Advertisement

Paddy ಮುಂಗಾರು ವಿಳಂಬ, ಹಿಂಗಾರು ಆತಂಕ; ಕಟಾವಿಗೂ ಹೊಡೆತ

11:49 PM Oct 27, 2023 | Team Udayavani |

ಮಂಗಳೂರು: ಈ ಬಾರಿ ಮುಂಗಾರು ವಿಳಂಬವಾದ ಕಾರಣ ಭತ್ತದ ಬೇಸಾಯವೂ ವಿಳಂಬವಾಗಿ ನವರಾತ್ರಿ ಮುಗಿದ ಮೇಲೆ ಕಟಾವು ಕಾರ್ಯ ಆರಂಭವಾಗಿದೆ.

Advertisement

ಸಾಮಾನ್ಯವಾಗಿ ಮೇ ಅಂತ್ಯದ ವೇಳೆಗೆ ಬೇಸಾಯಕ್ಕೆ ಪೂರಕ ಚಟುವಟಿಕೆ ಆರಂಭವಾಗಿ ಜೂನ್‌ ಮಧ್ಯಾಂತರದಲ್ಲಿ ನಾಟಿ ನಡೆಯುತ್ತಿತ್ತು. ಆದರೆ ಈ ವರ್ಷ ಅವೆಲ್ಲವೂ ಅದಲು ಬದಲು. ಪೂರಕ ಕೆಲಸ ಆರಂಭವಾಗಿದ್ದು ಜೂನ್‌ 15ರ ಬಳಿಕ. ಜುಲೈ ಎರಡನೇ ವಾರದಲ್ಲಿ ಸುರಿದ ಧಾರಾಕಾರ ಮಳೆ, ನೆರೆಯ ಕಾರಣದಿಂದ ಕೆಲವೆಡೆ ಕೃಷಿಕರ ನೇಜಿ, ಬಿತ್ತಿದ ಬೀಜ ನೀರು ಪಾಲಾಗಿತ್ತು. ಅಂತಹ ರೈತರು ಮತ್ತೆ “ಆರಂಭ’ ಮಾಡುವಂತಾಗಿತ್ತು. ಅಷ್ಟೆಲ್ಲ ಆಗುವಾಗ ನಿರೀಕ್ಷಿತ ಮಳೆ ಸುರಿಯದೆ ಕೆರೆ, ಬಾವಿಗಳಿಂದ ಗದ್ದೆಗಳಿಗೆ ನೀರು ಹಾಯಿಸಿ ಬೆಳೆಯನ್ನು ರಕ್ಷಿಸುವ ಪರಿಸ್ಥಿತಿ ಎದುರಾಗಿತ್ತು. ಈ ಎಲ್ಲ ಕಾರಣಗಳಿಂದ ಕಟಾವು ಪ್ರಕ್ರಿಯೆಯೂ ವಿಳಂಬವಾಗಿದೆ.

ಡಿಸೆಂಬರ್‌ ವರೆಗೂ ಕಟಾವು
ಈ ಬಾರಿ ಬೆಳೆ ಚೆನ್ನಾಗಿ ಬಂದಿದ್ದು, ದೊಡ್ಡ ಮಟ್ಟದಲ್ಲಿ ರೋಗಗಳು ಕಾಡಿಲ್ಲ ಎಂಬ ಅಭಿಪ್ರಾಯವಿದೆ. ಮಳೆಯಿಂದಾಗಿ ಹಾನಿಗೀಡಾದ ಕೆಲವು ಪ್ರದೇಶಗಳಲ್ಲಿ ಎರಡೆರಡು ಬಾರಿ ಬಿತ್ತನೆ ಕಾರ್ಯಗಳು ನಡೆದಿದ್ದು, ಇಂತಹ ಸ್ಥಳಗಳಲ್ಲಿ ಈಗಷ್ಟೇ ಪೈರು ಕಾಳುಕಟ್ಟುತ್ತಿವೆ. ಇದರಿಂದಾಗಿ ಕೆಲವೆಡೆ ಕಟಾವಿಗೆ ಇನ್ನೂ ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ಕಾಯಬೇಕಿದೆ. ಬಹುಶಃ ಡಿಸೆಂಬರ್‌ ಅಂತ್ಯದ ವೇಳೆಗೆ ಕಟಾವು ಮುಗಿಯಬಹುದು ಎನ್ನುತ್ತಾರೆ ಕುಪ್ಪೆ ಪದವಿನ ಕೃಷಿಕ ಮನೋಹರ ಶೆಟ್ಟಿ ನಡಿಕಂಬಳ ಗುತ್ತು. ಸರಕಾರ ಭತ್ತಕ್ಕೆ ರೈತರಿಗೆ ಉತ್ತಮ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂಬುದು ಅವರ ಒತ್ತಾಯ.

ಮಳೆ ಬಂದರೆ ಸಂಕಷ್ಟ
ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಹಿಂಗಾರು ಮಳೆಯಾದರೂ ನಿರೀಕ್ಷೆಯಂತೆ ಸುರಿದರೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು. ಆದರೆ ಕಟಾವು ಸಂದರ್ಭ ಬಿರುಸಿನ ಮಳೆಯಾದರೆ ತೆನೆ ಉದುರುವುದು ಮಾತ್ರವಲ್ಲದೆ ಬೈಹುಲ್ಲು ಕೂಡ ಹಾಳಾಗುವ ಸಾಧ್ಯತೆಯಿದೆ. ಅಂದು ಸುರಿಯಬೇಕಿದ್ದ ಮಳೆ ಇಂದು ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದೀತು ಎನ್ನುವುದು ರೈತರ ಆತಂಕ.

ಈ ವರ್ಷ ಹಿಂಗಾರಿನ ಸುಗ್ಗಿ ಬೇಸಾಯವೂ ವಿಳಂಬವಾಗಲಿದೆ. ಕೆಲವು ರೈತರು ಎರಡನೇ ಬೆಳೆ ತೆಗೆಯುವ ನಿರ್ಧಾರದಿಂದಲೇ ಹಿಂದೆ ಸರಿದಿದ್ದಾರೆ. ಮಳೆಯ ಹೊರತಾಗಿಯೂ ನೀರಿನಾಶ್ರಯ ಇರುವವರು ಮಾತ್ರ ಸುಗ್ಗಿಯ ಬೆಳೆಯ ಚಿಂತನೆಯಲ್ಲಿದ್ದಾರೆ.

Advertisement

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next