Advertisement

ಮೋದಿಗೆ ಮಾತಾಡೋ ಮುನ್ನ ಸೆನ್ಸ್‌ ಇರಲಿ: ಎಚ್‌.ಡಿ. ದೇವೇಗೌಡ

06:25 PM Apr 20, 2019 | Lakshmi GovindaRaju |

ಕೊಪ್ಪಳ: “ಪ್ರಧಾನಿ ಮೋದಿ ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರವನ್ನು ಕಲಬೆರಕೆ ಸರ್ಕಾರ ಅಂತಾ ಕರೀತಾರೆ. ಅವರು ಮಾತನಾಡೋ ಮುನ್ನ ಸೆನ್ಸ್‌ನಿಂದ ಮಾತಾಡಲಿ’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮೋದಿ ವಿರುದ್ಧ ಗುಡುಗಿದರು.

Advertisement

ಕೊಪ್ಪಳ ಸಮೀಪದ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ಪ್ರಧಾನಿ ಮೋದಿಗಿಂತಲೂ ನಾನು ಚೆನ್ನಾಗಿ ಮಾತನಾಡಬಲ್ಲೆ. ಆದರೆ ನನಗೆ ಹಿಂದಿ ಬರಲ್ಲ ಅಷ್ಟೆ. ಮಾತನಾಡಬೇಕಾದರೆ ಒಬ್ಬ ಪ್ರಧಾನಿಗೆ ತನ್ನ ಮಾತಿನ ಮೇಲೆ ಹಿಡಿತ ಇರಬೇಕು. ಇವರೆಲ್ಲ ಯಾಕೆ ಈ ರೀತಿ ಮಾತಾಡ್ತಾರೆ? ರಾಜ್ಯದಲ್ಲಿ 20 ಪರ್ಸೆಂಟ್‌ ಸರ್ಕಾರ ಅಂತಾರೆ, 17 ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಲೂ ಹೀಗೆ ಮಾತಾಡ್ತಾರಾ? ಮಾತಾಡಬೇಕಾದ್ರೆ ಜ್ಞಾನ ಇರಬೇಕು’ ಎಂದರು.

ರಾಜ್ಯದ ಜನರ ಹಿತಕ್ಕಾಗಿ ನಮ್ಮ ಕುಟುಂಬ ಕಣ್ಣೀರು ಹಾಕುತ್ತಿದೆ. ಕಾವೇರಿ ವಿಷಯ ಬಂದಾಗ ಬಿಜೆಪಿಯವರು ಕಣ್ಣೀರು ಹಾಕಿದ್ರಾ? ಕಾಂಗ್ರೆಸ್‌ನವರು ಕಣ್ಣೀರು ಹಾಕಿದ್ರಾ? ನಮ್ಮ ಕುಟುಂಬ ಮಾತ್ರ ಕಣ್ಣೀರು ಹಾಕಿದೆ. ರಾಜ್ಯದ ಸಮಸ್ಯೆ ಬಂದಾಗ ಎದುರು ನಿಲ್ಲಲು ದೇವೇಗೌಡರ ಕುಟುಂಬ ಕಣ್ಣೀರು ಹಾಕಿತ್ತು. ರಾಜ್ಯದಲ್ಲಿ 17 ಜನ ಸಂಸದರಿದ್ದಾಗ, 4 ಜನ ಕಾಂಗ್ರೆಸ್‌ ಮಂತ್ರಿಗಳಿದ್ದರೂ ಒಬ್ಬರೂ ಕಣ್ಣೀರು ಹಾಕಲಿಲ್ಲ. ಇವುಗಳನ್ನೆಲ್ಲ ಚರ್ಚೆ ಮಾಡಬೇಕು ಎಂದರು.

20 ಸ್ಥಾನ ಗೆಲ್ಲುವ ನಿರೀಕ್ಷೆ: ರಾಜ್ಯದ 28 ಸ್ಥಾನಗಳ ಪೈಕಿ ಕನಿಷ್ಟ 20 ಸ್ಥಾನ ಗೆಲ್ಲಲೇಬೇಕೆಂದು ತೀರ್ಮಾನ ಮಾಡಿದ್ದೇವೆ. 20 ಸ್ಥಾನಗಳಲ್ಲಿ ನಮಗೆ 7 ಸ್ಥಾನ ಕೊಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 4 ಕ್ಷೇತ್ರಗಳ ಚುನಾವಣೆ ಮುಗಿದಿದೆ. ಇನ್ನೂ ಮೂರು ಸ್ಥಾನಗಳ ಚುನಾವಣೆ ಬಾಕಿಯಿದೆ. ತೀರ್ಮಾನ ಜನತೆ ಕೊಡಬೇಕು ಎಂದರು.

ಕಲಿ ರಾಷ್ಟ್ರೀಯವಾದಿಗಳು- ಬಹುತ್ವವಾದಿಗಳ ನಡುವೆ ಚುನಾವಣೆ
ಶಿವಮೊಗ್ಗ: ಈ ಬಾರಿಯ ಚುನಾವಣೆ ನಕಲಿ ರಾಷ್ಟ್ರೀಯವಾದಿಗಳು ಮತ್ತು ಬಹುತ್ವವಾದಿಗಳ ನಡುವಿನ ಸಂಘರ್ಷ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮೋದಿಯನ್ನು ಹೊಗಳಿದರೆ ರಾಷ್ಟ್ರೀಯವಾದ ಮತ್ತು ಮೋದಿಯನ್ನು ಟೀಕಿಸಿದರೆ ರಾಷ್ಟ್ರ ವಿರೋ ಧಿ ಎಂಬ ಭಾವನೆಯನ್ನು ಬಿಜೆಪಿ ಹುಟ್ಟು ಹಾಕುತ್ತಿದೆ.

Advertisement

ಇದು ದುರಂತದ ಸಂಗತಿ. ಮೋದಿಯಿಂದ ಯಾವ ಒಳ್ಳೆಯ ಕೆಲಸವಾಗಿದೆ? ಬಡವರು ಮಧ್ಯಮ ವರ್ಗದವರ ಮೇಲೆ ಚಾಟಿ ಏಟು ಬೀಸುತ್ತಾ, ಅವರ ಬದುಕಿನೊಂದಿಗೆ ಆಟವಾಡಿದ್ದೆ ಐದು ವರ್ಷದ ಸಾಧನೆಯಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ತಮ್ಮ ಸಾಧನೆ ಹೇಳಿಕೊಂಡು ಮತ ಕೇಳುತ್ತಿಲ್ಲ. ಬದಲಿಗೆ ಪಾಕಿಸ್ತಾನ ಹೆಸರು ಬಳಸಿಕೊಂಡು ಭಾವನಾತ್ಮಕ ವಿಷಯಗಳನ್ನು ಜನರಿಗೆ ಹೇಳುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಮತದಾರರು ಈ ಚುನಾವಣೆಯಲ್ಲಿ ಜಾಣ್ಮೆಯಿಂದ ಮತ ಚಲಾಯಿಸಬೇಕು. ಭಾವನಾತ್ಮಕ ವಿಷಯಗಳಿಂದ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು.
-ಯು.ಟಿ.ಖಾದರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next