Advertisement

ಅಲೆಮಾರಿಗಳ ಸುತ್ತ…

06:00 AM Aug 17, 2018 | Team Udayavani |

“ಮೂರು ಜನಕ್ಕೆ ಟೈಟಲ್‌ ಕೊಟ್ಟಿಲ್ಲ, ಹಾಗಾಗಿ ನಿಮಗೂ ಕೊಡೋದಿಲ್ಲ ಅಂತಾರೆ. ಇದೂ ಒಂದು ಕಾರಣಾನಾ?’ 
ನಗುತ್ತಾ ಕೇಳಿದರು ಮೋಹನ್‌. ಅವರ ಪ್ರಶ್ನೆ ಇದ್ದಿದ್ದು, ಹೊಸ ಚಿತ್ರದ ಟೈಟಲ್‌ ಬಗ್ಗೆ. ಹಿರಿಯ ನಿರ್ಮಾಪಕ ಬಿ.ಎನ್‌. ಗಂಗಾಧರ್‌ ನಿರ್ಮಾಣದ 26ನೇ ಚಿತ್ರವೊಂದನ್ನು ಮೋಹನ್‌ ನಿರ್ದೇಶಿಸುತ್ತಿದ್ದಾರೆ. ಏಳು ಅಲೆಮಾರಿಗಳ ಸುತ್ತ ಆ ಕಥೆ ಸುತ್ತುವುದರಿಂದ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದಾರೆ ಅವರು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿಲ್ಲ. “ಲೋಫ‌ರ್’ ಸಾಧ್ಯವಿಲ್ಲ, ಬೇಕಾದರೆ “ಲೋಫ‌ರ್‌’ ಅಂತ ಇಟ್ಟುಕೊಳ್ಳಿ ಎಂಬ ಉತ್ತರ ಬಂದಿದೆ. ಯಾಕೆ ಅಂತ ಪ್ರಶ್ನಿಸಿದ್ದಾರೆ ಮೋಹನ್‌. “ಈ ಹಿಂದೆ ಮೂವರು ನಿರ್ಮಾಪಕರು ಈ ಟೈಟಲ್‌ ಕೇಳಿದ್ದಾರೆ. ಮೂರೂ ಜನಕ್ಕೆ ಕೊಟ್ಟಿಲ್ಲ, ನಿಮಗೂ ಕೊಡೋದಿಲ್ಲ’ ಎಂಬ ಇನ್ನೊಂದು ಉತ್ತರ ಬಂದಿದೆ. ಹೆಸರು ರಿಜೆಕ್ಟ್ ಮಾಡಿದರೆ, ಅದಕ್ಕೊಂದು ಸೂಕ್ತ ಉತ್ತರ ಕೊಡಿ, ಏನೇನೋ ಕಾರಣ ಒಪ್ಪುವುದಿಲ್ಲ ಎಂಬುದು ಮೋಹನ್‌ ವಾದ. ಮೋಹನ್‌ ಪ್ರಶ್ನೆಗೆ ಯಾವಾಗ ಉತ್ತರ ಸಿಗುತ್ತದೋ ಗೊತ್ತಿಲ್ಲ. ಅವರಂತೂ ಚಿತ್ರ ಶುರು ಮಾಡಿದ್ದಾರೆ.

Advertisement

ಮೊನ್ನೆ ಸೋಮವಾರ ಗಿರಿನಗರದ ವಿವೇಕಾನಂದ ಪಾರ್ಕ್‌ನಲ್ಲಿ ಚಿತ್ರ ಪ್ರಾರಂಭವಾಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌, “ಇದೊಂದು ಥ್ರಿಲ್ಲರ್‌ ಚಿತ್ರ. ಯೌವ್ವನದ ದಿನಗಳಲ್ಲಿ ಏನೇನು ಮಾಡಬಾರದು ಮತ್ತು ಎಲ್ಲದಕ್ಕೂ ಲಿಮಿಟ್‌ ಇರಬೇಕು ಅಂತ ಹೇಳುವುದಕ್ಕೆ ಹೊರಟಿದ್ದೇವೆ. ಕುಡಿತ ಮತ್ತು ಡ್ರಗ್ಸ್‌ಗೆ ನೋ ಹೇಳಿ ಎಂಬ ಕಥೆ ಇರುವ ಈ ಚಿತ್ರ ಏಳು ಅಲೆಮಾರಿಗಳ ಸುತ್ತ ಸುತ್ತುತ್ತದೆ. ಅದೇ ಕಾರಣಕ್ಕೆ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದೆವು. ಆದರೆ, ಮಂಡಳಿಯಲ್ಲಿ ಈ ಹೆಸರಿಗೆ ಅನುಮತಿ ಸಿಕ್ಕಿಲ್ಲ. ದೊಡ್ಡ ಮನಸ್ಸು ಮಾಡಿಕೊಡುತ್ತಾರೆ ಎಂಬ ನಂಬಿಕೆ. ನಮ್ಮ ಟ್ರ್ಯಾಕ್‌ ರೆಕಾರ್ಡ್‌ ಸಹ ಚೆನ್ನಾಗಿದೆ. ಆ ಹೆಸರು ಸಿಗುತ್ತದೆ ಎಂಬ ನಂಬಿಕೆ ಯಾವ ಪಾಟಿ ಇದೆ ಎಂದರೆ, ಪರ್ಯಾಯ ಹೆಸರನ್ನೂ ಯೋಚಿಸಿಲ್ಲ’ ಎಂದರು ಮೋಹನ್‌.

ಈ ಚಿತ್ರದಲ್ಲಿರುವ ಏಳು ಪಾತ್ರಗಳು ಸಹ ನೆಗೆಟಿವ್‌ ಪಾತ್ರಗಳು ಎನ್ನುವ ಮೋಹನ್‌, “ಇಲ್ಲಿರುವ ಏಳೂ ಪಾತ್ರಗಳು ನೆಗೆಟಿವ್‌ ಪಾತ್ರಗಳು. ಯಾರಿಗೂ ಮನೆ ಇರುವುದಿಲ್ಲ. ಹೇಳಿಕೊಳ್ಳುವುದಕ್ಕೆ ಸ್ವಂತದವರು ಇರುವುದಿಲ್ಲ. ಆ ಬಗ್ಗೆ ಎಲ್ಲರಿಗೂ ಬೇಸರವಿರುತ್ತದೆ. ಎಲ್ಲರೂ ಗೆಸ್ಟ್‌ ಹೌಸ್‌ನಲ್ಲಿ ಇರುತ್ತಾರೆ’ ಅಂತ ಹೇಳುತ್ತಾ ಹೋದರು ಮೋಹನ್‌. ಈ ಚಿತ್ರದಲ್ಲಿ ನಾಲ್ವರು ಹೀರೋಗಳು ಮತ್ತು ಮೂವರು ಹೀರೋಯಿನ್‌ಗಳಿದ್ದಾರೆ. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ.

ನಿರ್ಮಾಪಕ ಬಿ.ಎನ್‌. ಗಂಗಾಧರ್‌ ಮಾತಾಡುವ ಮೂಡ್‌ನ‌ಲ್ಲಿ ಇರಲಿಲ್ಲ. “ಈ ಹೆಸರು ಸಿಗದಿದ್ದರೆ “ಖದೀಮ ಕಳ್ಳರು’ ಮತ್ತು “ಪ್ರಳಯಾಂತಕರು’ ಎಂಬ ಟೈಟಲ್‌ ಯೋಚನೆ ಮಾಡಿದ್ದೇನೆ. ಅದು ಬೇರೆಯವರ ಹತ್ತಿರ ಇದೆ. ಅವರ ಜೊತೆಗೆ ಮಾತಾಡುತ್ತಿದ್ದೀನಿ. ನೋಡೋಣ’ ಎಂದರು. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ಎಲ್ಲರೂ ಮೋಹನ್‌ ನಿರ್ದೇಶನದಲ್ಲಿ, ಗಂಗಾಧರ್‌ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next