸೃಷ್ಟಿಯಾಗಿ ಸೊಳ್ಳೆ ಸಮಸ್ಯೆ ವಿಪರೀತವಾಗಿದೆ. ಇದು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಹುದು ಎನ್ನುವ ಆತಂಕ ಸ್ಥಳೀಯರಲ್ಲಿದೆ.

Advertisement

ಸಾಲಿಗ್ರಾಮ ಮೀನು ಮಾರುಕಟ್ಟೆಯದ್ದೂ ಅದೇ ಕಥೆ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಮೀನು ಮಾರುಕಟ್ಟೆಯಲ್ಲಿ ಕೊಳಚೆ ನೀರು ನಿಲ್ಲುತ್ತದೆ ಹಾಗೂ ಪೊದೆಗಳು ಬೆಳೆದಿವೆ. ಚರಂಡಿಯಲ್ಲಿ ತ್ಯಾಜ್ಯ ನೀರು ನಿಂತು ಸೊಳ್ಳೆ ವಂಶೋತ್ಪತ್ತಿಗೆ ಕಾರಣವಾಗಿದೆ. ಕೋಟ ಮೂರುಕೈ ಅಘೋರೇಶ್ವರ ದೇವಸ್ಥಾನದ ತಿರುವಿನಿಂದ ಸುಮಾರು 200 ಮೀ. ತನಕ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ಸ್ಥಳೀಯ ವಾಣಿಜ್ಯ ಕಟ್ಟಡದ ಕೊಳಚೆ ನೀರು ಕೂಡ ರಸ್ತೆಯಲ್ಲೇ ಹರಿಯುತ್ತಿದೆ.

ತ್ಯಾಜ್ಯ ನೀರು 
ಕೋಟ ಗ್ರಾ.ಪಂ. ವ್ಯಾಪ್ತಿಯ ಅಮೃತೇಶ್ವರೀ ದೇವಸ್ಥಾನದ ಸಮೀಪದ ಕಾರಂತ ಬೀದಿಯಲ್ಲಿ ಚರಂಡಿಯಲ್ಲಿ ತ್ಯಾಜ್ಯ ನೀರು ನಿಲ್ಲುತ್ತದೆ. ಪೊದೆಗಳೂ ಆವರಿಸಿವೆ. ಜತೆಗೆ ಅಕ್ರಮ ಮರಳುಗಾರಿಕೆ ಮಾಡಿದ ದೋಣಿಗಳನ್ನು ವಶಪಡಿಸಿ ಪೊಲೀಸ್‌ ಠಾಣೆಯಲ್ಲಿ ಇಡಲಾಗಿದ್ದು, ಇದರಲ್ಲೂ ನೀರು ನಿಂತು ಸೊಳ್ಳೆ ಉತ್ಪಾದನೆಯಾಗುತ್ತಿದೆ. ರಾ.ಹೆ.ಯ ಚರಂಡಿಗಳಲ್ಲೂ ಹೂಳು, ತ್ಯಾಜ್ಯಗಳು ಸೇರಿ ಸಮಸ್ಯೆಯಾಗುತ್ತಿದೆ.

ಬೇಕಾಬಿಟ್ಟಿ ಫಾಗಿಂಗ್‌ ಆಗಲ್ಲ  
ಈಗ ಫಾಗಿಂಗ್‌ ಮಾಡಲೂ ಕೆಲವೊಂದು ನಿಯಮಗಳಿವೆ. ಇದರಲ್ಲಿ ಉಪಯೋಗಿಸುವ ಕೀಟನಾಶಕ ವಿಷಕಾರಿಯಾಗಿರುವುದರಿಂದ ಹೆಚ್ಚು ಬಳಸಿದರೆ ಅಪಾಯ ಎನ್ನುವ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳ ಸಲಹೆ ಪಡೆದು ನಿಗದಿತ ಪ್ರಮಾಣದಲ್ಲಿ ಉಪಯೋಗಿಸಬೇಕು ಎಂಬ ನಿಯಮವಿದೆ. ಮಲೇರಿಯಾ, ಡೆಂಗ್ಯೂ ಇತ್ಯಾದಿಗಳು ಅಪಾಯಕಾರಿ ಹಂತಕ್ಕೆ ತಲುಪಿದಾಗ ಮಾತ್ರ ಇಲಾಖೆ ಫಾಗಿಂಗ್‌ ಗೆ ಸಲಹೆ ನೀಡುತ್ತದೆ. ಸೊಳ್ಳೆಗಳನ್ನು ಮೂಲದಲ್ಲೇ ನಾಶಪಡಿಸಬೇಕು. ಇದಕ್ಕಾಗಿ ಬೇವಿನೆಣ್ಣೆ  ಇತ್ಯಾದಿ ಬಳಸಿ ಹತೋಟಿ ಮಾಡಬೇಕೆನ್ನುವುದು ಆರೋಗ್ಯ ಇಲಾಖೆಯ ಸಲಹೆಯಾಗಿದೆ.   

ಸಾರ್ವಜನಿಕರಿಗೂ ಬೇಕು ಕಾಳಜಿ 
ಸೊಳ್ಳೆ ಸಮಸ್ಯೆಗೆ ಕೇವಲ ಸ್ಥಳೀಯಾಡಳಿತವನ್ನು ದೂರಿ ಪ್ರಯೋಜನವಿಲ್ಲ. ಸಾರ್ವಜನಿಕರಲ್ಲೂ ಈ ಕುರಿತು ಕಾಳಜಿ ಇರಬೇಕು. ಮನೆಯ ಅಕ್ಕ-ಪಕ್ಕ ಸ್ವಚ್ಛವಾಗಿಡುವುದು, ಸಾರ್ವಜನಿಕರ ಸ್ಥಳದಲ್ಲಿ ಕಸ ಎಸೆಯದಿರುವುದು, ರಜಾ ದಿನಗಳಲ್ಲಿ ನೆರೆಹೊರೆಯವರೊಂದಿಗೆ ಮನೆಯ ಅಕ್ಕ-ಪಕ್ಕದ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಲಿದೆ.

Advertisement

ಗುತ್ತಿಗೆವಹಿಸಿಕೊಂಡವರು ಸ್ವಚ್ಛ ಮಾಡಬೇಕು
ಸಾಸ್ತಾನ ಮೀನು ಮಾರುಕಟ್ಟೆಯ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಅಲ್ಲಿ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿರುವುದರಿಂದಲೇ ಈ ರೀತಿ ಸಮಸ್ಯೆಯಾಗಿದೆ. ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.
– ಸುಭಾಷ್‌, ಪಿ.ಡಿ.ಒ. ಐರೋಡಿ ಗ್ರಾ.ಪಂ.

 ನೋಟಿಸ್‌ ನೀಡಿದ್ದೇವೆ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಎಲ್ಲಾ ಅಂಗಡಿ ಮಾಲಕರಿಗೆ ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡುವಂತೆ ನೋಟಿಸ್‌ ನೀಡುತ್ತೇವೆ. ಈ ಬಾರಿ ನೀಡಬೇಕಷ್ಟೆ. ಸೊಳ್ಳೆ ಕಾಟ ನಿಯಂತ್ರಣಕ್ಕೆ ಜನರಿಂದ ಬೇಡಿಕೆ ಬಂದರೆ ಫಾಗಿಂಗ್‌ ಇತ್ಯಾದಿ ನಡೆಸುತ್ತೇವೆ. 
– ಶ್ರೀಪಾದ್‌ ಪುರೋಹಿತ್‌, ಮುಖ್ಯಾಧಿಕಾರಿಗಳು, ಸಾಲಿಗ್ರಾಮ ಪ.ಪಂ.

ಕ್ರಮಕೈಗೊಳ್ಳುತ್ತೇವೆ
ಪಂಚಾಯತ್‌ ವ್ಯಾಪ್ತಿಯ ತೋಡುಗಳನ್ನು ಸ್ವತ್ಛಗೊಳಿಸಲು ನಿರ್ಣಯ ಕೈಗೊಂಡಿದ್ದೇವೆ. ಹೆದ್ದಾರಿಯ ಮೋರಿಯಲ್ಲಿ ಸಾರ್ವಜನಿಕರು ಕಸವನ್ನು ತಂದು ಬಿಸಾಡುವುದರಿಂದ ಸಮಸ್ಯೆಯಾಗುತ್ತಿದೆ. ಸ್ವಚ್ಛಗೊಳಿಸುವಂತೆ ಹೆದ್ದಾರಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
– ವನಿತಾ ಶ್ರೀಧರ್‌ ಆಚಾರ್ಯ ಅಧ್ಯಕ್ಷರು, ಕೋಟ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next