Advertisement

ಬೂತ್‍ನಲ್ಲಿ ಮೋದಿ ಉಜ್ವಲ

12:01 AM May 25, 2019 | Lakshmi GovindaRaj |

ಬ್ರಾಂಡ್‌ ಮೋದಿ..: ಮೋದಿ ಹೆಸರಲ್ಲಿ ದೇಶದಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೊಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ದೇಶದ ಮತದಾರ ಹೆಚ್ಚಿನ ಮತ ನೀಡಿ ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಬಿಜೆಪಿಯನ್ನು ಗೆಲ್ಲಿಸಿದ್ದಾನೆ. ಇನ್ನೊಂದು ಪಕ್ಷದ ಹಂಗಿನಲ್ಲಿರಲು ಅವಕಾಶ ನೀಡಬೇಡಿ, ಸಂಪೂರ್ಣ ಬಹುಮತ ನೀಡಿ, ಆದರೂ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ ಎಂಬ ಮೋದಿ ಮತ್ತು ಅಮಿತ್ ಶಾ ಅವರ ಮಾತುಗಳಿಗೂ ಮತದಾರ ಶರಣಾಗಿದ್ದಾನೆ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕೇರಳ ಬಿಟ್ಟರೆ ಬಹುತೇಕ ಕಡೆಗಳಲ್ಲಿ ಬಿಜೆಪಿ ಅಥವಾ ಅದರ ಅಂಗಪಕ್ಷಗಳು ಗೆದ್ದಿವೆ. ಹಾಗಾದರೆ ಮೋದಿ ಗೆದ್ದದ್ದು ಹೇಗೆ, ಈ ಬಾರಿಯ ಚುನಾವಣೆಯಲ್ಲಿ ವರ್ಕೌಟ್ ಆಗಿದ್ದು ಏನು ಎಂಬುದರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ…

Advertisement

ಅಂಡರ್‌ಕರೆಂಟ್: ದೇಶದ ಮತದಾರನ ಮನಸ್ಸಿನ ಆಳ ಅರಿಯದೇ ಹೋಗಿದ್ದುದು ಪ್ರತಿಪಕ್ಷಗಳು ಮಾಡಿದ ದೊಡ್ಡ ಮಿಸ್ಟೇಕ್… ಇದು ಬಹುತೇಕ ರಾಜಕೀಯ ವಿಶ್ಲೇಷಕರ ಮಾತುಗಳು. ಫಲಿತಾಂಶ ಹೊರಬರುತ್ತಿದ್ದಂತೆ ಈ ಬಗ್ಗೆ ದಿನವೀಡಿ ಚರ್ಚೆ ನಡೆಸಿ ತಜ್ಞರೆಲ್ಲರೂ, ದೇಶವ್ಯಾಪಿಯಾಗಿ ಮೋದಿ ಪರವಾಗಿ ಹರಿಯುತ್ತಿದ್ದ ಅಂಡರ್‌ಕರೆಂಟ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಯಾರ ಕಣ್ಣಿಗೂ ಕಾಣದೇ, ಯಾರ ಒತ್ತಡಕ್ಕೂ ಒಳಗಾಗದೇ ತಾವೇ ಮೋದಿಗಾಗಿ ಮತ ಹಾಕಬೇಕು ಎಂದು ನಿರ್ಧರಿಸಿರುವ ಹಾಗೆ ಕಾಣಿಸುತ್ತಿದೆ ಎಂದೂ ಹೇಳುತ್ತಿದ್ದಾರೆ. ಹೌದು, ಈ ಫಲಿತಾಂಶ ನೋಡಿದಾಗ, ಈ ಅಂಡರ್‌ಕರೆಂಟ್ ಹರಿವಿನ ಬಗ್ಗೆ ಗೊತ್ತಾಾಗದೇ ಇರದು. ಉದಾಹರಣೆಗೆ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದುದು 22 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂಬುವುದು. ಆದರೆ, ಅಂಡರ್‌ಕರೆಂಟ್‌ನ ಪ್ರಭಾವದಿಂದಾಗಿ ಬಿಜೆಪಿ ಗಾತ್ರ 22 ರಿಂದ 25ಕ್ಕೆ ಹಿಗ್ಗಿದೆ. ಇದು ಒಂದು ರೀತಿಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಗೇ ದಿಗ್ಬ್ರಮೆ ಮೂಡಿಸಿದ್ದರೆ ಯಾವುದೇ ಸಂದೇಹವೂ ಇಲ್ಲ. ಅಲ್ಲದೆ, ಜನರ ಮನಸ್ಸಿನಲ್ಲಿ ಮೋದಿ ಕುರಿತಂತೆ ಅಚ್ಚೊತ್ತಿರುವ ಭಾವನೆಗಳನ್ನೂ ಪ್ರತಿಪಕ್ಷಗಳ ನಾಯಕರೂ ಒಪ್ಪಿಕೊಂಡಿದ್ದಾರೆ.

‘ಮೋದಿ ಭಕ್ತರು’: ಇದು ದೇಶದ ಬಹುತೇಕ ಪತ್ರಕರ್ತರು, ವಿಚಾರವಾದಿಗಳು ಎನ್ನಿಿಸಿಕೊಂಡವರು, ಮೋದಿ ಪರವಾಗಿ ಮಾತನಾಡುವವರನ್ನು ಅಥವಾ ಮೋದಿ ಸಮರ್ಥಿಸಿಕೊಳ್ಳುವವರನ್ನು ಛೇಡಿಸುತ್ತಿದ್ದ ಪರಿ. ಆದರೆ, ಈ ವ್ಯಂಗ್ಯವನ್ನೇ ಸವಾಲಾಗಿ ತೆಗೆದುಕೊಂಡ ಇವರು ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದರು ಎಂದರೆ ತಪ್ಪಾಗಲಾರದು. ಮೋದಿ ಅವರನ್ನು ಆರಾಧಿಸುವ ಈ ವರ್ಗ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಕುರಿತ ಅಸಹನೆಯನ್ನು ಇತರೆಡೆಗೂ ಹಬ್ಬಿಸಿದೆ. ಮೋದಿ ಕುರಿತಂತೆ ಇವರು ಮಾಡುತ್ತಿದ್ದ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತಾ, ಮೋದಿಯ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಬರುವಂತೆ ಮಾಡುವಲ್ಲಿಯೂ ಶಕ್ತರಾಗಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಮೋದಿ ಅಲೆಯ ಗಾತ್ರ ಹೆಚ್ಚಾಾಗುವುದಕ್ಕೆ ಈ ಭಕ್ತ ವರ್ಗವೂ ಕಾರಣ ಎಂದರೆ ತಪ್ಪಾಗಲಾರದು.

ಎಲ್‌ಪಿಜಿ-ಉಜ್ವಲ: ‘ಮೋದಿ ದೊಡ್ಡ ಯೋಜನೆಗಳನ್ನು ಮಾಡಲೇ ಇಲ್ಲ’. ಲೋಕಸಭೆ ಚುನಾವಣೆಗೂ ಮುನ್ನ ಇಂಥದ್ದೊಂದು ಮಾತುಗಳು ಆಗಾಗ ಕೇಳಿಬರುತ್ತಲೇ ಇದ್ದವು. ಇದಕ್ಕೆ ಕಾರಣ, ಹಿಂದಿನ ಯುಪಿಎ ಸರ್ಕಾರದಲ್ಲಿ ಘೋಷಣೆಯಾಗಿದ್ದ ಆಹಾರ ಹಕ್ಕು, ಕಡ್ಡಾಯ ಶಿಕ್ಷಣದ ಹಕ್ಕು, ನರೇಗಾದಂಥ ಯೋಜನೆಗಳೇ ಕಾರಣವಾಗಿದ್ದವು. ಆದರೆ, ಮೋದಿ ಅವರ ಅಧಿಕಾರಾವಧಿಯಲ್ಲಿ ಪ್ರಕಟಗೊಂಡ ಎರಡು ದೊಡ್ಡ ಯೋಜನೆಗಳು ಎಂದರೆ, ರೈತರಿಗೆ ವಾರ್ಷಿಕ 6 ಸಾವಿರ ಸಹಾಯಧನ ಮತ್ತು ಆಯುಷ್ಮಾಾನ್ ಭಾರತ್ ಯೋಜನೆಯಷ್ಟೇ. ಇದಕ್ಕೆ ಬದಲಾಗಿ ಸಣ್ಣಪುಟ್ಟ ಯೋಜನೆಗಳನ್ನೇ ಪ್ರಕಟಿಸಿಕೊಂಡು ಇವುಗಳ ಜಾರಿಯಲ್ಲಿ ಮೋದಿ ಅವರು ತೆಗೆದುಕೊಂಡ ಕ್ರಮಗಳೂ ಹಾಗೂ ತ್ವರಿತಗತಿಯಲ್ಲಿ ಸಾಗಿದ ಕಾಮಗಾರಿ, ಯೋಜನೆಗಳೂ ಜನರ ಮನಸ್ಸಿಿನಲ್ಲಿ ಇವರೇನೋ ಕೆಲಸ ಮಾಡುತ್ತಿದ್ದಾರೆ ಎಂಬುದು ಅಚ್ಚೊೊತ್ತಲು ಕಾರಣವಾದವು. ಜತೆಗೆ, ಬಡವರಿಗೆ ಸಿಲಿಂಡರ್ ತಲುಪಿಸಲು ಉಜ್ವಲ ಯೋಜನೆ ತರುವ ಮೂಲಕ ದಶಕಗಳಿಂದಲೂ ಕೇವಲ ಹೊಗೆಯನ್ನೇ ಕುಡಿದು ಜೀವಿಸುತ್ತಿದ್ದ ಮಹಿಳೆಯರಿಗೆ ಸಮಾಧಾನ ತಂದರು. ಮೋದಿ ಸರ್ಕಾರದ ಎಲ್ಲಾಾ ಯೋಜನೆಗಳಲ್ಲಿ ಹೆಚ್ಚು ಲಾಭವಾಗಿದ್ದು ಈ ಉಜ್ವಲ ಯೋಜನೆಯಿಂದ ಇರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾಾರೆ.

‘ಚೌಕಿದಾರ್’-ಪ್ರಧಾನ ಸೇವಕ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚೌಕಿದಾರ್ ಚೋರ್ ಹೈ ಎಂಬ ಬೈಗುಳ ಮೋದಿ ಅವರಿಗೆ ನಷ್ಟಕ್ಕಿಂತ ಲಾಭವನ್ನೇ ಹೆಚ್ಚಾಗಿ ತಂದುಕೊಟ್ಟಿದೆ. ರಫೇಲ್ ವಹಿವಾಟು ಸಂಬಂಧ ಮೋದಿ ಅವರನ್ನು ಚೌಕಿದಾರ್ ಚೋರ್ ಹೈ ಎಂದು ಪದ ಹುಟ್ಟುಹಾಕಿದ ಕಾಂಗ್ರೆಸ್, ಈಗ ಪಶ್ಚಾತ್ತಾಪ ಪಡುವಂತಾಗಿದೆ. ಅದರಲ್ಲೇ ಸುಪ್ರೀಂಕೋರ್ಟ್ ಚೌಕಿದಾರ್ ಚೋರ್ ಹೈ ಎಂದು ಹೇಳಿದೆ ಎಂದು ರಾಹುಲ್ ಗಾಂಧಿ ಹೇಳಿ, ಕಡೆಗೆ ಕ್ಷಮೆ ಕೇಳಿದ ಮೇಲಂತೂ ಇದು ಇನ್ನಷ್ಟು ಪರಿಣಾಮಕಾರಿಯಾಯಿತು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಮೋದಿ ಅವರು ಸ್ವಂತಕ್ಕೇನೂ ಮಾಡಿಕೊಳ್ಳುವುದಿಲ್ಲ, ಅವರು ಯಾರಿಗಾಗಿ ಭ್ರಷ್ಟಾಚಾರ ಮಾಡುತ್ತಾರೆ ಎಂಬ ಸಾಮಾನ್ಯ ಜನರಲ್ಲಿನ ನಿಲುವು ಕೂಡ ಮೋದಿ ಅವರ ಪರ ಹೆಚ್ಚು ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.

Advertisement

ಮೇರಾ ಬೂತ್ ಸಬ್ಸೇ ಮಜಬೂತ್: ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆ ಚುನಾವಣೆಗಾಗಿ ಒಂದು ತಿಂಗಳಲ್ಲೋ ಅಥವಾ ಈ ವರ್ಷದ ಆರಂಭದಲ್ಲೋ ಸಿದ್ದತೆ ಮಾಡಿಕೊಳ್ಳಲಿಲ್ಲ. ಇದಕ್ಕೆೆ ಬದಲಾಗಿ ತುಂಬಾ ವೃತ್ತಿಪರವಾಗಿ ಕೆಲಸ ಶುರು ಮಾಡಿದ್ದರು. ವರ್ಷದ ಹಿಂದೆಯೇ ದೇಶದ ಎಲ್ಲಾಾ ಬಿಜೆಪಿ ಮತಗಟ್ಟೆಗಳ ಏಜೆಂಟರ ಜತೆಗೆ ನೇರ ವಿಡಿಯೋ ಸಂವಾದ ನಡೆಸಿದರು. ಒಮ್ಮೆಗೆ ಎರಡು-ಮೂರು ಜಿಲ್ಲೆಗಳ ಏಜೆಂಟರ ಜತೆ ಸಂವಾದ ನಡೆಸಿ ಅವರು ಪಕ್ಷ ಕಟ್ಟುತ್ತಿರುವ ಕಡೆಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾತನಾಡಿದ್ದೂ ಅಲ್ಲದೇ, ಆಯಾಯ ಪ್ರದೇಶಗಳ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಅರಿತರು. ಅಲ್ಲದೆ, ಇವರೆಲ್ಲರಿಗೂ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಹುರಿದುಂಬಿಸಿದರು. ಈ ಮೂಲಕ ತಮ್ಮ ಪರವಾಗಿ ಕೆಲಸ ಮಾಡಲು ದೊಡ್ಡ ಬೂತ್ ಯೋಧರ ಪಡೆಯನ್ನೇ ಸೃಷ್ಟಿಸಿದ್ದರು.

‘ನ್ಯಾಾಯ್’ ವರ್ಸಸ್ ‘ಸಹಾಯಧನ’: ದೇಶದ ಬಡವರಿಗೆಲ್ಲರಿಗೂ ವಾರ್ಷಿಕ 72 ಸಾವಿರ ಹಣ ನೀಡುವ ಕಾಂಗ್ರೆಸ್‌ನ ನ್ಯಾಯ್ ಯೋಜನೆಯನ್ನು ಜನ ನಂಬಲೇ ಇಲ್ಲ ಎಂಬುದಕ್ಕೆ ಈ ಚುನಾವಣೆ ಸಾಕ್ಷಿ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆ ಘೋಷಿಸಿದರೂ, ಇದರ ಜಾರಿ ಹೇಗೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಅಲ್ಲದೇ, ಇದಕ್ಕೆ ಹಣ ಎಲ್ಲಿಂದ ತರಲಾಗುತ್ತದೆ ಎಂಬ ಬಗ್ಗೆಯೂ ವಿವರಣೆ ನೀಡಲಿಲ್ಲ. ವಿಶೇಷವೆಂದರೆ, ಕಾಂಗ್ರೆಸ್ ರಾಜ್ಯಗಳಲ್ಲಿನ ಸರ್ಕಾರಗಳು ರೈತರ ಸಾಲ ಮನ್ನಾ ಘೋಷಿಸಿ, ರೈತರ ಅಕೌಂಟ್‌ಗಳಿಗೆ ಸರಿಯಾಗಿ ಹಣ ಹಾಕದೇ ಹೆಸರು ಕೆಡಿಸಿಕೊಂಡಿದ್ದವು. ಇದರ ನಡುವೆಯೇ ನ್ಯಾಯ ಕೊಡುತ್ತೇವೆ ಎಂದು ಹೇಳಿದ್ದನ್ನು ಜನ ನಂಬಲೇ ಇಲ್ಲ. ಆದರೆ, ಮೋದಿ ಅವರು ರೈತರ ಅಕೌಂಟ್‌ಗಳಿಗೆ ವರ್ಷದಲ್ಲಿ ಮೂರು ಬಾರಿ ಮಾಸಿಕ 2 ಸಾವಿರ ಹಣ ಹಾಕುತ್ತೇನೆ ಎಂದು ಘೋಷಿಸಿ, ಮೊದಲ ಕಂತನ್ನು ಹಾಕಿಸಿದ್ದರು.

ರಾಷ್ಟ್ರೀಯ ಭದ್ರತೆ: ಭದ್ರತೆ ವಿಚಾರವೂ ರಾಜಕೀಯಗೊಂಡಿದ್ದು ಮೋದಿ ಅವರ ಪಾಲಿಗೆ ಹೆಚ್ಚು ಲಾಭ ತಂದುಕೊಟ್ಟಿದೆ. ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್‌ಗಳ ಮೇಲಿನ ವಿಪಕ್ಷಗಳ ಅನುಮಾನ ಜನರಲ್ಲಿ ಸಿಟ್ಟು ಬರಲು ಕಾರಣವಾಗಿದ್ದವು. ಭದ್ರತೆ ವಿಚಾರದಲ್ಲಿ ಮೋದಿ ಸರ್ಕಾರ ಕ್ರಮ ತೆಗೆದುಕೊಂಡಿದ್ದರೂ, ಪ್ರತಿಪಕ್ಷಗಳು ದೇಶದ ಮರ್ಯಾದೆ ತೆಗೆಯುತ್ತಿವೆ ಎಂಬ ಭಾವನೆ ಜನರಲ್ಲಿ ಮೂಡತೊಡಗಿತ್ತು. ಅಲ್ಲದೆ, ಪಾಕಿಸ್ತಾನಕ್ಕೆ ತಿರುಗೇಟು ನೀಡಬಲ್ಲ ಶಕ್ತಿ ಮೋದಿ ಅವರಿಗಷ್ಟೇ ಇರುವುದು ಎಂದೂ ಬಿಜೆಪಿ ಬಿಂಬಿಸಿತ್ತು. ಇವೆಲ್ಲವೂ ಕೇಸರಿ ಪಾಳಯಕ್ಕೆ ಲಾಭವಾಗಿ ಪರಿವರ್ತನೆಯಾದವು.

ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಸಿಕ್ಕ ಗೆಲುವಿಗಾಗಿ ಮೋದಿಯವರನ್ನು ಅಭಿನಂದಿಸುತ್ತೇನೆ. ದಕ್ಷಿಣ ಏಷ್ಯಾದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಗಾಗಿ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.
-ಇಮ್ರಾನ್‌ ಖಾನ್‌, ಪಾಕಿಸ್ತಾನದ ಪ್ರಧಾನಮಂತ್ರಿ

ಮೋದಿ ಮತ್ತೆ ಅಧಿಕಾರದ ಬಂದಿರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮತ್ತಷ್ಟು ಮಹಾನ್‌ ವಿಷಯಗಳು ಇರಲಿವೆ. ಮಹತ್ವದ ಕೆಲಸಗಳನ್ನು ಜಂಟಿಯಾಗಿ ಮುಂದುವರಿಸಲು ಎದುರು ನೋಡುತ್ತಿದ್ದೇನೆ.
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಮೋದಿ ನಾಯಕತ್ವದಲ್ಲಿ ನ್ಯಾಷನಲ್‌ ಡೆಮಾಕ್ರೆಟಿಕ್‌ ಅಲೆ ಯನ್ಸ್‌ ಗೆದ್ದಿದ್ದು, ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇನೆ.
-ಕ್ಸಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ

ಉಭಯರಾಷ್ಟ್ರಗಳ ಜನರ ನಡುವಿನ ಶತಮಾನಗಳ ಸ್ನೇಹವನ್ನು ಗಟ್ಟಿಗೊಳಿಸುವಲ್ಲಿ ಮೋದಿ ಅವರು ಕೆಲಸ ಮಾಡುತ್ತಾರೆಂಬ ನಂಬಿಕೆಯಿದೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳು.
-ವ್ಲಾಡಿಮಿರ್‌ ಪುಟಿನ್‌, ರಷ್ಯಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next